ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಅಗ್ನಿಸ್ತಂಭದ ರಕ್ಷೆ
ಅಗ್ನಿಸ್ತಂಭದ ರಕ್ಷೆಯಿದ್ದು
ಮನೆ ಬೆಂದಿತ್ತಯ್ಯಾ.
ಬಲಮುರಿಯ ಶಂಖವಿದ್ದು
ಪದ ಹೋಯಿತ್ತಯ್ಯಾ.
ಏಕಮುಖ ರುದ್ರಾಕ್ಷಿಯಿದ್ದು ವಿಘ್ನವಾಯಿತ್ತಯ್ಯಾ.
ಇವೆಲ್ಲವ ಸಾಧಿಸಿದಡೆ,
ಏನೂ ಇಲ್ಲದಂತಾಯಿತ್ತು
ಕಾಣಾ ಗುಹೇಶ್ವರಾ.
ವಚನಾರ್ಥ:
ಮನುಷ್ಯನು ಜೀವನ ಪಥದಲ್ಲಿ ಮುಂದುವರಿದಂತೆಲ್ಲ, ಪ್ರಗತಿಯನ್ನು ಸಾಧಿಸಿದಂತೆಲ್ಲ ತನ್ನ ಅಂತಸ್ತನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಬಗ್ಗೆ ಜಾಗರೂಕನಾಗಿರುತ್ತಾನೆ. ಅಲ್ಲಿಯವರೆಗೂ ಗಳಿಸಿದ ಪದವಿ ಪುರಸ್ಕಾರಗಳು ಕೈತಪ್ಪಿ ಹೋಗದಂತೆ ಎಚ್ಚರ ವಹಿಸುತ್ತಾನೆ. ಸುರಕ್ಷತೆಯ ಸನ್ನಿ ಕಾಡತೊಡಗುತ್ತದೆ. ತಾನು ಕಟ್ಟಿದ ಭವ್ಯವಾದ ಬಂಗಲೆಯನ್ನು ಅಗ್ನಿ ದುರಂತದಿಂದ ಕಾಪಾಡಿಕೊಳ್ಳಲು ಅಗ್ನಿಶಾಮಕಗಳನ್ನು ಅಳವಡಿಸಿಕೊಂಡಿರುತ್ತಾನೆ. ಮನೆಯಲ್ಲಿ ಬಲಮುರಿ ಶಂಖವಿರುತ್ತದೆ. ಬಲಮುರಿ ಶಂಖವಿರುವ ಮನೆಯಲ್ಲಿ ಸದಾ ಸಮೃದ್ಧತೆಯು ನೆಲೆಸಿದ್ದು ಪದವಿ ಪ್ರತಿಷ್ಠೆಗಳು ಸ್ಥಿರವಾಗಿರುತ್ತವೆ ಎಂಬ ನಂಬಿಕೆಯಿದೆ. ಏಕಮುಖ ರುದ್ರಾಕ್ಷಿಯ ರಕ್ಷೆ ಇರುತ್ತದೆ. ಏಕಮುಖ ರುದ್ರಾಕ್ಷಿ ಎಂದರೆ ಅದರ ಮೇಲೆ ಒಂದು ನೈಸರ್ಗಿಕ ರೇಖೆ ಅಥವಾ ಮುಖವಿರುವ ರುದ್ರಾಕ್ಷಿ. ಇದನ್ನು ಶಿವನ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಇದು ಅತ್ಯಂತ ಅಪರೂಪ ಮತ್ತು ಶಕ್ತಿಶಾಲಿ ರುದ್ರಾಕ್ಷಿಗಳಲ್ಲಿ ಒಂದಾಗಿದ್ದು, ಭೌತಿಕ ಹಾಗೂ ಆಧ್ಯಾತ್ಮಿಕ ಅನುಕೂಲಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಅಲ್ಲಮನ ಪ್ರಕಾರ ಅಗ್ನಿಶಾಮಕದ ರಕ್ಷಣೆಯಿದ್ದು ಕೂಡ ಮನೆ ಸುಟ್ಟು ಹೋಗಬಲ್ಲುದು. ಬಲಮುರಿಯ ಶಂಖವಿದ್ದರೂ ಪದವಿ ಪ್ರತಿಷ್ಠೆಗಳು ಕೈತಪ್ಪಿ ಹೋಗಬಹುದು. ಏಕಮುಖ ರುದ್ರಾಕ್ಷಿಯಿದ್ದರೂ ವಿಘ್ನಗಳು, ಕಷ್ಟಕಾರ್ಪಣ್ಯಗಳು ಎದುರಾಗಬಹುದು. ಅಗ್ನಿಸ್ತಂಭದ ರಕ್ಷೆ, ಬಲಮುರಿಯ ಶಂಖ, ಏಕಮುಖ ರುದ್ರಾಕ್ಷಿ ಇವೆಲ್ಲವನ್ನೂ ಕೈವಶವಾಗಿಸಿಕೊಂಡಿದ್ದರೂ ಕೊನೆಯಲ್ಲಿ ಎಲ್ಲವೂ ಕೈತಪ್ಪಿ ಏನೂ ಇಲ್ಲದಂತಾಗಬಹುದು.
