ಸನಾತನ ಹಿಂದೂ ಬ್ರಾಹ್ಮಣ ಧರ್ಮದಲ್ಲಿ ಒಂದಕ್ಕೊಂದು ತದ್ವಿರುದ್ಧವಾಗಿರುವ ದ್ವೈತ, ವಿಶಿಷ್ಟಾದ್ವೈತ ಮತ್ತು ಅದ್ವೈತ ಎನ್ನುವ ಮೂರು ಮತಗಳಿವೆ. ಈ ತ್ರಿಮತಸ್ಥರು ಒಬ್ಬರು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ, ಸದಾ ಕಿತ್ತಾಡುತ್ತಿರುತ್ತಾರೆ. ಕರ್ನಾಟಕದಲ್ಲಿ ಶಂಕರನ ಅನುಯಾಯಿಗಳು ಮತ್ತು ಮಾದ್ವನ ಅನುಯಾಯಿಗಳ ನಡುವೆ ಶೀತಲ ಸಮರ ಇಂದಿಗೂ ನಿಂತಿಲ್ಲ.
ಭಾರತೀಯ ತತ್ವಜ್ಞಾನವು ಅನೇಕ ವೈರುಧ್ಯಗಳ ಆಗರವಾಗಿದೆ. ಇಲ್ಲಿ ವೇದಗಳು ಏನನ್ನು ಹೇಳುತ್ತವೆ ಅದಕ್ಕೆ ವಿರುದ್ಧವಾಗಿ ವೇದಾಂತಗಳು ನುಡಿಯುತ್ತವೆ. ಎರಡು ಸಂಪೂರ್ಣ ತದ್ವಿರುದ್ಧ ಸಿದ್ಧಾಂತಗಳು ಸನಾತನ ಪರಂಪರೆಯ ಚೌಕಟ್ಟಿನಲ್ಲಿಟ್ಟು ಸಂಭ್ರಮಿಸುವುದೇ ಒಂದು ಸೋಜಿಗ ಹಾಗು ಅಷ್ಟೇ ವಿರೋಧಾಭಾಸದ ಸಂಗತಿಯಾಗಿದೆ. ಇನ್ನೂ ಸೋಜಿಗ ಹಾಗು ವಿರೋಧಾಭಾಸದ ಸಂಗತಿ ಎಂದರೆ ಸನಾತನಿಗಳೆಂದು ತಮ್ಮನ್ನು ತಾವು ಕರೆದುಕೊಳ್ಳುವ ಬ್ರಾಹ್ಮಣರು ವೇದಗಳಲ್ಲಿ ಉಲ್ಲೇಖಿಸಿದ ದೇವರುಗಳನ್ನು ಆರಾಧಿಸುವುದಿಲ್ಲ ಅಥವಾ ವೇದಾಂತದ ಅದ್ವೈತ ಸಿದ್ಧಾಂತವನ್ನೂ ಅನುಸರಿಸುವುದಿಲ್ಲ. ವೇದ ಮತ್ತು ವೇದಾಂತಗಳಿಗೆ ಹೊರತಾದ ಬಹುದೇವೋಪಾಸನೆ, ವಿಗ್ರಹಾರಾಧನೆ, ವೇದದ ಕೆಲವು ಕರ್ಮಕಾಂಡಗಳು ಇಂದು ಬ್ರಾಹ್ಮಣರ ಆಚರಣೆಗಳಾಗಿವೆ. ಆಶ್ಚರ್ಯಕರ ಸಂಗತಿ ಎಂದರೆ, ಇಂದು ಬ್ರಾಹ್ಮಣರು ವೇದಗಳು ಮತ್ತು ಅವುಗಳಿಗೆ ತದ್ವಿರುದ್ಧವಾಗಿರುವ ವೇದಾಂತಗಳೆರಡೂ ತನ್ನ ಸನಾತನ ಧರ್ಮದ ತತ್ವಜ್ಞಾನವೆಂದು ಹೇಳಿಕೊಳ್ಳುವುದು. ಹಾಗಾಗಿ, ಸನಾತನ ಧರ್ಮದ ನಿರ್ಧಿಷ್ಟ ತತ್ವಜ್ಞಾನ ಯಾವುದು ಎನ್ನುವುದೇ ಗೊಂದಲಕಾರಿ ಸಂಗತಿಯಾಗಿದ್ದು ಈ ಅಸ್ಪಷ್ಟತೆಯನ್ನು ಬೇಕೆಂತಲೇ ಸೃಷ್ಟಿಸಿದಂತೆ ಗೋಚರಿಸುತ್ತದೆ. ವೈದಿಕರ ಆರಂಭಿಕ ಧರ್ಮ ಗ್ರಂಥಗಳೆಂದರೆ ಕೇವಲ ವೇದಗಳು ಮಾತ್ರ. ಆಮೇಲಿನ ಎಲ್ಲವೂ ಅವರ ಅನುಕೂಲಕ್ಕೆ ಬೇಕಾದಂತೆ ಸೃಷ್ಟಿಸಿಕೊಂಡವುಗಳು.
