ಈ ದಿನ ಸಂಪಾದಕೀಯ | ಮಂಡ್ಯದ ಹೆಣ್ಣು ಭ್ರೂಣ ಹತ್ಯೆ ಮತ್ತು ಹೆಣ್ಣು ಸಿಗದ ಯುವಕರ ಹತಾಶೆ

Date:

ಮಂಡ್ಯ ಜಿಲ್ಲೆಯ ಯುವಕರಿಗೆ ಹೆಣ್ಣು ಸಿಗದಿರುವುದು ಗಂಭೀರ ಸಾಮಾಜಿಕ ಸಮಸ್ಯೆ. ವಿಪರ್ಯಾಸವೆಂದರೆ, ಇದೇ ಮಂಡ್ಯ ಜಿಲ್ಲೆ ಕರ್ನಾಟಕದಲ್ಲಿ ಅತಿ ಹೆಚ್ಚು ಹೆಣ್ಣು ಭ್ರೂಣ ಪತ್ತೆ-ಹತ್ಯೆ ಪ್ರಕರಣಗಳಿಗೆ ಕುಖ್ಯಾತಿ ಗಳಿಸಿತ್ತು.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮರಳಿಗ ಗ್ರಾಮದ ಸುಮಾರು ಮೂವತ್ತಕ್ಕೂ ಹೆಚ್ಚು ಯುವಕರು, ತಮ್ಮೂರಿನ ಗ್ರಾಮ ಪಂಚಾಯತಿಗೆ ಪತ್ರ ಬರೆದಿದ್ದಾರೆ. ಆ ಪತ್ರ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯದಾದ್ಯಂತ ಸುದ್ದಿಯಾಗಿದೆ. ಆ ಗ್ರಾಮದ ಯುವಕರು ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂಬ ಹತಾಶೆಗೆ ಒಳಗಾಗಿ, ತಮಗೊಂದು ಮಠ ಕಟ್ಟಿಕೊಡುವಂತೆ ಪಂಚಾಯತಿಗೆ ಮನವಿ ಮಾಡಿಕೊಂಡಿದ್ದಾರೆ. ಅದು ಭಾರೀ ಸಂಚಲನ, ಸಂಕಟ, ಸಂಕಥನ ಸೃಷ್ಟಿಸುತ್ತಿದೆ.

ಕೆಲವೇ ದಿನಗಳ ಹಿಂದೆ, ಇದೇ ಮಂಡ್ಯದ ರೈತ ಯುವಕರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ 5 ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಕೆಲ ತಿಂಗಳುಗಳ ಹಿಂದೆ, ಇದೇ ಮಂಡ್ಯ ಜಿಲ್ಲೆಯ ಅನೇಕ ಗ್ರಾಮಗಳ ಯುವಕರು, ಹೆಣ್ಣು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕಾಲ್ನಡಿಗೆಯಲ್ಲಿ ಮಾದಪ್ಪನ ಬೆಟ್ಟ ಹತ್ತಿ, ಹರಕೆ ಪೂರೈಸಿದ್ದಾರೆ.

ಇದನ್ನು ಓದಿದ್ದೀರಾ?: ‘ಬ್ಯಾಲೆಟ್ ಪೇಪರ್’ ಬಂದರೆ ಎಲ್ಲವೂ ಸರಿಯಾಗುವುದೇ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದು ನಿಜಕ್ಕೂ ಗಂಭೀರ ಸಾಮಾಜಿಕ ಸಮಸ್ಯೆ. 30-35 ದಾಟಿರುವ, ಬೇಸಾಯ ನಂಬಿ ಬದುಕುತ್ತಿರುವ ರೈತ ಯುವಕರನ್ನು ವಿವಾಹವಾಗಲು ಹೆಣ್ಣುಮಕ್ಕಳು ಮುಂದೆ ಬರುತ್ತಿಲ್ಲ. ಹೆಣ್ಣುಮಕ್ಕಳನ್ನು ಒಪ್ಪಿಸಲು ಪೋಷಕರೂ ಮುಂದಾಗುತ್ತಿಲ್ಲ. ಬಹುತೇಕ ಗ್ರಾಮೀಣ ಹೆಣ್ಣುಮಕ್ಕಳು ಈಗ ವಿದ್ಯಾವಂತೆಯರಾಗಿದ್ದು, ಅವಿಭಕ್ತ ಕುಟುಂಬದೊಂದಿಗೆ ಬದುಕಲು ಇಷ್ಟಪಡುತ್ತಿಲ್ಲ. ಅದಕ್ಕೆ ಕೊಡುತ್ತಿರುವ ಕಾರಣಗಳು ಕೂಡ ಸಮಾಜ ಒಪ್ಪುವಂತಿಲ್ಲ, ಸಮಂಜಸವಾಗಿಲ್ಲ.

ಹುಡುಗ ಬೆಂಗಳೂರಿನಲ್ಲಿ ಇರಬೇಕು, ಸ್ವಂತ ಮನೆ ಮತ್ತು ಬಾಡಿಗೆ ಬರುವ ಮನೆ ಹೊಂದಿರಬೇಕು. ಊರಿನಲ್ಲಿ ಆಸ್ತಿ ಹೊಂದಿರಬೇಕು. ಹುಡುಗನ ಅಪ್ಪ-ಅಮ್ಮ ಇರಬಾರದು. ಇನ್ನು ಕೆಲವರದು ಅವರ ಭವಿಷ್ಯದ ಗಂಡಂದಿರು ಬೆಂಗಳೂರಿನಲ್ಲಿ ಆಟೋ-ಕ್ಯಾಬ್ ಡ್ರೈವರ್, ಹೋಟೆಲ್-ಬಾರ್ ಸಪ್ಲೈಯರ್, ಪೆಟ್ರೋಲ್ ಬಂಕ್ ಫ್ಯೂಯಲ್ ಫಿಲ್ಲರ್ ಆಗಿದ್ದರೂ ಸರಿ; ಬಾಡಿಗೆ ಮನೆಯಲ್ಲಿದ್ದರೂ ಸರಿ; ನಗರದಲ್ಲಿ ಇರಬೇಕು. ಇದು ಅವರ ಕಾಮನ್ ಕಂಡೀಷನ್. ಅಂದರೆ, ಕೃಷಿ ಉತ್ಪನ್ನ ತಿಂದು ಬದುಕುವ ಜನಕ್ಕೆ ಕೃಷಿಕ ವರ ಬೇಡ.

ಆ ಯುವಕರೇನು ಅವಿದ್ಯಾವಂತರಲ್ಲ, ಓದಿಕೊಂಡಿದ್ದಾರೆ. ಕೃಷಿ ಕೆಲಸ ಮಾಡುವುದರಿಂದ ದೈಹಿಕವಾಗಿ ಸದೃಢರಾಗಿದ್ದಾರೆ. ತೋಟ, ಗದ್ದೆ, ಹೊಲದ ಜೊತೆಗೆ ಸೈಡ್ ಬ್ಯುಸಿನೆಸ್ ಕೂಡ ಮಾಡುತ್ತಿದ್ದಾರೆ. ಕೈತುಂಬಾ ಸಂಪಾದಿಸುತ್ತಿದ್ದಾರೆ. ಆಧುನಿಕ ಸೌಲಭ್ಯಗಳುಳ್ಳ ಮನೆ ಮತ್ತು ಉತ್ತಮ ಕೌಟುಂಬಿಕ ಹಿನ್ನೆಲೆಯುಳ್ಳವರಾಗಿದ್ದಾರೆ. ಆದರೆ, ಹಳ್ಳಿಯಲ್ಲಿ ವಾಸವಾಗಿದ್ದಾರೆ. ಅದೊಂದೇ ಕಾರಣಕ್ಕೆ ಹಳ್ಳಿಯ ಯುವಕರು ಬೇಡವಾಗಿದ್ದಾರೆ.

