ಮಾಧ್ಯಮಗಳ ಬೆಂಬಲದಿಂದ ಕಮಲದ ಕೆಸರು ಕಾಣದಂತಾಗಿದೆ. ಆರ್ಎಸ್ಎಸ್ನ ಬಲದಿಂದ ಬಿಜೆಪಿ ಬೆಳೆಯುತ್ತಿದೆ. ಇವೆರಡರ ಬೆಂಬಲವಿಲ್ಲದ ಬಿಜೆಪಿಯನ್ನು ಊಹಿಸಿಕೊಳ್ಳುವುದೂ ಕಷ್ಟವಿದೆ.
ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆಯವರು, ‘ಆರ್ಎಸ್ಎಸ್ ಇಲ್ಲದಿದ್ದರೆ ಬಿಜೆಪಿಯು ಜೆಡಿಎಸ್ಗಿಂತಲೂ ಕಡೆಯಾಗುತ್ತಿತ್ತು, ಬೆಲೆ ಕಳೆದುಕೊಳ್ಳುತ್ತಿತ್ತು’ ಎಂದು ಹೇಳಿದರು.
ಸಚಿವ ಪ್ರಿಯಾಂಕ ಖರ್ಗೆಯವರ ಮಾತಿನಲ್ಲಿ ಸತ್ಯವಿದೆ. ಆದರೆ ಅದನ್ನು ಜೆಡಿಎಸ್ನೊಂದಿಗೆ ಹೋಲಿಕೆ ಮಾಡಿದ್ದು ಸರಿ ಇಲ್ಲ ಎನಿಸುತ್ತದೆ. ಏಕೆಂದರೆ, 90ರ ದಶಕದಲ್ಲಿ ರಾಜ್ಯದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಜನತಾದಳ, ಇಂದು ಜೆಡಿಎಸ್ ಆಗಿ ತನ್ನ ಅಸ್ತಿತ್ವ ಕಳೆದುಕೊಂಡಿರಬಹುದು, ಕಣ್ಮರೆಯಾಗಿಲ್ಲ. ಇದೇ ಮಾತುಗಳನ್ನು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ಕುರಿತು ಹೇಳಬಹುದು. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ 99 ಸ್ಥಾನಗಳತ್ತಲೂ ನೋಡಬಹುದು.
ಭಾರತದ ರಾಜಕೀಯ ಇತಿಹಾಸದಲ್ಲಿ ಪಕ್ಷಗಳು ಕಳೆಗುಂದುವುದು, ಸ್ಥಾನಗಳು ಏರುಪೇರಾಗುವುದು ಹೊಸದೇನೂ ಅಲ್ಲ. ಭಾರತೀಯ ಜನತಾ ಪಕ್ಷ ಕೂಡ 1991ರ ಸಾರ್ವತ್ರಿಕ ಚುನಾವಣೆಯಲ್ಲಿ 120 ಸ್ಥಾನಗಳನ್ನಷ್ಟೇ ಗೆದ್ದಿತ್ತು. ಇಂದು ಬಹುದೊಡ್ಡ ರಾಜಕೀಯ ಪಕ್ಷವಾಗಿದೆ. ಅತಿ ಹೆಚ್ಚು ದೇಣಿಗೆ- 7,113 ಕೋಟಿ ಸಂಗ್ರಹಿಸಿ ಸಂಪದ್ಭರಿತ ಪಕ್ಷವೆನಿಸಿಕೊಂಡಿದೆ. ಸತತ ಮೂರನೇ ಬಾರಿಗೆ ಗೆದ್ದು ಪ್ರಬಲ ಪಕ್ಷವಾಗಿ ಹೊರಹೊಮ್ಮಿದೆ.
