ಒಂದು ಕಡೆ ಅದಾನಿ, ಮತ್ತೊಂದು ಕಡೆ ಅಂಬಾನಿ. ಇವರ ಜಾಗತಿಕ ವ್ಯವಹಾರ ಅರಿತಿರುವ ವ್ಯಾಪಾರಸ್ಥ ಟ್ರಂಪ್, ಸುಂಕದ ನೆಪದಲ್ಲಿ ಮೋದಿಯ ಕೈಗಳನ್ನು ತಿರುಚುತ್ತಿದ್ದಾರೆ. ಕುಬೇರರ ಮರ್ಜಿಗೊಳಗಾಗಿರುವ ಮೋದಿ, ಮೌನಕ್ಕೆ ಜಾರಿದ್ದಾರೆ. ಇದು ಮೋದಿಯ ಆಡಳಿತ ಶೈಲಿ. ಇದನ್ನು ಪ್ರಶ್ನಿಸುವ ರಾಹುಲ್ ಗಾಂಧಿ ದೇಶದ್ರೋಹಿ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಮೇಲೆ ಯುದ್ಧ ಸಾರಿದ್ದಾರೆ. ದಿನಕ್ಕೊಂದು ಸುಂಕ, ಗಂಟೆಗೊಂದು ಮೂದಲಿಕೆ, ನಿಮಿಷಕ್ಕೊಂದು ಎಚ್ಚರಿಕೆ ನೀಡುತ್ತಿದ್ದಾರೆ.
ಜುಲೈ 21ರಂದು ಶೇ.26ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದರು. ನಂತರ, ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ದೇಶ ಎಂದು ಮೂದಲಿಸಿದರು. ಅಷ್ಟಕ್ಕೇ ಸುಮ್ಮನಾಗದ ಟ್ರಂಪ್, ಆಗಸ್ಟ್ 1ರಂದು ಭಾರತವು ರಷ್ಯಾದಿಂದ ಬೃಹತ್ ಪ್ರಮಾಣದ ತೈಲವನ್ನು ಖರೀದಿಸಿ, ತದನಂತರ ಅದನ್ನು ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ ಎಂದು ದೂರಿದರು. ಆಗಸ್ಟ್ 6ರಂದು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸದಿದ್ದರೆ, ಮುಂದಿನ 24 ಗಂಟೆಯಲ್ಲಿ ಭಾರತದ ಮೇಲೆ ಹೇರಿರುವ ತೆರಿಗೆಯನ್ನು ಇನ್ನಷ್ಟು ಏರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಆ ಎಚ್ಚರಿಕೆ ನೀಡಿದ ಸ್ವಲ್ಪ ಸಮಯದಲ್ಲಿಯೇ ಮತ್ತೆ ಶೇ. 25ರಷ್ಟು ಸುಂಕ ಹೆಚ್ಚಿಸಿ ಅಟ್ಟಹಾಸ ಮೆರೆದರು.
ಅಷ್ಟಕ್ಕೂ ರಷ್ಯಾದಿಂದ ಭಾರತ ಕಚ್ಚಾ ತೈಲ ಖರೀದಿಸಿದರೆ, ಅಮೆರಿಕಕ್ಕೆ ಏನು ತೊಂದರೆ? ಖರೀದಿಸಬೇಡಿ ಎನ್ನಲು ಟ್ರಂಪ್ ಯಾರು? ಭಾರತವೇನು ಅಮೆರಿಕದ ಹಿಡಿತದಲ್ಲಿರುವ ಗುಲಾಮ ರಾಷ್ಟ್ರವೇ? ಅನಗತ್ಯ ಹಸ್ತಕ್ಷೇಪಕ್ಕೆ ಮೋದಿಯವರು ತಿರುಗೇಟು ನೀಡಬೇಕಲ್ಲವೇ?
ಮೋದಿಯವರು ಅಮೆರಿಕದ ಟ್ರಂಪ್ಗೆ ತಿರುಗೇಟನ್ನೂ ಕೊಡುತ್ತಿಲ್ಲ. ಭಾರತೀಯರಿಗೆ ಸಮಜಾಯಿಷಿಯನ್ನೂ ನೀಡುತ್ತಿಲ್ಲ. ಹಾಗೆಯೇ, ಮೋದಿಯವರು ದೇಶಕ್ಕಾಗಿ ಸಮರ್ಪಿಸಿಕೊಂಡವರು; ಮನೆ-ಮಠ-ಮಡದಿ ತೊರೆದವರು; ಶುದ್ಧಹಸ್ತರು; 56 ಇಂಚಿನ ಎದೆಯುಳ್ಳ ಧೈರ್ಯಸ್ಥರು ಎಂಬ ಗುಣಗಾನವೂ ನಿಲ್ಲುತ್ತಿಲ್ಲ.
ಮೋದಿಯವರ ಈ ಮೌನವನ್ನೇ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಶ್ನಿಸುತ್ತಿರುವುದು. ‘ಭಾರತೀಯರು ದಯವಿಟ್ಟು ಅರ್ಥ ಮಾಡಿಕೊಳ್ಳಿ, ಡೊನಾಲ್ಡ್ ಟ್ರಂಪ್ ಪದೇ ಪದೆ ಬೆದರಿಕೆ ಹಾಕುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಸುಮ್ಮನಿರುವುದಕ್ಕೆ ಕಾರಣ, ಅಮೆರಿಕದಲ್ಲಿ ಅದಾನಿ ವಿರುದ್ಧ ನಡೆಯುತ್ತಿರುವ ತನಿಖೆ’ ಎಂದು ಮೌನದ ಹಿಂದಿನ ಮರ್ಮವನ್ನು ಬಿಡಿಸಿಟ್ಟಿದ್ದಾರೆ.
ಹಿಂದೆ ಹಿಂಡೆನ್ ಬರ್ಗ್ ಗೌತಮ್ ಅದಾನಿಯ 250 ಬಿಲಿಯನ್ ಡಾಲರ್ ಲಂಚ ಪ್ರಕರಣವನ್ನು ಬಯಲಿಗೆಳೆದಿತ್ತು. ಆಗ ಮೋದಿ-ಟ್ರಂಪ್ ಸ್ನೇಹ ಚೆನ್ನಾಗಿತ್ತು. ಮೋದಿ ಆಪ್ತ ಅದಾನಿಯ ಹಗರಣ ಮುಚ್ಚಿಹೋಗಿತ್ತು. ಆದರೆ, ಈಗ ಮೋದಿ ಮೇಲೆ ಟ್ರಂಪ್ ಮುನಿಸಿಕೊಂಡಿದ್ದಾರೆಯೇ? ಗೊತ್ತಿಲ್ಲ. ಟ್ಯಾರಿಫ್ ವಾರ್ ಶುರುಮಾಡಿದ್ದಾರೆ.
ಇದೇ ಸಮಯದಲ್ಲಿ ಅಮೆರಿಕನ್ ಏಜೆನ್ಸಿಗಳು, ಅದಾನಿ ಇರಾನ್ನಿಂದ ತೈಲ ಖರೀದಿಸಿ ಮುಂದ್ರಾಗೆ ಸಾಗಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ಮಾಡುತ್ತಿವೆ. ವಾಲ್ ಸ್ಟ್ರೀಟ್ ಜರ್ನಲ್ ಸೇರಿ ಹಲವು ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತಿವೆ, ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಅದಾನಿ ಬಂಧನ ಬಹುತೇಕ ಖಚಿತವಾಗುತ್ತಿದೆ. ಇದರ ಸುಳಿವರಿತ ಅದಾನಿ, ನುಣುಚಿಕೊಳ್ಳಲು ತಮ್ಮ ಎರಡು ಕಂಪನಿಗಳ ಕಾರ್ಯನಿರ್ವಾಹಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈಗ ಮೋದಿಯವರು ಅದಾನಿ ಪರ ವಕಾಲತ್ತು ವಹಿಸಲು ಮುಂದಾದರೆ, ರಷ್ಯಾ ತೈಲ ಮಾರಾಟದ ಗುಟ್ಟು ರಟ್ಟಾಗುತ್ತದೆ. ಅದಕ್ಕಾಗಿ ಮೋದಿ ಮೌನವಾಗಿದ್ದಾರೆ.
