ದೂರದೂರದ ವಿದೇಶಗಳಿಗೆ ಸುತ್ತಾಡುತ್ತಿದ್ದ ಪ್ರಧಾನಮಂತ್ರಿ ಮೋದಿಯವರು ನಮ್ಮದೇ ದೇಶದ ಮಣಿಪುರಕ್ಕೆ ಕಡೆಗೂ ಮೊನ್ನೆ ಭೇಟಿ ನೀಡಿದರು. ಆದರೆ ಈ ಭೇಟಿಗೆ 30 ತಿಂಗಳುಗಳು ಬೇಕಿತ್ತೇ? ಡಬಲ್ ಎಂಜಿನ್ ಸರ್ಕಾರದ ಎರಡೂ ಎಂಜಿನ್ ಗಳು ವಿಫಲ ಆಗಿದ್ದೇಕೆ?
ಸತತವಾಗಿ ಸುರಿದ ಮಳೆಯ ಕಾರಣ ಶನಿವಾರ ಮಣಿಪುರದಲ್ಲಿ ಮೋದಿಯವರ ಹೆಲಿಕಾಪ್ಟರು ಆಕಾಶಕ್ಕೆ ಜಿಗಿಯದೆ ಹೋಯಿತು. ವಾಯುಮಾರ್ಗ ಮುಚ್ಚಿ ಹೋಗಿ ಭೂಮಾರ್ಗ ಅನಿವಾರ್ಯವಾಯಿತು. ಜನಾಂಗೀಯ ಹಿಂಸಾಚಾರದ ದಳ್ಳುರಿಯಲ್ಲಿ ವರ್ಷಗಟ್ಟಲೆ ಬೆಂದ ಸೀಮೆಗಳ ಮೂಲಕವೇ ಹಾಯಬೇಕಾಗಿ ಬಂದಿತು.
ಎರಡೂವರೆ ವರ್ಷಗಳ ಈ ದಳ್ಳುರಿಯಿಂದಾಗಿ ಮಣಿಪುರದ ಕಣಿವೆ ಮತ್ತು ಗುಡ್ಡಗಾಡು ಸೀಮೆಗಳ ನಡುವೆ ಭಾರೀ ಕಂದರ ಬಾಯಿ ತೆರೆದಿದೆ. ಮೋದಿ ಸರ್ಕಾರ ಕಡೆಗೂ ತಮ್ಮ ಪಕ್ಷದ ರಾಜ್ಯ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿ ಮಾಡಿ ಆರು ತಿಂಗಳು ಕಳೆದಿವೆ. ಹಿಂಸಾಚಾರ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ.
ಮಳೆ ಮತ್ತು ಕೆಸರನ್ನು ಲೆಕ್ಕಿಸದೆ ಶನಿವಾರ ಪ್ರಧಾನಿ ಮೋದಿಯವರ ಬಹಿರಂಗ ಸಭೆ ಬಂದ ಕುಕಿ-ಝೋ ಬುಡಕಟ್ಟು ಜನರಿಗೆ ನಿರಾಸೆ ಕಾದಿತ್ತು. ಕುಕಿ ಪ್ರಾಬಲ್ಯದ ಚುರಾಚಾಂದಪುರದ ನೂರಾರು ಮಂದಿ ಕೈಯಲ್ಲಿ ತ್ರಿವರ್ಣಧ್ವಜಗಳನ್ನು ಹಿಡಿದು ಮೋದಿ ಕಾರು ದಿಬ್ಬಣವನ್ನು ಸ್ವಾಗತಿಸಿದರು. ಭಾಷಣ ಆಲಿಸಲು ನೆರೆದರು.
