ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ನಾನೆಂಬ ಅಹಂಕಾರ
ನಾನೆಂಬ ಅಹಂಕಾರ ತಲೆದೋರಿದಲ್ಲಿ
ಅಟಮಟ ಕುಟಿಲ ಕುಹಕವೆಂಬ
ಬಿರುಗಾಳಿ ಹುಟ್ಟಿತ್ತು.
ಆ ಬಿರುಗಾಳಿ ಹುಟ್ಟಲೊಡನೆ
ಜ್ಞಾನಜ್ಯೋತಿ ಕೆಟ್ಟಿತ್ತು.
ಜ್ಞಾನಜ್ಯೋತಿ ಕೆಡಲೊಡನೆ,
ನಾ ಬಲ್ಲೆ, ಬಲ್ಲಿದರೆಂಬ ಅರುಹಿರಿಯರೆಲ್ಲರು
ತಾಮಸಕ್ಕೊಳಗಾಗಿ ಸೀಮೆದಪ್ಪಿ ಕೆಟ್ಟರು ಕಾಣಾ ಗುಹೇಶ್ವರಾ
ಪದಾರ್ಥ:
ಬಲ್ಲಿದ = ವಿದ್ವಾಂಸ
ತಾಮಸ = ಅಂಧಕಾರ, ಕತ್ತಲೆ
ಸೀಮೆದಪ್ಪಿ = ದಾರಿತಪ್ಪುವುದು
ವಚನಾರ್ಥ:
ನಾನು ಎಂಬ ಅಹಂಕಾರಕ್ಕೆ ಇಲ್ಲಿ ಎರಡು ಅರ್ಥಗಳಿವೆ. ಒಂದು ತಿಳಿವಳಿಕೆಯಲ್ಲಿ ಕಂಡುಬರುವ ಅಹಂಕಾರ. ಇನ್ನೊಂದು ನಡವಳಿಕೆಯಲ್ಲಿ ಕಂಡುಬರುವ ಅಹಂಕಾರ. ನಾನು ಲಿಂಗದ ಹಂಗಿಲ್ಲದೆ ಭಿನ್ನನಾಗಿ ಬದುಕಬಲ್ಲೆ ಎಂಬುದು ತಿಳಿವಳಿಕೆಯಲ್ಲಿ ಕಂಡುಬರುವ ಅಹಂಕಾರ. ನನಗೆ ಅದು ಗೊತ್ತು, ಇದು ಗೊತ್ತು, ನಾ ಬಲ್ಲೆ, ನಾನು ಬಲ್ಲಿದ ಎಂಬುದು ನಡವಳಿಕೆಯಲ್ಲಿ ಕಂಡುಬರುವ ಅಹಂಕಾರ. ಇವೆರಡರಲ್ಲಿ ಯಾವುದೇ ಬಗೆಯ ಅಹಂಕಾರ ತಲೆದೋರಿದರೆ- ಅಂದರೆ ತಲೆಗೆ ಏರಿದರೆ- ವ್ಯಕ್ತಿತ್ವದಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ಆತನ ಚಿಂತನೆಗಳು ಸ್ಥಿಮಿತದಲ್ಲಿರುವುದಿಲ್ಲ.
ಆಲೋಚನೆಗಳು ಅಟಮಟ ಕುಟಿಲ ಕುಹಕಗಳಿಂದ ಕೂಡಿ ಗಾಳಿಗೆ ಸಿಕ್ಕ ಸೊಡರಿನಂತೆ ಹೊಯ್ದಾಡುತ್ತಿರುತ್ತವೆ. ಹೃದಯ ಮಂದಿರದಲ್ಲಿ ಸದಾ ಬೆಳಗುವ ಜ್ಞಾನಜ್ಯೋತಿ ಕೆಡುತ್ತದೆ. ನಂದಾದೀಪವಾಗಬೇಕಿದ್ದ ಜ್ಞಾನಜ್ಯೋತಿಯು ನಂದಿಹೋಗುವ ಅಪಾಯ ತಲೆದೋರುತ್ತದೆ. ಅಂದರೆ ನಾನೆಂಬ ಅಹಂಕಾರ ತಲೆದೋರಿದಲ್ಲಿ ವ್ಯಕ್ತಿತ್ವ ಕುಸಿತಕ್ಕೊಳಪಡಲಾರಂಭಿಸುತ್ತದೆ. ನಾನು ಬಲ್ಲಿದ ಎಂಬ ಭಾವವು ಬಾಳ ಬೆಳಕಾಗಬೇಕಾದುದು ಕತ್ತಲೆಯಾಗಿ ಪರಿಣಮಿಸಿ ದಾರಿ ತಪ್ಪಿಸುತ್ತದೆ. ಇದನ್ನೇ ಅಲ್ಲಮ ತಾಮಸಕ್ಕೊಳಗಾಗಿ ಸೀಮೆದಪ್ಪಿ ಕೆಟ್ಟರು ಅಂದದ್ದು.
ಪದ ಪ್ರಯೋಗಾರ್ಥ:
ನಾನೆಂಬ ಅಹಂಕಾರ ಎಂಬ ಪದ ಈ ವಚನದ ಮೂಲದ್ರವ್ಯವಾಗಿದ್ದು ಇಡೀ ವಚನದ ಆಶಯವನ್ನು ನಿರ್ದೇಶಿಸುತ್ತದೆ. ಮನುಷ್ಯನ ವ್ಯಕ್ತಿತ್ವದಲ್ಲಿ ಅಹಂಕಾರ ತಲೆದೋರಿದಾಗ ಆಗುವ ಅವಘಡಗಳ ಚಿತ್ರಣವೇ ವಚನದ ಉದ್ದೇಶ. ನಾನೆಂಬ ಅಹಂಕಾರಕ್ಕೆ ಇನ್ನೊಂದು ಮಗ್ಗುಲು ಉಂಟು. “ನನಗಿಲ್ಲ ಅಹಂಕಾರ ಎನ್ನುವುದೇ ಅಹಂಕಾರ” ಎಂದು ಕನ್ನಡ ಕವಿ ನುಡಿಯಿದೆ. ಈರುಳ್ಳಿಯ ಸಿಪ್ಪೆಯನ್ನು ಹೆಚ್ಚು ಬಿಡಿಸಿದಂತೆಲ್ಲ ಮತ್ತೂ ಹೆಚ್ಚು ಸಿಪ್ಪೆ ಕಾಣುವುದು. ಅದರಲ್ಲಿ ತಿರುಳು ಎಂಬುದೇನೂ ಕಾಣುವುದಿಲ್ಲ. ಅದರಂತೆಯೇ ನೀವು ಅಹಂಕಾರವನ್ನು ವಿಶ್ಲೇಷಣೆ ಮಾಡುತ್ತಾ ಹೋದರೆ ಅದು ಶೂನ್ಯದಲ್ಲಿ ಲಯವಾಗುವುದು. ಕೊನೆಗೆ ಏನು ಉಳಿಯುವುದೋ ಅದೇ ಶುದ್ಧ ಆತ್ಮ. ಅಹಂಕಾರ ಲಯವಾದಾಗ ದೇವರು ಕಾಣುವನು ಎಂದು ಶ್ರೀ ರಾಮಕೃಷ್ಣ ಪರಮಹಂಸರ ವಚನವೇದವಿದೆ. ಅಲ್ಲಮ ವಚನದ ಆದಿಯಲ್ಲಿ ಪ್ರಯೋಗಿಸಿರುವ ಪದ ನಾನೆಂಬ ಅಹಂಕಾರ ಈ ಎಲ್ಲಾ ಹಿನ್ನಲೆಯಲ್ಲಿ ಅತ್ಯಂತ ಅನನ್ಯವಾದದ್ದು.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.