ವೇದಗಳ ಕರ್ಮಕಾಂಡ ಹಾಗೂ ಮೌಢ್ಯಾಚರಣೆಗಳು ಈ ನೆಲದಲ್ಲಿ ತೀವ್ರ ಪ್ರತಿರೋಧಗಳನ್ನು ಎದುರಿಸಿದ ಕಾರಣ ಪ್ರಗತಿಪರತೆಯ ಮುಖವಾಡದಲ್ಲಿ ವೇದಾಂತಗಳನ್ನು (ಉಪನಿಷತ್) ಸೃಷ್ಟಿಸಿದಂತೆ ಕಾಣುತ್ತದೆ. ದೇವರ ಕುರಿತ ವೇದಗಳ ಬಾಲಿಶ ನಿಲುವುಗಳನ್ನು ಬೇರೊಂದು ಬಗೆಯಲ್ಲಿ ಸಮರ್ಥಿಸಿಕೊಳ್ಳಲು ವೇದಾಂತಗಳನ್ನು ರಚಿಸಿದಂತೆ ತೋರುತ್ತದೆ. ವೇದಾಂತದ ದ್ವೈತ ಪರಿಕಲ್ಪನೆ ಅಕ್ಷರಷಃ ಸನಾತನ ಬ್ರಾಹ್ಮಣ ಧರ್ಮದಲ್ಲಿ ಆಚರಣೆಯಲ್ಲಿಲ್ಲ. ಶಂಕರಾಚಾರ್ಯ ಸ್ಥಾಪಿಸಿದ ಎನ್ನಲಾಗುವ ಅದ್ವೈತ ಮತಾವಲಂಬಿಗಳು ಸಹ ಅದ್ವೈತ ತತ್ತ್ವವನ್ನು ಹೇಳುತ್ತಾರೆಯೆ ಹೊರತು ಆಚರಿಸುವುದಿಲ್ಲ. ಶಂಕರಾಚಾರ್ಯ 8ನೇ ಶತಮಾನದಲ್ಲಿ ಕೇರಳ ರಾಜ್ಯದ ಕಾಲಡಿಯಲ್ಲಿ ಜನಿಸಿದ ತತ್ವಜ್ಞಾನಿ ಎಂದು ಸನಾತನ ದರ್ಶನ ವರ್ಣಿಸುತ್ತದೆ. ಆರಂಭದಲ್ಲಿ ತನ್ನ ತಾಯಿ ಆರ್ಯಾಂಬೆಯ ಸಹಾಯದಿಂದ ಶಂಕರ ವೇದಗಳನ್ನು ಅಧ್ಯಯನ ಮಾಡಿ, ಮುಂದೆ ಸನ್ಯಾಸ ಸ್ವೀಕರಿಸಿ ಅದ್ವೈತ ವೇದಾಂತ ತತ್ವಶಾಸ್ತ್ರವನ್ನು ಸ್ಥಾಪಿಸಿದ ಎಂದು ಹೇಳಲಾಗುತ್ತದೆ. ಈ ಉಪಖಂಡ ಸುತ್ತಿ
ಶೃಂಗೇರಿ, ದ್ವಾರಕಾ, ಪೂರಿ, ಬದರಿಯಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದ ಎಂದು ಹೇಳಲಾಗುತ್ತದೆ. ಈತ ಪ್ರತಿಪಾದಿಸಿದ ಅದ್ವೈತ ವೇದಾಂತ ತತ್ವಶಾಸ್ತ್ರವು, ‘ಬ್ರಹ್ಮನ್’ (ಪರಮಾತ್ಮನ) ಮತ್ತು ‘ಆತ್ಮನ್’ (ವ್ಯಕ್ತಿಗತ ಆತ್ಮ) ಒಂದೇ ಎಂದು ಹೇಳುತ್ತದೆ. ಶಂಕರ ಭಗವದ್ಗೀತೆ, ಉಪನಿಷತ್ತುಗಳು ಮತ್ತು ಬ್ರಹ್ಮಸೂತ್ರಗಳ ಮೇಲೆ ಭಾಷ್ಯಗಳನ್ನು ಬರೆದಿದ್ದಾನೆ ಎನ್ನಲಾಗುತ್ತದೆ.
