ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಲಿಂಗದ ಸೊಮ್ಮು
ಮೇರುಗಿರಿಗಳೆಲ್ಲವೂ ಪ್ರಮಥರೊಡವೆ.
ರಜತಗಿರಿಗಳೆಲ್ಲವೂ ಪುರಾತರೊಡವೆ.
ಚತುರ್ದಶ ಭುವನವೆಲ್ಲವೂ ಲಿಂಗದೊಡವೆ.
ಪೃಥ್ವಿ ಎಂಬುದು ಕರ್ತಾರನ ಕಮ್ಮಟ
ಅಚ್ಚಿನ ಮೊಳೆ ಬಾಣಸದ ಮನೆ.
ತನುಮನಧನಂಗಳೆಲ್ಲವು
ನಮ್ಮ ಗುಹೇಶ್ವರ ಲಿಂಗದ ಸೊಮ್ಮು.
ನೀನೇನ ಕೊಟ್ಟು ಭಕ್ತನಾದೆ ಹೇಳಾ ಬಸವಣ್ಣಾ?
ಪದಾರ್ಥ:
ಪ್ರಮಥರು = ಶಿವ ಕಿಂಕರರು
ಪುರಾತರು = ಪೂರ್ವಜರು
ಕಮ್ಮಟ = ಕಾರ್ಯಾಗಾರ
ಬಾಣಸ = ಅಡುಗೆ
ವಚನಾರ್ಥ:
ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ ಎಂದು ಈಶೋಪನಿಷತ್ತಿನ ಪ್ರಥಮ ಶ್ಲೋಕ ಹೇಳುತ್ತದೆ. ಅಂದರೆ ಯಾವುದು ಇದೆಲ್ಲ ಇದೆಯೊ ಎಲ್ಲವೂ ಈಶ್ವರನ ಆವಾಸ ಎಂದು ಭಾವಿಸಿ ಈ ಜಗತ್ತು ಎಲ್ಲರದ್ದು ಎಂದರಿಯಬೇಕು. ಇಲ್ಲಿರುವ ಗಿರಿ ಪರ್ವತ ಶ್ರೇಣಿ ಸಾಲುಗಳು ಪ್ರಮಥರಿಗೆ ಅಂದರೆ ಶಿವ ಕಿಂಕರರಿಗೆ ಸೇರಿದವು. ಹಿಮಾಲಯದಂತ ಬಿಳಿ ಬಣ್ಣದ ಮಂಜಿನ ಪರ್ವತಗಳು ನಮ್ಮ ಪೂರ್ವಜರು ನಮಗೆ ಕೊಟ್ಟು ಹೋದವುಗಳು. ಭೂಮಿ, ಸ್ವರ್ಗ, ಪಾತಾಳ, ವಿತಳಗಳೆಂಬ ನಾಲ್ಕು ಲೋಕಗಳು ಆ ಸೃಷ್ಟಿಕರ್ತನು ಧರಿಸಿಕೊಂಡಿರುವ ಆಭರಣ. ಈ ಭೂಮಿ ಎಂಬುದು ಸೃಷ್ಟಿಕರ್ತನು ದಿನನಿತ್ಯ ತನ್ನ ಸೃಷ್ಟಿ-ಸ್ಥಿತಿ-ಲಯಗಳನ್ನು ನಿರ್ವಹಣೆ ಮಾಡಲು ಇಟ್ಟುಕೊಂಡಿರುವ ಕಾರ್ಯಾಗಾರ. ಅಂತಹ ಕಾರ್ಯಾಗಾರದಲ್ಲಿ ಎಲ್ಲಾ ಬಗೆಯ ಸಲಕರಣೆಗಳು. ವರ್ಷದಾದ್ಯಂತ ಹಗಲಿರುಳು ಉರಿಯುವ ಒಲೆ, ನಿರಂತರ ಉಣಬಡಿಸುವ ಅಡುಗೆಯ ಮನೆ. ಅಂತಹ ಆಹಾರವನ್ನು ತಿಂದುಂಡು ಬೆಳೆದ ತನು, ಆ ತನುವಿನಲ್ಲಿ ಆಶ್ರಯಿಸಿದ ಮನ, ಅರ್ಜಿಸಿದ ಧನ ಧಾನ್ಯ ಇವೆಲ್ಲವೂ ಆ ಸೃಷ್ಟಿಕರ್ತನ ಸಿರಿ ಸಂಪತ್ತು. ನಮ್ಮದೇನೆನ್ನುವುದೇನಿಲ್ಲ!
