ದೊಡ್ಡವ್ರೆಲ್ಲ ದನದ ಸಗಣಿ ಬಿದ್ರೆ ಹೆಕ್ಕ ಬಂದು ಬರಣಿ ತಟ್ಟುದು, ಕಡ್ಲಕಾಯಿ ತಂದಿ ಉಪ್ಪಿನಕಾಯಿ ಹಾಕುದು, ಮಳಿಗಾಲ್ದಲ್ಲಿ ತಗಟಿ ಸೊಪ್ಪು, ಗಜಗೆಂಡಿ ಸೊಪ್ಪು ತಂದು ಪಲ್ಲೆ ಮಾಡುದು ಎಲ್ಲಾ ಇರ್ತಿತ್ತು. ಅದ್ರ, ಸಂತಿಗೆ ಬೋಕಳ ಹೂವು, ಕಡ್ಲ ಹೂವಿನ ಮಾಲಿ ಮಾಡಿ ಮುಡ್ಕಂತಿದ್ರು
ಸೊಪ್ಪಿನ ಬೆಟ್ಟ ಅಂದ್ರೆ ನಮ್ಮನಿ ಹಿಂದಿನ ದೊಡ್ಡ ಬೆಟ್ಟ… ಸಣ್ಣವ್ರಿದ್ದಾಗಿನ ಕಾಲದ ಸುದ್ದಿ ಕೇಳದ್ರೆ, ಬರೀ ಆ ಬೆಟ್ಟದ ಸಂತಿಗೇ ನಮ್ಮ ಮುಕ್ಕಾಲು ಜೀವನ.
ಮನಿಗೆ ಆಸ್ತಿ ಅಂತ ಗದ್ದಿ ಒಂದಿಷ್ಟಿದ್ರೆ ಅನ್ನಕಾಗ್ತಿತ್ತು ಕರೆ. ರಾಶಿ-ರಾಶಿ ದುಡ್ ಕೊಡ್ಲೆಲ ಅಂದ್ರೂ, ಚಂದದ ಬದ್ಕಿನ ಪಾಲು ಮಾತ್ರ ನಮ್ಮ ಬೆಟ್ಟದ್ದೇಯಾ.
ನಮ್ಮ ಮನಿ ಹಿಂದೇ ಮನಿಗೆ ತಾಗಿದ್ದಂಗೇ ನಮ್ ಬೆಟ್ಟ. ಆವಾಗೆಲ್ಲವಾ ದೊಡ್ಡ ಚರಿಗಿಲಿ ಕುಚ್ಚಕ್ಕಿ ಅನ್ನ ಮಾಡುದು, ಹಂಡಿಗಟ್ಲಿ ನೀರ ಕಾಸುದು, ಮೀನ ಸಾರು ಎಲ್ಲದೂ ಒಲಿಮೆನೆಯ. ದೊಡ್ಡ ಬೆಂಕಿ ಒಟ್ಟುಕೆ ಬೇಕಾದ ಸೌದಿಯೆಲ್ಲ ಬೆಟ್ಟದಿಂದೇ ತರುದಾಗಿತ್ತು.
ಆಗೆಲ್ಲವಾ ಹಸೀ ಮರ ಒಂದೂ ಮುಟ್ದದೇಯಾ ಇಡೀ ಬೆಟ್ಟ ತಿರ್ಗಾಡಿ, ಒಣಗಿಬಿದ್ದ ಜಿಗ್ಗೆಲ್ಲವಾ ದೊಡ್ಡ-ದೊಡ್ಡ ಹೊರೆ ಕಟ್ಕಬಂದಿ ಒಲಿ ಒಟ್ಟುದು. ಆಗಿನ ಕಾಲ್ದಲ್ಲಿ ಸೌದಿ ಒಟ್ಟುದ ನೋಡದ್ರೆ, ಈಗಿನಂಗೆ ಸಿಲಿಂಡರ್ ಬಳ್ಸುದಾಗಿದ್ರೆ ವಾರಕ್ಕೂ ಸಾಕಾಗುದಿಲ್ಲಾಗಿತ್ತು.
