ದಿಲ್ಲಿ ಮಾತು | ಇದು ಪಿತೃ ಪ್ರಭುತ್ವವನ್ನು ಒಡೆಯುವ ಕಾಲ

Date:

ಲೋಹಿಯಾ ಅವರು, “ಈ ಲೋಕದ ಮಹಿಳೆಯರಿಗೆ, ಬೌದ್ಧಿಕ ಮಟ್ಟದಲ್ಲಿ ಪುರುಷನಿಗಿಂತ ಯಾವುದರಲ್ಲೂ ಕಡಿಮೆಯಿಲ್ಲದ, ಪ್ರತಿಭಟನೆಯ ಸಂಕೇತವಾದ ದ್ರೌಪದಿ ಆದರ್ಶವಾಗಬೇಕು” ಎನ್ನುತ್ತಾರೆ. ವಾಸ್ತವವಾಗಿ ಪಿತೃಪ್ರಭುತ್ವವನ್ನು ಒಡೆದುಹಾಕುವ ಅಗತ್ಯ ಎಂದಿಗಿಂತಲೂ ಇಂದು ಹೆಚ್ಚಾಗಿದೆ.

ಲೋಹಿಯಾ ಒಂದು ಕಡೆ ಹೇಳುತ್ತಾರೆ, “ಈ ದೇಶದ ಸ್ತ್ರೀಯರಿಗೆ ಸೀತೆ ಅಥವಾ ಸಾವಿತ್ರಿ ಆದರ್ಶವಾಗಬಾರದು, ದ್ರೌಪದಿ ಆದರ್ಶವಾಗಬೇಕು. ಏಕೆಂದರೆ ದ್ರೌಪದಿ ಬೌದ್ಧಿಕ ಮಟ್ಟದಲ್ಲಿ ಯಾವ ಗಂಡಿಗಿಂತಲೂ ಕಡಿಮೆಯೆನಿಸಿದವಳಲ್ಲ. ಪುರುಷ ವ್ಯವಸ್ಥೆಯು ಒಪ್ಪಿಕೊಂಡಿದ್ದ ’ಆದರ್ಶ’ ಸ್ತ್ರೀಯ ಪ್ರತಿಮೆಗಳು ಅವಳನ್ನು ಇನ್ನಷ್ಟು ಹಿಂದಕ್ಕೆ ತಳ್ಳಿವೆ”. ಮಹಿಳೆಯರಿಗೆ ಸಿಗಬೇಕಾಗಿದ್ದ ಸಮಾನತೆ, ಸಬಲೀಕರಣದ ಬಗ್ಗೆ ಲೋಹಿಯಾ ಅವರಿಗಿದ್ದ ಆದರ್ಶ ಹಾಗೂ ಆಶಯಗಳನ್ನು ಅವರ ಪ್ರಬಂಧ ʼದ್ರೌಪದಿ ಅಥವಾ ಸಾವಿತ್ರಿʼ ಯಲ್ಲಿ ಕಾಣಬಹುದು. ಮಹಿಳೆಯನ್ನು ಸದಾಕಾಲ ವಿಧೇಯರಾದ ಸೀತೆಯಂತೆ ಕೇವಲ ತ್ಯಾಗ ಮತ್ತು ಹೊಂದಾಣಿಕೆಗಳ ಸಂಕೇತವಾಗಿ ತೆಗೆದುಕೊಳ್ಳಬಾರದು, ಆಕೆ ದುಃಖ ಮತ್ತು ಪ್ರತಿಭಟನೆಯನ್ನೂ ಸಹ ಸಂಕೇತಿಸುತ್ತಾಳೆ ಎನ್ನುತ್ತಾರೆ.  