ಎರಡೂವರೆ ವರ್ಷಗಳಷ್ಟು ತಡವಾಗಿ ಜರುಗಿದ ಮೋದಿಯವರ ಈ ಭೇಟಿ ಆ ರಾಜ್ಯದ ಜನರಲ್ಲಿ ಅಪಾರ ನಿರೀಕ್ಷೆಗಳನ್ನು ಹುಟ್ಟಿ ಹಾಕಿತ್ತು. ಗುಡ್ಡಗಾಡುಗಳ ಕುಕಿ-ಝೋ ಬುಡಕಟ್ಟು ಜನ ಮತ್ತು ಕಣಿವೆ ಪ್ರದೇಶದ ಮೈತೇಯಿ ಮಂದಿ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂಬ ಆಶೆ ಇಟ್ಟುಕೊಂಡಿದ್ದರು.
ಅವರ ಆಸೆ ನಿರೀಕ್ಷೆಗಳನ್ನು ಮೋದಿಯವರು ಹುಸಿಗೊಳಿಸಿದ್ದಾರೆ. ಹಾಗೆಂದು ಮಣಿಪುರದ ಸಮಸ್ಯೆಗಳು ಒಂದೇ ಏಟಿನಲ್ಲಿ ಪರಿಹರಿಸಬಹುದು ಎಂಬಷ್ಟು ಸರಳವಲ್ಲ ನಿಜ. ಗಡಿ ರಾಜ್ಯವೊಂದು ಹೊಂದಿರಬಹುದಾದ ಎಲ್ಲ ಸೂಕ್ಷ್ಮ ಸನ್ನಿವೇಶಗಳೂ ಇಲ್ಲಿ ವಾಸ್ತವವೇ ಹೌದು. ಆದರೆ ಆರಂಭಿಕ ಹೆಜ್ಜೆಗಳನ್ನಾದರೂ ಇರಿಸಬೇಕಿತ್ತಲ್ಲ? ಮುಕ್ತ ಮನಸ್ಸಿನ ಮಾತುಕತೆಗಳ ಸುಳಿವನ್ನಾದರೂ ನೀಡಬೇಕಿತ್ತು. ಪರಸ್ಪರರ ವಿರುದ್ಧ ಹಲ್ಲು ಮಸೆದಿರುವ ಎರಡೂ ಗುಂಪುಗಳಿಗೆ ಪ್ರಧಾನಿ ಭೇಟಿ ನಿರಾಸೆ ಮೂಡಿಸಿದೆ.
ಮಣಿಪುರವನ್ನು ಭಾರತದ ಮುಕುಟಮಣಿ ಎಂದು ಮೋದಿಯವರು ಕೊಂಡಾಡಿದ್ದಾರೆ. ಸಾವಿರಾರು ಕೋಟಿ ರುಪಾಯಿಗಳ ಅಭಿವೃದ್ಧಿ ಯೋಜನೆಗಳ ಆಶ್ವಾಸನೆ ನೀಡಿದ್ದಾರೆ. ಆದರೆ “ಎಣ್ಣೆ ಗಾಣದಾತ ಅಯ್ಯೋ ಎಂದರೆ ನೆತ್ತಿ ತಂಪಾಗುವುದೇ…” ಎಂಬ ಗಾದೆಯೊಂದಿದೆ.

ದೂರದೂರದ ವಿದೇಶಗಳಿಗೆ ಸುತ್ತಾಡುತ್ತಿದ್ದ ಪ್ರಧಾನಮಂತ್ರಿ ಮೋದಿಯವರು ನಮ್ಮದೇ ದೇಶದ ಮಣಿಪುರಕ್ಕೆ ಕಡೆಗೂ ಮೊನ್ನೆ ಭೇಟಿ ನೀಡಿದರು. ಆದರೆ ಈ ಭೇಟಿಗೆ 30 ತಿಂಗಳುಗಳು ಬೇಕಿತ್ತೇ? ಡಬಲ್ ಎಂಜಿನ್ ಸರ್ಕಾರದ ಎರಡೂ ಎಂಜಿನ್ ಗಳು ವಿಫಲ ಆಗಿದ್ದೇಕೆ?