ಸನಾತನ ಹಿಂದೂ ಬ್ರಾಹ್ಮಣ ಧರ್ಮದಲ್ಲಿ ಒಂದಕ್ಕೊಂದು ತದ್ವಿರುದ್ಧವಾಗಿರುವ ದ್ವೈತ, ವಿಶಿಷ್ಟಾದ್ವೈತ ಮತ್ತು ಅದ್ವೈತ ಎನ್ನುವ ಮೂರು ಮತಗಳಿವೆ. ಈ ತ್ರಿಮತಸ್ಥರು ಒಬ್ಬರು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ, ಸದಾ ಕಿತ್ತಾಡುತ್ತಿರುತ್ತಾರೆ. ಕರ್ನಾಟಕದಲ್ಲಿ ಶಂಕರನ ಅನುಯಾಯಿಗಳು ಮತ್ತು ಮಾದ್ವನ ಅನುಯಾಯಿಗಳ ನಡುವೆ ಶೀತಲ ಸಮರ ಇಂದಿಗೂ ನಿಂತಿಲ್ಲ. ರಾಮಾನುಜನ ಅನುಯಾಯಿಗಳು 11-12 ನೇಯ ಶತಮಾನದ ನಡುವೆ ಶೈವ ಬ್ರಾಹ್ಮಣರ ಮೇಲೆ ಮಾಡಿದ ಆಕ್ರಮಣ ಇತಿಹಾಸದಲ್ಲಿ ದಾಖಲಾಗಿದೆ. ಆದರೆ, ಈ ತ್ರಿಮತಸ್ಥರು ರಾಜಕೀಯವಾಗಿ ಒಂದಾಗಿ ಹಿಂದೂ ಸಮಾಜವನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಶಂಕರನ ಮಾಯಾವಾದ ಮತ್ತು ಅದ್ವೈತವು ಉಪನಿಷತ್ತುಗಳಲ್ಲಿ ಪ್ರತಿಪಾದಿಸಲಾಗಿರುವ ವೇದಾಂತದ ಮುಂದುವರಿಕೆಯಾಗಿದೆ. ಅದ್ವೈತ ಎಂದರೆ ‘ಎರಡಲ್ಲದ್ದು’ ಇದು ಬ್ರಾಹ್ಮಣ ತತ್ವಶಾಸ್ತ್ರ ವೇದಾಂತದ ಪ್ರಮುಖ ಸಿದ್ಧಾಂತವಾಗಿದ್ದು, ಬ್ರಹ್ಮ ಒಂದೇ ಸತ್ಯ, ಜಗತ್ತು ಮಿಥ್ಯೆ, ಮತ್ತು ಜೀವಾತ್ಮ (ವ್ಯಕ್ತಿಗತ ಆತ್ಮ) ಪರಮಾತ್ಮನಿಂದ ಬೇರೆಯಲ್ಲ, ಅದೇ ಬ್ರಹ್ಮವೆಂದು ಹೇಳುತ್ತದೆ, ಶಂಕರ ಕೂಡ ಇದನ್ನೆ ಹೇಳಿದ್ದಾನೆ. ದ್ವೈತದ ಪ್ರಕಾರ ಆತ್ಮ ಮತ್ತು ಬ್ರಹ್ಮನ ಏಕತೆ ಅಥವಾ ಅದನ್ನು ತತ್ವಮಸಿ ಎನ್ನಲಾಗುತ್ತದೆ. ಅದ್ವೈತವೆಂದರೆ ತುಂಬಾ ಸರಳವಾಗಿ ಹೇಳುವುದಾದಲ್ಲಿ ದೇವರು ಮತ್ತು ಭಕ್ತ ಬೇರೆಯಲ್ಲ, ಎರಡೂ ಒಂದೇ ಎನ್ನುವ ಭಾವ. ಹಾಗಾದರೆ, ಅದ್ವೈತಿಗಳು ದೇವರನ್ನು ಹೊರಗೆ ಏಕೆ ಹುಡುಕುತ್ತಾರೆ ಎನ್ನುವ ಪ್ರಶ್ನೆ ಕಾಡುತ್ತದೆ.