ಸ್ವತಂತ್ರವಾಗಿ ಬದುಕಬಲ್ಲ, ಆರ್ಥಿಕವಾಗಿ ಸಬಲರಾದ ಮಹಿಳೆಯರು ಶಿಷ್ಟ ಸಮಾಜದ ಬಲಾಢ್ಯರ ಕೆಂಗಣ್ಣಿಗೆ ಬಹುಬೇಗ ಗುರಿಯಾಗುತ್ತಾರೆ. ಅದೇ ಒಂದು ಊರು ಒಂದು ಕೇರಿಯೊಳಗಿನ ಹೆಣ್ಣಿನ ಸಂಕಟ ಇವರಿಗಿಂತ ಸ್ವರೂಪದಲ್ಲಿ ಭಿನ್ನವಾಗಿರಬಹುದೇ ಹೊರತು ಯಾತನೆಯ ತೀವ್ರತೆ ಹಾಗೂ ಪರಿಭಾಷೆ ಒಂದೇ ಎಂದು ನನಗನಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸಂದರ್ಭದಲ್ಲಿ ನನ್ನದೇ ಪರಿಚಿತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಹೆಣ್ಣೊಬ್ಬಳ ಕತೆಯನ್ನು ಹೇಳಲೇಬೇಕಿದೆ.  ಬಾಲ್ಯವನ್ನು ನೇಪಾಳದಲ್ಲಿ ಕಳೆದು ದಿಲ್ಲಿಗೆ ಹೊಟ್ಟೆಪಾಡಿಗಾಗಿ ವಲಸೆ ಬಂದ ಬಿಹಾರಿನ ಅನಕ್ಷರಸ್ಥ ಮಹಿಳೆ ಕಂಪನಿಯ ಗುತ್ತಿಗೆದಾರನಲ್ಲಿ ದಿನಗೂಲಿ ದುಡಿಯುತ್ತಿದ್ದಳು. ನಗರದ ಚಾಲಾಕಿ ಅರಿಯದ ಸರಳತೆ, ವಿಧೇಯತೆಗಳೇ ತುಂಬಿದ್ದ ಆಕೆಯನ್ನು ಗುತ್ತಿಗೆದಾರನಿಂದ ಬಿಡಿಸಿ ಕಂಪನಿಯ ಹಿರಿಯ ವೃದ್ಧರು ಕಂಪನಿಯಲ್ಲಿ ಚಹ-ನೀರು ಕೊಡುವ ಜವಾನಳನ್ನಾಗಿ ನೇಮಿಸಿಕೊಂಡರು. ಆಕೆ ಸಂಜೆ ನಾಲ್ಕರವರೆಗೆ ಕಂಪನಿಯಲ್ಲಿ ದುಡಿದು ನಂತರ ಅವರ ಮನೆಯಲ್ಲಿ ಅಡುಗೆ ಮಾಡಲು, ನೆಲಗುಡಿಸಿ, ಒರೆಸುವ ಮನೆಗೆಲಸಕ್ಕಾಗಿ ಹೋಗುತ್ತಿದ್ದಳು. ಆತ ಎಂಭತ್ತೈದು ವರ್ಷದ ಹಿರಿಯ, ಆತನ ಪತ್ನಿಯೂ ಅಷ್ಟೇ! ಈ  ದಂಪತಿಗಳನ್ನು ತನ್ನ ತಂದೆ-ತಾಯಿ ಸಮಾನವೆಂದೇ ಆ ಹೆಣ್ಣುಮಗಳು ಭಾವಿಸಿದ್ದಳು.

