ನಿನ್ನೆ(ಡಿ.೨೫) ದೆಹಲಿಯಲ್ಲಿ ಪ್ರಧಾನಿ ಮೋದಿ ಚರ್ಚ್ಗೆ ಭೇಟಿ ನೀಡಿ ಕ್ರಿಸ್ಮಸ್ ಪ್ರಯುಕ್ತ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ ತಮ್ಮ ಅಧಿಕಾರಾವಧಿಯಲ್ಲಿ ದೇಶದ ಹಲವೆಡೆ ಹಿಂದುತ್ವವಾದಿಗಳು ಪದೇ ಪದೇ ಮುಸ್ಲಿಮರು ಮತ್ತು ಕ್ರೈಸ್ತರ ಮೇಲೆ ದಾಳಿ ನಡೆಸುತ್ತಿರುವುದನ್ನು ಒಂದು ಸಾಲಿನಲ್ಲೂ ಅವರು ಖಂಡಿಸಿಲ್ಲ.
ವಿವಿಧತೆಯಲ್ಲಿ ಏಕತೆಯೇ ಈ ನೆಲದ ಸತ್ವ. ಶತಮಾನಗಳಿಂದ ಈ ಮಣ್ಣಿನ ಗುಣವೇ ಅದು. ಅನಕ್ಷರತೆ, ಅಜ್ಞಾನ, ಮೌಢ್ಯಗಳು ತುಂಬಿದ್ದ ಸಮಾಜದಲ್ಲಿಯೂ ನಾನಾ ಧರ್ಮ- ಜಾತಿ, ಆಚರಣೆಯ ಜನರು ಕಲೆತು ಬದುಕಿದ್ದಾರೆ. ಪುರಾತನ ಸಂಸ್ಕೃತಿ, ಸಾಹಿತ್ಯ, ಆಚಾರ, ವಿಚಾರಗಳು ಬಹುತ್ವಕ್ಕೆ ಧಕ್ಕೆ ಬರದ ರೀತಿಯಲ್ಲಿ ಆಚರಣೆಯಲ್ಲಿವೆ. ಒಂದೇ ಊರಿನಲ್ಲಿ ಬಹು ಸಂಸ್ಕೃತಿಯ ಜನ ಬದುಕುತ್ತಿದ್ದಾರೆ. ಹಿಂದೂ ಮುಸ್ಲಿಂ ಕ್ರೈಸ್ತರು ತಮ್ಮ ತಮ್ಮ ಧಾರ್ಮಿಕ ಆಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾ ಬಂದಿದ್ದಾರೆಯೇ ಹೊರತು ಮತ್ತೊಂದು ಧರ್ಮದವರನ್ನು ಕೆಣಕಲು, ನಿಂದಿಸಲು, ಬೆದರಿಸಲು ಅಲ್ಲ. ಎಲ್ಲ ಧರ್ಮದವರೂ ತಮ್ಮ ಹಬ್ಬಗಳನ್ನು ಸೌಹಾರ್ದ ಪರಂಪರೆಯ ಬೆಳಕಿನಲ್ಲಿಯೇ ಕಂಡುಕೊಂಡಿದ್ದಾರೆ. ಈ ದೇಶ ಹಿಂದೂಗಳಿಗಷ್ಟೇ ಅಲ್ಲ, ಕ್ರೈಸ್ತರು, ಮುಸಲ್ಮಾನರು, ಬೌದ್ಧರು, ಜೈನರು ಎಲ್ಲರಿಗೂ ಸೇರಿದ. ದೇಶ ಕಟ್ಟುವಲ್ಲಿ ಎಲ್ಲರ ಕೊಡುಗೆಯಿದೆ. ಈ ದೇಶದ ಮೇಲೆ ಬಹುಸಂಖ್ಯಾತರಿಗೆ ಎಷ್ಟು ಹಕ್ಕು ಇದೆಯೋ, ಅಷ್ಟೇ ಅಲ್ಪಸಂಖ್ಯಾತರಿಗೂ ಇದೆ.
