ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ ಕೊಡುವುದಾಗಿ ಇರಾನ್ ಹೇಳಿದೆ. ತನ್ನ ಸಂಕಷ್ಟದ ನಡುವೆಯೂ ಇರಾನ್ ಮೆರೆದ ದೊಡ್ಡತನದ ಎದುರು, ಪ್ರಧಾನಿ ಮೋದಿ ಅವರ ಸಮಯ ಸಾಧಕ ಮತ್ತು ಇಸ್ರೇಲ್ ಪರವಾದ ಸಣ್ಣತನ ಮಂಡಿಯೂರಿದೆ.
ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಇರಾನ್-ಅಮೆರಿಕ-ಇಸ್ರೇಲ್ ನಡುವಿನ ಯುದ್ಧವು ಜಾಗತಿಕ ಇಂಧನ ಪೂರೈಕೆಯ ಮೇಲೆ ಭಾರಿ ಒತ್ತಡ ಸೃಷ್ಟಿಸಿದೆ. ವಿಶ್ವದ ಒಟ್ಟು ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯಲ್ಲಿ ಸುಮಾರು 20%ರಷ್ಟು ಭಾಗವು ಸಾಗುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದ್ದು, ಜಾಗತಿಕ ಇಂಧನ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಯುದ್ಧವನ್ನು ಅಮೆರಿಕ ನಿಲ್ಲಿಸಲು ಮತ್ತು ಹಿಂದೆ ಸರಿಯಲು ‘ಜಾಗತಿಕ ಆರ್ಥಿಕ ಒತ್ತಡ’ ಅನಿವಾರ್ಯವೆಂದು ಇರಾನ್ ಹೇಳಿದೆ. ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿಯೂ, ಭಾರತದ ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ ಕೊಡುವುದಾಗಿ ಇರಾನ್ ಹೇಳಿದೆ. ತನ್ನ ಸಂಕಷ್ಟದ ನಡುವೆಯೂ ಇರಾನ್ ಮೆರೆದ ದೊಡ್ಡತನದ ಎದುರು, ಪ್ರಧಾನಿ ಮೋದಿ ಅವರ ಸಮಯ ಸಾಧಕ ಮತ್ತು ಇಸ್ರೇಲ್ ಪರವಾದ ಸಣ್ಣತನ ಮಂಡಿಯೂರಿದೆ.
ನೆರೆಯ ರಾಷ್ಟ್ರಗಳ ಮೇಲೆ ಇಸ್ರೇಲ್ನ ನಿರಂತರ ದಾಳಿ-ಆಕ್ರಮಣ, ಪ್ಯಾಲೆಸ್ತೀನ್ ಮೇಲಿನ ಇಸ್ರೇಲ್ ಕ್ರೌರ್ಯ, ಇರಾನ್ ಮತ್ತು ಇಸ್ರೇಲ್ ನಡುವಿನ ಶತ್ರುತ್ವ, ಅಮೆರಿಕದ ಸರ್ವಾಧಿಕಾರಿ ಹಪಾಹಪಿಕೆಯು ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆಯನ್ನು ಹೆಚ್ಚಿಸಿದೆ. ಆದರೂ, ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರವು ಇಸ್ರೇಲ್ ಪರವಾದ ಧೋರಣೆ ತಳೆದಿದೆ. ಮಧ್ಯಪ್ರಾಚ್ಯದಲ್ಲಿನ ಸಂಘರ್ಷವನ್ನು ಖಂಡಿಸುವಲ್ಲಿ ಅಥವಾ ದಾಳಿಗಳ ವಿರುದ್ಧ ನಿಲುವನ್ನು ತಳೆಯುವಲ್ಲಿ ಮೋದಿ ಹಿಂಜರಿಯುತ್ತಿದ್ದಾರೆ. ಅಡಗಿಕೊಂಡವರಂತೆ ವರ್ತಿಸುತ್ತಿದ್ದಾರೆ.
