ಹೆಡಗೇವಾರ್ನ ಗುರು ಬಿ.ಎಸ್.ಮೂಂಜೆ, ಫ್ಯಾಸಿಸ್ಟರ ಕುರಿತು ಅಧ್ಯಯನ ಮಾಡಲು ಇಟಲಿಗೆ ಭೇಟಿ ಕೊಟ್ಟಿದ್ದರು. ಫ್ಯಾಸಿಸ್ಟ್ ನಾಯಕ ಮುಸಲೋನಿಯೊಂದಿಗೂ ಮಾತುಕತೆ ನಡೆಸಿದ್ದ ಮೂಂಜೆ, 'ಪ್ರತಿಯೊಂದು ಮಹತ್ವಾಕಾಂಕ್ಷಿ ಮತ್ತು ಬೆಳೆಯುತ್ತಿರುವ ರಾಷ್ಟ್ರಕ್ಕೂ ಇಂತಹ (ಫ್ಯಾಸಿಸ್ಟ್) ಸಂಘಟನೆಯ ಅವಶ್ಯಕತೆ ಇದೆ' ಎಂದಿದ್ದರು.
ಅಸ್ಪೃಶ್ಯ ಸಮುದಾಯದ ಹಿನ್ನಲೆಯಿಂದ ಬಂದ ಪ್ರಿಯಾಂಕ್ ಖರ್ಗೆಯವರ ಮೇಲೆ ಸಂಘಪರಿವಾರ ಮುಗಿಬೀಳುತ್ತಿರುವುದು ಇದೇ ಮೊದಲೇನೂ ಅಲ್ಲ. ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ವಿಚಾರಧಾರೆಗಳಲ್ಲಿ ನಂಬಿಕೆ ಇಟ್ಟಿರುವ ಪ್ರಿಯಾಂಕ್, ಹಲವು ವರ್ಷಗಳಿಂದಲೂ ಸಾಂವಿಧಾನಿಕ ಮೌಲ್ಯಗಳ ಪರವಾಗಿ ದನಿ ಎತ್ತುತ್ತಾ ಬಂದಿದ್ದಾರೆ. ಸಮಾನತೆಗೆ ಮತ್ತು ದಲಿತ, ಒಬಿಸಿ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಇತಿಹಾಸದುದ್ದಕ್ಕೂ ತೊಡರಗಾಲು ಹಾಕುತ್ತಾ ಬಂದಿರುವ ಸಂಘಪರಿವಾರವನ್ನು ಗಟ್ಟಿದನಿಯಲ್ಲಿ ಪ್ರಶ್ನಿಸುತ್ತಾ ಬಂದಿರುವವರು ಪ್ರಿಯಾಂಕ್. ಈ ಕಾರಣಕ್ಕೆ ಅವರನ್ನು ಚುನಾವಣೆಯಲ್ಲಿ ಸೋಲಿಸಲು ಶತಪ್ರಯತ್ನ ಮಾಡಲಾಗಿತ್ತು. ರೌಡಿಶೀಟರ್ ಒಬ್ಬನನ್ನು ಪ್ರಿಯಾಂಕ್ ವಿರುದ್ಧ ಕಣಕ್ಕೆ ಇಳಿಸಲಾಗಿತ್ತು.
ಆರ್ಎಸ್ಎಸ್ಗೆ ನೂರು ವರ್ಷಗಳಾದ ಹೊತ್ತಿನಲ್ಲಿ ಪ್ರಿಯಾಂಕ್ ಖರ್ಗೆ, ‘ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರಗಳ ಪ್ರದರ್ಶನ ಮಾಡುವ, ಮಕ್ಕಳಲ್ಲಿ ಭೀತಿ ಹುಟ್ಟಿಸುವ ಮತ್ತು ಈ ದೇಶದ ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಆರ್ಎಸ್ಎಸ್ ಚಟವಟಿಕೆಗಳನ್ನು ನಿರ್ಬಂಧಿಸಬೇಕು’ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಭಾರೀ ಚರ್ಚೆಯನ್ನು ಹುಟ್ಟು ಹಾಕಿದರು. ಕೋಲು ಹಿಡಿದು ತಿರುಗುವ ಸಂಘಿ ಶೂರರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಕಡ್ಡಾಯ ಅನುಮತಿ ಪಡೆಯಬೇಕೆಂದು ಆದೇಶಿಸಿದೆ.