ಪ್ರಧಾನಿ ಮೋದಿಯವರು ಪ್ರತಿಸಲ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾಗ, ಜೊತೆಯಲ್ಲಿ ಅದಾನಿ ಕರೆದುಕೊಂಡು ಹೋಗುತ್ತಿದ್ದರು. ಈ ಬಗ್ಗೆ ರಾಹುಲ್ ಗಾಂಧಿ, ʼಅದಾನಿಗೂ ಪ್ರಧಾನಿಗೂ ಏನು ಸಂಬಂಧʼ ಎಂದು ಪ್ರಶ್ನೆ ಮಾಡುತ್ತಿದ್ದರು. ಮೋದಿ ಮೌನಕ್ಕೆ ಜಾರುತ್ತಿದ್ದರು. ಈಗ ರಾಹುಲ್ ಗಾಂಧಿ, ‘ಮೋದಿ, ಎಎ(ಅದಾನಿ-ಅಂಬಾನಿ) ಹಾಗೂ ರಷ್ಯಾದ ತೈಲ ಒಪ್ಪಂದದ ನಡುವೆ ಇರುವ ಹಣಕಾಸು ಸಂಬಂಧವನ್ನು ಟ್ರಂಪ್ ಬಹಿರಂಗ ಪಡಿಸುವ ಬೆದರಿಕೆ ಹಾಕಿದ್ದಾರೆ. ಅದು ಮೋದಿಯವರ ಕೈಗಳನ್ನು ಕಟ್ಟಿ ಹಾಕಿದೆ, ಬಾಯಿ ಬಂದ್ ಮಾಡಿದೆ’ ಎಂದು ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಮೋದಿಯವರ ಸ್ನೇಹಿತ ಟ್ರಂಪ್ರಿಂದ ಎಲ್ಲವೂ ಬಯಲಾಗುತ್ತಿದೆ.
ಈ ಲೇಖನ ಓದಿದ್ದೀರಾ?: ಬಲಾಢ್ಯರೊಂದಿಗೆ ಜೊತೆಯಾಗುವುದು ಜನದ್ರೋಹ
ಭಾರತ, ಈ ಮೊದಲು ಕಚ್ಚಾ ತೈಲವನ್ನು ಮಧ್ಯ ಪ್ರಾಚ್ಯ ದೇಶಗಳಿಂದ ಗರಿಷ್ಠ ಮಟ್ಟದಲ್ಲಿ ಖರೀದಿಸುತ್ತಿತ್ತು. ರಷ್ಯಾದಿಂದ ಶೇ. 0.2ರಷ್ಟನ್ನು ಮಾತ್ರ ಖರೀದಿಸುತ್ತಿತ್ತು. ಫೆಬ್ರವರಿ 2022ರಲ್ಲಿ ಉಕ್ರೇನ್-ರಷ್ಯಾ ಯುದ್ಧ ಆರಂಭವಾದ ನಂತರ, ರಷ್ಯಾ ತನ್ನ ಆರ್ಥಿಕತೆ ಸರಿದೂಗಿಸಿಕೊಳ್ಳಲು ಕಚ್ಚಾ ತೈಲ ಬೆಲೆಯನ್ನು ಕಡಿಮೆ ಮಾಡಿತು. ತೈಲ ಬೆಲೆ ಕಡಿಮೆಯಾಗುತ್ತಿದ್ದಂತೆ, ರಷ್ಯಾದಿಂದ ಗರಿಷ್ಠ ಪ್ರಮಾಣದಲ್ಲಿ, ಅಂದರೆ ಶೇ. 40ರಷ್ಟು ಕಚ್ಚಾ ತೈಲವನ್ನು ಖರೀದಿಸಲು ಶುರು ಮಾಡಿತು. ಜುಲೈ 31ರಂದು, ಒಂದೇ ದಿನದಲ್ಲಿ ರಷ್ಯಾದಿಂದ 17.8 ಲಕ್ಷ ಬ್ಯಾರಲ್ಗಳನ್ನು ಭಾರತ ಖರೀದಿಸಿದೆ.