2023ರ ಅಕ್ಟೋಬರ್ ಗಾಜಾ ಮೇಲೆ ದಾಳಿ ಆರಂಭಿಸಿದ ನರಹಂತಕ ಇಸ್ರೇಲ್, ಈವರೆಗೆ ಸುಮಾರು 75 ಸಾವಿರ ಪ್ಯಾಲೆಸ್ತೀನಿಯರನ್ನು ಕೊಂದಿದೆ. ಅವರಲ್ಲಿ, ಅರ್ಧದಷ್ಟು ಮಂದಿ ಎಳೆಯ ಮಕ್ಕಳು, ಪತ್ರಕರ್ತರು, ಆರೋಗ್ಯ ಕಾರ್ಯಕರ್ತರು ಮತ್ತು ಮಾನವೀಯ ಸಹಾಯ ಕಾರ್ಯಕರ್ತರಾಗಿದ್ದಾರೆ. ಇಸ್ರೇಲ್ ಸೇನೆಯು ಆಸ್ಪತ್ರೆಗಳು, ಶಾಲೆಗಳು ಹಾಗೂ ನಿರಾಶ್ರಿತರ ಶಿಬಿರಗಳನ್ನು ಧ್ವಂಸಗೊಳಿಸಿದೆ. ಇಸ್ರೇಲ್ನ ಆಕ್ರಮಣವನ್ನು ‘ನರಹಂತಕ ಕೃತ್ಯ ಮತ್ತು ಮಾರಣಹೋಮ’ವೆಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳಾದ ಆಮ್ನೆಸ್ಟಿ ಇಂಟರ್ನ್ಯಾಷನಲ್ ಮತ್ತು ಹ್ಯೂಮನ್ ರೈಟ್ಸ್ ವಾಚ್ ಕರೆದಿವೆ. ಅಂತಾರಾಷ್ಟ್ರೀಯ ನ್ಯಾಯಾಲಯ ಮತ್ತು ವಿಶ್ವಸಂಸ್ಥೆ ‘ಮಾನವ ಹಕ್ಕುಗಳ ಉಲ್ಲಂಘನೆ’ ಎಂದು ಘೋಷಿಸಿವೆ. ಆದರೆ, ವಿಶ್ವಗುರು ಪ್ರಧಾನಿ ಮೋದಿ ಈವರೆಗೆ ತುಟಿಬಿಚ್ಚಿಲ್ಲ.
ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಇಸ್ರೇಲ್, ಇದೇ ಸಮಯದಲ್ಲಿ ವೆಸ್ಟ್ ಬ್ಯಾಂಕ್, ಲೆಬನಾನ್ ಹಾಗೂ ಇರಾನ್ ಜೊತೆಗೂ ಸಂಘರ್ಷಕ್ಕಿಳಿದು, ದಾಳಿ ನಡೆಸಿದೆ. ಅಮೆರಿಕ, ಇಸ್ರೇಲ್ಅನ್ನು ಮುಂದಿಟ್ಟುಕೊಂಡು ಮಧ್ಯಪ್ರಾಚ್ಯದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಲು ಹವಣಿಸುತ್ತಿದೆ.
2025ರಲ್ಲಿ ಇಸ್ರೇಲ್-ಇರಾನ್ ನಡುವೆ ಕದನ ವಿರಾಮಕ್ಕೆ ಕರೆಕೊಟ್ಟಿದ್ದ ಟ್ರಂಪ್, ಈಗ ಅದೇ ಇಸ್ರೇಲ್ ಜೊತೆ ಸೇರಿ ಇರಾನ್ ಮೇಲೆ ಯುದ್ಧ ಆರಂಭಿಸಿದ್ದಾರೆ. ಇರಾನ್ ಮೇಲೆ ‘ಮ್ಯಾಕ್ಸಿಮಮ್ ಪ್ರೆಷರ್’ (ಬಲವಂತದ ಒತ್ತಡ) ನೀತಿಯನ್ನು ಅನುಸರಿಸಿದ್ದಾರೆ. 2018ರಲ್ಲಿ ಟ್ರಂಪ್ ಇರಾನ್ ಜೊತೆಗಿನ ಅಣು ಒಪ್ಪಂದದಿಂದ ಹೊರಬಂದಿದ್ದರು. ಇರಾನ್ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿದ್ದರು. ಆದಾಗ್ಯೂ, ಮಾತುಕತೆಗಳು ಮುಂದುವರೆದಿದ್ದವು. ಈ ಚರ್ಚೆಗಳು ಅಂತಿಮಗೊಳ್ಳುತ್ತವೆ ಎಂಬ ಮುನ್ಸೂಚನೆ ಇದ್ದಾಗಲೇ ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ ಮಾಡಿವೆ. ಇರಾನ್ನ ಪರಮೋಚ್ಛ ನಾಯಕ ಅಲಿ ಖಮೇನಿ ಅವರನ್ನು ಕೊಂದಿವೆ. ಈಗಲೂ ಮೋದಿ ಮೌನ ತೊರೆದಿಲ್ಲ.