ಪ್ರಿಯಾಂಕ್ ಖರ್ಗೆಯವರ ಸ್ವಕ್ಷೇತ್ರ ಚಿತ್ತಾಪುರದಲ್ಲಿ ಆರ್ಎಸ್ಎಸ್ ಮತ್ತು ಭೀಮ್ ಆರ್ಮಿ ಏಕಕಾಲದಲ್ಲಿ ಪಥಸಂಚಲನಕ್ಕೆ ಮುಂದಾಗಿದ್ದನ್ನು ಸರ್ಕಾರ ನಿರ್ಬಂಧಿಸಿತು. ಇದನ್ನು ಹೈಕೋರ್ಟ್ನಲ್ಲಿ ಆರ್ಎಸ್ಎಸ್ ಪ್ರಶ್ನಿಸಿತು. ಎರಡು ಸಂಘಟನೆಗಳು ಏಕಕಾಲದಲ್ಲಿ ಬೀದಿಗಿಳಿಯುವುದಕ್ಕೆ ಅನುಮತಿ ನೀಡದ ನ್ಯಾಯಾಲಯ, ಅಂತಿಮವಾಗಿ ಆರ್ಎಸ್ಎಸ್ಗೆ ನವೆಂಬರ್ 2ರಂದು ಪಥಸಂಚಲನ ಮಾಡಲು ಅವಕಾಶ ನೀಡಿದೆ. ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ಸಂಗತಿಯೊಂದಿದೆ. ಅದೇನೆಂದರೆ ಭೀಮ್ ಆರ್ಮಿ ಮತ್ತು ಆರ್ಎಸ್ಎಸ್ ಮುಖಾಮುಖಿಯಾಗಿವೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಗವಾಯಿ ಬೌದ್ಧತತ್ವವೂ ಬಿಜೆಪಿಗರ ಮನುವಾದವೂ
ಭೀಮ್ ಆರ್ಮಿಯು ಬಾಬಾಸಾಹೇಬ್ ಅಂಬೇಡ್ಕರ್ ಅವರ ಬೌದ್ಧಮಾರ್ಗದಲ್ಲಿ ನಂಬಿಕೆ ಇಟ್ಟಿದ್ದರೆ, ಆರ್ಎಸ್ಎಸ್ ಬ್ರಾಹ್ಮಣೀಯ ಸನಾತನ ಶ್ರೇಣೀಕೃತ ವ್ಯವಸ್ಥೆಯ ಪ್ರತಿರೂಪವಾಗಿದೆ. ಚಲನಶೀಲತೆಯ ಗುರುತಾದ ಬೌದ್ಧತ್ವಕ್ಕೂ, ಸಮಾಜವನ್ನು ಯಥಾಸ್ಥಿತಿಯಲ್ಲಿ ಇಡುವ ಪ್ರತಿಗಾಮಿ ಬ್ರಾಹ್ಮಣ್ಯಕ್ಕೂ ಮುಖಾಮುಖಿ ಸಂಭವಿಸಿದೆ.