ಶರಣರು ಈ ತ್ರಿಮತಸ್ಥರ ಗೊಂದಲಕಾರಿ ಸಿದ್ಧಾಂತಗಳನ್ನು ಮಾನ್ಯ ಮಾಡುವುದಿಲ್ಲ. ಉಪನಿಷತ್ತಿನ ಅಸ್ಪಷ್ಟ ಅದ್ವೈತವನ್ನು ಹಾಗು ಏಕದೇವೋಪಾಸನೆಯನ್ನು ನಿರಾಕರಿಸುತ್ತಾರೆ. ತ್ರಿಮತಸ್ಥರ ಈ ಗೊಂದಲಕಾರಿ ನಡೆಯನ್ನು ಶರಣ ಮೋಳಿಗೆ ಮಾರಯ್ಯನವರು ಈ ಕೆಳಗಿನ ವಚನದಲ್ಲಿ ಹೀಗೆ ವಿಡಂಬಿಸಿದ್ದಾರೆ:
ವಚನ
“ಅದ್ವೈತವ ಹೇಳುವ ಹಿರಿಯರೆಲ್ಲರೂ
ದ್ವೈತಕ್ಕೊಳಗಾದರು. ನಿಸ್ಸಂಸಾರವ
ಹೇಳುವ ಹಿರಿಯರೆಲ್ಲರೂ ಸಂಸಾರದ
ಸಾರವ ಚಪ್ಪಿರಿದು ಕೆಟ್ಟರು.
ಭಕ್ತರಿಗೆ ನಿತ್ಯವಲ್ಲೆಂದು ಹೇಳಿ,
ತಾವು ಅನಿತ್ಯವ ಹಿಡಿದು,
ಪಾಶಕ್ಕೆ ಸಿಕ್ಕಿ ಸತ್ತುದನರಿಯದೆ,
ನಾವು ಮುಕ್ತರಾದೆವೆಂಬ ಭ್ರಷ್ಟರ ನೋಡಾˌ
ನನಗಿನ್ನೆತ್ತಣ ಮುಕ್ತಿ ಎಂದಂಜಿದೆ,
ನಿಃಕಳಂಕ ಮಲ್ಲಿಕಾರ್ಜುನಾ.”
~ಶರಣ ಮೋಳಿಗೆ ಮಾರಯ್ಯ.