patriarchy

ಅದುವರೆಗೂ ಒಳ್ಳೆಯವನಾಗಿದ್ದ ಈ ವೃದ್ಧ ಅಗಸ್ಟ್‌ ಹದಿನೈದರ ನೆಪಮಾಡಿ “ಶೇಕ್ ಹ್ಯಾಂಡ್ ಕೊಡು” ಎಂದು ಹೇಳಿ ಆಕೆಯ ಕೈ ಸ್ಪರ್ಶಿಸಿದ. ಆಕೆ ಅಜ್ಜನ ವಯಸ್ಸಿನ ಮಾಲೀಕನ ಬಯಕೆಯನ್ನು ಆಜ್ಞೆಎಂಬಂತೆ ಪಾಲಿಸಿದಳು. ಅದನ್ನೇ ಸಮ್ಮತಿಯೆಂದು ತಿಳಿದಿರಬೇಕು. ಅವಳ ಬಡತನ, ಅಸಹಾಯಕತೆ, ಅವಲಂಬನೆ, ದೈನೇಸೀತನವನ್ನೇ ದುರುಪಯೋಗಿಸಿದ ಅವನ ಕಾಮುಕತೆಗೆ ಈ ಪಾಪದ ಹೆಣ್ಣು ಬಲಿಯಾಗಬೇಕಾಯಿತು. ಆತ ಏನೇ ಮಾಡಿರಲಿ ಅಥವಾ ಮಾಡದೇ ಇರಲಿ, ಆದರೆ ಅವನು ಅವಳ ಅಸಹಾಯಕತೆಯನ್ನು ಬಳಸಿಕೊಂಡನಲ್ಲ. ಅದು ಯಾವ ದೊಡ್ಡ ಅಪರಾಧಕ್ಕೂ ಕಡಿಮೆಯಿಲ್ಲದ್ದು. ಅವನ ಕೃತ್ಯವನ್ನು ಪ್ರತ್ಯಕ್ಷವಾಗಿಯೇ ನೋಡಿದ ಅವನ ವೃದ್ಧ ಪತ್ನಿ ಆ ಬಡವಿಯನ್ನೇ ಚರಿತ್ರೆಹೀನಳೆಂದೂ, ಆಕೆ ಕಂಪನಿಯಲ್ಲಿರಕೂಡದೆಂದು ತಕ್ಷಣವೇ ಹೊರದಬ್ಬಿಸಿದಳು. ಗಂಡಸು ಎಂಬ ಕಿರೀಟವನ್ನು ಹೊತ್ತಿದ್ದ ಅವನಿಗೆ ಏನೂ ಆಗಲಿಲ್ಲ. ಆತ ಮೀಸೆ ತಿರುವಿಕೊಂಡು ಏನೂ ಆಗಿಯೇ ಇಲ್ಲ, ಆ ಹೆಸರಿನ ಯುವತಿ ನಮ್ಮ ಕಂಪನಿಯಲ್ಲಿ ಇದ್ದೇ ಇರಲಿಲ್ಲ, ಎನ್ನುವಂತೆ ಇದ್ದುಬಿಟ್ಟ. ಇಡೀ  ಪುರುಷಾಧಿಪತ್ಯದ ಪ್ರತೀಕದಂತೆ. ಬಡವನ ಸಿಟ್ಟು ದವಡೆಗೆ ಮೂಲ ಎನ್ನುವ ಮಾತಿನಂತೆ ಆಕೆ ಮೌನವಾಗಿ ಸತ್ಯವನ್ನೂ ಹೇಳದೇ ಬೇರೆಕಡೆ ಹೊರಟು ಹೋದಳು. ಒಂದು ದೂರು ಕೊಡೋಣವೆಂದರೂ ಒಪ್ಪಲಿಲ್ಲ ಆಕೆ.   

