ಅಭಿವೃದ್ಧಿ, ಸ್ವಚ್ಛ ಆಡಳಿತದ ಹೆಸರಲ್ಲಿ ಮತ ಕೇಳುವ ಧೈರ್ಯ ಇಲ್ಲದಿರುವಾಗ, ಹತ್ತು ವರ್ಷದ ಆಡಳಿತದಲ್ಲಿ ಬಡವರ ಬದುಕು ಹೈರಾಣವಾಗಿರುವ ಕಾರಣ ಶ್ರೀಮಂತರಿಗಷ್ಟೇ ಸಹಾಯ ಮಾಡಿದ ಮೋದಿಯವರಿಗೆ ಆಡಳಿತ ವಿರೋಧಿ ಅಲೆ ಇರುವುದು ಸ್ಪಷ್ಟವಾಗಿ ಗೊತ್ತಾಗಿದೆ.
18ನೇ ಲೋಕಸಭಾ ಚುನಾವಣೆಯ ಮೊದಲೆರಡು ಹಂತದ ಮತದಾನ ಮುಗಿಯುತ್ತಿದ್ದಂತೆ ಪ್ರಧಾನಿ ಮೋದಿಯವರು ಮಾನಸಿಕವಾಗಿ ಬಹಳ ವಿಕ್ಷಿಪ್ತರಾದಂತೆ ಕಾಣುತ್ತಿದ್ದಾರೆ. ಅವರ ಭಾಷಣಗಳಲ್ಲಿ ಕಾಂಗ್ರೆಸ್ ಟೀಕೆಯ ಜೊತೆಗೆ ತಮ್ಮ ಸ್ಥಾನದ ಘನತೆ ಮರೆತು ಮುಸ್ಲಿಮರ ಬಗ್ಗೆ ನೇರಾನೇರಾಪ್ಪಟ ಹಸೀ ಸುಳ್ಳುಗಳ ಹೇಳಲು ಶುರು ಮಾಡಿದ್ದಾರೆ. ಮೂರನೇ ಹಂತದ ಮತದಾನ ಮುಗಿಯುತ್ತಿದ್ದಂತೆ ಅದು ವಿಕೋಪಕ್ಕೆ ಹೋಗಿದೆ. ಕೊನೆ ನಾಲ್ಕು ಸುತ್ತು ಮುಗಿಯುವುದರೊಳಗೆ ಇನ್ನೂ ಏನೇನು ಘನ ಸುಳ್ಳುಗಳು ಹೊರಬೀಳಲಿವೆಯೋ?
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗುತ್ತಿದ್ದಂತೆ ಮುಸ್ಲಿಂ ಲೀಗ್ ಪ್ರಣಾಳಿಕೆಯಂತಿದೆ ಎಂದು ಮೊದಲ ಪ್ರತಿಕ್ರಿಯೆ ಕೊಟ್ಟಾಗಲೇ ಮೋದಿಯವರು ಸೋಲಿನ ಭೀತಿಗೆ ಒಳಗಾಗಿದ್ದಾರೆ ಎಂದು ಪ್ರತಿಪಕ್ಷಗಳ ನಾಯಕರು ಟೀಕಿಸಿದ್ದರು. ನಂತರ ಅವರು ಮಾಡಿದ ಎಲ್ಲ ಚುನಾವಣಾ ಪ್ರಚಾರ ಭಾಷಣದಲ್ಲೂ ಮುಸ್ಲಿಮರ ವಿಷಯ ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಸಂಗ್ರಹಿಸಿ ಹೆಚ್ಚು ಮಕ್ಕಳಿರುವ ಮುಸಲ್ಮಾನರಿಗೆ ಹಂಚುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದೆ ಎಂದು ಅಪ್ಪಟ ಸುಳ್ಳು ಹೇಳಿದ್ದರು. ನಿಮ್ಮ ಮಾಂಗಲ್ಯವನ್ನೂ ಕಿತ್ತು ಮುಸ್ಲಿಮರಿಗೆ ಕೊಡಲಿದ್ದಾರೆ, ಒಬಿಸಿ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಡಲಿದ್ದಾರೆ ಎಂದಿದ್ದೂ ಆಯಿತು. ನಾಲ್ಕನೇ ಸುತ್ತಿನ ಪ್ರಚಾರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮಮಂದಿರಕ್ಕೆ ಬಾಬ್ರಿ ಬೀಗ ಹಾಕಲಿದ್ದಾರೆ ಎಂದು ಮತ್ತೆ ದ್ವೇಷಭಾಷಣ ಮಾಡಿದ್ದಾರೆ.