‘ನಾವು ಇತಿಹಾಸವನ್ನು ಅರಿಯದಿದ್ದರೆ, ಇತಿಹಾಸವನ್ನು ಸೃಷ್ಟಿಸಲಾರೆವು’ ಎಂಬ ಎಚ್ಚರಿಕೆಯನ್ನು ನೀಡಿದ್ದ ಬಾಬಾಸಾಹೇಬರು, ಬ್ರಾಹ್ಮಣೀಯ ವ್ಯವಸ್ಥೆ ಮುಚ್ಚಿಹಾಕಿದ್ದ ಚರಿತ್ರೆಯನ್ನು ಹೆಕ್ಕಿ ತೆಗೆದರು. ಅವರು ಬರೆದ ‘ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಕೃತಿಯಲ್ಲಿ, ‘ಭಾರತದ ಇತಿಹಾಸವೆಂದರೆ ಬೌದ್ಧಧರ್ಮ ಮತ್ತು ಬ್ರಾಹ್ಮಣಧರ್ಮದ ನಡುವೆ ನಡೆದ ಮಾರಕ ಕಾಳಗವೇ ಆಗಿದೆ’ ಎಂದಿದ್ದರು. ಅದೇ ಕೃತಿಯಲ್ಲಿ ಮತ್ತೊಂದೆಡೆ, ‘ಹಿಂದೂ ಭಾರತದ ಮೇಲೆ ಮುಸ್ಲಿಂ ದಾಳಿಕೋರರ ದಂಡಯಾತ್ರೆಗಳು ಚರಿತ್ರೆಕಾರರ ಅಧ್ಯಯನಕ್ಕೆ ಅರ್ಹವಾಗಿದ್ದರೆ, ಬೌದ್ಧ ಭಾರತದ ಮೇಲೆ ಬ್ರಾಹ್ಮಣ ದಾಳಿಕೋರರ ದಂಡಯಾತ್ರೆಗಳೂ ಅಷ್ಟೇ ಅಧ್ಯಯನಕ್ಕೆ ಯೋಗ್ಯವಾಗಿವೆ. ಬೌದ್ಧ ಭಾರತದ ಬ್ರಾಹ್ಮಣ ದಾಳಿಕೋರರು ಬೌದ್ಧಧರ್ಮವನ್ನು ಅಡಗಿಸಲು ಅನುಸರಿಸಿದ ಮಾರ್ಗವಿಧಾನಗಳು, ಹಿಂದೂ ಧರ್ಮವನ್ನು ಅಡಗಿಸಲು ಮುಸ್ಲಿಂ ದಾಳಿಕೋರರು ಅನುಸರಿಸಿದ ಮಾರ್ಗವಿಧಾನಗಳಿಗಿಂತ ಕಡಿಮೆ ವಿಷಮಯ ಅಥವಾ ಹಿಂಸಾತ್ಮಕವಾದವೇನೂ ಆಗಿರಲಿಲ್ಲ’ ಎನ್ನುತ್ತಾರೆ. ಇತಿಹಾಸವು ಕೇವಲ ಗತಿಸಿ ಹೋದ ಕಾಲವಲ್ಲ. ಅದು ವರ್ತಮಾನವು ಹೌದು. ಈಗ ಕರ್ನಾಟಕದಲ್ಲಿ ಕಾಣುತ್ತಿರುವುದು ಬ್ರಾಹ್ಮಣೀಯ ಚಿಂತನೆಗೂ ಮತ್ತು ಈ ನೆಲದಲ್ಲಿ ಹುಟ್ಟಿದ ಬೌದ್ಧಧಾರೆಗೂ ನಡೆಯುತ್ತಿರುವ ಸಮರ.