ಈ ಕನ್ನಡ ಕೇಳಿದ್ದೀರಾ?: ಹೊನ್ನಾಳಿ ಸೀಮೆಯ ಕನ್ನಡ | ನನ್ ಬಾಯ್ಮಾತ್ ಯಾರ್ಕೆಳ್ತಾರಾ…
ಹಂಗೇಯ, ಕೊಟ್ಟಿಗಿಲಿ ಇರು ದನಕ್ಕೆ ದಿನಾನೂ ಹಾಸು ಸೊಪ್ಪು ಕೊಯ್ದು ಚೂಳಿಲಿ, ಕಲ್ಲಿಲಿ ತುಂಬ್ಕಂಡಿ ಹೊತ್ಕ ಬರುದೇಯ. ಬ್ಯಾಸಿಗಿಲಿ ಒಣಾ ತರಕು ಬರಗುದಂತೂ ದೊಡ್ಡ ಕೆಲಸ. ಇಡೀ ಬೆಟ್ಟ ತೆಂಗಿನ ಮಂಜಾರ ತಕಂಡಿ ಕಸ ಗುಡ್ಸಿದಂಗೆ ಗುಡ್ಸಕಂತಿ ತರಕಿನ ದೊಡ್ಡ ರಾಶಿ ಕೆಳ್ಗೆ ತರುದು. ಅದನ್ನ ಮನಿ ಹೆಂಗಸ್ರು, ಗಂಡಸ್ರು, ಕೆಲಸದವ್ರೂ ಎಲ್ಲಾ ಸೇರೇ ತಿಂಗಳಗಟ್ಲೆ ಮಾಡ್ತಿದ್ರು.
ಸಣ್ಣಿದ್ದಾಗ ಬೆಟ್ಟದಿಂದ ಗೇರ್ ಬೀಜ ಹೆಕ್ಕಬಂದಿ ಮಾರಿ ದುಡ್ಡು ಮಾಡುದಂತೂ ಹಬ್ಬಾ ನಮ್ಗೆ. ರಜೆ ಇದ್ದಾಗೆಲ್ಲವಾ ದಿನಾ ಗೇರ ಮರದ್ ಕೆಳ್ಗೆ ಇರುದೇಯಾ. ಹಣ್ಣು ತಿನ್ನುದ್ಕಿಂತ ಹೆಚ್ಚು ಬೀಜ ಹುಡ್ಕಿ-ಹುಡ್ಕಿ ಹೆಕ್ಕಬಂದಿ, ಪಾಲ ಮಾಡಿ, ಕೂಡ್ಸಿಟ್ಟು, ತೇಲು ಬೀಜ – ಮುಳುಗು ಬೀಜ ಬೇರೆ-ಬೇರೆ ಮಾಡಿ ಬೇರೆ-ಬೇರೆ ರೇಟಿಗೆ ಸುಬ್ರಾಯಣ್ಣಗೆ ಮಾರುದಾಗಿತ್ತು. ನೂರೋ ಇನ್ನೂರೋ ಬಂದ್ಬಿಟ್ರೆ ಚಪ್ಪಲ್ ತಕಂಬುದಾ, ಚತ್ರಿ ತಕಂಬುದಾ ಅಂದಿ ನಿದ್ರಿನೇ ಬರುದಿಲ್ಲಾಗಿತ್ತು. ಅದ್ರ ಲೆಕ್ಕಾ ಕೇಳುದ್ ಬ್ಯಾಡಾ…
ಬ್ಯಾಸಗಿಲಿ ಚಿಕ್ಕಮ್ಮ, ಅತ್ತಿಗಿ, ಅಕ್ಕನೋರೆಲ್ಲ ಬ್ಯಾಣಕ್ಕೆ ಜಿಗ್ಗು ಕಡುಕೆ ಹೋದ್ರೆ ನಾವು ಮುಳ್ಳಣ್ಣು, ಕಾರಿ ಹಣ್ಣು, ಕಡ್ಲಣ್ಣು ಕೊಯ್ಕಂಡಿ, ಎಲೆ ಕೊಟ್ಟೆ ಮಾಡಿ ಹಾಕಂಡಿ ತಿನ್ನುದೇ ಒಂದ ಮಜಾ.