ಸತ್ತೇ ಹೋಗುವಂಥ ಅವಮಾನವನ್ನು ಅನುಭವಿಸಿದ್ದು, ಎಲ್ಲರ ಬಾಯಿಗೆ ಆಹಾರವಾಗಿದ್ದು ಆ ಬಡ ಮಹಿಳೆ. ಹೀಗೆ ಪೌರುಷ ಮೆರೆದ ಎಂಭತ್ತರ ಗಂಡಸು ನಾಚಿಕೆಯಿಲ್ಲದೇ ಏನೂ ಆಗದವನಂತೆ ಎದೆಯುಬ್ಬಿಸಿ ನಡೆಯುತ್ತಾನೆ. ತಪ್ಪು ಮಾಡದೇ ಮನೆಹಾಳಿ, ಕುಲಟೆ, ಎಷ್ಟು ದಿನದಿಂದ ನಡೆಸಿದ್ದಳೋ, ಹಣಕ್ಕಾಗಿ ಹೀಗೆ ಮಾಡಿದ್ದಳು” ಎಂಬೆಲ್ಲ ಆರೋಪ, ಅವಹೇಳನ, ತಲೆಯೆತ್ತಿ ತಿರುಗದಂತಾಗಿದ್ದು ಆ ಹೆಣ್ಣಿಗೆ. ಆಗ ’ಮೀಟೂ’ #MeToo ಆಂದೋಲನ ನೆನಪಾಯ್ತು. ಅದರ ಕಾಳ್ಗಿಚ್ಚು ಸುಡುಗೆಂಡದ ಮೇಲಿನ ನಡೆತದ ಬದುಕು, ತದನಂತರದ ಪರಿಣಾಮಗಳನ್ನು ನೋಡಿದ್ದೇವೆ. ದನಿಯೆತ್ತಿದ ಹೆಣ್ಣುಮಕ್ಕಳನ್ನೇ ಅನುಮಾನಾಸ್ಪದವಾಗಿ ನೋಡುವ, ನೇರವಾಗಿ ಅವರ ಚಾರಿತ್ರ್ಯವಧೆಗೆ ಇಳಿಯುವ ಕೀಳುಮಟ್ಟದ ದ್ವೇಷ ಲಿಂಗ ರಾಜಕಾರಣ ಒಂದು ದೊಡ್ಡರೋಗ!   

ದಿಲ್ಲಿಯಲ್ಲಿ ನಡೆದ ಮಹಿಳಾ ಕುಸ್ತಿಪಟುಗಳ ಆಂದೋಲನದಲ್ಲಿ ಇಬ್ಬರು ಮಹಿಳೆಯರನ್ನು ನಡೆಸಿಕೊಂಡ ರೀತಿಗೆ ಇಡೀ ದೇಶವೇ ಸಾಕ್ಷಿಯಾಗಿದೆ. ಲೈಂಗಿಕ ಶೋಷಣೆ, ತನ್ನ ಅಧಿಕಾರದ ಮದದಿಂದ ದೌರ್ಜನ್ಯವೆಸಗಿದ ಆರೋಪಿಗೆ ರಾಜಕೀಯ ಮನ್ನಣೆ ಸಿಕ್ಕಿದರೆ ಹೋರಾಟ ನಿರತ ಮಹಿಳೆಯರನ್ನು ರಾಜಧಾನಿಯ ಬೀದಿಯಲ್ಲಿ ಎಳೆದಾಡುವಾಗ ನಮ್ಮ ದೇಶದ ಪ್ರಧಾನಿ ಹೋಸ ಸಂಸತ್ತಿನ ಪೂಜೆ ಹವನದಲ್ಲಿ ನಿರತರಾಗಿದ್ದರು. ಮಾಧ್ಯಮಗಳೇ ನ್ಯಾಯಾಂಗಗಳಾಗಿ ಇಡೀ ವ್ಯವಸ್ಥೆಯೇ ಇಂತಹ ಮಹಿಳೆಯರ ದನಿ ಅಡಗಿಸಲು, ಅಸ್ತಿತ್ವವನ್ನೇ ವಿಧ್ವಂಸಗೊಳಿಸಲು ವಿಷದ ಗುಂಡುಗಳನ್ನು ಹಾರಿಸುತ್ತಿರುವ ಸಂದರ್ಭದಲ್ಲಿ ಆಕೆ ತನ್ನ ಮತ್ತು ಕುಟುಂಬದ ಅವಮಾನ, ಮಾನಸಿಕ ಯಾತನೆಗಳನ್ನು ಮೀರಿ ಗಟ್ಟಿಯಾಗಿ ಕಾಲೂರಿ ನಿಂತು, ಪ್ರಶ್ನಿಸುತ್ತಿರುವವರ ಕಣ್ಣಲ್ಲಿ ಕಣ್ಣಿಟ್ಟು ಉತ್ತರಿಸುವ ಎದೆಗಾರಿಕೆಯುಳ್ಳವರು ಈ ದೇಶದ ಮಹಿಳೆಯರು ಎಂದು ಸಾಬೀತುಪಡಿಸಬೇಕಾದರೆ  ಹೆಣ್ಣೊಬ್ಬಳ ಈ ಪರಿಯ ಆತ್ಮಸ್ಥೈರ್ಯ, ಎದೆಗಾರಿಕೆಯನ್ನು ನಮ್ಮ ನೆಲದ ಗಂಡಾಳಿಕೆ ಎಂದೂ ಸಹಿಸದು. ಇಂತಹುದೇ ರೀತಿಯ ಧೈರ್ಯವನ್ನು ಶಾಹೀನಬಾಗಿನ ಮಹಿಳೆಯರು, ಜಾಮಿಯಾ ಮಿಲಿಯಾ ಇಸ್ಲಾಂಮಿಯಾದ ವಿದ್ಯಾರ್ಥಿನಿಯರು ಸಿಎಎ ಮತ್ತು ಎನ್‍ಆರಸಿ ವಿರೋಧದ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದು ಆಳುವ ಗಂಡಾಳಿಕೆಯ ಸನಾತನಿಗಳಿಗೆ ನುಂಗಲಾರದ ತುಪ್ಪವಾಗಿತ್ತು.

