ದಾವಣಗೆರೆಯಲ್ಲಿ ಲಿಂಗಾಯತರನ್ನು ನಿರಂತರವಾಗಿ ಗೆಲ್ಲಿಸಿದ ಮುಸ್ಲಿಮರಿಗೆ ಅಥವಾ ಹಿಂದುಳಿದವರಿಗೆ; ಬಾಗಲಕೋಟೆಯಲ್ಲಿ ವಿದ್ಯಾವಂತ, ಬಡ ಕುರುಬರಿಗೆ ಟಿಕೆಟ್ ನೀಡಬೇಕು. ಅವಕಾಶವಂಚಿತರಿಗೆ ಅವಕಾಶ ಕಲ್ಪಿಸಿಕೊಡಬೇಕು. ಅದಾಗದಿದ್ದರೆ, ಪ್ರಜಾಪ್ರಭುತ್ವವನ್ನು ಜೀವಂತವಾಗಿಡಲು ಪ್ರಜೆಗಳೇ ಮುಂದಾಗಬೇಕು.
ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಹಾಗೂ ಬಾಗಲಕೋಟೆಯ ಎಚ್.ವೈ. ಮೇಟಿಯವರ ನಿಧನದಿಂದ ತೆರವಾದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9ರಂದು ಉಪಚುನಾವಣೆ ನಡೆಯಲಿದೆ. ಅದರ ಹಿಂದೆಯೇ ಎರಡೂ ಕ್ಷೇತ್ರಗಳಿಗೆ ನಡೆಯುತ್ತಿರುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಜಾಪ್ರಭುತ್ವವನ್ನು ಅಣಕಿಸುತ್ತಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆಯಿಂದ ಶಾಮನೂರು ಶಿವಶಂಕರಪ್ಪ, ಬಾಗಲಕೋಟೆಯಿಂದ ಎಚ್.ವೈ. ಮೇಟಿಯವರು ಗೆದ್ದಿದ್ದರು. ಶಾಮನೂರು ಬಲಿಷ್ಠ, ಬಹುಸಂಖ್ಯಾತ ಲಿಂಗಾಯತ ಕೋಮಿಗೆ ಸೇರಿದರೆ; ಮೇಟಿಯವರು ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದರು. ಶಾಮನೂರು ಮತ್ತು ಮೇಟಿ- ಇಬ್ಬರೂ ಆರು ಬಾರಿ ಶಾಸಕರಾಗಿ, ಸಚಿವರಾಗಿ, ಸಂಸದರಾಗಿ- ನಾಲ್ಕೈದು ದಶಕಗಳ ಕಾಲ ರಾಜರಂತೆ ಮೆರೆದವರು. ಬೆಟ್ಟದಂತೆ ಬೆಳೆದವರು. ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿದವರು.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿ ಅಧಿಕಾರಕ್ಕೇರಿದರೂ, ಈ ಇಬ್ಬರು ಹಿರಿಯ ನಾಯಕರು ಸಚಿವರಾಗಿರಲಿಲ್ಲ. ಒಬ್ಬರು ವಯಸ್ಸಿನ ಕಾರಣವೊಡ್ಡಿ ಪುತ್ರನನ್ನು ಸಚಿವರನ್ನಾಗಿಸಿದರೆ; ಮತ್ತೊಬ್ಬರು ಸ್ವಯಂಕೃತಪರಾಧಕ್ಕೆ ಬಲಿಯಾಗಿ, ಬಾಯ್ಬಿಟ್ಟು ಕೇಳುವ ನೈತಿಕತೆಯನ್ನೇ ಕಳೆದುಕೊಂಡಿದ್ದರು.
ಇದನ್ನು ಓದಿದ್ದೀರಾ?: ಇಫ್ತಾರ್ ಬಿರಿಯಾನಿ ನೆಪಗಳ ನಿಲ್ಲಿಸಿ, ತಾಯಿ ಗಂಗೆಯ ಉಳಿವಿಗೆ ತಳಪಾಯದ ಕ್ರಮಗಳ ಜರುಗಿಸಿ
ಇಂತಹ ಈ ಹಿರಿಯ ನಾಯಕರು ಈಗ ಇಲ್ಲ. ಇಲ್ಲದಿರುವ ಸಮಯದಲ್ಲಾದರೂ ಇವರ ಗೆಲುವಿಗಾಗಿ ಬಾವುಟ ಕಟ್ಟಿದ, ಭೋಪರಾಕ್ ಹಾಕಿದ, ಶ್ರಮ ಸುರಿದ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡುವುದು, ಮುಂದೆ ನಿಂತು ಗೆಲ್ಲಿಸಿಕೊಳ್ಳುವುದು ಆ ಕುಟುಂಬಗಳ ಆದ್ಯ ಕರ್ತವ್ಯವಾಗಬೇಕಾಗಿತ್ತು. ಅದು ಪಕ್ಷದ ಜವಾಬ್ದಾರಿಯಾಗಿತ್ತು. ಆದರೆ, ಅಪ್ಪನ ನಂತರ ಮಕ್ಕಳು-ಮೊಮ್ಮಕ್ಕಳು ಅಕಾಡಕ್ಕೆ ಇಳಿಯಲು ಹಾತೊರೆಯುತ್ತಿದ್ದಾರೆ; ಅನುಕಂಪ ಅಡಬಿಟ್ಟು ಗೆಲ್ಲಲು ಪಕ್ಷವೂ ಪರಿತಪಿಸುತ್ತಿದೆ. ಜೊತೆಗೆ ಈ ಎರಡೂ ಕ್ಷೇತ್ರಗಳನ್ನು ಗೆಲ್ಲವುದು ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ.