ಭಾವಾರ್ಥ
ಜೀವಾತ್ಮ ಮತ್ತು ಪರಮಾತ್ಮ ಎರಡೂ ಒಂದೇ ಎಂದು ಅದ್ವೈತ ಸಿದ್ಧಾಂತ ಹೇಳುವ ಹಿರಿಯರೆಲ್ಲರೂ ದೇವರನ್ನು ಎದುರಿಟ್ಟು ಪೂಜಿಸಿ ದ್ವೈತಕ್ಕೊಳಗಾಗಿದ್ದಾರೆ. ಮೋಕ್ಷಕ್ಕೆ ಸಂಸಾರವು ವರ್ಜ್ಯ ಎಂದು ಪ್ರತಿಪಾದಿಸಿದ ಅನೇಕರು ಸಂಸಾರ ಬಂಧನಕ್ಕೊಳಗಾಗಿದ್ದಾರೆ. ನಮ್ಮ ಕಣ್ಣಿಗೆ ಕಾಣುವಂತೆ ಸದಾ ಬದಲಾಗುತ್ತಿರುವ ಈ ಸೃಷ್ಟಿಯನ್ನು ಅನಿತ್ಯ ಎನ್ನಲಾಗುತ್ತದೆ. ಇದನ್ನು ಮಾಯಾವಾದ ಎಂತಲೂ ಗುರುತಿಸುತ್ತಾರೆ. ಈ ಮಾಯಾ ಆವರಣವನ್ನು ದಾಟಿ ಈ ಸೃಷ್ಟಿಗೆ ಮತ್ತೊಂದು ನೆಲೆಯಿದೆ, ಅದುವೇ ನಿತ್ಯತ್ವ. ಆದರೆ ಅನೇಕ ಸಾಧಕರು ತಮ್ಮ ಭಕ್ತರಿಗೆ ನಿತ್ಯವನ್ನು ಭೋದಿಸಿ ತಾವು ಅನಿತ್ಯಕ್ಕೆ ಗುರಿಯಾಗಿದ್ದಾರೆ. ಈ ಬದುಕಿನಲ್ಲಿ ನಡೆ-ನುಡಿ ಸಿದ್ಧಾಂತದ ಪರಿಯನ್ನು ಅರಿಯದೆ, ಅನೇಕ ಸಾಧಕರು ಹೇಳುವುದು ಒಂದು, ಬದುಕುವುದು ಮತ್ತೊಂದು ಎನ್ನುವಂತೆ ವರ್ತಿಸಿದ್ದಾರೆ. ಹೀಗೆ ನಡೆ-ನುಡಿ ಒಂದಾಗದೆ ಬದುಕಿ ತಾವು ಜೀವನ್ಮುಕ್ತರಾದೆವು ಎಂಬ ಭ್ರಮೆಯನ್ನು ಹೊಂದಿದ್ದಾರೆ. ಇವರು ವಚನ ಭ್ರಷ್ಟರು, ನಡೆ-ನುಡಿ ಒಂದಾಗದ ಡಾಂಭಿಕರು ಎನ್ನುತ್ತಾರೆ ಶರಣ ಮೋಳಿಗೆ ಮಾರಯ್ಯನವರು. ಇಂತಹ ನಡೆ-ನುಡಿ ಭಿನ್ನವಾಗಿ ಬದುಕಿ ತಾವು ಬಹುದೊಡ್ಡ ಸಾಧಕರೆನ್ನುವಂತೆ ವರ್ತಿಸಿದವರ ಪರಿಯನ್ನು ಮೋಳಿಗೆ ಮಾರಯ್ಯನವರು ಈ ಮೇಲಿನ ವಚನದಲ್ಲಿ ತೀಕ್ಷ್ಣವಾಗಿ ವಿಡಂಬಿಸಿದ್ದಾರೆ. ಶಂಕರಾಚಾರ್ಯ ಮೊದಲ್ಗೊಂಡು ಅನೇಕ ಜನ ಅದ್ವೈತಿಗಳು ಮೋಳಿಗೆ ಮಾರಯ್ಯನವರು ಹೇಳಿದಂತೆ ತಮ್ಮ ಭಕ್ತರಿಗೆ ಬೋಧಿಸಿದ್ದೆ ಬೇರೆ, ತಾವು ಸ್ವತಃ ಬದುಕಿದ್ದೇ ಬೇರೆ.