ಸಫೂರಾ ಜರ್ಗರಳನ್ನು ಗರ್ಭಿಣಿಯೆಂಬ ಕಾರಣಕ್ಕೂ ಮಾನವೀಯ ಸಹಾನುಭೂತಿಯನ್ನು ತೋರದೇ ಕೊರೋನಾ ಕಾಲದಲ್ಲಿ ಜೈಲಿನಟ್ಟರು. ಮಹಿಳಾ ಹಾಸ್ಟೆಲ್ ಮತ್ತು ಪಿ.ಜಿ.ಗಳು ಮಹಿಳೆಯರಿಗೆ ಹಾಕಿದ ನಿರ್ಬಂಧನೆಗಳನ್ನು ಕಡಿಮೆ ಮಾಡುವಂತೆ ಸ್ಥಾಪನೆಗೊಂಡಿದ್ದ ಪಿಂಜರಾ ತೋಡ (ಪಂಜರವನ್ನು ಮುರಿ) ಸಂಘಟನೆಯ ಸದಸ್ಯೆಯರಾದ ದೇವಾಂಗನಾ ಕಲಿತಾ ಮತ್ತು ನತಾಶಾ ನರ್ವಾಲ ಇವರೆಲ್ಲರ ಹಣೆಗೆ ದಿಲ್ಲಿ ದಂಗೆಯ ಆರೋಪವನ್ನು ಕಟ್ಟಿ, ಉಗ್ರರಿಗೆ ಬಳಸುವ UAPA ಕಾಯ್ದೆ ಅಸ್ತ್ರವನ್ನು ಬಳಸಿ ಬಂಧಿಸಿತ್ತು ಸರ್ವಾಧಿಕಾರಿ ಸರ್ಕಾರ. ದೀರ್ಘ ಜೈಲುವಾಸದ ಬಳಿಕ ಅವರಿಗೀಗ ಜಾಮೀನು ದೊರೆತಿದೆ.

ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಕಾರ್ಪೋರೇಟರನ್ನು ಪ್ರಶ್ನಿಸಿದ್ದ ವಕೀಲೆ, ಹೋರಾಟಗಾರ್ತಿ ಸುಧಾ ಭಾರದ್ವಾಜ್‌ ಕೂಡ ಮೂರು ವರ್ಷದಿಂದ ಜೈಲಿನಲ್ಲಿಯೇ ಇದ್ದರು.

