ರಾಹುಲ್ ಗಾಂಧಿ ವೋಟ್ ಚೋರಿ ಅಭಿಯಾನಕ್ಕೆ ಸೇರಿದ್ದ ಭಾರೀ ಜನಸಭೆಗಳನ್ನು ಮತಗಳನ್ನಾಗಿ ಬದಲಾಯಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿಲ್ಲ. ಬಿಹಾರದಲ್ಲಿ ಕಾಂಗ್ರೆಸ್ ನಿಸ್ತೇಜವಾಗಿ ಹಲವು ದಶಕಗಳೇ ಉರುಳಿವೆ. ಬೇರು ಮಟ್ಟದಿಂದ ಅದನ್ನು ಮತ್ತೆ ಕಟ್ಟುವ ಭಾರೀ ಸವಾಲು ಪಕ್ಷದ ಮುಂದಿದೆ. ಮತಗಳ್ಳತನ ಕುರಿತು ಪಕ್ಷದಲ್ಲಿ ರಾಹುಲ್ ಅವರದ್ದು ಒಂಟಿ ಧ್ವನಿಯಾಗಿ ಹೋಗಿರುವುದು ಕಟು ವಾಸ್ತವ.
ಬಿಹಾರ ಚುನಾವಣೆಯ ಫಲಿತಾಂಶ ಮೋದಿ – ಪರಿವಾರದ ಗೆಲುವಿನ ನಾಗಾಲೋಟಕ್ಕೆ ಹೊಸ ವೇಗ ನೀಡಿದೆ. ಈ ವೇಗ ಬಿಹಾರವನ್ನು ಇನ್ನಾದರೂ ಕಟ್ಟುವುದೇ ಅಥವಾ ಮತ್ತಷ್ಟು ಆಳಕ್ಕೆ ಕೆಡವುವುದೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ಈ ಪ್ರಶ್ನೆಗೆ ಉತ್ತರವನ್ನು ಈವರೆಗಿನ ಅನುಭವದ ಆಧಾರದ ಮೇಲೆ ಹೇಳುವುದೇ ಆದರೆ ಹೊಸ ಆಳಕ್ಕೆ ಕೆಡವುವುದು ನಿಶ್ಚಿತ. ನಿತೀಶ್ ಕುಮಾರ್ ಅವರನ್ನು ಮುಂದಿಟ್ಟುಕೊಂಡು ಬಿಹಾರಿಗಳ ಮೂಗಿಗೆ ತುಪ್ಪ ಸವರುತ್ತ ಬರಲಾಗಿದೆ. ಆದರೆ ನಿಜ ತುಪ್ಪ ಅವರ ಬಳಿ ಸುಳಿದೇ ಇಲ್ಲ. ಮುಂದೆಯೂ ಸುಳಿಯುವುದಿಲ್ಲ.
ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯದಿರುವ ಕಾರಣ ಇಪ್ಪತ್ತು ವರ್ಷಗಳ ನಿತೀಶ್ಕುಮಾರ್ ನೇತೃತ್ವದ ಎನ್ಡಿಎ ಆಡಳಿತ, ಆಡಳಿತ ಕುರಿತು ಮತದಾರರು ಬೇಸತ್ತಿದ್ದಾರೆಂದು ಬಗೆಯಲಾಗಿತ್ತು. ಆದರೆ ಈ ಬೇಸರ ನೀಗಿಸಲು ಹಲವಾರು ಬಗೆಯ ತಂತ್ರಗಳನ್ನು ಹೆಣೆದಿತ್ತು ಮೋಶಾ ಜೋಡಿ. ಈ ತಂತ್ರಗಳು ಚುನಾವಣೆ ನಡೆಯುವ ಮುನ್ನವೇ ಬಿಹಾರವನ್ನು ಎನ್.ಡಿ.ಎ. ಉಡಿಗೆ ಹಾಕಿತ್ತು. ಅರ್ಥಾತ್ ಸಮರಕ್ಕೆ ಮುನ್ನವೇ ಗೆದ್ದಿದ್ದವು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು. ಬಿಹಾರದಲ್ಲಿ ಚುನಾವಣೆಗೆ ಐದೇ ತಿಂಗಳಿರುವಾಗ ನಡೆಸಿದ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಈ ತಂತ್ರದ ಒಂದು ಮುಖ ಅಷ್ಟೇ. ಪರಿಷ್ಕರಣೆಯ ಹೆಸರಲ್ಲಿ 55-65 ಲಕ್ಷ ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದು ಪತ್ತೆಯಾಯಿತು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಿಹಾರದಲ್ಲಿ ಹದಿನೈದು ದಿನ ‘ವೋಟ್ ಚೋರಿ ಗದ್ದಿ ಛೋಡ್’ ಅಭಿಯಾನ ನಡೆಸಿದ್ದರು. ಒಂದೂವರೆ ಕೋಟಿ ಬಿಹಾರಿ ಮಹಿಳೆಯರ ಖಾತೆಗಳಿಗೆ ಬಿಹಾರದ ಎನ್ ಡಿ ಎ ಸರ್ಕಾರ ತಲಾ 10 ಸಾವಿರ ರುಪಾಯಿಗಳನ್ನು ಜಮಾ ಮಾಡಿತು. ಈ ಯೋಜನೆಯನ್ನು ‘ಮಹಿಳಾ ರೋಜ್ಗಾರ್’ ಯೋಜನೆ ಎಂದು ಘೋಷಿಸಿದರು ಪ್ರಧಾನಿ ಮೋದಿ. ಮತಗಳ್ಳತನ ಮಾಡಿದ ನಂತರದ ಮುಂದಿನ ಹೆಜ್ಜೆಯಾಗಿ ಮತ ಖರೀದಿ ನಡೆಯಿತು. ಅಸಮಾನರ ನಡುವೆ ನಡೆದ ಪೈಪೋಟಿಯಿದು. ಪ್ರತಿಪಕ್ಷಗಳ ಕೈಕಾಲುಗಳನ್ನು ಪ್ರತ್ಯಕ್ಷ- ಪರೋಕ್ಷವಾಗಿ ಬಗೆಬಗೆಯಾಗಿ ಕಟ್ಟಿ ಹಾಕಲಾಯಿತು.
ರಾಹುಲ್ ಗಾಂಧಿ ವೋಟ್ ಚೋರಿ ಅಭಿಯಾನಕ್ಕೆ ಸೇರಿದ್ದ ಭಾರೀ ಜನಸಭೆಗಳನ್ನು ಮತಗಳನ್ನಾಗಿ ಬದಲಾಯಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿಲ್ಲ. ಬಿಹಾರದಲ್ಲಿ ಕಾಂಗ್ರೆಸ್ ನಿಸ್ತೇಜವಾಗಿ ಹಲವು ದಶಕಗಳೇ ಉರುಳಿವೆ. ಬೇರು ಮಟ್ಟದಿಂದ ಅದನ್ನು ಮತ್ತೆ ಕಟ್ಟುವ ಭಾರೀ ಸವಾಲು ಪಕ್ಷದ ಮುಂದಿದೆ. ಮತಗಳ್ಳತನ ಕುರಿತು ಪಕ್ಷದಲ್ಲಿ ರಾಹುಲ್ ಅವರದ್ದು ಒಂಟಿ ಧ್ವನಿಯಾಗಿ ಹೋಗಿರುವುದು ಕಟು ವಾಸ್ತವ. ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದ ವೋಟ್ ಚೋರಿ ಬಗ್ಗೆ ದೆಹಲಿಯಲ್ಲಿ ದಾಖಲೆ ಬಿಡುಗಡೆ ಮಾಡಿ ದೇಶಾದ್ಯಂತ ಚರ್ಚೆ ನಡೆದಿತ್ತು. ಅಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಸಂಪುಟದ ಸದಸ್ಯರೊಬ್ಬರು ಮತಗಳ್ಳತನ ಮಾಮೂಲು ವಿಚಾರವೆಂಬಂತೆ ಹಗುರವಾಗಿ ಮಾತನಾಡಿ ಪಕ್ಷವನ್ನು ಮುಜುಗರಕ್ಕೆ ತಳ್ಳಿದ್ದರು.
