ಈ ದಿನ ಸಂಪಾದಕೀಯ | ಬೆಂಗಳೂರು ಅಂದರೆ ಉದ್ಯಮಿಗಳು, ಐಟಿ ಬಿಟಿ ಶ್ರೀಮಂತರಷ್ಟೇ ಅಲ್ಲ!

Date:

ಮೇಲ್ಜಾತಿಯ, ಮೇಲ್ವರ್ಗದವರು, ಐಟಿ ಬಿಟಿ ಶ್ರೀಮಂತರು ಉಳಿದೆಲ್ಲರ ಪರವಾಗಿ ನೀತಿ ನಿಯಮ ರೂಪಿಸುವುದು ಅಭಿವೃದ್ಧಿಯ ಕೆಟ್ಟ ಮಾದರಿ. ಸಮಾಜದಲ್ಲಿ ಎಷ್ಟೆಲ್ಲ ಜನವರ್ಗಗಳಿವೆಯೋ, ಎಷ್ಟು ವೈವಿಧ್ಯಮಯ ವೃತ್ತಿ ಸಮುದಾಯಗಳಿವೆಯೋ ಅವೆಲ್ಲವೂ ಅಭಿವೃದ್ಧಿಯ ಮಾದರಿಯನ್ನು ರೂಪಿಸುವಲ್ಲಿ ಸಕ್ರಿಯ ಪಾತ್ರ ವಹಿಸಬೇಕು.

ಬೆಂಗಳೂರು ಅಭಿವೃದ್ಧಿಯ ಮುನ್ನೋಟ ಹೇಗಿರಬೇಕು, ಅದನ್ನು ಯಾರು ನಿರ್ಧರಿಸಬೇಕು ಎನ್ನುವ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನಗರದ ಅಭಿವೃದ್ಧಿಗೆ ಸರ್ಕಾರಿ ಅಧಿಕಾರಿಗಳು, ವಿಷಯ ತಜ್ಞರು, ನಾಗರಿಕ ಪ್ರತಿನಿಧಿಗಳನ್ನೊಗೊಂಡ ಸಮಿತಿ ರಚಿಸುವುದಾಗಿ ಇತ್ತೀಚೆಗೆ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದರು. ಈ ಸಂಬಂಧ ಎನ್ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ ಎನ್ನುವ ಸರ್ಕಾರೇತರ ಸಂಸ್ಥೆ ಡಿ ಕೆ ಶಿವಕುಮಾರ್ ಅವರಿಗೆ ಪತ್ರವೊಂದನ್ನು ಬರೆದಿದೆ. ಸಂಸ್ಥೆಯ ಪ್ರತಿನಿಧಿ ಹಾಗೂ ವಕೀಲ ಲಿಯೋ ಸಾಲ್ಡಾನಾ, ಬೆಂಗಳೂರಿನ ಅಭಿವೃದ್ಧಿಗೆ ಐಟಿ ಬಿಟಿ ವಲಯಗಳ ಶ್ರೀಮಂತ ಉದ್ಯಮಿಗಳಿಂದ ಕೂಡಿದ ಸಮಿತಿ ರಚನೆ ಮಾಡುವುದನ್ನು ವಿರೋಧಿಸಿದ್ದಾರೆ. ‘ಎಸ್ ಎಂ ಕೃಷ್ಣ ಅವರ ಅವಧಿಯಲ್ಲಿ ರಚಿಸಲಾಗಿದ್ದ ಸಮಿತಿಯು ಉದ್ಯಮಿಗಳು, ಪ್ರಭಾವಿಗಳಿಂದ ಕೂಡಿತ್ತು. ಅವರು ಲಭ್ಯವಿದ್ದ ಎಲ್ಲ ಹಣಕಾಸು, ಸವಲತ್ತುಗಳನ್ನು ತಮ್ಮ ಹಿತಾಸಕ್ತಿ ಕಾಪಾಡುವುದಕ್ಕೆ ಬಳಸಿಕೊಂಡಿದ್ದರು. ಎಲ್ಲರ ಅಭಿವೃದ್ಧಿಗಾಗಿ ಬಳಕೆಯಾಗಬೇಕಿದ್ದ ಸಂಪನನ್ಮೂಲಗಳನ್ನು ತಮ್ಮ ಯೋಜನೆಗಳ ಅನುಷ್ಠಾನಕ್ಕಾಗಿ ವರ್ಗಾಯಿಸಿಕೊಂಡಿದ್ದರು. ಬಿ ಎಸ್ ಯಡಿಯೂರಪ್ಪನವರ ಅವಧಿಯಲ್ಲೂ ಇಂಥದ್ದೇ ಸಮಿತಿ ರಚಿಸಲಾಗಿತ್ತು. ಆಗಲೂ ಕೂಡ ಪ್ರಭಾವಿಗಳು, ಪ್ರಮುಖರ ಹಿತಾಸಕ್ತಿ ಕಾಯುವ ಕೆಲಸ ಪುನರಾವರ್ತನೆಯಾಗಿತ್ತು. ಈಗ ಡಿ ಕೆ ಶಿವಕುಮಾರ್ ಕೂಡ ಅದೇ ಹಾದಿಯಲ್ಲಿದ್ದು, ಇದು ಅಪ್ರಜಾತಾಂತ್ರಿಕ, ಅಸಾಂವಿಧಾನಿಕ” ಎಂದು ಲಿಯೋ ಸಾಲ್ಡಾನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಅಭಿವೃದ್ಧಿಗೆ ನಾಗರಿಕರನ್ನೂ ಒಳಗೊಂಡ ಸಮಿತಿ ಬೇಕು ಎನ್ನುವುದಾದರೆ, ಚುನಾಯಿತ ಸಮಿತಿ ಮಾಡಿದರೆ ಒಳ್ಳೆಯದು ಎನ್ನುವ ಸಲಹೆಯನ್ನೂ ಅವರು ನೀಡಿದ್ದಾರೆ.

ಈ ಹಿಂದೆ ಬೆಂಗಳೂರು ಅಭಿವೃದ್ಧಿಗಾಗಿ ರಚಿಸಲಾಗಿದ್ದ ಸಮಿತಿಗಳು, ಅವುಗಳ ಪದಾಧಿಕಾರಿಗಳಾಗಿದ್ದವರ ಹಿನ್ನೆಲೆ ಮತ್ತು ಅವು ಮಾಡಿದ ಕೆಲಸಗಳನ್ನು ಪರಿಶೀಲಿಸಿದ ಯಾರಿಗಾದರೂ ಲಿಯೋ ಸಾಲ್ಡಾನಾ ಮಾತುಗಳಲ್ಲಿ ಸತ್ಯವಿದೆ ಎಂದನ್ನಿಸದೇ ಇರದು. ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ (ಬಿಎಟಿಎಫ್‌) ಎನ್ನುವ ಕಾರ್ಯಪಡೆಯನ್ನು ರಚಿಸಿದ್ದರು. ಇತ್ತೀಚೆಗೆ ಸರ್ಕಾರದ ಗ್ಯಾರಂಟಿಗಳನ್ನು ಟೀಕೆ ಮಾಡಿದ್ದ ನಂದನ್‌ ನಿಲೇಕಣಿ ಅಂದು ಬಿಎಟಿಎಫ್‌  ಮುಖ್ಯಸ್ಥರಾಗಿದ್ದರು. ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದ ಪ್ರಯತ್ನ ಎಂದೇ ಹೇಳಲಾಗಿದ್ದ ಅದು ನಂದನ್‌ ನಿಲೇಕಣಿಯಂಥವರಿಗೆ ಪೂರಕ ವಾತಾವರಣ ನಿರ್ಮಿಸಿಕೊಡುವ ವ್ಯವಸ್ಥೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಆ ಕಾರ್ಯಪಡೆಗೆ ಮಹಾನಗರದ ದುಡಿಯುವ ವರ್ಗ ಹಾಗೂ ಬಡವರು ಒಂದು ಆದ್ಯತೆಯೇ ಆಗಿರಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಗರದ ಆಡಳಿತಕ್ಕೆ ಹೊಸ ದೃಷ್ಟಿಕೋನ ಒದಗಿಸುವ ಉದ್ದೇಶದಿಂದ ಡಾ ಕೆ ಕಸ್ತೂರಿರಂಗನ್ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿದ್ದರು. ಮಹಾನಗರ ಯೋಜನಾ ಸಮಿತಿಯನ್ನು (ಎಂಪಿಸಿ) ಆದ್ಯತೆ ಮೇಲೆ ರಚನೆ ಮಾಡುವಂತೆ ಅದು ಶಿಫಾರಸು ಮಾಡಿತು. ಅವರ ಅವಧಿಯಲ್ಲಿಯೇ ಬೆಂಗಳೂರು ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯಪಡೆ (ಅಬೈಡ್‌) ಎನ್ನುವ  ಮತ್ತೊಂದು ಸಮಿತಿ ರಚನೆಯಾಯಿತು. ಬಿಎಟಿಎಫ್‌ ಕಾರ್ಯಗಳಿಗೆ ಇನ್ಫೋಸಿಸ್  ಧನಸಹಾಯ ಮಾಡಿದರೆ, ಅಬೈಡ್‌ಗೆ ನೆರವು ನೀಡಿದ್ದು ಸಂಸದ ರಾಜೀವ್ ಚಂದ್ರಶೇಖರ್ ಅವರ ‘ನಮ್ಮ ಬೆಂಗಳೂರು ಪ್ರತಿಷ್ಠಾನ’. ಈ ಕಾರಣಕ್ಕೆ ಮುಖ್ಯಮಂತ್ರಿ ಅವರೇ ಅಬೈಡ್ ಅಧ್ಯಕ್ಷರಾಗಿದ್ದರೂ ತಂಡದ ಕಾರ್ಯಚಟುವಟಿಕೆಗಳ ಮೇಲೆ ರಾಜೀವ್ ಚಂದ್ರಶೇಖರ್ ಹಿಡಿತ ಹೊಂದಿದ್ದರು.  

ಇನ್ನು 2014ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಬಂದ ಮೇಲೆ ಬೆಂಗಳೂರು ವಿಷನ್‌ ಗ್ರೂಪ್‌ (ಬಿವಿಜಿ) ರಚನೆಯಾಗಿತ್ತು. ಹಲವು ಸಚಿವರ ಜೊತೆಗೆ ‘ಜನಾಗ್ರಹ’ ಸಂಸ್ಥೆಯ ಸ್ಥಾಪಕ ರಮೇಶ್‌ ರಾಮನಾಥನ್‌ ಅವರೂ ಕೂಡ ವಿಷನ್ ಗ್ರೂಪ್‌ನಲ್ಲಿದ್ದರು. ಆದರೆ, ಈ ಸಮಿತಿ ರಚನೆಯೇ ಸಂವಿಧಾನಬಾಹಿರ ಎಂದು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಯಿತು. ಮಹಾನಗರ ಯೋಜನಾ ಸಮಿತಿ (ಎಂಪಿಸಿ) ಅಧಿಕಾರವನ್ನು ವಿಷನ್‌ ಗ್ರೂಪ್‌ ಕಿತ್ತುಕೊಳ್ಳುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು. ವಿಷನ್‌ ಗ್ರೂಪ್‌ಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್‌ ಬಿಎಂಪಿಸಿಯನ್ನು ರಚಿಸುವಂತೆ ನಿರ್ದೇಶನ ನೀಡಿತು. ಕೊನೆಗೆ, ಕೋರ್ಟ್‌ ಸೂಚನೆಯಂತೆ, 2014ರಲ್ಲಿ ಬಿಎಂಪಿಸಿ ರಚನೆಯಾಯಿತು.