ಒಂದೆಡೆ, ಮಧ್ಯಪ್ರಾಚ್ಯದ ಮೇಲಿನ ಹಿಡಿತಕ್ಕಾಗಿ ಇಸ್ರೇಲ್ಅನ್ನು ಅಮೆರಿಕ ಬಳಸಿಕೊಳ್ಳುತ್ತಿದೆ. ಮತ್ತೊಂದೆಡೆ, ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ನಿರಂತರ ದಾಳಿಯ ಮೊರೆಹೋಗಿರುವ ಇಸ್ರೇಲ್ ಪ್ರಧಾನಿ ನೆತನ್ಯಾಹು, ತನ್ನ ಅಧಿಕಾರ ದಾಹಕ್ಕೆ ಟ್ರಂಪ್ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಎರಡು ರಾಷ್ಟ್ರಗಳ ನಾಯಕರ ಸ್ವಾರ್ಥ ಮತ್ತು ಕ್ರೌರ್ಯಕ್ಕೆ ಬಹುತೇಕ ಅರ್ಧ ಜಗತ್ತು ತತ್ತರಿಸಿದೆ. ಇರಾನ್ ಮೇಲಿನ ಯುದ್ಧದ ಆರಂಭದಲ್ಲಿ ಟ್ರಂಪ್ಗೆ ಸಹಕರಿಸಿದ ಕೊಲ್ಲಿ ಮತ್ತು ಯುರೋಪಿಯನ್ ರಾಷ್ಟ್ರಗಳು ಈಗ ಟ್ರಂಪ್ ವಿರುದ್ಧ ನಿಲುವು ತಳೆಯುತ್ತಿವೆ. ಯುದ್ಧವನ್ನು ಕೊನೆಗಾಣಿಸುವಂತೆ ಒತ್ತಾಯಿಸುತ್ತಿವೆ. ಆದರೆ, ಮೋದಿ ಮೌನವಾಗಿಯೇ ಇದ್ದಾರೆ.
ಮೋದಿ ಅವರದ್ದು ಕೇವಲ ಮೌನವಲ್ಲ. ಇದು, ದಾರ್ಷ್ಟ್ಯದಿಂದ ಕೂಡಿದ ಜಾಣ ಮೌನ. ಮೋದಿ ಭಾರತದ ರಾಜತಾಂತ್ರಿಕತೆಯನ್ನೇ ಬದಲಿಸಿದ್ದಾರೆ. ಹಳೆಯ ಮಿತ್ರ ಇರಾನ್ ಮತ್ತು ರಷ್ಯಾವನ್ನು ತೊರೆದು, ಇಸ್ರೇಲ್ ಮತ್ತು ಅಮೆರಿಕ ಜೊತೆಗೆ ದೋಸ್ತಿ ಬೆಳೆಸಿದ್ದಾರೆ. ಈ ಎರಡು ರಾಷ್ಟ್ರಗಳ ಕ್ರೌರ್ಯದೊಂದಿಗೆ ಕೈಜೋಡಿಸಿದ್ದಾರೆ.