250ಕ್ಕೂ ಹೆಚ್ಚು ಹತ್ಯೆಗಳು, ಅಮಾಯಕ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು, ಬೆತ್ತಲೆ ಮೆರವಣಿಗೆಗಳು ನಾಗರಿಕ ಸಮಾಜವನ್ನು ನತಮಸ್ತಕಗೊಳಿಸಿದವು. ಕರುಳು ತೊಳಸಿ ಬರುವ, ಆತ್ಮವನ್ನು ಘಾಸಿಗೊಳಿಸುವ ವಿಡಿಯೋಗಳು ಹರಿದಾಡಿದವು.
ಎರಡೂವರೆ ವರ್ಷಗಳ ಕಾಲ ಮೋದಿಯವರು ಮಣಿಪುರ ಕುರಿತು ತುಟಿ ಬಿಚ್ಚಿರಲಿಲ್ಲ. ಕಡೆಯ ಪಕ್ಷ ಶಾಂತಿಗಾಗಿ ಮನವಿ ಕೂಡ ಮಾಡಿಲ್ಲ. ಅವರ ‘ಮನ್ ಕೀ ಬಾತ್’ ನಲ್ಲೂ ಮಣಿಪುರ ಸುಳಿಯಲಿಲ್ಲ. ರೊಚ್ಚಿಗೆದ್ದ ಮಣಿಪುರದ ನಾಗರಿಕರು ಕಳೆದ ಮನ್ ಕೀ ಬಾತ್ ಪ್ರಸಾರದ ಹೊತ್ತಿನಲ್ಲಿ ರೇಡಿಯೋಗಳನ್ನು ರಸ್ತೆಗಳಲ್ಲಿ ಒಡೆದು ಜಜ್ಜಿ ಪ್ರತಿಭಟಿಸಿದ್ದರು.
ಮಣಿಪುರದ ಸುದೀರ್ಘ ಬೇಗುದಿಗೆ ಕಿಡಿ ಹೊತ್ತಿಸಿದ್ದು ಅಲ್ಲಿನ ಹೈಕೋರ್ಟು 2023ರಲ್ಲಿ ನೀಡಿದ್ದ ಆದೇಶ. ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರ್ಪಡೆಯ ಶಿಫಾರಸನ್ನು ತ್ವರಿತವಾಗಿ, ಸಾಧ್ಯವಾದರೆ ನಾಲ್ಕು ವಾರಗಳೊಳಗೆ ಕೇಂದ್ರಕ್ಕೆ ಕಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಮೈತೇಯಿಗಳು ಮತ್ತು ಕುಕಿ ಬುಡಕಟ್ಟುಗಳ ನಡುವೆ ದಶಕಗಳಿಂದ ಬೆಳೆದು ಬಂದಿದ್ದ ಮನಸ್ತಾಪದ ಸಿಡಿಮದ್ದಿಗೆ ಕಡ್ಡಿ ಗೀರಿತ್ತು ಈ ಆದೇಶ. ಆದರೆ ಕಳೆದ ಎರಡೂವರೆ ವರ್ಷಗಳಲ್ಲಿ ಈ ಮನಸ್ತಾಪ ಹಲವು ಆಯಾಮಗಳ ಬೃಹತ್ ರೂಪ ತಳೆದಿದೆ. ಧೃವೀಕರಣ ಅಪಾಯಕಾರಿ ಹಂತ ಮುಟ್ಟಿದೆ.
ರಾಜ್ಯ ಹೋಳಾಗಲು ಬಿಡುವುದಿಲ್ಲ ಎಂದು ಹಠತೊಟ್ಟಿದ್ದಾರೆ ಮೈತೇಯಿಗಳು. ಕುಕಿ-ಝೋಗಳು ಪ್ರತ್ಯೇಕ ರಾಜ್ಯ ಕೇಳುತ್ತಿಲ್ಲ, ತಮ್ಮ ಸೀಮೆಗೆ ಪ್ರತ್ಯೇಕ ಆಡಳಿತ ಬೇಕೆನ್ನುತ್ತಿದ್ದಾರೆ. ಹತ್ತು ಮಂದಿ ಶಾಸಕರು (ಈ ಪೈಕಿ ಏಳು ಮಂದಿ ಬಿಜೆಪಿಯವರು) ಮಣಿಪುರದ ಗುಡ್ಡಗಾಡು ಸೀಮೆಗಳಿಗೆ ತನ್ನದೇ ಆದ ಶಾಸನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ ಬೇಕೆಂದು ಮೋದಿಯವರಿಗೆ ಮನವಿ ನೀಡಿದರು. ಕುಕಿ-ಝೋ ಮತ್ತು ಮೈತೇಯಿಗಳು ಒಂದೇ ಛಾವಣಿಯಡಿ ಇರುವುದು ಅಸಾಧ್ಯ ಎಂಬ ಪರಿಗಸ್ಥಿತಿ ನೆಲೆಸಿರುವುದು ವಾಸ್ತವ.
“ಎರಡೂವರೆ ವರ್ಷಗಳಿಂದ ಜಾರಿಯಲ್ಲಿರುವ ಕುಕಿ-ಝೋ ಬುಡಕಟ್ಟುಗಳು ಮತ್ತು ಹಿಂದೂ ಮೈತೇಯಿ ಜನರ ನಡುವಣ ಘರ್ಷಣೆಯನ್ನು ಕೊನೆಗಾಣಿಸುವ ಯಾವುದೇ ಗಟ್ಟಿ ಕ್ರಮವನ್ನು ಪ್ರಧಾನಿ ಘೋಷಿಸಲಿಲ್ಲ. ಗುಡ್ಡಗಾಡು (ಬುಡಕಟ್ಟು ಜನರ ಸೀಮೆ) ಮತ್ತು ಕಣಿವೆಗಳ (ಮೈತೇಯಿಗಳ ಸೀಮೆ) ನಡುವೆ ಶಾಂತಿ-ಮೈತ್ರಿಯ ಸೇತುವೆಯ ಮಂತ್ರ ಜಪಿಸಿದರು. ಆದರೆ ಸಮಸ್ಯೆಗಳಿಗೆ ಪರಿಹಾರ ನೀಡಲಿಲ್ಲ. ನೇಪಾಳದ ಸ್ಥಿತಿಗತಿ, ಜಿ.ಎಸ್.ಟಿ. ಅಥವಾ ಅಭಿವೃದ್ಧಿ ಯೋಜನೆಗಳ ಕುರಿತು ಭಾಷಣ ಕೇಳಲು ನಾವು ಇಲ್ಲಿಗೆ ಬರಲಿಲ್ಲ” ಎಂಬುದು ಬುಡಕಟ್ಟು ಜನರ ದೂರು.
ಇತ್ತ ಮೈತೇಯಿಗಳಿಗೂ ಮೋದಿ ಭೇಟಿ ತೃಪ್ತಿ ತಂದಿಲ್ಲ- “ನಮ್ಮ ರಾಜ್ಯಕ್ಕೆ ನುಸುಳಿರುವ ಚಿನ್-ಕುಕಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಎನ್.ಆರ್.ಸಿ. ನಡೆಸಬೇಕು. ಅಕ್ರಮ ಅಫೀಮು ಕೃಷಿ ಮತ್ತು ಕಳ್ಳಸಾಗಣೆ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ತಿಳಿಸಬೇಕು” ಎಂಬುದು ಮೈತೇಯಿಗಳ ಆಗ್ರಹ.
ಮಣಿಪುರದ ಸಂಘರ್ಷವನ್ನು ಅಂತ್ಯಗೊಳಿಸಲು ಪ್ರತ್ಯೇಕ ಆಡಳಿತವೊಂದೇ ಪರಿಹಾರ ಎನ್ನುತ್ತದೆ ಕುಕಿ-ಝೋ ಬುಡಕಟ್ಟುಗಳ ಸಮುದಾಯ. ಕುಕಿ ಪ್ರಾಬಲ್ಯದ ಚುರಾಚಾಂದಪುರ್ ಕಾಂಗಪೋಕ್ಬಿ ಹಾಗೂ ತೆಂಗನೌಪಾಲ್ ಜಿಲ್ಲೆಗಳಿಗೆ ಪ್ರತ್ಯೇಕ ಆಡಳಿತ ಬೇಕೆಂಬುದು ಅವರ ಆಗ್ರಹ.