ಟಿಪ್ಪಣಿ:
ಸನಾತನ ಹಿಂದೂ ಬ್ರಾಹ್ಮಣ ಧರ್ಮದ ತತ್ವಜ್ಞಾನ ಮತ್ತು ಆಚರಣೆಗಳು ಎರಡೂ ಗೊಂದಲದ ಗೂಡಾಗಿದೆ. ಇಲ್ಲಿ ನಿರ್ಧಿಷ್ಟವಾಗಿ ವೇದ ಪ್ರಮಾಣವೊ ಅಥವಾ ವೇದಾಂತ ಪ್ರಮಾಣವೊ ಎನ್ನುವುದು ಸ್ಪಷ್ಟವಾಗಿಲ್ಲ. ಎರಡನ್ನೂ ಅನುಕೂಲಕ್ಕೆ ತಕ್ಕಂತೆ ಅನ್ವಯಿಸಿಕೊಂಡು ಉಳಿದೆಲ್ಲ ಅವೈದಿಕ ದರ್ಶನಗಳನ್ನು ಆಪೋಷನಕೊಂಬುತ್ತ ವೈದಿಕ ಧರ್ಮ ತನ್ನ ಪಾರಮ್ಯ ಮೆರೆಯುತ್ತ ನಡೆದಿದೆ. ವೈದಿಕ ಧರ್ಮದ ಈ ವೈರುಧ್ಯಗಳನ್ನು ಶರಣರು ಆಯ್ದು ಆಯ್ದು ವಿಡಂಬಿಸಿದ್ದಾರೆ. ಶಂಕರನ ಅದ್ವೈತದ ಪ್ರಕಾರ ಜೀವಾತ್ಮ ಪರಮಾತ್ಮ ಒಂದೇ ಆದರೆ ಆತನ ಅನುಯಾಯಿಗಳು ದೇವರನ್ನು ಗುಡಿಗಳಲ್ಲಿ ಏಕೆ ಪೂಜಿಸುತ್ತಾರೆ ಎನ್ನುವುದು ಶರಣರ ಪ್ರಶ್ನೆ. ಶರಣರ ಅದ್ವೈತವು ವೇದಾಂತದ ಮತ್ತು ಶಂಕರನ ಅದ್ವೈತಕ್ಕಿಂತ ಸ್ಪಷ್ಟತೆ ಹೊಂದಿರುವ ಕಾರಣಕ್ಕೆ ಶರಣರು ಆ ದೇವಾತ್ಮನೆಂಬ ಪರವಸ್ತುವನ್ನು ತಮ್ಮೊಳಗೆ ಹುಡುಕುತ್ತಾರೆ, ಅರ್ಥಾತ್ ಇಷ್ಟಲಿಂಗದೊಂದಿಗೆ ಅನುಸಂಧಾನಗೈಯುವ ಮೂಲಕ ತಮ್ಮೊಳಗಿನ ಎಲ್ಲಾ ನೂನ್ಯತೆಗಳನ್ನು ನೀಗಿಕೊಂಡು ತಾವೇ ದೇವರಾಗುತ್ತಾರೆ. ಸಂಸಾರವನ್ನು ಹೀನಾಯವಾಗಿ ಕಾಣುವ ವೇದಾಂತಿಗಳ ವಾದವನ್ನು ಶರಣರು ಅಲ್ಲಗಳೆದು ಸಂಸಾರವೇ ಶ್ರೇಷ್ಠವೆಂದು ಸಾರುತ್ತಾರೆ, ಲೌಕಿಕದೊಳಗಿದ್ದು ಪಾರಮಾರ್ಥವನ್ನು ಸಾಧಿಸುತ್ತಾರೆ. ಸೃಷ್ಟಿಕರ್ತ ನಿರ್ಮಿಸಿದ ಈ ಜಗತ್ತು ನಿತ್ಯಸ್ವರೂಪ ಮತ್ತು ಅನಿತ್ಯ ಸ್ವರೂಪ ಎನ್ನುವ ಎರಡು ನೆಲೆಗಳನ್ನು ಹೊಂದಿದೆ. ಮಾಯಾ ಆವರಣಕ್ಕೆ ಸಿಲುಕಿ ನಿತ್ಯ ನಿರಂತರವಾಗಿ ಬದಲಾಗುವ ಜಗತ್ತನ್ನು ನಿತ್ಯವೆಂದು, ಅದನ್ನು ಮೀರಿದ ಜಗತ್ತನ್ನು ಅನಿತ್ಯವೆಂದು ಹೇಳಲಾಗುತ್ತದೆ.