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಆರಂಭವಾಗುವುದಕ್ಕೂ ಮೂರು ದಿನಗಳ ಮುಂಚೆ (ಫೆಬ್ರುವರಿ 25-26) ಮೋದಿ ಇಸ್ರೇಲ್ ಭೇಟಿ ನೀಡಿದ್ದರು. ನೆತನ್ಯಾಹುವನ್ನು ಆಲಿಂಗಿಸಿಕೊಂಡಿದ್ದರು. ಇಸ್ರೇಲ್ ಕ್ನೆಸೆಟ್ನಲ್ಲಿ ಮಾತನಾಡುವಾಗ, ‘ಇಸ್ರೇಲ್ ನನ್ನ ಫಾದರ್ಲ್ಯಾಂಡ್’ ಎಂದು ಕರೆದರು. ನೆತನ್ಯಾಹು ಮೋದಿಯನ್ನು ‘ಸಹೋದರ’ ಎಂದು ಕೊಂಡಾಡಿದರು. ಇದೇ ವೇಳೆ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ಮೋದಿ ಖಂಡಿಸಿದರು. ಆದರೆ ಇಸ್ರೇಲ್, ಪ್ಯಾಲೆಸ್ತೀನಿಯರ ಮೇಲೆ ನಡೆಸಿದ ಕ್ರೌರ್ಯಕ್ಕೆ ಮೌನ ತಾಳಿದರು.
ಮೋದಿಯವರ ಇಸ್ರೇಲ್ ಭೇಟಿ ಮುಗಿಯುತ್ತಿದ್ದಂತೆಯೇ ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ ನಡೆಸಿದವು. ಖಮೇನಿ ಅವರನ್ನು ಕೊಂದವು. ಆದರೆ, ಈ ದಾಳಿಯನ್ನು ಮೋದಿ ನೇರವಾಗಿ ಖಂಡಿಸಲಿಲ್ಲ; ಬದಲಿಗೆ ಮೌನಕ್ಕೆ ಜಾರಿದರು. ಸುಮಾರು ಆರು-ಏಳು ದಿನಗಳ ನಂತರವಷ್ಟೇ ಖಮೇನಿ ಹತ್ಯೆಯನ್ನು ಖಂಡಿಸಿ, ಸಂತಾಪ ಸೂಚಿಸಿದರು.
ಮೋದಿಯವರ ಮೌನವನ್ನು ಟೀಕಿಸಿರುವ ವಿಪಕ್ಷಗಳು ‘ಭಾರತದ ಮೌಲ್ಯಗಳಿಗೆ ದ್ರೋಹ’ವೆಂದು ಕರೆದಿವೆ. ಮೋದಿ ಇಸ್ರೇಲ್ ಪರ ಧೋರಣೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಖಂಡಿಸಿವೆ. ಮೋದಿ ಅವರು ಟ್ರಂಪ್ಗೆ ಹೆದರಿದ್ದಾರೆ ಮತ್ತು ಇಸ್ರೇಲ್ ಪರವಾಗಿ ನಿಂತಿದ್ದಾರೆ ಹಾಗೂ ಭಾರತದ ಐತಿಹಾಸಿಕ ನಿಷ್ಪಕ್ಷಪಾತ ನೀತಿಗೆ ವಿರುದ್ಧವಾಗಿ ನಡೆಯುತ್ತಿದ್ದಾರೆ ಎಂದು ಆರೋಪಿಸಿವೆ. ಇದೆಲ್ಲವೂ ಮೋದಿ ಅವರ ಸಣ್ಣತನ ಮತ್ತು ಹೇಡಿತನ ಎಂದು ಹಲವರು ಕರೆದಿದ್ದಾರೆ.
ಈ ಲೇಖನ ಓದಿದ್ದೀರಾ?: ಇಸ್ರೇಲ್-ಅಮೆರಿಕಕ್ಕೆ ಪ್ರತಿರೋಧವೊಡ್ಡಿ ಯುದ್ಧದಲ್ಲಿ ಇರಾನ್ ಮೇಲುಗೈ ಸಾಧಿಸುತ್ತಿದೆಯೇ?