ಪದ ಪ್ರಯೋಗಾರ್ಥ:
ಅಗ್ನಿಸ್ತಂಭ, ಜಲಸ್ತಂಭ, ವಾಯುಸ್ತಂಭ, ಖಡ್ಗಸ್ತಂಭ ಇವೆಲ್ಲಾ ಅರವತ್ನಾಲ್ಕು ವಿದ್ಯೆಗಳಲ್ಲಿ ಬರುವಂತಹ ವಿದ್ಯೆಗಳು. ಸ್ತಂಭ ಅಂದರೆ ನಿಲ್ಲಿಸು ಎಂದರ್ಥ. ಬೆಂಕಿ, ನೀರು, ಗಾಳಿ, ಆಯುಧಗಳಿಂದ ಬಂದೊದಗಬಹುದಾದ ಆಪತ್ತುಗಳನ್ನು ನಿಲ್ಲಿಸುವ, ನಿಯಂತ್ರಿಸುವ ವಿದ್ಯೆಗಳು. ಅಗ್ನಿಸ್ತಂಭದ ರಕ್ಷೆಯಿಂದ ಆಸ್ತಿ ಪಾಸ್ತಿಗಳ ಮೇಲಾಗುವ ಬೆಂಕಿಯ ಅನಾಹುತಗಳನ್ನು ತಡೆಗಟ್ಟಬಹುದು. ಇಂತಹ ಅಗ್ನಿಸ್ತಂಭದ ರಕ್ಷೆಯಿದ್ದೂ ಮನೆಗಳು ಸುಟ್ಟುಹೋದ ಉದಾಹರಣೆಗಳಿವೆ. ಏನೆಲ್ಲಾ ಸಾಧಿಸಿದರೂ ಕೊನೆಯಲ್ಲಿ ಏನೂ ಇಲ್ಲದಂತಾದ ದೃಷ್ಟಾಂತಗಳು ಚರಿತ್ರೆಯಲ್ಲಿ ಧಾರಾಳವಾಗಿ ಸಿಗುತ್ತವೆ. ಅಗ್ನಿಸ್ತಂಭದ ರಕ್ಷೆ, ಬಲಮುರಿಯ ಶಂಖ, ಏಕಮುಖ ರುದ್ರಾಕ್ಷಿ ಇವೆಲ್ಲವೂ ಮನುಷ್ಯನ ಶಾಶ್ವತ ಸುಖ ಶಾಂತಿಗೆ ಗ್ಯಾರಂಟಿ ಕೊಡುವಂತಹುಗಳಲ್ಲ ಎಂಬ ಗ್ಯಾರಂಟಿಯನ್ನು ಅಲ್ಲಮನ ವಚನ ಕೊಡುತ್ತದೆ. ಅಗ್ನಿಸ್ತಂಭದ ರಕ್ಷೆ ಅಲ್ಲಮ ಬಳಸಿರುವ ಅನನ್ಯವಾದ ಪದ ಪ್ರಯೋಗ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.