ಸಾಧಕನಲ್ಲಿರುವ ಅಖಂಡ ಅರಿವು ಆತನ ಅನಿತ್ಯ ಕಾಯದಿಂದ ನಿತ್ಯತ್ವಕ್ಕೆ ಹರಿದು ಸಾಗುವುದೇ ಸಾಧನೆ ಎನ್ನಿಸಿದೆ. ಹಾಗೆ ನಿತ್ಯವನ್ನು ಸಾಧಿಸಿದ ಸಾಧಕನಿಗೆ ಶರಣ, ಜಂಗಮ ಎಂದು ಗುರುತಿಸಲಾಗುತ್ತದೆ. ಶರಣ ಅಥವಾ ಜಂಗಮರಲ್ಲಿ ಅಂಗ(ಜೀವಾತ್ಮ) ಮತ್ತು ಲಿಂಗ (ದೇವಾತ್ಮ) ಸಮರಸಗೊಳ್ಳುತ್ತವೆ. ಆ ಸಮಾಗಮನ ಸ್ಥಿತಿಯನ್ನು ಕೂಡಲ ಸಂಗಮ ಎನ್ನಲಾಗುತ್ತದೆ. ಮಾಯಾ ಆವರಣದ ನೆಲೆಯಲ್ಲಿ ಅನಿತ್ಯತ್ವದಲ್ಲಿ ಬದುಕುವವರಿಗೆ ಜೀವನ್ಮುಕ್ತಿ ಸಾಧ್ಯವಿಲ್ಲ. ಆದರೆ ಅದ್ವೈತಿಗಳು ತಮ್ಮ ಭಕ್ತರಿಗೆ ನಿತ್ಯವನ್ನು ಭೋದಿಸಿ ತಾವು ಅನಿತ್ಯಕ್ಕೆ ಗುರಿಯಾಗುತ್ತಾರೆ. ಇದು ಅದ್ವೈತಿಗಳ ದ್ವಂದ್ವವನ್ನು ಎತ್ತಿ ತೋರಿಸುವ ಶರಣ ಮೋಳಿಗೆ ಮಾರಯ್ಯನವರ ವಚನ. ಹತ್ತೊಂಬತ್ತನೆಯ ಶತಮಾನದಲ್ಲಿ ಲಿಂಗಾಯತ ಧರ್ಮದ ಸಾಂಸ್ಥೀಕರಣ ಹಾಗು ವೀರಶೈವ ಜಂಗಮರ ಜಾತಿ ಮನಸ್ಥಿತಿಯ ಕಾರಣದಿಂದ ಲಿಂಗಾಯತ ಧರ್ಮದ ಅದ್ವೈತ ಸಿದ್ಧಾಂತವು ಕವಲು ದಾರಿ ತುಳಿದ ಕಾರಣದಿಂದ ಅನೇಕ ಬೆಳವಣಿಗೆಗಳು ನಡೆಯುತ್ತವೆ. ವಿಮುಖಗೊಂಡ ಮೂಲ ಲಿಂಗಾಯತ ತತ್ವಗಳ ಅನುಷ್ಟಾನಕ್ಕೆ ಬದಲಾಗಿ ವೀರಶೈವ ಜಂಗಮರ ಮೇಲಿನ ಸಿಟ್ಟಿನಿಂದ ಸಿದ್ಧಾರೂಢರು ಇಷ್ಟಲಿಂಗ ಅನುಸಂಧಾನದ ಪರಿಪೂರ್ಣ ಅದ್ವೈತ ಸಿದ್ಧಾಂತವನ್ನು ತ್ಯಜಿಸಿ ಉಪನಿಷತ್ತಿನ ವೇದಾಂತವನ್ನು ಅಪ್ಪಿಕೊಳ್ಳುತ್ತಾರೆ. ಇದರಿಂದ ಸಾಂಪ್ರದಾಯವಾದಿ ವೀರಶೈವ ಜಂಗಮರ ಸಂಕುಚಿತತೆ ವಿರೋಧಿಸಿ ಲಿಂಗಾಯತರಲ್ಲಿ ಆರೂಢ ಪರಂಪರೆ ಹುಟ್ಟುಪಡೆಯುತ್ತದೆ. ಆದರೆ ಸಿದ್ಧಾರೂಢರು ಮತ್ತು ಅವರ ತಕ್ಷಣದ ಶಿಷ್ಯವರ್ಗ ವೈದಿಕತ್ವ ಅಥವಾ ಹಿಂದೂ ಮೂಲಭೂತವಾಕ್ಕೆ ಬಲಿಯಾಗುವುದಿಲ್ಲ ಎನ್ನುವುದು ವಿಶೇಷ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವ ಪೊರೆದ ಅಮೆರಿಕ; ಪುಡಿಗಟ್ಟುತ್ತಿರುವ ಭಾರತ