ಬಿಜೆಪಿ ಈ ಸ್ಥಿತಿಗೆ ಬರಲು, ಆರ್ಎಸ್ಎಸ್ ಬೆಂಬಲವೇ ಮುಖ್ಯ ಕಾರಣವಾಗಿದೆ. ಅಸಲಿಗೆ, ಆರ್ಎಸ್ಎಸ್ ತಾನು ರಾಜಕೀಯದಿಂದ ಆಚೆಗಿರುವ ಸಂಘಟನೆ ಎಂದು ಹೇಳಿಕೊಳ್ಳುತ್ತದೆಯಾದರೂ, ಆರ್ಎಸ್ಎಸ್ನ ರಾಜಕೀಯ ಅಂಗವೇ ಬಿಜೆಪಿ ಎನ್ನುವುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. ಅಲ್ಲದೆ, ಬಿಜೆಪಿಗೆ ಸೈದ್ಧಾಂತಿಕ ತಳಹದಿಯನ್ನು ಹಾಕಿಕೊಟ್ಟಿದ್ದು ಹಾಗೂ ಸಂಘಟನಾ ಶಕ್ತಿಯನ್ನು ಒದಗಿಸುವುದು ಆರ್ಎಸ್ಎಸ್. ಹೀಗಿರುವಾಗ ಪಕ್ಷವೇ ಬೇರೆ ಸಂಘವೇ ಬೇರೆ ಎಂದರೆ, ಪ್ರಿಯಾಂಕ ಖರ್ಗೆ ಹೇಳಿದಂತೆ, ಬಿಜೆಪಿ ಬೆಲೆ ಕಳೆದುಕೊಳ್ಳುತ್ತದೆ.
ಇದಕ್ಕೆ ಇತ್ತೀಚಿನ ಉದಾಹರಣೆಯಾಗಿ ಮಹಾರಾಷ್ಟ್ರ ರಾಜಕಾರಣವನ್ನು ಗಮನಿಸಬಹುದಾಗಿದೆ. ಏಪ್ರಿಲ್ 2024ರಲ್ಲಿ, ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನಾಯಕರು ಮತ್ತು ಸಂಘದ ಮುಖ್ಯಸ್ಥರ ನಡುವೆ ಮುನಿಸು ತಲೆದೋರಿತ್ತು. ಅದನ್ನು ಪುಷ್ಟೀಕರಿಸುವಂತೆ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ‘ಬಿಜೆಪಿಗೆ ಇನ್ನು ಆರ್ಎಸ್ಎಸ್ ಕೈ ಹಿಡಿದು ನಡೆಸುವ ಅಗತ್ಯವಿಲ್ಲ’ ಎಂದು ಹೇಳಿದ್ದು- ಆರ್ಎಸ್ಎಸ್ ನಾಯಕರಿಗೆ ಇರುಸು ಮುರುಸುಂಟುಮಾಡಿತ್ತು. ಆ ಮುನಿಸು ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ, ಅದರಲ್ಲೂ ಮಹಾರಾಷ್ಟ್ರದಲ್ಲಿ ಬಿಜೆಪಿ ಕೇವಲ 9 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಎದ್ದು ಕಂಡಿತ್ತು. ಮೋದಿಯ ಚಾರ್ ಸೌ ಪಾರ್ ಘೋಷಣೆ ಗೇಲಿಗೊಳಗಾಗಿತ್ತು; 240 ಸ್ಥಾನಗಳಿಗೆ ಸೀಮಿತಗೊಂಡು ಬಿಜೆಪಿ ಬುಡಕ್ಕೆ ಬಿಸಿನೀರು ಬಿಟ್ಟಿತ್ತು.
ಹಾಗೆಯೇ ಮಹಾರಾಷ್ಟ್ರ ರಾಜ್ಯ ಬಿಜೆಪಿ ಹಿಡಿತದಿಂದ ಕಳಚಿಕೊಳ್ಳುವುದು ಖಚಿತವಾಗಿತ್ತು. ಬಿಜೆಪಿಯ ದೆಹಲಿ ನಾಯಕರು ಕೂಡ ವಿಶ್ವಾಸ ಕಳೆದುಕೊಂಡಿದ್ದರು. ಆದರೆ, ನಾಗಪುರದ ಆರ್ಎಸ್ಎಸ್ ಕೇಂದ್ರ ಕಚೇರಿ ಕಣ್ಣುಮುಚ್ಚಿ ಕೂರಲಿಲ್ಲ. ಲೋಕಸಭಾ ಚುನಾವಣೆ ನಡೆದು ಕೇವಲ 7 ತಿಂಗಳ ಅಂತರದಲ್ಲಿ, ನವೆಂಬರ್ 2024ರಲ್ಲಿ, ಎದುರಾದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 132 ಸ್ಥಾನಗಳನ್ನು ಗೆಲ್ಲುವಂತೆ ನೋಡಿಕೊಂಡಿತ್ತು. ಬಿಜೆಪಿ ಮತ್ತೆ ಅಧಿಕಾರಕ್ಕೇರಿತ್ತು. ಇದು ಹೇಗೆ ಸಾಧ್ಯ ಎಂದು ಇಡೀ ದೇಶವೇ ಮಹಾರಾಷ್ಟ್ರದತ್ತ ನೋಡಿತ್ತು. ಬಿಜೆಪಿ ಗೆಲುವಿನ ಹಿಂದೆ ಆರ್ಎಸ್ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರ ಆದೇಶವಿತ್ತು.
ದೇಶದಲ್ಲಿ ಬಿಜೆಪಿ ಬೆಳೆಯಲು, ಭದ್ರವಾಗಿ ಬೇರೂರಲು ದೇಶದಾದ್ಯಂತ ಅನಧಿಕೃತವಾಗಿ 2,500 ಅಂಗಸಂಸ್ಥೆಗಳನ್ನು ಹೊಂದಿರುವ ಮನುವಾದಿ ಆರ್ಎಸ್ಎಸ್ ಪಾತ್ರ ಎಷ್ಟು ಮುಖ್ಯವೋ; ಮನುವಾದಿ ಮನಸ್ಥಿತಿಯ ಸುದ್ದಿ ಮಾಧ್ಯಮಗಳ ಪಾತ್ರವೂ ಅಷ್ಟೇ ಮುಖ್ಯ. ದೇವರು, ಧರ್ಮ, ಹಿಂದುತ್ವ, ರಾಷ್ಟ್ರೀಯತೆಯ ಸನ್ನಿಗೆ ಅಥವಾ ಅಮೇಧ್ಯದ ಆಸೆಗೆ ಬಲಿಯಾದ ಮಾಧ್ಯಮಗಳು ಕಳೆದ ಹನ್ನೊಂದು ವರ್ಷಗಳಲ್ಲಿ ನಿರ್ವಹಿಸಿದ ರೀತಿಯನ್ನು ಅವಲೋಕಿಸಿದರೆ- ಬಿಜೆಪಿ ಬದುಕಿರುವ ಸುಳಿವು ಸಿಗುತ್ತದೆ. 2014ರಿಂದ 2025ರವರೆಗೆ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ, ಸುಮಾರು 6 ಸಾವಿರ ಕೋಟಿ ರೂ.ಗಳನ್ನು ಮುದ್ರಣ, ಟೆಲಿವಿಷನ್ ಮತ್ತು ಡಿಜಿಟಲ್ ಮಾಧ್ಯಮಗಳ ಜಾಹೀರಾತುಗಳಿಗೆ ಧಾರಾಳವಾಗಿ ದಾನ ಮಾಡಿರುವುದು, ಅದನ್ನು ಸಾಬೀತುಪಡಿಸುತ್ತದೆ. ಇದಲ್ಲದೆ, ಪಕ್ಷದ ವತಿಯಿಂದ, ಕೇವಲ ಒಂದೇ ಒಂದು 2024ರ ಚುನಾವಣೆಗಾಗಿ 1,737 ಕೋಟಿ ರೂ.ಗಳು ಜಾಹೀರಾತಿನ ಮೂಲಕ ಮಾಧ್ಯಮಗಳಿಗೆ ಹರಿದುಬಂದಿದೆ. ಬಿಜೆಪಿ ಮತ್ತು ಮಾಧ್ಯಮಗಳ ಅನೈತಿಕ ಮಿಲನದ ಫಲವಾಗಿ, ಬೂಟು ನೆಕ್ಕುವ ಪತ್ರಕರ್ತರು ಮತ್ತು ಗೋದಿ ಮೀಡಿಯಾ ಎಂಬ ಹೊಸ ವ್ಯಾಖ್ಯಾನವೇ ಚಾಲ್ತಿಗೆ ಬಂದಿದೆ.