ದಾವಣಗೆರೆ ಹೇಳಿಕೇಳಿ ಸಾಹುಕಾರ ಕುಟುಂಬದ ಸುಪರ್ದಿಗೊಳಗಾಗಿದೆ. ಅದೇ ರೀತಿ ಬಾಗಲಕೋಟೆಯನ್ನು ಮೇಟಿ ಕುಟುಂಬ ಮುಷ್ಟಿಯಲ್ಲಿಟ್ಟುಕೊಂಡು ಕೂತಿದೆ. ಶಾಮನೂರು ಶಿವಶಂಕರಪ್ಪನವರಿಂದ ತೆರವಾದ ಸ್ಥಾನಕ್ಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯವಿದೆ. ಅದೇ ರೀತಿ ಎಚ್.ವೈ. ಮೇಟಿ ಅವರಿಂದ ತೆರವಾದ ಸ್ಥಾನಕ್ಕೆ ಅವರ ಪುತ್ರರಾದ ಮಲ್ಲಿಕಾರ್ಜುನ, ಉಮೇಶ್, ಪುತ್ರಿಯರಾದ ಬಾಯಕ್ಕ ಮತ್ತು ಮಹಾದೇವಿಯವರಿಂದ ಒತ್ತಡವಿದೆ.
ಶಾಮನೂರು ಕುಟುಂಬ ಮತ್ತು ಮೇಟಿ ಕುಟುಂಬ ಎರಡೂ ವಂಶ ಪಾರಂಪರ್ಯ ರಾಜಕಾರಣವನ್ನು ಪೋಷಿಸಿಕೊಂಡು ಬಂದಿವೆ. 40-50 ವರ್ಷಗಳ ಕಾಲ ಅಧಿಕಾರವನ್ನು ಅನುಭವಿಸಿವೆ. ಈಗಲೂ ಅಧಿಕಾರಕ್ಕಾಗಿ ಹಪಾಹಪಿಸುತ್ತಿವೆ. ದುರದೃಷ್ಟಕರ ಸಂಗತಿ ಎಂದರೆ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಭುಗಳು. ಆದರೆ ಆ ಪ್ರಜೆಗಳನ್ನು ಪಾತಾಳಕ್ಕೆ ತುಳಿದು, ತುಳಿದವರೇ ಪ್ರಭುಗಳಾಗಿ ಮೆರೆಯುತ್ತಿದ್ದಾರೆ. ಈ ಎರಡೂ ಕುಟುಂಬಗಳು ಇಂದು ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢ ಸ್ಥಿತಿಯಲ್ಲಿರಲು ಕಾರಣಕರ್ತರಾದ ಕಾರ್ಯಕರ್ತರನ್ನೇ ಕಡೆಗಣಿಸಿದ್ದಾರೆ. ಅವರ ಬೇಡಿಕೆಗಳನ್ನೇ ಬದಿಗೊತ್ತಿದ್ದಾರೆ.
ಈ ಎರಡೂ ಫ್ಯೂಡಲ್ ಕುಟುಂಬಗಳಿಗೆ ಕಿವಿಹಿಂಡಿ ಬುದ್ಧಿ ಹೇಳಬೇಕಾದ; ನೀವು ಅಧಿಕಾರ ಅನುಭವಿಸಿದ್ದು ಸಾಕು ಎಂದು ತಿಳಿ ಹೇಳಬೇಕಾದ ಕಾಂಗ್ರೆಸ್ ಹೈಕಮಾಂಡ್, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವಂಶ ಪಾರಂಪರ್ಯ ರಾಜಕಾರಣದಲ್ಲಿ ಮುಳುಗೇಳುತ್ತಿದ್ದಾರೆ. ಕಾಂಗ್ರೆಸ್ಸಿನ ಈ ವಂಶಾಡಳಿತವನ್ನು, ಕುಟುಂಬ ರಾಜಕಾರಣವನ್ನು ದೇಶದ ಜನರ ಮುಂದಿಟ್ಟು ಬಿಜೆಪಿ ಅಧಿಕಾರಕ್ಕೆ ಏರಿದ್ದನ್ನೇ ಮರೆತಿದ್ದಾರೆ.