Draupadi swayamwara

ದಿಲ್ಲಿ ದಂಗೆಯನ್ನು ಪ್ರಚೋದಿಸಿದವರು ಎನ್ನಲಾದ ಹದಿನೈದು ಜನರ ಕುರಿತು 17,500 ಪುಟಗಳ ಚಾರ್ಜ್‌ಶೀಟನ್ನು ದಿಲ್ಲಿ ಪೊಲೀಸರು ಹಾಕಿದ್ದಾರೆ. ಉಮರ್ ಖಾಲಿದ್‌ನ 11 ಲಕ್ಷ ಮೊಬೈಲ್ ಡಾಟಾ ಇದೆಯಂತೆ ಅವರ ಬಳಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಲ್ಲಿ ಕೋವಿಡ್‌ ಲಾಕ್ ಡೌನ್ ನಂತರ ಅಂಗನವಾಡಿಯ ಕಾರ್ಯಪಡೆಯಿಂದ ನಿರ್ಗಮಿಸಿದ ಮಹಿಳೆಯರ ಸಂಖ್ಯೆಯ ದತ್ತಾಂಶವೇ ಇಲ್ಲ. ದಿನದಿಂದ ದಿನಕ್ಕೆ ಕಾಣೆಯಾಗುತ್ತಿರುವ ಕಾಣೆಯಾಗಿ ಹೋದ ಮಹಿಳೆಯರ, ಹೆಣ್ಣು ಕೂಸುಗಳ ಸರಿಯಾದ ಲೆಕ್ಕವೂ ಇಲ್ಲ.

ನಿರ್ಭಿತವಾಗಿ ದನಿಯೆತ್ತುವ, ನ್ಯಾಯಕ್ಕಾಗಿ ಹೋರಾಡುವ ಮಹಿಳೆಯರು ಈ ದೇಶಕ್ಕೆ ಬೇಡ. ಹನ್ನೆರಡನೇ ಶತಮಾನದ ಮಹಿಳೆಯರಿಗೆ ಇದ್ದ ಸ್ವಾತಂತ್ರ್ಯ ಸಮಾನತೆ ಈಗಿಲ್ಲ. ನಾವು ಇಪ್ಪತ್ತೊಂದನೆಯ ಶತಮಾನದವರು ಪುನಃ ಐವತ್ತು ವರುಷಗಳಷ್ಟು ಹಿಂದೆ ಹೋಗಿದ್ದೇವೆ ಅನಿಸುತ್ತದೆ. ಸಮಾಜದ ಉಚ್ಛವರ್ಗದ ಪುರುಷರು ಅತ್ಯಾಚಾರವೆಸಗಿದ್ದಲ್ಲದೇ ಕೊಲ್ಲಲೂ ಹೇಸಲಿಲ್ಲ. ಜೀವಂತವಾಗಿ ದಹಿಸಲ್ಪಟ್ಟ ಉನ್ನಾವಿನ ಹೆಣ್ಣುಮಗಳಿಗೆ ಮರುಗುವವರುಂಟೇ, ಧರ್ಮಸ್ಥಳದಲ್ಲಿ ಶವವಾಗಿ ಹೂತು ಹೋದವರಿಗೆ ನ್ಯಾಯ ಸಿಗುವುದೇ? ಬಲಾತ್ಕಾರ, ಕೊಲೆ ಆಗಿದೆಯೆಂಬ ಸಾಕ್ಷ್ಯಗಳಿದ್ದರೂ ಅವನ್ನು ಮುಚ್ಚಿಹಾಕುವ, ನ್ಯಾಯಕ್ಕಾಗಿ ದನಿ ಎತ್ತಿದವರ ದನಿಯಡಗಿಸುವ ಶಕ್ತಿಗಳ ವಿರುದ್ಧ ನಾವು ಇನ್ನೆಷ್ಟು ಕಾಲ ಹೋರಾಡುತ್ತಿರಬೇಕು? ಯಾವ ದೇಶದ ಕಾನೂನು ಶಿಕ್ಷಿಸಬಲ್ಲದು? ನ್ಯಾಯಲಯಗಳೂ ಅವರವು, ನ್ಯಾಯವನ್ನು ನೀಡಬೇಕಾದವರೂ ಅವರ ಕೈಯಲ್ಲಿ, ಈಗ ಯಾವುದಾದರೂ ದೇವರು ಅವತರಿಸಿ ಆರೋಪಿಗಳನ್ನು ಸಂಹರಿಸಬೇಕಾಗಿದೆ!