ಚುನಾವಣೆಯ ಸಮಯದಲ್ಲಿ ಬಿಹಾರಕ್ಕೆ ವಿಶೇಷ ರೈಲುಗಳು ಧಾರಾಳವಾಗಿ ಓಡಾಡಿದವು. ಕೋವಿಡ್ ಸಂದರ್ಭದ ಲಾಕ್ ಡೌನ್ ಕಾರಣ ಸಾವಿರಾರು ಕಿ.ಮೀ. ನಡೆದು ಹಸಿವು ಸಾವಿನೊಂದಿಗೆ ಸೆಣಸಿದವರಲ್ಲಿ ಬಿಹಾರಿಗಳೇ ಬಹು ಸಂಖ್ಯೆಯಲ್ಲಿದ್ದರು. ಆಗ ಅವರಿಗೆ ರೈಲುಗಳು ಸಿಗಲಿಲ್ಲ. ಹೋಳಿ ದೀಪಾವಳಿ ಛಟ್ ಪೂಜೆಯ ಹಬ್ಬಹರಿದಿನಗಳಲ್ಲಿ ಟ್ರಕ್ಕುಗಳಿಗೆ ತುಂಬಿದ ದನಗಳು ಕುರಿಗಳಿಗಿಂತ ಕೀಳಾಗಿ ರೈಲುಗಳಲ್ಲಿ ಪ್ರಯಾಣ ಮಾಡಿದರು ಬಿಹಾರಿಗಳು. ನಿಲ್ಲುವುದಕ್ಕೂ ಅವಕಾಶವಿಲ್ಲದೆ ರೈಲುಗಾಡಿಗಳ ಪಾಯಿಖಾನೆಗಳಲ್ಲೂ ಕುಳಿತು ಪಯಣಿಸಿದರು. ಆದರೆ ವೋಟು ಹಾಕಿಸಿಕೊಳ್ಳಲು ಬಿಜೆಪಿ ವಿಶೇಷ ರೈಲು ವ್ಯವಸ್ಥೆಯನ್ನು ಮಾಡಿತು. ಹಬ್ಬದ ಹೆಸರಿನಲ್ಲಿ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡರೂ ಅದರಲ್ಲಿ ವಲಸಿಗ ಬಿಹಾರಿಗಳಿಗೆ ವೋಟು ಹಾಕಲೆಂದೇ ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗಿತ್ತು. ಅವರೆಲ್ಲ ಬಿಜೆಪಿಯ ಚಿಹ್ನೆಯಿರುವ ಕಮಲದ ಶಾಲುಗಳನ್ನು ಧರಿಸಿದ್ದರು. ಬಿಜೆಪಿ ಹೆಸರಿನ ಹಣೆಪಟ್ಟಿ ಬಿಗಿದುಕೊಂಡಿದ್ದರು. ಈ ಬಾರಿ ದಾಖಲೆಯ ಪ್ರಮಾಣದ ಮತದಾನವಾಗಲು ಇದೂ ಕಾರಣವಾಗಿದೆ. ಬಿಜೆಪಿಯ ಅಭ್ಯರ್ಥಿಗಳು ಪ್ರಚಾರಕ್ಕೆ ತೆರಳಿದಾಗ ಜನಾಕ್ರೋಶ ಎದುರಿಸಲಾಗದೆ ವಾಪಸಾಗುತ್ತಿದ್ದ ವಿಡಿಯೋಗಳು ಈ ಬಾರಿ ಬದಲಾವಣೆಯ ಇಂಗಿತಗಳನ್ನು ನೀಡಿದ್ದವು. ಆದರೆ ಹೊರಬಿದ್ದಿರುವ ಫಲಿತಾಂಶ ಸಾರಾಸಗಟು ಬೇರೆಯೇ ಆಗಿದೆ.
ಮೋಶಾ ನೇತೃತ್ವದಲ್ಲಿ ಬಿಜೆಪಿಯು ಚುನಾವಣೆಗಳನ್ನು ಗೆಲ್ಲುವ ದೈತ್ಯಯಂತ್ರವನ್ನೇ ರೂಪಿಸಿ ನಿಲ್ಲಿಸಿಕೊಂಡಿದೆ. ಚುನಾವಣಾ ಆಯೋಗ ಕೂಡ ಈ ದೈತ್ಯಯಂತ್ರದ ಭಾಗವೇ ಆಗಿ ಹೋಗಿದೆ.
ಹರಿಯಾಣದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತವಿರೋಧಿ ಅಲೆಯು ಬಿಜೆಪಿಯನ್ನು ಸೋಲಿಸುವುದು ನಿಶ್ಚಿತವೆಂಬ ವಾತಾವರಣ ಮೂಡಿ, ಮತಗಟ್ಟೆ ಸಮೀಕ್ಷೆಗಳು ಕೂಡ ಇದೇ ಅಂಶ ಸಾರಿದ್ದವು. ಆದರೆ ಹೊರಬಿದ್ದ ಫಲಿತಾಂಶ ಬಿಜೆಪಿಗೆ ಘನ ಗೆಲುವು ನೀಡಿತ್ತು. ವಿಶ್ಲೇಷಕರು ನಿರೀಕ್ಷಕರನ್ನು ಅಚ್ಚರಿಗೆ ದೂಡಿತ್ತು. ಈ ಅನಿರೀಕ್ಷಿತ ಅಚ್ಚರಿ ಅಥವಾ ಆಘಾತದ ಹಿಂದಿನ ಕಾರಣ ತಡವಾಗಿ ಹೊರಬಿದ್ದಿದೆ. ಚುನಾವಣಾ ಆಯೋಗ ವಹಿಸಿದ ಪಾತ್ರವನ್ನು ರಾಹುಲ್ ಗಾಂಧಿ ಬಯಲು ಮಾಡಿದಾಗ ಚಿತ್ರ ನಿಚ್ಚಳವಾಗಿದೆ.
ಈಗಲೂ ಬಿಜೆಪಿ ಬಿಹಾರದಲ್ಲಿ ನಡೆಸಿರುವ ತೆರೆಮರೆಯ ರಣತಂತ್ರದ ಖಚಿತ ವಿವರಗಳು ವರ್ಷಗಳು ಇಲ್ಲವೇ ತಿಂಗಳುಗಳ ನಂತರ ಹೊರಬಿದ್ದರೆ ಆಶ್ಚರ್ಯವಿಲ್ಲ.
ಬಿಹಾರದಲ್ಲಿ ತನ್ನದೇ ಮುಖ್ಯಮಂತ್ರಿಯನ್ನು ಹೊಂದುವ ಬಿಜೆಪಿಯ ಮನೋಗತ ಕಳೆದ ಸಲ ಈಡೇರಲಿಲ್ಲ. ಈ ಸಲವೂ ನಿತೀಶ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ಬಿಜೆಪಿ ಸಿದ್ಧವಿರಲಿಲ್ಲ. ಆದರೆ ಚುನಾವಣಾ ಪ್ರಚಾರದಲ್ಲಿ ದಿನಗಳು ಉರುಳಿದಂತೆ ಕಂಡು ಬಂದ ಬೇರುಮಟ್ಟದ ವಾಸ್ತವವನ್ನು ಅರಿತ ನಂತರ ನಿತೀಶ್ ಅವರೇ ಮುಖ್ಯಮಂತ್ರಿ ಆಗಲಿದ್ದಾರೆಂದು ಘೋಷಿಸುವುದು ಅನಿವಾರ್ಯವೇ ಆಯಿತು.