‘ಕಟುಕರಂತೆ ಕತ್ತರಿಸಿ ರಾಜಧಾನಿ ಇಂಫಾಲ ಮತ್ತು ಕಣಿವೆ ಪ್ರದೇಶಗಳಿಂದ ನಮ್ಮನ್ನು ಹೊರಗಟ್ಟಲಾಯಿತು. ಮಣಿಪುರದಿಂದ ನಮ್ಮನ್ನು ಹೊರದಬ್ಬುವ ತನಕ ವಿರಮಿಸುವುದಿಲ್ಲವೆಂದು ಮೈತೇಯಿ ತೀವ್ರವಾದಿಗಳು ಬಹಿರಂಗವಾಗಿ ಸಾರಿದ್ದಾರೆ. ಮೈತೇಯಿಗಳು ನಿಯಂತ್ರಿಸುವ ರಾಜ್ಯದಲ್ಲಿ ಘನತೆಯಿಂದ ಬದುಕಲು ನಮಗೆ ಅವಕಾಶವೇ ಇಲ್ಲವಾಗಿದೆ. ಈ ಕಾರಣದಿಂದಾಗಿ ಪ್ರತ್ಯೇಕ ಆಡಳಿತ ಅನಿವಾರ್ಯ” ಎನ್ನುತ್ತಾರೆ. ಏಳು ತಿಂಗಳ ಕಾಲ ನಡೆದ ಸಂಘರ್ಷದ ಉರಿಯಲ್ಲಿ ಬೆಂದ ಬಹುತೇಕರು ಕುಕಿ ಝೋ ಜನರೇ. 152 ಮಂದಿ ಹತ್ಯೆಗೀಡಾಗಿದ್ದು, ಏಳು ಸಾವಿರ ಮನೆಗಳನ್ನು ಸುಟ್ಟು ಹಾಕಲಾಗಿದೆ. 52 ಸಾವಿರ ಮಂದಿ ನಿರಾಶ್ರಿತರಾಗಿದ್ದಾರೆ.
ಬಿರೇನ್ ಸಿಂಗ್ ಸರ್ಕಾರ ಅನುಸರಿಸಿದ ಬಹುಸಂಖ್ಯಾಕ ನೀತಿನಿರ್ಧಾರಗಳು ಹಿಂದೂ ಮೈತೇಯಿಗಳು ಮತ್ತು ಬುಡಕಟ್ಟುಗಳ ಜನರ ನಡುವಣ ವಿಶ್ವಾಸವನ್ನು ಸಾರಾಸಗಟಾಗಿ ಮುರಿದು ಹಾಕಿವೆ. ಹಿಂಸಾಚಾರಕ್ಕೆ ದಾರಿ ಮಾಡಿವೆ. ‘ಬುಡಕಟ್ಟು ಜಾತಿಗಳಿಗೆ ಸೇರಿದ ಸರ್ಕಾರಿ ನೌಕರರು ಮತ್ತು ನಮ್ಮ ಶಾಸಕರಿಗೆ ಕೂಡ ರಾಜಧಾನಿ ಇಂಫಾಲಕ್ಕೆ ಪ್ರವೇಶ ಇಲ್ಲವಾಗಿದೆ. ರಾಜ್ಯ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ. ಕೇಂದ್ರ ಸರ್ಕಾರದಿಂದ ಪೂರೈಸಲಾಗುವ ಆಹಾರ ಮತ್ತಿತರೆ ಅಗತ್ಯ ಸಾಮಗ್ರಿಗಳನ್ನು ಕೂಡ ಪಕ್ಕದ ಮಿಝೋರಂ ರಾಜ್ಯದ ಮೂಲಕ ಸುತ್ತಿಸಿ ಬಳಸಿ ನಮಗೆ ಮುಟ್ಟಿಸಲಾಗುತ್ತಿದೆ. ಬುಡಕಟ್ಟು ಜನರಿಗೆ ಯಾವುದೇ ನೆರವು ದೊರೆಯದಂತೆ ತಡೆಯುತ್ತಿವೆ ಮೈತೇಯಿ ಗುಂಪುಗಳು’ ಎಂದು ಗೃಹಮಂತ್ರಿ ಅಮಿತ್ ಶಾ ಅವರಿಗೆ ಸಲ್ಲಿಸಿರುವ ಮನವಿಪತ್ರದಲ್ಲಿ ಬುಡಕಟ್ಟು ಜನ ಅಲವತ್ತುಕೊಂಡಿದ್ದಾರೆ.