ರಾವಣ

ಇಂದು ದಿಲ್ಲಿ ಉತ್ತರಭಾರತದಲ್ಲಿ ದಸರೆ- ದಶಹರಾ – ವಿಜಯದಶಮಿಯಂದು ದುಷ್ಟ ಸಂಹಾರದ ಪ್ರತೀಕವಾಗಿ ರಾವಣ, ಕುಂಭಕರ್ಣ ಹಾಗೂ ಮೇಘನಾದನ ಪ್ರತಿಮೆಗಳನ್ನು ಸುಟ್ಟು, ಪಟಾಕಿ ಹಾರಿಸಿ ಆಚರಿಸುತ್ತಾರೆ. ರಾವಣನ ಪ್ರತಿಕೃತಿ ಸುಡುವುದನ್ನು ನೋಡಲು ಜನ ಜಾತ್ರೆಯೇ ಸೇರುತ್ತದೆ. ಅದೇ ಉತ್ತರಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ, ಬಿಸರಖ್ ಗ್ರಾಮದಲ್ಲಿ ಶೋಕವನ್ನು ಆಚರಿಸುತ್ತಾರೆ. ಅವರು ದಸರೆಯನ್ನು ಮಾಡುವುದಿಲ್ಲ. ರಾವಣನ ಜನ್ಮಸ್ಥಳವೆಂಬ ಹಳೆಯ ನಂಬಿಕೆಯುಂಟು. ಮಹಾ ಮೇಧಾವಿ, ವೇದ ಶಾಸ್ತ್ರ ಪಾರಂಗತನಾದ ರಾವಣ ಅವರಿಗೆ ಮನೆಯ ಮಗ. ಅದೇ ರೀತಿ ರಾವಣನ ಹೆಂಡತಿ ಮಂಡೋದರಿ ರಾಜಸ್ಥಾನದ ಮಂಡೋರ್ ಎಂಬಲ್ಲಿ ಹುಟ್ಟಿದಳು ಅನ್ನುವ ಕತೆಯಿದೆ. ಎಲ್ಲಿಯ ಉತ್ತರಪ್ರದೇಶ ಎಲ್ಲಿಯ ರಾಜಸ್ಥಾನ ಎಲ್ಲಿಯ ಲಂಕೆ? ಎತ್ತಣದೆತ್ತಣ ಸಂಬಂಧವೋ ಗೊತ್ತಿಲ್ಲ. ಸೀತಾಪಹರಣದಂತಹ ಒಂದು ತಪ್ಪಿಗೆ ಅವನ ಕುಲವೇ ನಾಶವಾಯಿತು ರಾಮಾಯಣದ ಪ್ರಕಾರ. ಇಲ್ಲಿ ನಮ್ಮ ಸಮಾಜದಲ್ಲಿ ಲಕ್ಷಾಂತರ ರಾವಣರು ನೂರಾರು ಅಪರಾಧ ಮಾಡಿಯೂ ಯಾವ ಶಿಕ್ಷೆಯಿಲ್ಲದೇ ಸುಖವಾಗಿ ಕಾಲಕಳೆಯುತ್ತಿದ್ದಾರೆ. ಇವರು ರಾವಣನಗಿಂತಲೂ ಹೆಚ್ಚು ಅಪಾಯಕಾರಿ. ರಾವಣ ವಿದ್ವಾಂಸನಾಗಿದ್ದ. ವೇದ, ಶಾಸ್ತ್ರಗಳಲ್ಲಿ ಪರಿಣಿತಿ ಹೊಂದಿದ್ದನು ಮತ್ತು ಅನೇಕ ಗ್ರಂಥಗಳನ್ನು ರಚಿಸಿದ್ದನು.

ಇದನ್ನೂ ಓದಿ ಲೇಖಕಿಯರ ಸಂಘ | ಪದಾಧಿಕಾರಿಗಳ ರಾಜೀನಾಮೆಗೆ ಕಾರಣವೇನು? ಅಧ್ಯಕ್ಷರು ಏನಂತಾರೆ?