ಈ ವಿಷನ್ ಗುಂಪುಗಳು, ಸಮಿತಿಗಳು ಜನರಿಗಾಗಿ ಕೆಲಸ ಮಾಡುತ್ತವೋ ಅಥವಾ ಉದ್ಯಮಪತಿಗಳ, ಶ್ರೀಮಂತರ ಹಿತಾಸಕ್ತಿ ಕಾಪಾಡಲು ರಚನೆಯಾಗಿವೆಯೋ ಎನ್ನುವ ಪ್ರಶ್ನೆಯನ್ನು ಹಲವು ಮಾಧ್ಯಮಗಳು, ಜನಪರ ಸಂಘಟನೆಗಳ ಕಾರ್ಯಕರ್ತರು ಕಾಲದಿಂದ ಕಾಲಕ್ಕೆ ಎತ್ತುತ್ತಲೇ ಬಂದಿದ್ದಾರೆ. ಮೇಲ್ಜಾತಿಯ, ಮೇಲ್ವರ್ಗದ ಕೆಲವೇ ಜನರು ಎಲ್ಲರ ಪರವಾಗಿ ನೀತಿ ನಿಯಮ ರೂಪಿಸುವುದು ಅಭಿವೃದ್ಧಿಯ ಕೆಟ್ಟ ಮಾದರಿ. ನಮ್ಮ ಸಮಾಜದಲ್ಲಿ ಎಷ್ಟೆಲ್ಲ ಜನವರ್ಗಗಳಿವೆಯೋ, ಎಷ್ಟು ವೈವಿಧ್ಯಮಯ ವೃತ್ತಿ ಸಮುದಾಯಗಳಿವೆಯೋ ಅವೆಲ್ಲವೂ ಅಭಿವೃದ್ಧಿಯ ಮಾದರಿಯನ್ನು ರೂಪಿಸುವಲ್ಲಿ ಸಕ್ರಿಯ ಪಾತ್ರ ವಹಿಸಬೇಕು. ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ, ನಗರದ ಆಟೋ ಚಾಲಕರು, ಪೌರ ಕಾರ್ಮಿಕರು, ಗಾರ್ಮೆಂಟ್ಸ್ ನೌಕರರು ಮುಂತಾದ ದುಡಿಯುವ ವರ್ಗಗಳೂ ಕೂಡ ಸರ್ಕಾರದ ಸಮಿತಿಗಳಲ್ಲಿ ಸ್ಥಾನ ಪಡೆಯಬೇಕು. ಆಗ ಮಾತ್ರವೇ ನಿಜವಾದ ಅಭಿವೃದ್ಧಿಯ ನಕ್ಷೆ ಮೂಡಲು ಸಾಧ್ಯ. ರಾಜ್ಯದ ಬಡವರ ಮತಗಳನ್ನು ಹೆಚ್ಚಾಗಿ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇದನ್ನು ಮರೆಯಬಾರದು. ಜೊತೆಗೆ ಈ ಸಮಿತಿಗಳ ರಚನೆಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಹೊರೆಯಾಗುತ್ತದೆ. ಸಮಿತಿ ರಚನೆ ಮಾಡುವುದಕ್ಕೆ ಸರ್ಕಾರಗಳು ತೋರುವ ಉತ್ಸಾಹವನ್ನು, ಅವುಗಳ ವರದಿಯನ್ನು ಅನುಷ್ಠಾನ ಮಾಡಲು ತೋರುವುದಿಲ್ಲ. ಹೀಗಾಗಿ ಇಂಥ ಸಮಿತಿಗಳ ಅಂತಿಮ ಪ್ರಯೋಜನಗಳೇನು ಎನ್ನುವುದರ ಬಗ್ಗೆಯೂ ಸಚಿವರು ಚಿಂತಿಸಬೇಕಾಗಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....