ಪದ ಪ್ರಯೋಗಾರ್ಥ:
ಸೊಮ್ಮು ಎಂದರೆ ಸಿರಿ ಸಂಪತ್ತು, ಸೊತ್ತು ಎಂಬ ಅರ್ಥ ಬರುತ್ತದೆ. ಅಲ್ಲಮ ಮತ್ತು ಬಸವಣ್ಣನ ಸಂಭಾಷಣೆಯಲ್ಲಿ ಮೂಡಿಬಂದ ವಚನವಿದು. ಅನುಭವ ಮಂಟಪದ ಅಧ್ಯಕ್ಷತೆ ವಹಿಸಿಕೊಳ್ಳಿ ಎಂದು ಬಸವಣ್ಣ ಅಲ್ಲಮನನ್ನು ವಿನಂತಿಸಿದಾಗ ಬಸವಣ್ಣನ ವಿನಂತಿಯ ಹಿಂದಿರುವ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಲು ಅಲ್ಲಮಪ್ರಭು ಬಸವಣ್ಣನೊಂದಿಗೆ ವಾಗ್ವಾದಕ್ಕಿಳಿಯುವ ಸಂದರ್ಭ. ನಾನು ಅಧ್ಯಕ್ಷತೆ ವಹಿಸಿಕೊಂಡರೆ ನೀನೇನು ಕೊಡುವೆ ಬಸವಣ್ಣ ಎಂದು ಅಲ್ಲಮನ ಪ್ರಶ್ನೆ. “ತನುವ ಬೇಡಿದಡೀವೆ, ಮನವ ಬೇಡಿದಡೀವೆ, ಧನವ ಬೇಡಿದಡೀವೆ” ಎಂದ ಬಸವಣ್ಣನಿಗೆ ಉತ್ತರವಾಗಿ ಅಲ್ಲಮ ಹೇಳಿದ್ದು: ತನು ಮನ ಧನಂಗಳೆಲ್ಲವು ನಮ್ಮ ಗುಹೇಶ್ವರ ಲಿಂಗದ ಸೊಮ್ಮು. ಮೇರುಗಿರಿ, ರಜತಗಿರಿ, ಚತುರ್ದಶ ಭುವನ, ಈ ಭೂಮಿ ಎಲ್ಲವೂ ಗುಹೇಶ್ವರ ಲಿಂಗದ ಸೊಮ್ಮು ಆಗಿದ್ದರಿಂದ ನೀನೇನ ಕೊಟ್ಟು ಭಕ್ತನಾದೆ ಹೇಳಾ ಎಂದು ಕೇಳುತ್ತಾ ಅಲ್ಲಮನು ಬಸವಣ್ಣನನ್ನು ವಿನೀತಗೊಳಿಸಿದ್ದು, ನಂತರ ಅಲ್ಲಮಪ್ರಭು ಅಸ್ತು ಅಂದು ಅನುಭವ ಮಂಟಪದ ಶೂನ್ಯ ಸಿಂಹಾಸನಾಧೀಶ್ವರನಾದದ್ದು ಇತಿಹಾಸ. ವಚನ ಸಂಭಾಷಣೆಯಲ್ಲಿ ಲಿಂಗದ ಸೊಮ್ಮು ಎಂಬ ಪದಪ್ರಯೋಗವಾಗಿರುವುದು ಅನನ್ಯವಾಗಿದೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.