ವಯೋಸಹಜ ಅರಳುಮರಳಿಗೆ ತುತ್ತಾಗಿರುವ ನಿತೀಶ್ ಅವರನ್ನು ಬಿಜೆಪಿ ತಿಂಗಳುಗಳು ಇಲ್ಲವೇ ವರ್ಷಗಳ ನಂತರ ಮೂಲೆಗುಂಪು ಮಾಡಿ, ತನ್ನ ಮುಖ್ಯಮಂತ್ರಿಯನ್ನು ಪ್ರತಿಷ್ಠಾಪಿಸುವುದು ಗೋಡೆ ಮೇಲಿನ ಬರೆಹ. ನಿತೀಶ್ ಅವರ ಸಂಯುಕ್ತ ಜನತಾದಳ ಪಕ್ಷವನ್ನು ಒಡೆದು ಬಿಜೆಪಿಗೆ ಬಹುಮತವನ್ನು ರೂಢಿಸಿಕೊಂಡು ತನ್ನದೇ ಸರ್ಕಾರ ಸ್ಥಾಪಿಸಿದರೂ ಅಚ್ಚರಿ ಪಡಬೇಕಿಲ್ಲ.
ಒಡಿಶಾದಲ್ಲಿ ಬಿಜೆಡಿ ಪಕ್ಷದ ಸರ್ಕಾರ ಮತ್ತು ನಾಯಕ ನವೀನ್ ಪಟ್ನಾಯಕ್ ಅವರನ್ನು ಬಿಜೆಪಿ ಕಾಲಕ್ರಮೇಣ ನಿಧಾನಕ್ಕೆ ನುಂಗಿ ನೊಣೆದಿರುವ ಪರಿಯೇ ಈ ಮಾತಿಗೆ ಉದಾಹರಣೆ.
ಬಿಹಾರದಲ್ಲಿ ನಡೆದಿರುವ ಈ ಜನತಂತ್ರದ ಅಪಹರಣ ದೇಶದ ಜನತಂತ್ರದ ಆರೋಗ್ಯಕ್ಕೆ ಒಳ್ಳೆಯ ಸುದ್ದಿಯೇನೂ ಅಲ್ಲ. ತನ್ನ ಹುನ್ನಾರಗಳನ್ನು ಕಾರ್ಯರೂಪಕ್ಕೆ ಇಳಿಸಲು ಬಿಜೆಪಿ ಹೊಸ ಬಲ ಬೆಂಬಲಗಳನ್ನು ಗಳಿಸಿಕೊಂಡಿದೆ. ಜನಸಮೂಹಗಳನ್ನು ದ್ವೇಷದ ನಶೆಗೆ ತಳ್ಳಿ, ವೋಟುಗಳನ್ನು ಖರೀದಿಸಿ ಚುನಾವಣೆಗಳನ್ನು ಗೆಲ್ಲಲಾಗುತ್ತಿದೆ. ನಶೆಗೆ ನೂಕಲಾಗಿರುವ ಜನ ಸಮೂಹಗಳನ್ನು ಎಚ್ಚರಿಸಿ ಕಟು ವಾಸ್ತವವನ್ನು ತಿಳಿಯಹೇಳಬೇಕಿದೆ. ಅನ್ನ ಅರಿವೆ ಅಕ್ಷರ ನೆರಳು-ನೀರು, ಉದ್ಯೋಗಾವಕಾಶಗಳ ಸೃಷ್ಟಿಯೇ ದೇಶದ ಮುಂದಿರುವ ನಿಜ ಸವಾಲುಗಳು ಎಂಬ ಜಾಗೃತಿ ಮೂಡಿಸಬೇಕಿದೆ. ಇದೊಂದು ಬೃಹತ್ ಸವಾಲು. ಪ್ರತಿಪಕ್ಷಗಳು ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ. ಈ ದಿಸೆಯಲ್ಲಿ ಜಾಗೃತ ಜನಪರ ಮಾಧ್ಯಮಗಳು ಮತ್ತು ಸಿವಿಲ್ ಸೊಸೈಟಿಯದೇ ಗುರುತರ ಪಾತ್ರ.