ಮಣಿಪುರದ ಜನಸಂಖ್ಯೆ 33 ಲಕ್ಷ. ಈ ಪೈಕಿ ಅರ್ಧಕ್ಕೂ ಹೆಚ್ಚಿನವರು ವೈಷ್ಣವ ಸಂಪ್ರದಾಯ ಅನುಸರಿಸುವ ಮೀತೀಗಳು. ಗುಡ್ಡಗಾಡಿನಲ್ಲಿ ನೆಲೆಯೂರಿರುವ ಪ್ರಧಾನ ಬುಡಕಟ್ಟುಗಳಾದ ಕುಕೀಗಳು ಮತ್ತು ನಾಗಾಗಳ ಪ್ರಮಾಣ ಶೇ.43ರಷ್ಟು. ಮೈತೇಯಿಗಳು ವೈಷ್ಣವ ಸಂಪ್ರದಾಯದ ಹಿಂದುಗಳಾದರೆ ಬಹುತೇಕ ಕುಕಿಗಳು ಕ್ರೈಸ್ತರು.
ಇದನ್ನೂ ಓದಿ ಕೃಷಿ ರಂಗ | ಸಾವಯವ ಕೃಷಿಗೆ ಎರೆಹುಳ ಗೊಬ್ಬರ
ಸಮರಕ್ಕೆ ನಿಂತಿರುವ ಸಮುದಾಯಗಳ ನಡುವೆ ಅಪನಂಬಿಕೆಯ ಕಂದಕ ಬೃಹತ್ತಾಗಿ ಬಾಯಿ ತೆರೆದಿದೆ. ಭದ್ರತಾ ಪಡೆಗಳು ಪಕ್ಷಪಾತದಿಂದ ವರ್ತಿಸುತ್ತಿವೆ ಎಂಬ ಆಪಾದನೆಯನ್ನು ಎರಡೂ ಸಮುದಾಯಗಳು ಮಾಡಿವೆ. 200ಕ್ಕೂ ಹೆಚ್ಚು ಚರ್ಚುಗಳು, 17 ದೇವಾಲಯಗಳು ಧ್ವಂಸವಾಗಿವೆ.
ಸುಮಾರು 60 ಸಾವಿರ ಮಂದಿ ಮನೆಮಠ ಕಳೆದುಕೊಂಡ ನಿರಾಶ್ರಿತರ ಶಿಬಿರಗಳಿಲ್ಲಿದ್ದಾರೆ. ಕುಟುಂಬಗಳು ಛಿದ್ರವಾಗಿವೆ. ಮಣಿಪುರ ಕುರಿತು ಕೇವಲ ತುಟಿಯ ಮೇಲಿನ ಅನುಕಂಪವನ್ನು ದಾಟಿ ಬಹುದೂರ ಸಾಗಬೇಕಿದೆ ಮೋದಿ ಸರ್ಕಾರ. ಕಳೆದುಕೊಂಡಿರುವ ವಿಶ್ವಾಸವನ್ನು ಮರಳಿ ಗಳಿಸಬೇಕಿದೆ. ಮಾತುಕತೆಯ ಕಾಲುದಾರಿಗಳು ಮತ್ತು ಹೆದ್ದಾರಿಗಳನ್ನು ತೆರೆಯಬೇಕಿದೆ.

ಡಿ ಉಮಾಪತಿ
ಹಿರಿಯ ಪತ್ರಕರ್ತರು