ದಲಿತರ ಬಿಡುಗಡೆಯ ಹಾದಿಗಳನ್ನು ಮೊದಲಿನಿಂದಲೂ ದಮನ ಮಾಡುತ್ತಾ ಬಂದಿರುವ ಹಾಗೂ ಸಾಮಾಜಿಕ ನ್ಯಾಯದ ಭಾಗವಾಗಿ ನೀಡಲಾದ ಮೀಸಲಾತಿ ವಿರುದ್ಧ ಹಲ್ಲುಮಸೆಯುವ ಸಂಘಪರಿವಾರ ಮೂಲತಃ ಫ್ಯಾಸಿಸ್ಟ್ ಸಂಘಟನೆ. ದಲಿತರು ಸ್ವಾವಲಂಬಿಗಳಾಗುವುದು, ಪ್ರಶ್ನೆಗಳನ್ನು ಕೇಳುವುದು ಅದಕ್ಕೆ ಹಿಡಿಸದ ಸಂಗತಿ. ಬ್ರಾಹ್ಮಣೀಯ ಯಜಮಾನಿಕೆಯನ್ನು ಒಪ್ಪಿಕೊಂಡು ತೆಪ್ಪಗಿದ್ದರೆ, ಸಣ್ಣಪುಟ್ಟ ಅಧಿಕಾರ ಸ್ಥಾನಗಳನ್ನು ಕೊಟ್ಟು, ಕಾಲಾಳುಗಳನ್ನಾಗಿ ಮಾಡಿಕೊಳ್ಳಲು ಸಂಘಪರಿವಾರ ಬಯಸುತ್ತದೆಯೇ ಹೊರತು, ಯಾವುದೇ ತಳಸಮುದಾಯದ ಜಾಗೃತ ಪ್ರಜ್ಞೆಯನ್ನಲ್ಲ. ಹಾಗೆ ಚಿಂತಿಸುವವರು ದಲಿತರಾದರೂ, ಹಿಂದುಳಿದ ವರ್ಗದವರಾದರೂ, ಯಾರೇ ಆದರೂ ಮಟ್ಟಹಾಕಲು ಸಂಘಪರಿವಾರ ಯತ್ನಿಸುತ್ತದೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಸಂವಿಧಾನ ಬದಲಿಸುವ ಸನಾತನಿಗಳ ಹುನ್ನಾರಕ್ಕೆ ವಕೀಲರೇ ದಾಳ
‘ಭಾರತದ ಫ್ಯಾಸಿಸಂ’ಗೆ ಜನ್ಮ ನೀಡಿದ ಮಹಾರಾಷ್ಟ್ರದಲ್ಲೇ ಸಮಾನತಾವಾದಿ, ಪ್ರಜಾತಂತ್ರದ ಶಕ್ತಿ ಅಂಬೇಡ್ಕರ್ ಮತ್ತು ಜ್ಯೋತಿಬಾ ಫುಲೆ ಜನಿಸಿದ್ದರು. ಇದು ವಿರೋಧಾಭಾಸದಂತೆ ಅನಿಸಿದರೂ ಭಾರತದ ವಾಸ್ತವಿಕ ರೂಪಕದಂತೆಯೂ ಕಾಣುತ್ತದೆ. ಬ್ರಾಹ್ಮಣೀಯ ಸಮಾಜದ ಮೌಲ್ಯಗಳನ್ನೇ ಸಾಮಾಜಿಕ ಮೌಲ್ಯಗಳೆಂದು ಬಿತ್ತಿದ್ದ ಚಿತ್ಪಾವನ ಬ್ರಾಹ್ಮಣರ ಪೇಶ್ವೆ ಸಾಮ್ರಾಜ್ಯ, ದಲಿತರನ್ನು ಅತ್ಯಂತ ಕೀಳಾಗಿ ನಡೆಸಿಕೊಂಡಿತ್ತು. ಅಂತಹ ಕೆಟ್ಟ ಸಮಾಜದ ಪುನರುತ್ಥಾನವೇ ಆರ್ಎಸ್ಎಸ್ ಕನಸು. ಆರ್ಎಸ್ಎಸ್ ಹುಟ್ಟುವ ಮುನ್ನ ಚಿತ್ಪಾವನರ ಕನಸಿಗೆ ಆಸರೆಯಾಗಿ ಕೆಲಸ ಮಾಡಿದವರು ಬಾಲಗಂಗಾಧರನಾಥ್ ತಿಲಕ್. ಅಸ್ಪೃಶ್ಯತೆಯಿಂದ ಬೇಸತ್ತು