ಇನ್ನೂ ಏನಾದರೂ ಇಂತಹದ್ದೇ ಆರೋಪ ಬರುತ್ತದೆ ಎಂದು ನಿರೀಕ್ಷಿಸಿದ್ದಾಗಲೇ ಮುಸಲ್ಮಾನರ ಜನಸಂಖ್ಯೆ ಹೆಚ್ಚಿ ಹಿಂದೂಗಳಿಗೆ ಅಪಾಯ ಖಚಿತ ಎಂದರು ಮೋದಿ. ಬೇಲಿಗೆ ಓತಿಕಾಟ ಸಾಕ್ಷಿ ಎಂಬಂತೆ ಗುರುವಾರ ಮೋದಿಯವರ ಆರ್ಥಿಕ ಸಲಹಾ ಮಂಡಳಿಯ ವರದಿ ಬಿಡುಗಡೆ ಮಾಡಿ ಮುಸ್ಲಿಂ ಜನಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ಎಂಬ ಗುಮ್ಮವನ್ನು ಬಿಟ್ಟು ಹುಸಿಚರ್ಚೆ ಹುಟ್ಟು ಹಾಕಿದೆ. ಪ್ರಧಾನಿಯವರ ಸಲಹಾಮಂಡಳಿಯ ಸುಳ್ಳು ವರದಿಯನ್ನು ಹಿರಿಯ ಪತ್ರಕರ್ತರಾದಿಯಾಗಿ ಎಲ್ಲರೂ ಟೀಕಿಸಿದ್ದಾರೆ.
1951ರಲ್ಲಿ ಹಿಂದೂ ಜನಸಂಖ್ಯೆ 30.36ಕೋಟಿ ಇತ್ತು. 2015ರಲ್ಲಿ ಅದು 99.53 ತಲುಪಿದೆ ಅಂದ್ರೆ 69.17ಹೆಚ್ಚಾಗಿದೆ. ಅದೇ ಮುಸ್ಲಿಂ ಜನಸಂಖ್ಯೆ 3.54 ಕೋಟಿಯಿಂದ 17.97ಕೋಟಿಗೆ ತಲುಪಿದೆ ಎಂದರೆ ಕೇವಲ ಶೇ 14.42 ಹೆಚ್ಚಳವಾಗಿದೆ. ಸರಿ ಸುಮಾರು ನೂರು ಕೋಟಿ ಇರುವ ಹಿಂದೂಗಳು 20ಕೋಟಿಯಷ್ಟಿರುವ ಮುಸಲ್ಮಾನರಿಗೆ ಹೆದರುವ ಅಗತ್ಯ ಇದೆಯೇ?
2011-15ರ ನಡುವೆ ಹಿಂದೂ ಜನಸಂಖ್ಯೆ 3% ಹೆಚ್ಚಳವಾಗಿದೆ. ಮುಸ್ಲಿಂ ಜನಸಂಖ್ಯೆ 1 % ಹೆಚ್ಚಳವಾಗಿದೆ. ಆದರೆ, ಚುನಾವಣೆ ನಡೆಯುತ್ತಿರುವ ಮಧ್ಯದಲ್ಲಿ ಉದ್ದೇಶಪೂರ್ವಕವಾಗಿ ಈ ರೀತಿಯ ಅಪಪ್ರಚಾರ ಮಾಡಲಾಗುತ್ತಿದೆ.
ಆರ್ಥಿಕ ಸಲಹಾ ಮಂಡಳಿಯ ಅಂಕಿಅಂಶದ ಪ್ರಕಾರವೇ 1950-2015ರ ನಡುವೆ ಹಿಂದೂಗಳ ಜನಸಂಖ್ಯೆ 7.8 ಇಳಿಕೆಯಾಗಿದೆ. ಮುಸ್ಲಿಮರ ಜನಸಂಖ್ಯೆ 43.2% ಹೆಚ್ಚಳವಾಗಿದೆ. ಸಿಖ್ಖರ ಸಂಖ್ಯೆ 49.2 ಹೆಚ್ಚಳವಾಗಿದೆ. 2011-15ರ ಮಧ್ಯೆ ಹಿಂದು ಸಂಖ್ಯೆ 1.74% ಇಳಿಕೆಯಾದರೆ ಮುಸ್ಲಿಂ ಜನಸಂಖ್ಯೆ 0.14% ಇಳಿಕೆಯಾಗಿದೆ.
ಸದಾ ಮುಸ್ಲಿಂ ದ್ವೇಷ ಬಿತ್ತುವುದು ಆರೆಸ್ಸೆಸ್ ಬಿಜೆಪಿಯ ಮೂಲಭೂತ ಕಾರ್ಯಸೂಚಿ. ಅದನ್ನೇ ಹತಾಶ ಪ್ರಧಾನಿ ಮೋದಿ ಅವರು ಚುನಾವಣೆಯ ಈ ಸಮಯದಲ್ಲಿ ಬಳಸಿದ್ದಾರೆ. ಅಭಿವೃದ್ಧಿ, ಭ್ರಷ್ಟಾಚಾರ ನಿರ್ಮೂಲನೆಯ ಹೆಸರಲ್ಲಿ ಮತ ಕೇಳುವ ಧೈರ್ಯ ಇಲ್ಲದಿರುವಾಗ, ಹತ್ತು ವರ್ಷದ ಆಡಳಿತದಲ್ಲಿ ಬಡವರ ಬದುಕು ಹೈರಾಣವಾಗಿ ಶ್ರೀಮಂತರಿಗಷ್ಟೇ ಸಹಾಯ ಮಾಡಿದ ಮೋದಿಯವರಿಗೆ ಆಡಳಿತ ವಿರೋಧಿ ಅಲೆ ಇರುವುದು ಸ್ಪಷ್ಟವಾಗಿ ಗೊತ್ತಾಗಿದೆ. ಈ ಬಾರಿ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿ ಗಟ್ಟಿಯಾಗಿ, ಮೋದಿ ದುರಾಡಳಿತ, ಭ್ರಷ್ಟಾಚಾರ, ಐಟಿ/ಇಡಿ ಸೇರಿದಂತೆ ಹಲವು ಸರ್ಕಾರಿ ಯಂತ್ರಾಂಗಗಳ ದುರುಪಯೋಗವನ್ನು ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ ಬೆಲೆಯೇರಿಕೆಗೆ ಬಿಜೆಪಿಗರಲ್ಲಿ ಉತ್ತರವಿಲ್ಲ. ಹೀಗಾಗಿ ಮೋದಿಯಿಂದ ಪುಂಖಾನುಪುಂಖವಾಗಿ ಮುಸ್ಲಿಂ ದ್ವೇಷದ ಮಾತುಗಳು ಬರಲು ಶುರುವಾಗಿದೆ.
ಮುಸ್ಲಿಮರಿಗೆ ಒಬಿಸಿ ಮೀಸಲಾತಿ ಕಿತ್ತು ಕೊಡುತ್ತಾರೆ, ದೇಶದ ಸಂಪತ್ತು ಹಂಚುತ್ತಾರೆ, ಕಾಶ್ಮೀರದಲ್ಲಿ ಮತ್ತೆ 370 ಜಾರಿ ಮಾಡ್ತಾರೆ, ತ್ರಿವಳಿ ತಲಾಖ್ ಮತ್ತೆ ತರುತ್ತಾರೆ. ಇದನ್ನೆಲ್ಲ ತಡೆಯಲು ನನಗೆ 400 ಸೀಟು ಕೊಡಿ ಎಂದು ಭಾಷಣ ಮಾಡುತ್ತಿದ್ದಾರೆ.
ಸದಾ ಪಾಕಿಸ್ತಾನ, ಮುಸ್ಲಿಮರ ಕುರಿತು ಜನಮನದಲ್ಲಿ ಅಪನಂಬಿಕೆ ಮೂಡಿಸುವ ಹೇಳಿಕೆ ನೀಡುವ ಮೋದಿ ಮುಸ್ಲಿಂ ರಾಷ್ಟ್ರಗಳಿಗೆ ಹೋಗಿ ಅಲ್ಲಿನ ನಾಯಕರನ್ನು ಬಿಗಿದಪ್ಪಿ ಮುದ್ದಾಡಿ ಬಿರಿಯಾನಿ ತಿಂದು ಬರುತ್ತಾರೆ. ಇಲ್ಲಿ ಮುಸ್ಲಿಮರು ಸದಾ ಅಭದ್ರತೆಯಿಂದ ಬದುಕುವಂತೆ ಮಾಡುತ್ತಿದ್ದಾರೆ. ಈ ಚುನಾವಣೆ ಮೋದಿಯ ಸುಳ್ಳು, ಕಪಟತನವನ್ನು ಸೋಲಿಸುವ ಚುನಾವಣೆಯಾಗಲಿದೆ ಎಂಬುದು ಬಹುಜನರ ಆಶಾವಾದ. ಅದು ನಿಜವಾಗಲಿ, ಸಂವಿಧಾನ ಉಳಿಯಲಿ. ಜನತಂತ್ರ ಬದುಕಿ ಬಾಳಲಿ.





