ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಎಂಜಲು
ಶಬ್ದವೆಂಬೆನೆ? ಶ್ರೋತ್ರದೆಂಜಲು.
ಸ್ಪರ್ಶವೆಂಬೆನೆ? ತ್ವಕ್ಕಿನೆಂಜಲು.
ರೂಪೆಂಬೆನೆ? ನೇತ್ರದೆಂಜಲು.
ರುಚಿಯೆಂಬೆನೆ? ಜಿಹ್ವೆಯೆಂಜಲು.
ಪರಿಮಳವೆಂಬೆನೆ? ಘ್ರಾಣದೆಂಜಲು.
ನಾನೆಂಬೆನೆ? ಅರಿವಿನೆಂಜಲು.
ಎಂಜಲೆಂಬ ಭಿನ್ನವಳಿದ
ಬೆಳಗಿನೊಳಗಣ ಬೆಳಗು
ಗುಹೇಶ್ವರನೆಂಬ ಲಿಂಗವು.
ಪದಾರ್ಥ:
ತ್ವಕ್ಕು = ಚರ್ಮ
ಜಿಹ್ವೆ = ನಾಲಗೆ
ಘ್ರಾಣ = ಮೂಗು
ವಚನಾರ್ಥ:
ಒಂದು ಪದಾರ್ಥವನ್ನು ಎಂಜಲು ಎಂದು ಕರೆಯಬೇಕಾದರೆ ಅಲ್ಲಿ ಎರಡು ಭಿನ್ನ ವಸ್ತುಗಳಿರಬೇಕು. ಒಂದು ಕಣ್ಣಿಗೆ ಕಾಣುವಂತ ವಸ್ತು, ಇನ್ನೊಂದು ಅದನ್ನು ನೋಡುವಂತಹ ಮನಸ್ಥಿತಿ. ಪದಾರ್ಥವೊಂದು ಎಂಜಲು ಎಂದು ಕರೆಯಲ್ಪಡುವುದು ಅದನ್ನು ನೋಡುವ ಮನಸ್ಥಿತಿಯ ಮೇಲೆ ನಿರ್ಧಾರವಾಗುತ್ತದೆ. ಎಂಜಲು ಎನ್ನುವುದು ಒಬ್ಬನಿಗೆ ತಿರಸ್ಕಾರ ಭಾವ ತರಿಸಿದರೆ ಇನ್ನೊಬ್ಬನಿಗೆ ಪರಿಸ್ಥಿತಿಗನುಗುಣವಾಗಿ ಸ್ವೀಕಾರಾರ್ಹ ಎನ್ನಿಸಬಹುದು. ಎಂಜಲು ಎಂದು ತುಚ್ಛ ಭಾವದಿಂದ ಕಾಣಬಹುದಾದರೆ ನಾವು ಕೇಳುವ ಶಬ್ದವು ಕಿವಿಗಳ ಎಂಜಲು ಅಲ್ಲವೇ? ಸ್ಪರ್ಶ ಸುಖದ ಅನುಭವ ಚರ್ಮ ತಾಗಿದ್ದರಿಂದ ಬಂದಿದ್ದಲ್ಲವೇ? ಸುಂದರ ರೂಪದ ದರ್ಶನವಾಗುವುದು ಕಣ್ಣುಗಳು ಅದನ್ನು ನೋಡಿಬಿಟ್ಟ ನಂತರವಲ್ಲವೇ? ಒಂದು ತಿನಿಸಿನ ರುಚಿಯನ್ನು ಸವಿಯಲು ನಾಲಗೆಯ ಉಗುಳನ್ನು ಆಶ್ರಯಿಸಬೇಕಲ್ಲವೇ? ಮೂಗು ಮುಟ್ಟಿದ್ದಲ್ಲದೆ ಪರಿಮಳವನ್ನು ಆಸ್ವಾದಿಸಲು ಸಾಧ್ಯವೇ? ನಾವು ಪಡೆಯುವ ಸುಖ ಅನುಭವಗಳೆಲ್ಲವೂ ಪಂಚ ಇಂದ್ರಿಯಗಳು ಮುಟ್ಟಿಬಿಟ್ಟವುಗಳು. ಯಾವುದು ಮುಟ್ಟಿ ಬಿಟ್ಟಲ್ಪಟ್ಟಿರುವುದೋ ಅವೆಲ್ಲಾ ಎಂಜಲು. ನಾನು, ನನ್ನ ಶರೀರ ಎನ್ನುವಂತ ಭಾವವೇ ಅಹಂ ಎಂಬ ಅರಿವಿನ ಎಂಜಲು. ಆದ್ದರಿಂದ ಎಂಜಲು ಎಂಬ ತಿರಸ್ಕಾರ ಭಾವ ತೊರೆದು ನಾನು ಎಂಬ ಭಿನ್ನ ಭಾವವನ್ನು ಬಿಟ್ಟು ಗುಹೇಶ್ವರ ಲಿಂಗದಲ್ಲಿ ಬೆರೆಯಬೇಕು. ಅಂತಹ ಬೆರೆಯುವ ಪ್ರಕ್ರಿಯೆ ಹೇಗಿರಬೇಕೆಂದರೆ ಬೆಳಕಿನ ಒಳಗೆ ಬೆಳಕು ಬೆರೆತಂತೆ. ತನ್ನಲ್ಲಿ ತಾನೇ ಬೆರೆತು ಇರುವಂತೆ ಮತ್ತು ಇಲ್ಲವಾದಂತೆ.
ಪದ ಪ್ರಯೋಗಾರ್ಥ:
ಎಂಜಲು ಎನ್ನುವುದು ಅಶುದ್ಧತೆಯ ವಾಚಕ ಪದ. ಯಾರಾದರೂ ಅರ್ಧ ತಿಂದು ಬಿಟ್ಟದ್ದನ್ನು ಎಂಜಲು ಎನ್ನುವುದು ರೂಢಿ. ಹಾಗಾಗಿ ಎಂಜಲು ಪೂಜ್ಯ ಪದವಲ್ಲ ಅದು ತ್ಯಾಜ್ಯ. ಅಂತಹ ತ್ಯಾಜ್ಯ ಪದವನ್ನು ಆಧಾರವಾಗಿಸಿಕೊಂಡು ಒಂದು ವಚನದಲ್ಲಿ ಏಳು ಬಾರಿ ಪ್ರಯೋಗಿಸಿ ವಚನ ರಚನೆ ಮಾಡಿರುವುದು ವಿಸ್ಮಯವನ್ನುಂಟು ಮಾಡುತ್ತದೆ. ಈ ವಚನವನ್ನು ಮತ್ತೆ ಮತ್ತೆ ಓದಿದಂತೆಲ್ಲ ಎಂಜಲು ಎಂಬ ಪದ ಆಪ್ತವಾಗುತ್ತಾ ಹೋಗಿ ಅದರ ತ್ಯಾಜ್ಯ ಗುಣ ಮರೆಯಾಗಿ “ನಾನೆಂಬೆನೆ? ಅರಿವಿನೆಂಜಲು” ಎಂದು ಹೇಳುವಲ್ಲಿ ಎಂಜಲು ಸ್ವೀಕಾರಾರ್ಹ ಎನಿಸತೊಡಗುತ್ತದೆ. ಎಂಜಲು ಎಂಬ ಸಾಮಾನ್ಯ ಪದವನ್ನು ಅರಿವು ಎಂಬ ಶಕ್ತಿಶಾಲಿ ಪದದೊಂದಿಗೆ ಬೆಸೆದಿರುವುದು ಅತ್ಯಂತ ಅನನ್ಯವಾದ ಪ್ರಯೋಗ. ಅರಿವಿನ ಎಂಜಲು ಎಂದು ಅಲ್ಲಮ ಅನ್ವೇಷಿಸಿದ ಪದಪುಂಜವನ್ನು ಇತ್ತೀಚಿನ ಸಾಹಿತ್ಯ ಸಂಗೀತ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಕೃತಿಚೌರ್ಯ ಎಂಬ ಪದಕ್ಕೆ ಹೋಲಿಸಬಹುದು. ಯಾರದೋ ಅರಿವು ಅನುಭವದ ಫಲವಾಗಿ ಮೂಡಿಬಂದದ್ದನ್ನು ತನ್ನದು ಎನ್ನುವುದು ಎಂಜಲು. ಆದ್ದರಿಂದ ಎಂಜಲು ಮತ್ತು ಅರಿವಿನ ಎಂಜಲು ಸಾರ್ವಕಾಲಿಕವಾಗಿ ಪ್ರಸ್ತುತವಾಗಿರುವ ಪದ ಪ್ರಯೋಗ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.