ಇಸ್ಲಾಂ ಕಡೆಗೆ ಮುಖಮಾಡಿದ್ದ ದಲಿತರನ್ನು ತಡೆಯಲು ಕಸರತ್ತು ನಡೆಸಿದರು. ಸ್ವಾತಂತ್ರ್ಯ ಹೋರಾಟದ ಭಾಗವಾಗಿ ತಿಲಕರು ಆರಂಭಿಸಿದ ಗಣೇಶ ಮತ್ತು ಶಿವಾಜಿ ಉತ್ಸವಗಳು ಕೇವಲ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಉಳಿದಿರಲಿಲ್ಲ. ಸಾಂಸ್ಕೃತಿಕ ರಾಜಕೀಕರಣದ ಮತ್ತೊಂದು ಹಂತವಾಗಿ ಗೋರಕ್ಷಣೆ, ಬ್ರಾಹ್ಮಣರ ರಕ್ಷಣೆ ಎನ್ನುವಂತಹ ವಿಚಾರಗಳಿಗೆ ತಿಲಕ್ ಹೊರಳಿದರು. ಈ ಕುರಿತು ದಾಖಲಿಸಿರುವ ಖ್ಯಾತ ಚಿಂತಕ ಆನಂದ ತೇಲ್ತುಂಬ್ಡೆಯವರು ‘ದಲಿತರ ಮೇಲೆ ಫ್ಯಾಸಿಸ್ಟ್ ಹಿಂದುತ್ವದ ದುರ್ದಾಳಿ: ಪ್ರಭಾವ- ಪ್ರತಿರೋಧ’ ಎಂಬ ಲೇಖನದಲ್ಲಿ, ‘ಅಂದಿನ ಕಾಲದಲ್ಲಿ ಅಸಂಖ್ಯಾತ ಕೆಳವರ್ಗ, ಕೆಳಜಾತಿಯ ಜನರು ಇಸ್ಲಾಂನೆಡೆಗೆ ವಾಲುತ್ತಿದ್ದರು. ಸೂಫಿ ಸಂತರ ಪ್ರಭಾವದಡಿಯಲ್ಲಿ ಮೊಹರಂನಂತಹ ಇಸ್ಲಾಮಿಕ್ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾರಂಭಿಸಿದ್ದರು. ಇಸ್ಲಾಮಿಕ್ ಪ್ರಭಾವದ ಹಿಡಿತದಿಂದ ದಲಿತ ಜನಸಮೂಹವನ್ನು ಬಿಡಿಸಿಕೊಳ್ಳುವುದೇ ತಿಲಕರ ಘನೋದ್ದೇಶವಾಗಿತ್ತು. ಬೌದ್ಧಿಕ ಅಪ್ರಬುದ್ಧತೆಯಿಂದ ಕೂಡಿದ್ದ ‘ಆರ್ಯನ್ ಜನಾಂಗ’ದ ಸಿದ್ಧಾಂತವನ್ನು ಪ್ರತಿಪಾದಿಸಿದವರು ತಿಲಕರೇ. ಆ ಸಿದ್ಧಾಂತದ ಪ್ರಕಾರ ಭಾರತದ ಮೇಲ್ಜಾತಿಯ ಜನರು ಬಿಳಿ ಜನಾಂಗೀಯ ಮೂಲದವರೆಂದೂ, ವೇದಗಳೇ ಅವರ ಜೀವಾಳವೆಂದೂ, ವೈದಿಕ ಸಾಹಿತ್ಯವನ್ನು ಪರಮಶ್ರೇಷ್ಠವೆಂದೂ ರುಜುವಾತುಪಡಿಸಲು ತಿಲಕರು ಅತುಲ ಸಾಹಸಕ್ಕಿಳಿದರು’ ಎಂದು ಅಭಿಪ್ರಾಯಪಡುತ್ತಾರೆ.