ಹಿಂದೂಗಳು ಬಹುಸಂಖ್ಯಾತರಾಗಿರುವ ಈ ದೇಶದಲ್ಲೂ ಇತ್ತೀಚಿನವರೆಗೂ ಎಲ್ಲಾ ಧರ್ಮಗಳ ಆಚರಣೆಗಳು ನಿರಾತಂಕವಾಗಿ, ಸಂತೋಷ ಸಡಗರದಿಂದಲೇ ಆಚರಿಸಲಾಗುತ್ತಿತ್ತು. ಯಾವಾಗ ಹಿಂದುತ್ವದ ಪ್ರತಿಪಾದಕರು ಅಧಿಕಾರ ಹಿಡಿದರೋ ಅಂದಿನಿಂದ ಹಬ್ಬಗಳೆಲ್ಲ ಭಯದ ನಡುವೆ, ಪೊಲೀಸರ ಸರ್ಪಗಾವಲಿನಲ್ಲಿ ನಡೆಯುವಂತಾಗಿದೆ. ಇದು ದುರದೃಷ್ಟಕರ ಬೆಳವಣಿಗೆ. ವರ್ಷಕ್ಕೆ ಒಂದೇ ಒಂದು ಹಬ್ಬವನ್ನು ಇಡೀ ಸಮಾಜಕ್ಕೆ ಪ್ರೀತಿ ಹಂಚುವ ಶಾಂತಿಯ ಸಂದೇಶ ಸಾರುವ ಮೂಲಕ ಆಚರಿಸುವ ಕ್ರೈಸ್ತರ ಹಬ್ಬಕ್ಕೆ ಹಿಂದೂ ಮೂಲಭೂತವಾದಿ ಪುಂಡರು ಅಡ್ಡಿಪಡಿಸುತ್ತಿರುವುದು ಕೆಲ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ನಿನ್ನೆ(ಡಿ.೨೫) ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚರ್ಚ್ಗೆ ಭೇಟಿ ನೀಡಿ ಕ್ರಿಸ್ಮಸ್ ಪ್ರಯುಕ್ತ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ ದೇಶದ ಹಲವೆಡೆ ಇದೇ ಸಮಯದಲ್ಲಿ ಕ್ರಿಸ್ಮಸ್ ಸಂಭ್ರಮಕ್ಕೆ ಸಂಘಪರಿವಾರದ ಮತಾಂಧರು ಅಡ್ಡಿಪಡಿಸಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಪದೇ ಪದೇ ನಡೆಯುತ್ತಿರುವ ಮುಸ್ಲಿಮರು ಮತ್ತು ಕ್ರೈಸ್ತರ ಮೇಲಿನ ದಾಳಿ, ಚರ್ಚ್ಗಳಿಗೆ ಹೋಗಿ ದಾಂಧಲೆ ನಡೆಸುವುದನ್ನು ಒಂದು ಸಾಲಿನಲ್ಲೂ ಮೋದಿ ಅವರು ಖಂಡಿಸಿಲ್ಲ. ನಿನ್ನೆ ಮೋದಿಯವರು ಕ್ರೈಸ್ತನ ಸಂದೇಶವನ್ನು ಟ್ವೀಟ್ ಮಾಡಿದ್ದರು. ಆದರೆ, ತಮ್ಮ ಹಿಂಬಾಲಕರು, ಹಿಂದೂ ಕೋಮುವಾದಿ ಸಂಘಟನೆಯ ಕಾರ್ಯಕರ್ತರು ಯಾವುದೇ ಭಯವಿಲ್ಲದೇ ಹಬ್ಬದ ಸಂಭ್ರಮಕ್ಕೆ ಭಯದ ಕರಿನೆರಳು ಬೀಳುವಂತೆ ಮಾಡಿದ್ದರು. ಇಲ್ಲಿ ಕ್ರೈಸ್ತರನ್ನು, ಮುಸ್ಲಿಮರನ್ನು ದ್ವೇಷಿಸುವುದು, ವಿದೇಶದ ಕ್ರೈಸ್ತ-ಮುಸ್ಲಿಂ ಮುಖಂಡರನ್ನು ತಬ್ಬಿಕೊಳ್ಳುವುದು ಮೋದಿಯವರ ಗೋಸುಂಬೆತನ ತೋರಿಸುತ್ತದೆ. ಇಂತಹ ಪ್ರಶ್ನೆಗಳು ಎದುರಾಗುತ್ತವೆ ಎಂಬ ಕಾರಣದಿಂದಲೇ ಅವರು ಹನ್ನೊಂದು ವರ್ಷಗಳಿಂದ ಪತ್ರಕರ್ತರನ್ನು ಹತ್ತಿರ ಬಿಟ್ಟುಕೊಳ್ಳುತ್ತಿಲ್ಲ. ಯಾರನ್ನೂ ಮುಖಾಮುಖಿಯಾಗದೇ ಇಡೀ ದೇಶ ತನ್ನ ಅಭಿಪ್ರಾಯವನ್ನು ಮಾತ್ರವೇ ಆಲಿಸಬೇಕು ಎಂದು ಬಯಸುವ ಉಡಾಫೆ. ಪ್ರತಿ ತಿಂಗಳು ಮನ್ಕೀ ಬಾತ್ನಲ್ಲೂ ಮೋದಿಯವರು ಅನ್ಯಧರ್ಮಗಳ ವಿರುದ್ಧ ದ್ವೇಷ ಕಾರುವ ತಮ್ಮ ಬೆಂಬಲಿಗರ ಕೃತ್ಯವನ್ನು ಒಮ್ಮೆಯೂ ಖಂಡಿಸಿ ಮಾತಾಡಿಲ್ಲ. ಇದು ಮುತ್ಸದ್ದಿ ನಾಯಕನ ಲಕ್ಷಣವಲ್ಲ. ಮೋದಿಯವರದ್ದು ʼಹೊರಗೆ ವೇಷ ಒಳಗೆ ದ್ವೇಷʼ ಎಂಬ ನಡವಳಿಕೆ. ಭಾರತದಲ್ಲಿ ಹಿಂದುತ್ವ ಸಂಘಟನೆಗಳು ಚರ್ಚ್ಗಳ ಮೇಲೆ ದಾಳಿ ಮಾಡುವುದು, ಕ್ರಿಸ್ಮಸ್ ಆಚರಿಸದಂತೆ ತಡೆಯುವುದು, ಕ್ರೈಸ್ತ ಪ್ರತಿಮೆಯನ್ನು ಧ್ವಂಸ ಮಾಡುವುದು, ಉತ್ತರಪ್ರದೇಶದಲ್ಲಿ ಸರ್ಕಾರವೇ ಕ್ರಿಸ್ಮಸ್ ರಜೆಯನ್ನು ರದ್ದುಗೊಳಿಸಿರುವುದು ಇವೆಲ್ಲ “ಭಾರತದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ” ಎಂಬ ಸ್ಪಷ್ಟ ಸಂದೇಶವನ್ನು ಹೊರ ಜಗತ್ತಿಗೆ ರವಾನಿಸಿವೆ. ಭಾರತದ ಕೋಟ್ಯಂತರ ಮಂದಿ ಕ್ರೈಸ್ತರ ದೇಶಗಳಲ್ಲಿ ಉದ್ಯೋಗಕ್ಕೆ ಹೋದವರು ಅಲ್ಲೇ ಶಾಶ್ವತವಾಗಿ ನೆಲೆಯೂರಿದ್ದಾರೆ. ಹಿಂದೂ ದೇವಮಂದಿರ ನಿರ್ಮಿಸಿಕೊಂಡಿದ್ದಾರೆ. ಭಾರತದೊಳಗೆ ಇಂದು ನಡೆಯುತ್ತಿರುವ ಕ್ರೈಸ್ತ- ಮುಸ್ಲಿಮ್ ಧರ್ಮದ ದ್ವೇಷದ ದುಷ್ಪರಿಣಾಮ ಆಯಾ ದೇಶಗಳಲ್ಲಿ ಬೀರಲು ಶುರುವಾದರೆ ಭಾರತದ ಬಳಿ ಉತ್ತರ ಏನಿದ್ದೀತು ಎಂದು ಯೋಚಿಸಬೇಕಿದೆ.