ಇಂದು ದೇಶದಲ್ಲಿ ಬಿಜೆಪಿ ಬೆಂಬಲದಿಂದ ಅನೇಕ ಮಾಧ್ಯಮ ಸಂಸ್ಥೆಗಳ ಮಾಲೀಕರು, ಮಾಧ್ಯಮವಲ್ಲದ ಹಲವು ಕ್ಷೇತ್ರಗಳಲ್ಲಿ ವ್ಯಾಪಾರ-ವ್ಯವಹಾರವನ್ನು ಹೊಂದಿದ್ದಾರೆ. ಸರ್ಕಾರದ ನೀತಿ-ನಿರ್ಣಯಗಳ ಮೇಲೆ ಅವರು ಅವಲಂಬಿತರಾಗಿದ್ದಾರೆ. ಈ ಅವಲಂಬನೆ ಅವರ ಮಾಲೀಕತ್ವದ ಸುದ್ದಿ ಸಂಸ್ಥೆಗಳ ಸಂಪಾದಕೀಯ ನಿಲುವುಗಳ ಮೇಲೆ ಪರಿಣಾಮ ಬೀರಿ ಪತ್ರಿಕೋದ್ಯಮದ ಪಾವಿತ್ರ್ಯತೆ ಮತ್ತು ಸ್ವತಂತ್ರತೆಯನ್ನು ಸಮಾಧಿ ಮಾಡುತ್ತಿದೆ. ಕಾರ್ಪೊರೇಟ್ ಮತ್ತು ರಾಜಕೀಯ ಕ್ಷೇತ್ರಗಳ ಕೂಡಾವಳಿಯ ಫಲವಾಗಿ; ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಸುಳ್ಳುಗಳು ಮರೆಮಾಚಲ್ಪಟ್ಟು ಜನರಿಗೆ ಸತ್ಯ ತಿಳಿಯದಾಗಿದೆ.
ಕಾರ್ಪೊರೇಟ್ ಮತ್ತು ರಾಜಕೀಯ ನಾಯಕರ ಮರ್ಜಿಯಲ್ಲಿ ಮಾಧ್ಯಮ ಇರುವುದರಿಂದ ಸಾರ್ವಜನಿಕ ಸಂವಾದ ಸತ್ತಿದೆ. ಭಿನ್ನಮತದ ಧ್ವನಿ ದಮನಗೊಂಡಿದೆ. ಸ್ಥಾಪಿತ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ಕಥನಗಳನ್ನು ಕಟ್ಟುತ್ತಿರುವುದರಿಂದ, ಪ್ರಶ್ನೆ ಮತ್ತು ವಿಮರ್ಶೆ ಅಂಚಿನತ್ತ ತಳ್ಳಲ್ಪಟ್ಟಿದೆ. ಇದು ಪತ್ರಿಕೋದ್ಯಮದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ. ಪ್ರಜಾಸತ್ತಾತ್ಮಕ ಹೊಣೆಗಾರಿಕೆ ಕಣ್ಮರೆಯಾಗಿದೆ.
ರಾಜಕಾರಣಿಗಳ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಮಾಲೀಕರ ಸಂಯೋಜನೆಯ ಉತ್ತಮ ಉದಾಹರಣೆಯಾಗಿ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಹಿಡಿತದಲ್ಲಿ ಇಂದು 50ಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳಿವೆ. ಮತ್ತೊಬ್ಬ ಕಾರ್ಪೊರೇಟ್ ಕುಳ ಗೌತಮ್ ಅದಾನಿ ಕೈಯಲ್ಲಿ ಪ್ರತಿಷ್ಠಿತ ಎನ್ಡಿಟಿವಿ ಇದೆ. ಇವರಿಬ್ಬರೂ ಪ್ರಧಾನಿ ಮೋದಿಯವರ ಆಪ್ತರಾಗಿದ್ದಾರೆ.
ಮಾಧ್ಯಮಗಳ ಬೆಂಬಲದಿಂದ ಕಮಲದ ಕೆಸರು ಕಾಣದಂತಾಗಿದೆ. ಆರ್ಎಸ್ಎಸ್ನ ಬಲದಿಂದ ಬಿಜೆಪಿ ಬೆಳೆಯುತ್ತಿದೆ. ಇವೆರಡರ ಬೆಂಬಲವಿಲ್ಲದ ಬಿಜೆಪಿಯನ್ನು ಊಹಿಸಿಕೊಳ್ಳುವುದೂ ಕಷ್ಟವಿದೆ. ಹಾಗಾಗಿ, ಬಿಜೆಪಿಯಿಂದ ದೇಶವನ್ನು ಪಾರು ಮಾಡಬೇಕಾದರೆ, ಮೊದಲು ಮನುವಾದಿ ಆರ್ಎಸ್ಎಸ್ ಮತ್ತು ಅಮೇಧ್ಯ ಮೆಲ್ಲುತ್ತಿರುವ ಮಾಧ್ಯಮಗಳನ್ನು ದೂರ ಇಡಬೇಕಾಗಿದೆ.