ತಿಲಕರ ನಿಕಟವರ್ತಿ ಮತ್ತು ಆರ್ಎಸ್ಎಸ್ ಸಂಸ್ಥಾಪಕ ಹೆಡಗೇವಾರ್ನ ಗುರು ಬಿ.ಎಸ್.ಮೂಂಜೆ, ಫ್ಯಾಸಿಸ್ಟರ ಕುರಿತು ಅಧ್ಯಯನ ಮಾಡಲು ಇಟಲಿಗೆ ಭೇಟಿ ಕೊಟ್ಟಿದ್ದರು. ಫ್ಯಾಸಿಸ್ಟ್ ನಾಯಕ ಮುಸಲೋನಿಯೊಂದಿಗೂ ಮಾತುಕತೆ ನಡೆಸಿದ್ದ ಮೂಂಜೆ, ‘ಪ್ರತಿಯೊಂದು ಮಹತ್ವಾಕಾಂಕ್ಷಿ ಮತ್ತು ಬೆಳೆಯುತ್ತಿರುವ ರಾಷ್ಟ್ರಕ್ಕೂ ಇಂತಹ (ಫ್ಯಾಸಿಸ್ಟ್) ಸಂಘಟನೆಯ ಅವಶ್ಯಕತೆ ಇದೆ” ಎಂದು ಬರೆದಿದ್ದರು. ಹಿಂದುತ್ವ ಐಕಾನ್ ಸಾವರ್ಕರ್ ಮೇಲೆ ಇಟಲಿಯ ಫ್ಯಾಸಿಸ್ಟ್ ಜೋಸೆಫ್ ಮ್ಯಾಜಿನಿಯ ಪ್ರಭಾವವಿತ್ತು. ಎಂ.ಎಸ್.ಗೋಲ್ವಾಲ್ಕರ್ಅಂತೂ ಕಟ್ಟರ್ ಹಿಟ್ಲರ್ ಚಿಂತನೆಗಳ ಪ್ರತಿಪಾದಕರಾಗಿದ್ದರು. ಹಿಟ್ಲರ್ ಇನ್ನೊಂದು ಸಮುದಾಯದ ನರಮೇಧ ನಡೆಸುವುದನ್ನು ಸಮರ್ಥಿಸುತ್ತಾ, ಭಾರತದಲ್ಲೂ ಇಂತಹ ಕಾರ್ಯಯೋಜನೆಯ ಅಗತ್ಯತೆ ಬೇಕೆಂದು ಪ್ರತಿಪಾದಿಸುವಷ್ಟು ವಿಕೃತಿಯನ್ನು ಗೋಲ್ವಾಲ್ಕರ್ ಪ್ರದರ್ಶನ ಮಾಡಿದ್ದರು. ಹೀಗಾಗಿಯೇ 1947ರಲ್ಲಿ ಆರ್ಎಸ್ಎಸ್ ಬಗ್ಗೆ ಬರೆಯುತ್ತಾ ಜವಹರಲಾಲ್ ನೆಹರೂ, ‘ಇದು ನಾಝಿ ದಾರಿಯಲ್ಲಿಯೇ ಕಟ್ಟುನಿಟ್ಟಾಗಿ ಸಾಗುತ್ತಿರುವ ಒಂದು ಖಾಸಗಿ ಸೈನ್ಯ’ ಎಂದಿದ್ದರು. ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಬ್ರಾಹ್ಮಣರೇ ಶ್ರೇಷ್ಠರೆಂಬುದು ಆರ್ಎಸ್ಎಸ್ನ ಮೂಲ ಸಿದ್ಧಾಂತ. ಅದಕ್ಕೆ ತಡೆ ನೀಡಿದ್ದು ಭಾರತದ ಸಂವಿಧಾನ ಮತ್ತು ಅಂಬೇಡ್ಕರ್ ಚಿಂತನೆಗಳು.
ಬಾಬಾಸಾಹೇಬರ ವಿಚಾರಗಳು ಅಷ್ಟಾಗಿ ಪ್ರಭಾವಿಸದ ಗುಜರಾತ್ನಲ್ಲಿ ದಲಿತರು ಬಲಿಪಶುಗಳಾದಷ್ಟು ಬೇರೆಲ್ಲೂ ಕಾಣುವುದಿಲ್ಲ. ಅಲ್ಲಿನ ದಲಿತರು ಗಾಂಧಿ ಪ್ರಣೀತ ‘ಹರಿಜನ’ ಸುಧಾರಣಾವಾದಿ ದಾರಿಯನ್ನು ತುಳಿದದ್ದೇ ಅಲ್ಲಿ ಹೆಚ್ಚು