ಇದನ್ನೂ ಓದಿ ‘ಸಂಸ್ಕಾರಿ’ ಅತ್ಯಾಚಾರಿಗಳಿಗೆ ರಾಜಕೀಯ ರಕ್ಷಾಕವಚ: ಆಸಾರಾಮ ಬಾಪೂ ಆಟ ಮತ್ತು ಅಧಿಕಾರಸ್ಥರ ಬೆತ್ತಲೆ ಹಗರಣ
ಭಾರತದ ಸಂವಿಧಾನ ವಿಶ್ವಕ್ಕೆ ಪ್ರೇರಣಾದಾಯಕವಾಗಿತ್ತು. ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ತನಗಿಷ್ಟ ಬಂದ ಧರ್ಮವನ್ನು ಸೇರುವ, ಧಾರ್ಮಿಕ ಆಚರಣೆಯ ಸ್ವಾತಂತ್ರ್ಯವನ್ನು ನೀಡಿದೆ. ಈ ದೇಶದಲ್ಲಿ ಬಹುಸಂಖ್ಯಾತರಿಗೆ ಇರುವ ಎಲ್ಲಾ ಅನುಕೂಲಗಳು ಅಲ್ಪಸಂಖ್ಯಾತರಿಗೂ ಸಲ್ಲುತ್ತವೆ. ಒಬ್ಬರಿಗೆ ಒಂದೇ ಮತದ ಹಕ್ಕು ಇರುವಂತೆಯೇ ಎಲ್ಲಾ ಮೂಲಭೂತ ಹಕ್ಕುಗಳು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಇದೆ. ಆದರೆ, ನರೇಂದ್ರ ಮೋದಿಯವರು ಪ್ರಧಾನಿಯಾಗುತ್ತಲೇ ಈ ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಗುಂಪು ದಾಳಿಗಳು ಹೆಚ್ಚಾದವು. ಗೋರಕ್ಷಣೆಯ ಹೆಸರಿನಲ್ಲಿ ಮುಸ್ಲಿಂ ವ್ಯಕ್ತಿಗಳನ್ನು ಹೊಡೆದು ಕೊಲ್ಲುವ ಪ್ರಕರಣ ಈ ದೇಶದ ಆಹಾರ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿ ದಾಖಲಾಯಿತು. ಭಾರೀ ಪ್ರಮಾಣದಲ್ಲಿ ‘ಬೀಫ್’ ರಫ್ತು ಮಾಡುತ್ತಿರುವ ಮೋದಿ ಸರ್ಕಾರದ ಮೇಲೆ ಹಿಂದುತ್ವವಾದಿಗಳಿಗೆ ಸಿಟ್ಟಿಲ್ಲ, ಅವರಿಗೆ ಸಿಟ್ಟಿರೋದು ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗದೇ ಇಲ್ಯಾಕೆ ಇದ್ದಾರೆ? ಅವರಿದ್ದರೆ ಇದು ಹಿಂದೂ ರಾಷ್ಟ್ರ ಆಗುವುದಿಲ್ಲ ಎಂಬ ದ್ವೇಷ. ಒಂದಲ್ಲ ಮೂರನೇ ಬಾರಿ ಮೋದಿಯವರ ನೇತೃತ್ವದ ಸರ್ಕಾರ ದೇಶದ ಚುಕ್ಕಾಣಿ ಹಿಡಿದಿದೆ. ಧಾರ್ಮಿಕ ಮೂಲಭೂತವಾದ ಎಂಬ ಅನಿಷ್ಟ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮುಂತಾದ ದೇಶಗಳನ್ನು ಹೇಗೆಲ್ಲ ನಾಶ ಮಾಡಿದೆ ಎಂಬುದನ್ನು ಕಣ್ಣಾರೆ ಕಂಡಿದ್ದೇವೆ. ಈ ದೇಶವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಹೇಳುವ ಬಿಜೆಪಿ- ಆರೆಸ್ಸೆಸ್ ದೇಶದ ಬಹುತ್ವದ ಸಂಕೇತಗಳನ್ನು ನಾಶಪಡಿಸಲು ನಡೆಸುತ್ತಿರುವ ಹುನ್ನಾರ ನಡೆಯದಂತೆ ನೋಡಿಕೊಳ್ಳಬೇಕಿದೆ. ಜನಸಾಮಾನ್ಯರು ಧರ್ಮದ ಅಮಲಿನಿಂದ ಹೊರಬಿದ್ದು ತಮ್ಮ ಬದುಕಿನ ನಿತ್ಯ ಸುಡುಸಮಸ್ಯೆಗಳ ಕುರಿತು ಧ್ಯಾನಿಸಬೇಕಿದೆ.