ಈ ಕನ್ನಡ ಕೇಳಿದ್ದೀರಾ?: ಬೀದರ್ ಸೀಮೆಯ ಕನ್ನಡ | ‘ಬಿಸಿ-ಬಿಸಿ ರೊಟ್ಟಿ, ಬಳ್ಳೊಳ್ಳಿ ಖಾರಾ, ಇಲ್ಲಾ ಸೇಂಗಾದ್ ಹಿಂಡಿ…’
ದೊಡ್ಡವ್ರೆಲ್ಲ ದನದ ಸಗಣಿ ಬಿದ್ರೆ ಹೆಕ್ಕ ಬಂದು ಬರಣಿ ತಟ್ಟುದು, ಕಡ್ಲಕಾಯಿ ತಂದಿ ಉಪ್ಪಿನಕಾಯಿ ಹಾಕುದು, ಮಳಿಗಾಲ್ದಲ್ಲಿ ತಗಟಿ ಸೊಪ್ಪು, ಗಜಗೆಂಡಿ ಸೊಪ್ಪು ತಂದು ಪಲ್ಲೆ ಮಾಡುದು ಎಲ್ಲಾ ಇರ್ತಿತ್ತು. ಅದ್ರ, ಸಂತಿಗೆ ಬೋಕಳ ಹೂವು, ಕಡ್ಲ ಹೂವಿನ ಮಾಲಿ ಮಾಡಿ ಮುಡ್ಕಂತಿದ್ರು.
ಅಂಗಳ ಮಾಡುಕೆ ಮಣ್ಣು, ಬಲೀಂದ್ರನ ಮಾಡುಕೆ ಶೇಡಿ, ದೃಷ್ಟಿ ತೆಗುಕೆ ಬೋಕಳ ಎಲೆ, ಕಜ್ಜಿ ಹೊಟ್ಟೆ ನೋವಿಗೆಲ ಕೊಡಸಲ ಬೇರು, ಕೊಟ್ಟಿ ರೊಟ್ಟಿ ಮಾಡುಕೆ ಹಲಸಿನ ಎಲಿ ಎಲ್ಲದು ಬೆಟ್ಟಕ್ ಹೋಗಿ ತರುದೇಯ.
ನಮಗೆ ಅದೊಂದು ನಮನಿ ಈಗಿನ್ ಕಾಲದ ಮಾಲ್ ಇದ್ದಂಗೇಯ. ಸಂತಿಗೆ ನಮ್ಮ ದೆವ್ವ-ದ್ಯಾವ್ರು ಎಲ್ಲಾ ಇರುದು ಅಲ್ಲೇಯ ಆಗಿತ್ತು.
ಈಗೆಲ್ಲಾ ಬೆಟ್ಟ ಹತ್ತಿದ್ರೆ ಅಕೇಶಿಯಾ ಗಿಡದ ಪೊದೆ ಬಿಟ್ರೆ ಸಣ್ಣ ಹುಲ್ಲೂ ಕಾಣುದೆಲಾ. ಎಲ್ಲಿ ನೋಡಿದ್ರೂ ಅದೇ ತುಂಬ್ಕಂಡಿ, ಯಾವ್ದು ನಮ್ಮ ಕಡ್ಲ ಗಿಡ, ಎಲ್ಲಿ ಮುಳ್ಳಣ್ಣಿತ್ತು ಅಂದಿ ಹುಡ್ಕುಕಾಗ್ದೆ, ಬೆಟ್ಟನು ಬ್ಯಾಡಾ ಎಂತದ್ದೂ ಬ್ಯಾಡ ಹೇಳಿ ಕಣ್ಣಲ್ಲಿ ನೀರ ಹಾಕಂಡಿ ಸುಮ್ಮನೆ ಇಳ್ಕ ಬರುದೇಯ.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ
ಕಲಾಕೃತಿ ಕೃಪೆ: ಅಖಿಲ್ ತ್ಯಾಗರಾಜನ್