ಕುತೂಹಲಕರ ಸಂಗತಿ ಎಂದರೆ, ರಷ್ಯಾದಿಂದ ಅತಿ ಕಡಿಮೆ ಬೆಲೆಗೆ ಕಚ್ಚಾ ತೈಲ ಸಿಗುತ್ತಿದ್ದರೂ, ದೇಶದಲ್ಲಿ ಪೆಟ್ರೋಲ್, ಡೀಸೆಲ್, ಅನಿಲ ದರ ಕಡಿಮೆಯಾಗಿಲ್ಲ. ಅದರ ಲಾಭ ದೇಶಕ್ಕೂ ಇಲ್ಲ, ಪ್ರಜೆಗಳಿಗೂ ಇಲ್ಲ. ಏಕೆಂದರೆ, ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದು ಭಾರತ ಸರ್ಕಾರವಾದರೂ, ಅತಿ ಹೆಚ್ಚು ಪ್ರಮಾಣದ ತೈಲ ಹೋಗುವುದು ಅಂಬಾನಿಯ ರಿಲಯನ್ಸ್ ರಿಫೈನರಿಗೆ. ಜಾಮ್ನಗರದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(RIL) ರಿಫೈನರಿಯಿಂದ ರಿಫೈನ್ಡ್ ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡೀಸೆಲ್ ಮತ್ತು ಇತರ ಇಂಧನಗಳನ್ನು ವಿಶ್ವದ ಹಲವು ದೇಶಗಳಿಗೆ ರಫ್ತಾಗುತ್ತದೆ. 2022-23ರ ಒಟ್ಟು ವಾರ್ಷಿಕ ವರದಿಯ ಪ್ರಕಾರ, 36.1 ಮಿಲಿಯನ್ ಮೆಟ್ರಿಕ್ ಟನ್ ರಿಫೈನ್ಡ್ ಉತ್ಪನ್ನಗಳನ್ನು ರಿಲಯನ್ಸ್ ರಫ್ತು ಮಾಡಿದೆ. ಸಾವಿರಾರು ಕೋಟಿ ಲಾಭ ಮಾಡಿಕೊಂಡಿದೆ. ಅಂಬಾನಿಯ ಶ್ರೀಮಂತಿಕೆಯನ್ನು ದುಪ್ಪಟು ಮಾಡಿದೆ.
ಒಂದು ಕಡೆ ಅದಾನಿ, ಮತ್ತೊಂದು ಕಡೆ ಅಂಬಾನಿ. ಇವರ ಜಾಗತಿಕ ವ್ಯವಹಾರ ಅರಿತಿರುವ ವ್ಯಾಪಾರಸ್ಥ ಟ್ರಂಪ್, ಸುಂಕದ ನೆಪದಲ್ಲಿ ಮೋದಿಯ ಕೈಗಳನ್ನು ತಿರುಚುತ್ತಿದ್ದಾರೆ. ಅದಾನಿ-ಅಂಬಾನಿ ಎಂಬ ಕುಬೇರರ ಮರ್ಜಿಗೊಳಗಾಗಿರುವ ಮೋದಿ, ಮೌನಕ್ಕೆ ಜಾರಿದ್ದಾರೆ. ಇದು ಮೋದಿಯ ಆಡಳಿತ ಶೈಲಿ. ಇದನ್ನು ಪ್ರಶ್ನಿಸುವ ರಾಹುಲ್ ಗಾಂಧಿ ದೇಶದ್ರೋಹಿ!




