ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಸಜ್ಜನವೆ ಮಜ್ಜನ: ಪುಣ್ಯಸ್ನಾನವಲ್ಲ
ಉದಕ ಮಜ್ಜನವಲ್ಲ, ಪತ್ರೆ ಪೂಜೆಯಲ್ಲ.
ಧೂಪ ಪರಿಮಳವಲ್ಲ, ಕಂಚು ಬೆಳಗಲ್ಲ, ಸಯಧಾನ ಅರ್ಪಿತವಲ್ಲ.
ಅದೆಂತೆಂದಡೆ:
ಸಜ್ಜನವೆ ಮಜ್ಜನ,
ಸತ್ಯಸದಾಚಾರವೆ ಪತ್ರೆ ಪುಷ್ಪ. ಅಷ್ಟಮದಂಗಳ ಸುಟ್ಟುದೆ ಧೂಪ,
ನಯನವೆ ಸ್ವಯಂ ಜ್ಯೋತಿ,
ಪರಿಣಾಮವೆ ಅರ್ಪಿತ
ಕಾಣಾ ಗುಹೇಶ್ವರಾ
ಪದಾರ್ಥ:
ಉದಕ = ನೀರು
ಮಜ್ಜನ = ಸ್ನಾನ, ಅಭಿಷೇಕ
ಸಯಧಾನ = ನೈವೇದ್ಯ
ವಚನಾರ್ಥ:
ಮನುಷ್ಯನ ಅಂತರಂಗ ಶುದ್ದಿಯತ್ತ ಗಮನ ಸೆಳೆಯಲು ಅಲ್ಲಮ ರಚಿಸಿದ ವಚನವಿದು. ನೀರಲ್ಲಿ ಮುಳುಗಿ ಸ್ನಾನ ಮಾಡಿ ಮಡಿಯುಟ್ಟು ಹೂ ಪತ್ರೆ ಧರಿಸಿ ಧೂಪದ ಪರಿಮಳ ಪಸರಿಸಿ ಕರ್ಪೂರ ಬೆಳಗಿಸಿ ನೈವೇದ್ಯವ ಅರ್ಪಣೆ ಮಾಡುವುದು ಬಾಹ್ಯಪೂಜೆ. ಅಂತಹ ತೋರಿಕೆಯ ಪೂಜೆ ಅಲ್ಲಮನಿಂದ ಅಲ್ಲಗಳೆಯಲ್ಪಟ್ಟಿದೆ. ಅಲ್ಲಮನ ಪ್ರಕಾರ ಸದ್ಗುಣಗಳೇ ಸ್ನಾನ, ಅಭಿಷೇಕ.
ಸತ್ಯ ಸದಾಚಾರಗಳೇ ಪತ್ರೆ ಪುಷ್ಪ. ಧನ, ಕುಲ, ವಿದ್ಯೆ, ರೂಪ, ಯೌವನ, ತೋಳ್ಬಲ, ಜನಬಲ, ಅಧಿಕಾರ ಎಂಬ ಅಷ್ಟಮದಗಳನ್ನು ಮನಸ್ಸಲ್ಲಿ ಸುಡುವುದೇ ಧೂಪ. ಇಂತಹ ವ್ಯಕ್ತಿಯಲ್ಲಿ ಉಂಟಾಗಿರುವ ಅಂತರಂಗ ಶುದ್ದಿಯು ಆತನ ಕಣ್ಣುಗಳಲ್ಲಿ ಪ್ರತಿಫಲನವಾಗಿ ತೇಜೋಮಯವಾಗಿ ಹೊಳೆಯುತ್ತಿರುತ್ತದೆ.
ಅಂತಹ ಪರಿಪೂರ್ಣವಾದ ವ್ಯಕ್ತಿತ್ವದಲ್ಲಿ ದೈವಕಳೆ ಕಂಡುಬರುತ್ತದೆ. ‘ನಯನವೆ ಸ್ವಯಂ ಜ್ಯೋತಿ’ ಎಂದ ಅಲ್ಲಮನ ವಚನದ ಸಾಲಿಗೆ ಉದಾಹರಣೆಯಾಗಿ ಶ್ರೀ ರಮಣಮಹರ್ಷಿಗಳ ಭಾವಚಿತ್ರದಲ್ಲಿರುವ ಜ್ಯೋತಿಯಂತೆ ಹೊಳೆಯುವ ಅವರ ಕಣ್ಣುಗಳನ್ನು ಗಮನಿಸಬಹುದು.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಪದ ಪ್ರಯೋಗಾರ್ಥ:
ಸಜ್ಜನವೆ ಮಜ್ಜನ. ಅಂತರಂಗ ಶುದ್ಧವಿಲ್ಲದೆ, ಸಜ್ಜನತೆಯಿಲ್ಲದೇ ಯಾವುದೇ ಪುಣ್ಯಸ್ನಾನ ಮಾಡಿದರೂ ಫಲವಿಲ್ಲ. ಉದಕ ಮಜ್ಜನವಲ್ಲ, ಜೀವನದಲ್ಲಿ ಸಜ್ಜನವೇ ಮಜ್ಜನ. ಅತ್ಯಂತ ಪರಿಣಾಮಕಾರಿಯಾಗಿ ಪ್ರಾಸಬದ್ಧವಾಗಿ ಸಜ್ಜನವೇ ಮಜ್ಜನ ಎಂದು ಅಲ್ಲಮ ಅಂದಿರುವುದು ಅನನ್ಯ ಪದಪ್ರಯೋಗ. ಸಜ್ಜನವೇ ಮಜ್ಜನವಾಗಿ, ಸತ್ಯವೇ ಹೂಪತ್ರೆಯಾಗಿ ನಡೆಯಬೇಕಿರುವ ಅಂತರಂಗದ ಪೂಜೆಯನ್ನು ಬೇಂದ್ರೆಯವರು ಚೈತನ್ಯದ ಪೂಜೆ ಅಂತ ಕರೆದಿದ್ದಾರೆ.
“ಚೈತನ್ಯದ ಪೂಜೆ ನಡೆದSದ
ನೋಡS ತಂಗಿ, ಅಭಂಗದ ಭಂಗೀS,
ಸೌಜನ್ಯ ಎಂಬುದು ಮೊದಲನೆ ಹೂವು
ಅರಳೋಣ ನಾವೂ ನೀವೂ,
ಸಾಮರ್ಥ್ಯ ಎಂಬುದು ಬೆಲಪತ್ರಿ, ಶಿವಗರ್ಪಿತ ಇರಲಿ ಖಾತ್ರಿ.
ಸತ್ಯ ಎಂಬುವ ನಿತ್ಯದ ದೀಪ, ಸುತ್ತೆಲ್ಲಾ ಅವನದೇ ರೂಪ,
ಪ್ರೀತಿ ಎಂಬುವ ನೈವೇದ್ಯ, ಇದು ಎಲ್ಲರ ಹೃದಯದ ಸಂವೇದ್ಯ”
ಅಲ್ಲಮ ಹೇಳಿರುವ ಸಜ್ಜನವೇ ಬೇಂದ್ರೆಯವರು ಬಳಸಿರುವ ಸೌಜನ್ಯ ಎಂಬ ಪದ. ಬೇಂದ್ರೆಯವರು ಹೇಳಿರುವ ಪ್ರೀತಿ ನೈವೇದ್ಯ, ಹೃದಯದ ಸಂವೇದ್ಯವೇ ಅಲ್ಲಮ ವಚನದ ಕೊನೆಯಲ್ಲಿ ನುಡಿದಿರುವ ‘ಪರಿಣಾಮವೆ ಅರ್ಪಿತ’.

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.