ಭಾರತದ ವಿದೇಶಾಂಗ ನೀತಿ ಮತ್ತು ಪ್ರಧಾನಿ ಮೋದಿಯವರ ನಿಲುವು, ತಮ್ಮ ವಿರುದ್ಧವಿದೆ ಎಂಬುದನ್ನು ಇರಾನ್ ಗಮನಿಸಿದೆ. ಅಮೆರಿಕ-ಇಸ್ರೇಲ್ ಧೋರಣೆಯನ್ನು ಖಂಡಿಸಲಾಗದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, 5ನೇ ದೊಡ್ಡ ಆರ್ಥಿಕ ಶಕ್ತಿ, ಪರಮಾಣು ಶಕ್ತಿ ಮತ್ತು ಪ್ರಬಲ ಮಿಲಿಟರಿ ಶಕ್ತಿ ಹೊಂದಿರುವ ಭಾರತದ ದ್ವಂದ್ವನೀತಿಯನ್ನು ಇರಾನ್ ಅಣಕಿಸಿದೆ. ಆದಾಗ್ಯೂ, ಇರಾನ್ ಭಾರತದೊಂದಿಗಿನ ಐತಿಹಾಸಿಕ ಸಂಬಂಧಗಳನ್ನು ಗೌರವಿಸಿದೆ. ತನ್ನ ನಿಯಂತ್ರಣದಲ್ಲಿರುವ ಹಾರ್ಮುಜ್ ಜಲಸಂಧಿ ಮೂಲಕ ಭಾರತೀಯ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ.
ಇರಾನ್ ರಾಯಭಾರಿ ಮೊಹಮ್ಮದ್ ಫತಲಿ ಅವರು, ‘ಭಾರತ ನಮ್ಮ ಸ್ನೇಹಿತ’ ಎಂದು ಹೇಳಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳ ಮುಕ್ತ ಸಂಚಾರದ ಅವಕಾಶವನ್ನು ಘೋಷಿಸಿದ್ದಾರೆ. ಸಂಘರ್ಷದ ಸಮಯದಲ್ಲೂ ಭಾರತದ ಆರ್ಥಿಕ ಹಿತಾಸಕ್ತಿಗಳನ್ನು ಇರಾನ್ ಗೌರವಿಸಿದೆ. ಇದು ಇರಾನ್ನ ದೊಡ್ಡತನ. ಮಾತ್ರವಲ್ಲ, ಮೋದಿಯ ಇಸ್ರೇಲ್ ಪರ ಧೋರಣೆಯ ಹೊರತಾಗಿಯೂ, ಇರಾನ್ ಭಾರತದೊಂದಿಗೆ ಸಹಕಾರವನ್ನು ಮುಂದುವರಿಸುವ ಇಚ್ಛೆ ಹೊಂದಿರುವುದನ್ನು ಸೂಚಿಸುತ್ತದೆ.
ಮೋದಿ ಅವರ ಪಕ್ಷಪಾತಿ, ಅಂಜುಬುರಕತನ, ಸಣ್ಣತನವನ್ನು ಇರಾನ್ ತನ್ನ ದೊಡ್ಡತನದಿಂದ ಮಣಿಸಿದೆ. ಈಗಲಾದರೂ, ಮೋದಿ ಅವರು ಟ್ರಂಪ್ ಎದುರು ಕೈಕಟ್ಟಿ ನಿಲ್ಲುವುದನ್ನು ಬಿಟ್ಟು, ಹಂತಕ ಇಸ್ರೇಲ್ನ ಆಲಿಂಗನದಿಂದ ಬಿಡಿಸಿಕೊಂಡು ಭಾರತದ ನಿಷ್ಪಕ್ಷಪಾತ ನೀತಿಯೊಂದಿಗೆ ನಿಲ್ಲಬೇಕು. ಉತ್ತಮ ವಿದೇಶಾಂಗನೀತಿಗೆ ಒತ್ತುಕೊಡಬೇಕು. ಭಾರತವು ಕ್ರೌರ್ಯವನ್ನು ಸಹಿಸುವುದಿಲ್ಲ, ಶಾಂತಿಯಿಂದ ಹಿಂದೆ ಸರಿಯುವುದಿಲ್ಲ ಎಂಬ ನಿಲುವನ್ನು ಒತ್ತಿ ಹೇಳಬೇಕು. ಆದರೆ, ಪ್ರಧಾನಿ ಮೋದಿಯವರು, ಟ್ರಂಪ್ ಎದುರು ತಮ್ಮ 56 ಇಂಚಿನ ಎದೆ ಉಬ್ಬಿಸಿ ನಿಲ್ಲುವ ಧೈರ್ಯ ತೋರುವರೇ?