ಮುಂದಿನ ದಿನಗಳಲ್ಲಿ ಸಿದ್ಧಾರೂಢರ ಮತ್ತು ಶಿವಾನಂದರ ಎರಡು ಪರಂಪರೆಗಳು ಕರ್ನಾಟಕದಲ್ಲಿ ವೇದಾಂತವನ್ನು ಪ್ರಚಾರ ಮಾಡುವುದರ ಜೊತೆಜೊತೆಗೆ ಬಸವಾದಿ ಶರಣರ ಆದರ್ಶಗಳನ್ನು ಸಹ ಜೊತೆಯಲ್ಲಿ ಪೋಷಿಸಿಕೊಂಡು ಬಂದಿವೆ. ಆದರೆ, ದುರಂತದ ಸಂಗತಿ ಎಂದರೆ ಈಗಿನ ಎಲ್ಲಾ ಆರೂಢ ಪರಂಪರೆಯ ಮಠಗಳು, ವೀರಶೈವ ಪಂಚಪೀಠದ ಮಠಗಳು ಹಾಗು ಕೆಲವು ಬಸವ ಪರಂಪರೆಯ ವಿರಕ್ತ ಮಠಗಳು ಹಿಂದುತ್ವದ ಮೂಲಭೂತವಾದಿ ಮಠಾಧೀಶರಿಂದ ತಮ್ಮ ಮೂಲ ಪರಂಪರೆಗೆ ದ್ರೋಹ ಬಗೆಯುತ್ತಿವೆ. ಕಣೇರಿಯ ಕಾಡಸಿದ್ಧ, ರಾಮೇನಹಳ್ಳಿಯ ಆರೂಢಭಾರತಿ, ಗದುಗಿನ ವಿವಾದಾತ್ಮಕ ವ್ಯಕ್ತಿ ಸದಾಶಿವಾನಂದ ಉರ್ಫ್ ಕೈವಲ್ಯಾನಂದ ಹಾಗು ಅನೇಕ ಆರೂಢಾನಂದ ಮೂಢರು ವೇದಾಂತವನ್ನು ಪ್ರಚಾರ ಮಾಡುವುದು ನಿಲ್ಲಿಸಿ ಹಿಂದೂ ಬ್ರಾಹ್ಮಣರ ಮೂಲಭೂತವಾದಿ ಸಂಘಟನೆಗಳಿಗೆ ತಮ್ಮನ್ನು ತಾವು ಮಾರಿಕೊಂಡಿದ್ದಾರೆ. ಇವರಲ್ಲಿ ಆರೂಢಭಾರತಿ, ಕೈವಲ್ಯನಾಂದ ಮುಂತಾದವರು ಬಸವಾದಿ ಶರಣರ ವಿಚಾರಗಳನ್ನು ಚಿರುಚುವ ಹಾಗೂ ಲಿಂಗಾಯತ ಚಿಂತಕರನ್ನು ಹಿಂದುತ್ವದ ನೆಲೆಯಲ್ಲಿ ಟೀಕಿಸುವ, ತ್ರಿಶೂಲ ವಿತರಣೆ, ಹನುಮಾನ್ ಮಾಲಾ ಮುಂತಾದ ಹಿಂದುತ್ವ ರಾಜಕಾರಣದ ವಿದ್ವಂಸಕ ಚಟುವಟಿಕೆಗಳಲ್ಲಿ ರಾಜಾರೋಷವಾಗಿ ಭಾಗವಹಿಸುತ್ತ ಸಿದ್ಧಾರೂಢ ಹಾಗು ಶಿವಾನಂದರ ಪರಂಪರೆಯನ್ನು ವಂಚಿಸುತ್ತಿದ್ದಾರೆ. ಇಂತಹ ವಂಚಕರು ಹಾಗು ಧರ್ಮದ್ರೋಹಿಗಳ ಕುರಿತೇ ಶರಣ ಮೋಳಿಗೆ ಮಾರಯ್ಯನವರು ಮೇಲಿನ ವಚನ ರಚಿಸಿದಂತೆ ಕಾಣುತ್ತದೆ.

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ




