ಮೂವತ್ತು ನಲವತ್ತು ವರ್ಷಗಳಿಂದ ರಾಜಕಾರಣದಲ್ಲಿ ಉನ್ನತ ಹುದ್ದೆ ಅಲಂಕರಿಸಿದವರು ಈಗ ಎದುರಾಗಿರುವ ಚನ್ನಪಟ್ಟಣದ ಉಪಚುನಾವಣೆ ಗೆಲ್ಲುವುದಕ್ಕಾಗಿ ರಾಮನಗರ ಜಿಲ್ಲೆ ಹೆಸರು ಬದಲಾವಣೆಯ ನೆಪದಲ್ಲಿ ‘ಪೇಪರ್ ಟೈಗರ್’ಗಳಾಗಿದ್ದಾರೆ. ಅಸಲಿಗೆ ಅವರಿಗೆ ಬೇಕಾಗಿರುವುದು ಅವರ ಅಸ್ತಿತ್ವ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಮೇಲಿನ ಹಿಡಿತವಷ್ಟೇ ಹೊರತು, ಜನರ ಬದುಕಲ್ಲ.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಾವಣೆ ಮಾಡಲು ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ 14 ಜನರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಸ್ತಾವ ಸಲ್ಲಿಸಿದೆ.
ಸರಕಾರ ಮತ್ತು ಪಕ್ಷದಲ್ಲಿ ಮಹತ್ವದ ಸ್ಥಾನವನ್ನು ನಿಭಾಯಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರ ಪ್ರಸ್ತಾವಕ್ಕೆ ಸಿಎಂ ಸಿದ್ದರಾಮಯ್ಯನವರು ಸಕಾರಾತ್ಮಕವಾಗಿಯೇ ಸ್ಪಂದಿಸಿ, ‘ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದಿದ್ದಾರೆ.
ಕಾಂಗ್ರೆಸ್ ನಾಯಕರು ಮಂಡಿಸಿದ ಈ ಪ್ರಸ್ತಾವವನ್ನು ವಿರೋಧಿಸಿರುವ ಬಿಜೆಪಿ-ಜೆಡಿಎಸ್ ನಾಯಕರು ರಾಮನಗರ ಹೆಸರು ಬದಲಾವಣೆ ಮಾಡದಂತೆ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ, ಕೇಂದ್ರದ ಭಾರಿ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿಯವರು, ‘ಕಾಂಗ್ರೆಸ್ನವರು ಈಗ ಜಿಲ್ಲೆಯ ಹೆಸರು ಬದಲಾವಣೆ ಮಾಡಬಹುದು, ಮತ್ತೆ ನಾನು ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇನೆ. ಆಗ, ಇವರು ಇಟ್ಟಿರುವ ಹೆಸರನ್ನು ಕಿತ್ತೆಸೆಯುತ್ತೇನೆ’ ಎಂದು ಸಿಟ್ಟಾಗಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಅವರು ಅಧಿಕಾರಕ್ಕೆ ಬಂದ್ರೆ ತಾನೇ ಕಿತ್ತಾಕುವುದು. ಅವರಿಗೆ ಜನ ಆಶೀರ್ವಾದ ಮಾಡಲ್ಲ. ಅವರು ಸಿಎಂ ಆಗಲ್ಲ. ಹೆಸರು ಬದಲಾವಣೆ ಮಾಡುವುದು ಕೇವಲ ಭ್ರಮೆ’ ಎಂದು ಲೇವಡಿ ಮಾಡಿದ್ದಾರೆ.
ಪ್ರಶ್ನೆ ಏನೆಂದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಹದಿನಾಲ್ಕು ಜನರ ನಿಯೋಗದ ಬೇಡಿಕೆಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದರೆ ರಾಮನಗರ ಜಿಲ್ಲೆ ಹೆಸರು ಬದಲಾಗುತ್ತದಾ? ಒಂದು ಜಿಲ್ಲೆಯ ಹೆಸರು ಬದಲಾವಣೆ ಇಷ್ಟೊಂದು ಸುಲಭದ ಕೆಲಸವಾ? ಅಥವಾ ಬಿಜೆಪಿ-ಜೆಡಿಎಸ್ ನಾಯಕರು ವಿರೋಧಿಸಿದರೆ, ಕೇಂದ್ರ ಸಚಿವ ಕುಮಾರಸ್ವಾಮಿಯವರು ಸಿಟ್ಟಾದರೆ ಹೆಸರು ಬದಲಾವಣೆ ಸ್ಥಗಿತಗೊಳ್ಳುತ್ತದಾ? ಇವರ ಸಿಟ್ಟಿಗೆ ಇಷ್ಟೊಂದು ಶಕ್ತಿ ಇದೆಯಾ ಎನ್ನುವುದು.
ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ- ಇಬ್ಬರ ಅಟಾಟೋಪದ ನಡುವೆ ರಾಮನಗರ ಜಿಲ್ಲೆಯ ಜನರ ಅಭಿಪ್ರಾಯವೇನು ಎಂದು ಯಾರಾದರೂ ಕೇಳಿದ್ದಾರಾ? ಬೆರಳೆಣಿಕೆಯಷ್ಟು ರಾಜಕೀಯ ನಾಯಕರ ತೀರ್ಮಾನವೇ ಅಂತಿಮವಾ? ಜನರನ್ನು ನಿರ್ಲಕ್ಷಿಸಿ ತೀರ್ಮಾನಿಸುವುದು ರಾಜಕಾರಣಿಗಳ ಅತಿರೇಕದ ನಡೆಯಂತೆ ಕಾಣುತ್ತಿಲ್ಲವಾ? ಅಷ್ಟಕ್ಕೂ ಈ ಹೆಸರು ಬದಲಾವಣೆಯಿಂದ ರಾಮನಗರ ಜಿಲ್ಲೆಯ ಚಹರೆ ಬದಲಾಗುತ್ತದಾ? ಅಭಿವೃದ್ಧಿಪಥದತ್ತ ಸಾಗಿ ಜನರ ಜೀವನ ಮಟ್ಟ ಸುಧಾರಿಸುತ್ತದಾ?
ಈ ಪ್ರಶ್ನೆಗಳಿಗೆ ಆ ರಾಜಕಾರಣಿಗಳೇ, ‘ರಾಮನಗರವನ್ನು ಬ್ರಾಂಡ್ ಬೆಂಗಳೂರಿನ ಸರಹದ್ದಿನೊಳಗೆ ಎಳೆದುಕೊಂಡರೆ ಈ ಭಾಗದ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಶುಕ್ರದೆಸೆ ಏರಲಿದೆ. ಭೂಮಿಯ ಮೌಲ್ಯ ಏರಲಿದೆ. ಅದಕ್ಕಾಗಿ ಡಿಸಿಎಂ ಡಿ.ಕೆ. ಶಿವಕುಮಾರ್, ತಮ್ಮ ಅಧಿಕಾರಾವಧಿಯಲ್ಲಿ ಹೆಸರು ಬದಲಾವಣೆಗೆ ಮುಂದಾಗಿದ್ದಾರೆ’ ಎಂದು ಬದಲಾವಣೆಯ ಹಿಂದಿನ ಹುನ್ನಾರವನ್ನು ಬಿಚ್ಚಿಡುತ್ತಾರೆ.
ಇದಕ್ಕೆ ಪೂರಕವಾಗಿ ಎಂಟು ತಿಂಗಳ ಹಿಂದೆ ಕನಕಪುರದ ಜನರನ್ನು ಉದ್ದೇಶಿಸಿ ಡಿ.ಕೆ. ಶಿವಕುಮಾರ್, ‘ನೀವು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರಿನವರು. ಮುಂದಿನ ದಿನಗಳಲ್ಲಿ ನಿಮ್ಮ ಜಮೀನುಗಳಿಗೆ ಉತ್ತಮ ಬೆಲೆ ಬರಲಿದೆ, ಈಗ ಯಾವುದೇ ಕಾರಣಕ್ಕೂ ಮಾರಾಟ ಮಾಡಬೇಡಿ. ನಿಮ್ಮ ಆಸ್ತಿ ಮೌಲ್ಯವನ್ನು ಹತ್ತು ಪಟ್ಟು ಹೆಚ್ಚಿಸುವ ಶಕ್ತಿ ನನಗಿದೆ’ ಎಂದು ಹೇಳಿದ್ದನ್ನು ಉಲ್ಲೇಖಿಸುತ್ತಾರೆ.
ಸಾಮಾನ್ಯ ಕೃಷಿ ಕುಟುಂಬದಿಂದ ಬಂದ ದೊಡ್ಡಾಲಳ್ಳಿಯ ಡಿ.ಕೆ. ಶಿವಕುಮಾರ್, ರಾಜಕಾರಣಕ್ಕಿಳಿದು ಹಲವು ಬಾರಿ ಶಾಸಕರಾಗಿ, ಸಚಿವರಾಗಿ, ಪಕ್ಷದ ಅಧ್ಯಕ್ಷರಾಗಿ, ಈಗ ಡಿಸಿಎಂ ಹುದ್ದೆ ಅಲಂಕರಿಸಿದ್ದಾರೆ. ಸಹೋದರ ಸುರೇಶ್ ಎರಡು ಬಾರಿ ಸಂಸದರಾಗಿದ್ದರು, ಸೋದರಮಾವನ ಮಗ ರವಿ ಶಾಸಕರಾಗಿದ್ದಾರೆ. ಸರಿ ಸುಮಾರು ನಲವತ್ತು ವರ್ಷಗಳ ಕಾಲ, ಅಧಿಕಾರದ ಬಲದಿಂದ ಬೆಂಗಳೂರು ಗ್ರಾಮಾಂತರವನ್ನು ಹಿಡಿತದಲ್ಲಿಟ್ಟುಕೊಂಡು ಆಧುನಿಕ ಸಾಮ್ರಾಟರಂತೆ ಮೆರೆಯುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹಣ ಅಕ್ರಮ ವರ್ಗಾವಣೆ ಕರಾಳ ಕಾಯಿದೆ; ಮೇಲ್ಮನವಿಗಳ ವಿಲೇವಾರಿ ಮಾಡಲಿ ಸುಪ್ರೀಮ್ ಕೋರ್ಟ್
ಇದೇ ರೀತಿ, ಹೊಳೆನರಸೀಪುರ ಬಿಟ್ಟ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ರಾಮನಗರಕ್ಕೆ ಬಂದು ನೆಲೆ ನಿಂತರು. ಅಲ್ಲಿಂದ ಗೆದ್ದು ಮುಖ್ಯಮಂತ್ರಿಯಾದರು. ಪ್ರಧಾನಮಂತ್ರಿಯೂ ಆದರು. ಗೌಡರ ಮಗ ಎಚ್.ಡಿ.ಕುಮಾರಸ್ವಾಮಿ ಗೆದ್ದು ಶಾಸಕರಾದರು, ಎರಡು ಸಲ ಮುಖ್ಯಮಂತ್ರಿಯಾದರು. ಸೊಸೆ ಅನಿತಾ ಕುಮಾರಸ್ವಾಮಿ ಗೆದ್ದು ಶಾಸಕಿಯಾದರು. ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಕೂಡ ರಾಜಕಾರಣಕ್ಕಿಳಿದರು. ಬೀಗರಾದ ತಮ್ಮಣ್ಣನವರು ಪಕ್ಕದ ಮದ್ದೂರಿನಿಂದ ಗೆಲ್ಲುತ್ತಲೇ ಬಂದರು.
ಕಳೆದ ಮೂವತ್ತು ವರ್ಷಗಳಲ್ಲಿ ರಾಮನಗರವೆಂಬ ತಾಲೂಕು ಕೇಂದ್ರ ಮೂರು ಮುಖ್ಯಮಂತ್ರಿಗಳನ್ನು ಹಾಗೂ ಪ್ರಧಾನಮಂತ್ರಿಗಳನ್ನು ಕಂಡಿದೆ. ಇಂತಹ ಅತ್ಯುನ್ನತ ಹುದ್ದೆಗೇರಿಸಿದ ರಾಮನಗರದ ಜನಕ್ಕೆ ಈ ರಾಜಕೀಯ ನಾಯಕರು ಮಾಡಿದ್ದಾದರೂ ಏನು? ಬೆಟ್ಟ ಗುಡ್ಡಗಳ ಪ್ರಕೃತಿ ಸಂಪತ್ತಿನಿಂದ ಸಮೃದ್ಧವಾಗಿದ್ದ ರಾಮನಗರ ಜಿಲ್ಲೆ, ಇಂದು ಎಂತಹ ಸ್ಥಿತಿಯಲ್ಲಿದೆ ಎಂಬುದನ್ನು ಅಲ್ಲಿನ ಜನ ಮುಂದೆ ಬಂದು ಮಾತನಾಡಬೇಕಿದೆ.
ಮೂವತ್ತು ನಲವತ್ತು ವರ್ಷಗಳಿಂದ ರಾಜಕಾರಣದಲ್ಲಿ ಉನ್ನತ ಹುದ್ದೆ ಅಲಂಕರಿಸಿದವರು ಈಗ ಎದುರಾಗಿರುವ ಚನ್ನಪಟ್ಟಣದ ಉಪಚುನಾವಣೆ ಗೆಲ್ಲುವುದಕ್ಕಾಗಿ ಜಿಲ್ಲೆ ಹೆಸರು ಬದಲಾವಣೆಯ ನೆಪದಲ್ಲಿ ‘ಪೇಪರ್ ಟೈಗರ್’ಗಳಾಗಿದ್ದಾರೆ. ಅಸಲಿಗೆ ಅವರಿಗೆ ಬೇಕಾಗಿರುವುದು ಅವರ ಅಸ್ತಿತ್ವ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಮೇಲಿನ ಹಿಡಿತವಷ್ಟೇ ಹೊರತು, ಜನರ ಬದುಕಲ್ಲ. ಇದನ್ನು ರಾಮನಗರ ಜಿಲ್ಲೆಯ ಜನ ಅರ್ಥ ಮಾಡಿಕೊಳ್ಳಬೇಕಿದೆ.