ದಮನಕ್ಕೆ ಒಳಗಾಗಲು ಕಾರಣ ಎಂದು ಚಿಂತಕರು ಗುರುತಿಸುತ್ತಾರೆ. ದಲಿತರಿಗೆ ಸಿಕ್ಕ ಮೀಸಲಾತಿಯ ಹಕ್ಕನ್ನು ಹಂಗಿಸಿ, ದೊಡ್ಡದೊಡ್ಡ ಹಿಂಸಾಚಾರಗಳನ್ನು ಗುಜರಾತ್ನಲ್ಲಿ ನಡೆಸಲಾಯಿತು. ದಲಿತರನ್ನು ಕೊಲ್ಲಲಾಯಿತು. ಆದರೆ ಮತರಾಜಕಾರಣದಲ್ಲಿ ದಲಿತರ ಅನಿವಾರ್ಯತೆ ಅಗತ್ಯವೆಂದು ಅರಿತ ಸಂಘಪರಿವಾರ, ಕೆಳಹಂತದ ಅಧಿಕಾರ ಸ್ಥಾನಗಳಲ್ಲಿ ಅವಕಾಶಗಳನ್ನು ನೀಡುತ್ತಾ ಹೋಯಿತು. ಅದುವೇ ದೊಡ್ಡ ಮುಂಚಲನೆ ಎಂದು ತಿಳಿದ ಮುಗ್ಧ ದಲಿತರು ನಿಧಾನಕ್ಕೆ, ಸಂಘಪರಿವಾರದ ಕಾಲಾಳುಗಳಾಗಿ ಬದಲಾದವರು. ಪ್ರಗತಿಪರ ಬೌದ್ಧಿಕ ವಲಯ ಸಾಮಾಜಿಕ ನ್ಯಾಯದ ವಿಚಾರದಲ್ಲಿ ಗಟ್ಟಿಯಾಗಿ ನಿಲ್ಲದೆ ಇರುವುದು ಕೂಡ ದಲಿತರು ಕೋಮುವಾದಿಗಳ ಕಾಲಾಳುಗಳಾಗಲು ಕಾರಣವಾಗಿತ್ತು. ಬಾಬ್ರಿ ಮಸೀದಿ ದ್ವಂಸದಲ್ಲಿ, 2002ರಲ್ಲಿ ನಡೆದ ಗುಜರಾತ್ ಕೋಮುದಳ್ಳುರಿಯುಲ್ಲಿ ಹೆಚ್ಚು ಹಿಂಸಾಚಾರದಲ್ಲಿ ಭಾಗಿಯಾಗಿದ್ದು, ಜೈಲು ಸೇರಿದ್ದು ದಲಿತರು ಮತ್ತು ಆದಿವಾಸಿಗಳು. ಮೀನನ್ನು ಹಿಡಿಯಲು ಗಾಳಕ್ಕೆ ಸಿಕ್ಕಿಸಿದ ಎರೆಹುಳುಗಳಾಗಿದ್ದೇವೆ ಎಂಬುದನ್ನು ಗುಜರಾತಿನ ದಲಿತರು ತಿಳಿಯುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಪಟೇಲರನ್ನು ಹೈಜಾಕ್ ಮಾಡುವುದು ಆರ್ಎಸ್ಎಸ್ಗೆ ಸುಲಭವಲ್ಲ!
ಆರ್ಎಸ್ಎಸ್ನ ಉಪಟಳ ಹೆಚ್ಚಾದಂತೆ ಜಾತಿ ಸಂಘರ್ಷ, ದಲಿತರ ಮೇಲಿನ ಅಟ್ರಾಸಿಟಿಗಳು ಕಾಕತಾಳೀಯವೆಂಬಂತೆ ಹೆಚ್ಚಾದವು. ಹಿಂದುತ್ವ ಮತ್ತು ಬಂಡವಾಳಶಾಹಿ ವ್ಯವಸ್ಥೆ ಒಂದೇ ನಾಣ್ಯದ ಎರಡು ಮುಖಗಳಾಗಿ ವರ್ತಿಸುತ್ತಿರುವುದನ್ನು ದಲಿತರು ಗುರುತಿಸಿಕೊಳ್ಳಲು ಆರಂಭಿಸಿದರು. ಅಂಬೇಡ್ಕರ್ ಅವರ ವಿಚಾರಗಳು ಹೆಚ್ಚು ಪ್ರಚಾರಕ್ಕೆ ಬಂದ ಬಳಿಕ ದಲಿತರು ತಮ್ಮ ಮೂಲ ನೆಲೆಗಳನ್ನು ಕಂಡುಕೊಂಡರು. ಸಂವಿಧಾನ ಬದಲಿಸುವ ಹುನ್ನಾರಗಳನ್ನು ಅರಿತರು. ಹೀಗಾಗಿ ಎಂದೆಂದೂ ಕಾಣದಷ್ಟು ಪ್ರತಿರೋಧವನ್ನು ಸಂಘಪರಿವಾರದ ವಿರುದ್ಧ ದಲಿತರು ದಾಖಲಿಸುತ್ತಿದ್ದಾರೆ. ಕರ್ನಾಟಕದ ಮಟ್ಟಿಗಂತೂ ಆರ್ಎಸ್ಎಸ್ನ ಹಿಡನ್ ಅಜೆಂಡಾಗಳ ಸಂಬಂಧ ದೊಡ್ಡಮಟ್ಟಿಗಿನ ಜಾಗೃತಿಯೇ ಮೂಡಿದೆ. ನಮ್ಮ ಹಿತವನ್ನು ಆರ್ಎಸ್ಎಸ್ ಎಂದಿಗೂ ಕಾಯುವುದಿಲ್ಲ ಎಂಬುದು ಕರ್ನಾಟಕದ ಅಸ್ಪೃಶ್ಯ ಸಮುದಾಯಗಳಿಗೆ ಅರ್ಥವಾಗಿದೆ. ಆದರೆ ಆರ್ಎಸ್ಎಸ್ಗೆ ಹೆಚ್ಚು ಬಲಿಪಶುಗಳಾಗುತ್ತಿರುವುದು ಒಬಿಸಿಗಳು ಎಂಬುದನ್ನು ಚಿಂತಿಸಬೇಕಾಗಿದೆ.
ಕರಾವಳಿಯಲ್ಲಿ ನಡೆದಿರುವ ಕೋಮುಗಲಭೆಗಳಲ್ಲಿ ಹೆಚ್ಚು ಜೈಲುಪಾಲಾದವರು, ಬೀದಿ ಹೆಣವಾದವರು ಒಬಿಸಿಗೆ ಸೇರಿದ ಬಿಲ್ಲವರು ಮತ್ತು ಮೀನುಗಾರರು. ಇಂದಿಗೂ ಒಬ್ಬನೇ ಒಬ್ಬ ಸಂಘಿ ನಾಯಕನ ಮಕ್ಕಳು ಗಲಭೆಯಲ್ಲಿ ಪಾಲ್ಗೊಂಡು ಜೈಲು ಸೇರಲಿಲ್ಲ. ಹಿಂದುಳಿದ ವರ್ಗಗಳ ಭವಿಷ್ಯಕ್ಕೆ ತಿರುವು ತಂದುಕೊಟ್ಟ ಮಂಡಲ್ ಕಮಿಷನ್ ವರದಿಯ ವಿರುದ್ಧ ನಿಂತಿದ್ದು ಸಂಘಪರಿವಾರ. ಈಗಲೂ ಅಷ್ಟೇ- ಒಬಿಸಿಗಳ ಸ್ಥಿತಿಗತಿ ತಿಳಿಸುವ ‘ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ’ ನಡೆಸುತ್ತಿರುವಾಗಲೂ ಅದನ್ನು ವಿರೋಧಿಸುತ್ತಿರುವುದು ಸಂಘಪರಿವಾರದ ಮೂಲದವರು. ತಮ್ಮನ್ನು ಯಾರು ಅಂಧಕಾರಕ್ಕೆ ದೂಡುತ್ತಿದ್ದಾರೆಂದು ಅಸ್ಪೃಶ್ಯರು ತಕ್ಕಮಟ್ಟಿಗೆ ಅರಿತ್ತಿದ್ದಾರೆ. ಒಬಿಸಿಗಳು ಈ ದಿಕ್ಕಿನಲ್ಲಿ ನಡೆದರೆ, ಧರ್ಮ ಮತ್ತು ಜಾತಿಯ ಹೆಸರಲ್ಲಿ ಜನರನ್ನು ಬೀದಿಗೆ ತಳ್ಳಿ, ಬೆಚ್ಚಗೆ ತಿಂದುಂಡು ಮಲಗುವ ಮಡಿವಂತಿಕೆಯ ಸಂಘಪರಿವಾರಕ್ಕೆ ಬಿಸಿಮುಟ್ಟುತ್ತದೆ.