ಹಿಂದೆ ಕೊರೋನಾ ಸಂಕ್ರಮಣದ ಲಾಕ್‌ಡೌನ್‌ಲ್ಲಿ ಹೆಚ್ಚಾದ ಅತ್ಯಾಚಾರಗಳು, ಕೌಟುಂಬಿಕ ದೌರ್ಜನ್ಯಗಳನ್ನು ಗಮನಿಸಿದಾಗ ಮಹಿಳೆ ಈ ದೇಶದ ಸಂರಚನೆಯಲ್ಲಿಯೇ ಹಾಸುಹೊಕ್ಕಾಗಿರುವ ಪಿತೃಪ್ರಭುತ್ವದ ಪರಂಪರೆಯ ಅಡ್ದಗೋಡೆಯ ಮೇಲೇ ನಿಂತಿದ್ದಾಳೆನ್ನುವ ವಾಸ್ತವ ವಿಚಲಿತಗೊಳಿಸುತ್ತದೆ. ನಾವು ನಿತ್ಯವೂ ನೋಡುವ ಕೇಳುವ ಸುದ್ದಿ, ಮಾಧ್ಯಮಗಳನ್ನು ನೋಡಿದಾಗ ಇಡೀ ಪುರುಷ ವ್ಯವಸ್ಥೆ, ಲಿಂಗ ರಾಜಕಾರಣ ಹೇಗೆ ರಣಹದ್ದುಗಳಾಗಿ ಇಂಚಿಂಚಾಗಿ ಕುಕ್ಕಬಲ್ಲದು ಎಂದು ಭಯಪಡುವಂತಾಗಿದೆ. ಅವರೆಲ್ಲ ಹಣಬಲ, ತೋಳ್ಬಲ, ರಾಜಕೀಯ ಬಲ, ಜಾತಿಬಲದ ಧರ್ಮಭೀರು ಮಿಕಗಳಿಂದ ಅತ್ಯಾಚಾರಕ್ಕೊಳಗಾದ ಅಸಂಖ್ಯ ಸೌಜನ್ಯರಾಗಿರಬಹುದು, ಅದೆಷ್ಟು ನಕಲಿ ಕಾವೀಧಾರಿ ಬಾಬಾಗಳಿಂದ ಅತ್ಯಾಚಾರಕ್ಕೊಳಗಾದ ಬಾಲಕಿಯರು, ಯುವತಿಯರಿರಬಹುದು ಭಿನ್ನ ಭಿನ್ನ ಕಾಲದಲ್ಲಿ ಭಿನ್ನ ಭಿನ್ನ ಹೆಸರು, ವ್ಯಕ್ತಿಗಳಾಗಿ, ಇಡೀ ಕರಾಳ ವ್ಯವಸ್ಥೆಯ ರೂಪಕವಾಗಿ ನಮ್ಮೆದುರಿಗಿದ್ದಾರೆ ಅಷ್ಟೇ.

ಈ ಕಾರಣಕ್ಕಾಗಿಯೇ ಲೋಹಿಯಾ ಈ ಲೋಕದ ಮಹಿಳೆಯರಿಗೆ, ಬೌದ್ಧಿಕ ಮಟ್ಟದಲ್ಲಿ ಪುರುಷನಿಗಿಂತ ಯಾವುದರಲ್ಲೂ ಕಡಿಮೆಯಿಲ್ಲದ, ಪ್ರತಿಭಟನೆಯ ಸಂಕೇತವಾದ ದ್ರೌಪದಿ ಆದರ್ಶವಾಗಬೇಕು ಎನ್ನುತ್ತಾರೆ. ವಾಸ್ತವವಾಗಿ ಪಿತೃಪ್ರಭುತ್ವವನ್ನು ಒಡೆದುಹಾಕುವ ಅಗತ್ಯ ಎಂದಿಗಿಂತಲೂ ಇಂದು ಹೆಚ್ಚಾಗಿದೆ.

WhatsApp Image 2025 11 17 at 5.18.15 PM
ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...