ದುರಂತವೆಂದರೆ, ಯಾವ ವಂಶಾಡಳಿತವನ್ನು ಕಟುವಾಗಿ ಟೀಕಿಸಿ ಅಧಿಕಾರಕ್ಕೇರಿತೋ, ಅದೇ ಬಿಜೆಪಿ ಇಂದು ಅದೇ ಕುಟುಂಬ ರಾಜಕಾರಣದ ಕೆಸರಿನಲ್ಲಿ ಬಿದ್ದು ಒದ್ದಾಡುತ್ತಿದೆ. ಕುಟುಂಬ ರಾಜಕಾರಣದ ಮುಖ್ಯ ಉದ್ದೇಶವೇ ಅಧಿಕಾರದಾಹ, ಹಣದ ಹಪಾಹಪಿ. ಅದನ್ನು ಬಿಟ್ಟರೆ ಮಿಕ್ಕೆಲ್ಲ ಕಾರಣಗಳು ಬರೀ ನೆಪಗಳು ಎಂಬುದನ್ನು ಅರಿಯಲು ವಿಶೇಷ ಬುದ್ಧಿವಂತಿಕೆಯೇನೂ ಬೇಕಾಗುವುದಿಲ್ಲ.
ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಧಿಕಾರವು ಜನರ ಕೈಯಲ್ಲಿರಬೇಕು ಎಂಬುದು ಮೂಲಭೂತ ಸಿದ್ಧಾಂತ. ಆದರೆ ಇತ್ತೀಚಿನ ದಶಕಗಳಲ್ಲಿ ವಂಶಪಾರಂಪರ್ಯ ರಾಜಕಾರಣವು ನ್ಯೂ ನಾರ್ಮಲ್ ಆಗಿದೆ. ರಾಜಕೀಯ ವ್ಯವಸ್ಥೆಯ ಪ್ರಮುಖ ಲಕ್ಷಣವಾಗಿ ಬೆಳೆಯುತ್ತಿದೆ. ರಾಜಕೀಯ ಪಕ್ಷಗಳಲ್ಲಿ ನಾಯಕತ್ವವು ಸಾಮರ್ಥ್ಯ, ಜನಸೇವೆ ಮತ್ತು ತತ್ವ-ಸಿದ್ಧಾಂತಗಳಿಗೆ ಬದಲಾಗಿ ಜಾತಿ-ಕೌಟುಂಬಿಕ ಹಿನ್ನೆಲೆಯ ಆಧಾರದಲ್ಲಿ ಹಂಚಿಕೆಯಾಗುತ್ತಿದೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ.
ಇದನ್ನು ಓದಿದ್ದೀರಾ?: ಇದು ಉದ್ಯೋಗದ ಪ್ರಶ್ನೆಯಲ್ಲ; ಭಾಷಾ ಗೌರವ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ
ವಂಶಪಾರಂಪರ್ಯ ರಾಜಕಾರಣವು ಸಾಮಾನ್ಯವಾಗಿ ರಾಜಕೀಯವನ್ನು ಒಂದು ಕುಟುಂಬದ ಸ್ವತ್ತಿನಂತೆ ಕಾಣುವ ಮನೋಭಾವವನ್ನು ಉತ್ತೇಜಿಸುತ್ತದೆ. ಇದರಿಂದ ಹೊಸ ನಾಯಕತ್ವಕ್ಕೆ ಅವಕಾಶಗಳು ಕಡಿಮೆಯಾಗುತ್ತವೆ. ಸಮಾಜದ ವಿವಿಧ ವರ್ಗಗಳ ಪ್ರತಿಭಾವಂತರು, ಕೇವಲ ರಾಜಕೀಯ ಹಿನ್ನಲೆ ಇಲ್ಲದ ಕಾರಣದಿಂದ ಕಡೆಗಣಿಸಲ್ಪಡುತ್ತಾರೆ. ಇದು ಸಮಾನ ಅವಕಾಶಗಳ ತತ್ವವನ್ನು ಹಾಳುಮಾಡುತ್ತದೆ.
ಪಕ್ಷಗಳೇ ಮುಂದಾಗಿ, ದಾವಣಗೆರೆಯಲ್ಲಿ ಲಿಂಗಾಯತರನ್ನು ನಿರಂತರವಾಗಿ ಗೆಲ್ಲಿಸಿದ ಮುಸ್ಲಿಮರಿಗೆ ಅಥವಾ ಹಿಂದುಳಿದವರಿಗೆ; ಬಾಗಲಕೋಟೆಯಲ್ಲಿ ವಿದ್ಯಾವಂತ, ಬಡ ಕುರುಬರಿಗೆ ಟಿಕೆಟ್ ನೀಡಬೇಕು. ಅವಕಾಶವಂಚಿತರಿಗೆ ಅವಕಾಶ ಕಲ್ಪಿಸಿಕೊಡಬೇಕು. ಅದಾಗದಿದ್ದರೆ, ಪ್ರಜಾಪ್ರಭುತ್ವವನ್ನು ಜೀವಂತವಾಗಿಡಲು ಪ್ರಜೆಗಳೇ ಮುಂದಾಗಬೇಕು.