ಇದು ಮಂಡ್ಯ ಜಿಲ್ಲೆಯ ಗಂಭೀರ ಸಮಸ್ಯೆ. ವಿಪರ್ಯಾಸವೆಂದರೆ, ಇದೇ ಮಂಡ್ಯ ಜಿಲ್ಲೆ ಕರ್ನಾಟಕದಲ್ಲಿ ಅತಿ ಹೆಚ್ಚು ಹೆಣ್ಣು ಭ್ರೂಣ ಪತ್ತೆ-ಹತ್ಯೆ ಪ್ರಕರಣಗಳಿಗೆ ಕುಖ್ಯಾತಿ ಗಳಿಸಿತ್ತು. ಆತಂಕ ಸೃಷ್ಟಿಸಿತ್ತು. ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿ ರಾಜ್ಯಕ್ಕೆ ಕಳಂಕ ತಂದಿತ್ತು. ಕಳೆದ ಕೆಲವು ವರ್ಷಗಳ ಹಿಂದೆ ಕೆಲ ವೈದ್ಯರು, ಲ್ಯಾಬ್ ಟೆಕ್ನೀಷಿಯನ್‌ಗಳು, ಆಂಬುಲೆನ್ಸ್ ಡ್ರೈವರ್‍‌ಗಳು, ಏಜೆಂಟರು ಒಂದಾಗಿ ಅಕ್ರಮ ದಂಧೆ ನಡೆಸುತ್ತಿದ್ದರು. ಅದಕ್ಕೆ ಅವರು ಆಲೆಮನೆಗಳು, ತೋಟದ ಮನೆಗಳು ಮತ್ತು ಹೆಲ್ತ್ ಕ್ವಾರ್ಟರ್ಸ್‌ಗಳನ್ನು ಆಶ್ರಯಿಸಿದ್ದರು.

ಬೇರೆ ಬೇರೆ ಜಿಲ್ಲೆಗಳಿಂದಲೂ ಇಲ್ಲಿಗೆ ಅಕ್ರಮ ಭ್ರೂಣ ಪತ್ತೆ ಮತ್ತು ಹತ್ಯೆಗಾಗಿ ಬರುತ್ತಿದ್ದರು. ಒಂದು ಹತ್ಯೆಗೆ 25 ಸಾವಿರದಿಂದ 1 ಲಕ್ಷ ಪಡೆಯುತ್ತಿದ್ದರು. ಕಟುಕರು ಕರುಳಬಳ್ಳಿಗಳನ್ನ ಕೊಂದು ಮೆಡಿಕಲ್ ವೆಸ್ಟ್ ಜೊತೆ ಎಸೆಯುತ್ತಿದ್ದರು. ಇವರ ದಂಧೆ ಯಾರಿಗೂ ತಿಳಿಯಬಾರದೆಂದು ಮೊಬೈಲ್ ಬದಲು ಇಂಟರ್​ನೆಟ್ ಕಾಲ್ ಬಳಸುತ್ತಿದ್ದರು. ಉತ್ತಮ ನೆಟ್‌ವರ್ಕ್, ಸ್ಕ್ಯಾನಿಂಗ್ ಮಷೀನ್‌ಗಳನ್ನು ಹೊಂದಿದ್ದರು.

2023-2024ರಲ್ಲಿ ಈ ಅಕ್ರಮ ದಂಧೆ ಬೆಳಕಿಗೆ ಬಂದಿತ್ತು. ಬೆಚ್ಚಿಬೀಳಿಸುವಷ್ಟು ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಮಾಡಿದ್ದು ಬಯಲಾಗಿತ್ತು. ಇದರಿಂದಾದ ಪರಿಣಾಮ, ಜಿಲ್ಲೆಯ ಜನನದ ಸಮಯದ ಲಿಂಗಾನುಪಾತ(Sex Ratio at Birth- SRB) ಗಣನೀಯವಾಗಿ ಕುಸಿದಿತ್ತು. ಅಂಕಿಅಂಶಗಳ ಪ್ರಕಾರ ಲಿಂಗಾನುಪಾತ- 1000 ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ಸಂಖ್ಯೆ- 2020ರಲ್ಲಿ 884, 2021ರಲ್ಲಿ 873, 2022ರಲ್ಲಿ 877, 2023ರಲ್ಲಿ 887, 2023-24ರಲ್ಲಿ 865 ದಾಖಲಾಗಿ ಆತಂಕ ಮೂಡಿಸಿತ್ತು.   

ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಗಂಭೀರ ಸಾಮಾಜಿಕ ಸಮಸ್ಯೆ. ಇದು ಮಗುವಿನ ಲಿಂಗ ನಿರ್ಧಾರ ಮಾಡಿ ಹೆಣ್ಣು ಭ್ರೂಣವನ್ನು ಕಡಿಯುವುದು PCPNDT ಕಾಯ್ದೆ(1994) ಪ್ರಕಾರ ಶಿಕ್ಷಾರ್ಹ ಅಪರಾಧ. ಇದನ್ನು ಸರ್ಕಾರ ನಿಷೇಧಿಸಿದೆ. ಆದರೂ ಇದು ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿತ್ತು. ರಾಜ್ಯ ಸರ್ಕಾರ ಟಾಸ್ಕ್ ಫೋರ್ಸ್ ರಚನೆ, ಡಿಕಾಯ್ ಆಪರೇಷನ್‌ಗಳು, ಸ್ಕ್ಯಾನಿಂಗ್ ಸೆಂಟರ್‌ಗಳ ಕಟ್ಟುನಿಟ್ಟಿನ ತಪಾಸಣೆಗಳಿಂದ ಇತ್ತೀಚೆಗೆ ಕೊಂಚ ಕಡಿಮೆಯಾಗಿದೆ. ಅದಕ್ಕೆ ಪೂರಕವಾಗಿ, ಸಾರ್ವಜನಿಕ ಜಾಗೃತಿ, ಸಾಮಾಜಿಕ ಬದಲಾವಣೆ ಮತ್ತು ಕಠಿಣ ಕಾನೂನಿನ ಅಗತ್ಯವೂ ಇದೆ.

ಯುವಕರಿಗೆ ಹೆಣ್ಣು ಸಿಗದಿರುವುದಕ್ಕೂ ಹಾಗೂ ಹೆಣ್ಣು ಭ್ರೂಣ ಹತ್ಯೆಗೂ ಸಂಬಂಧವಿದೆ. ಇದನ್ನು ಗಂಭೀರ ಅಧ್ಯಯನಕ್ಕೊಳಪಡಿಸಿ, ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ.  

ಇದು ಮಂಡ್ಯ ಜಿಲ್ಲೆಯ ಸಮಸ್ಯೆ ಮಾತ್ರವಲ್ಲ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೃಷಿಯನ್ನು ನಂಬಿ ಬದುಕುತ್ತಿರುವ ಹವ್ಯಕ ಬ್ರಾಹ್ಮಣರ ಕುಟುಂಬಗಳ ಸಮಸ್ಯೆ ಕೂಡ. ಶಿರಸಿ, ಯಲ್ಲಾಪುರ, ಕುಮಟಾ, ಅಂಕೋಲಾ ತಾಲ್ಲೂಕುಗಳಲ್ಲಿ ತೋಟಗಳ ನಡುವೆ ಒಂಟಿ ಅಥವಾ ಐದಾರು ಮನೆಗಳಿರುವ ಹವ್ಯಕ ಬ್ರಾಹ್ಮಣರ ಕುಟುಂಬಗಳಿವೆ. ಅವರ ಗಂಡು ಮಕ್ಕಳಿಗೆ ಅವರದೇ ಜಾತಿಯಲ್ಲಿ ಹೆಣ್ಣು ಸಿಗದ ಕಾರಣಕ್ಕೆ, ದೂರದ ಹುಬ್ಬಳ್ಳಿ, ಗದಗ, ಬಾಗಲಕೋಟೆಯ ಸಮಾಜ ಕಲ್ಯಾಣ ಇಲಾಖೆಯ ಅನಾಥಾಶ್ರಮಗಳಲ್ಲಿ ಬೆಳೆಯುತ್ತಿರುವ ಹೆಣ್ಣುಮಕ್ಕಳನ್ನು ತಂದು ಮದುವೆ ಮಾಡುತ್ತಿದ್ದಾರೆ.

ಇದು ರಾಜ್ಯದ ಸಮಸ್ಯೆಯಷ್ಟೇ ಅಲ್ಲ, ಹರ್ಯಾಣ, ಪಂಜಾಬ್ ಮತ್ತು ರಾಜಸ್ತಾನದ ರೈತ ಕುಟುಂಬಗಳ ಸಮಸ್ಯೆಯೂ ಇದೇ ಆಗಿದೆ. ಅಲ್ಲಿನ ರೈತರು ತಮ್ಮ‌ಮಕ್ಕಳಿಗೆ ಮಧ್ಯಪ್ರದೇಶ, ಒಡಿಸ್ಸಾ ರಾಜ್ಯಗಳ ಬುಡಕಟ್ಟು ಸಮುದಾಯದ ಬಡ ಹೆಣ್ಣುಮಕ್ಕಳನ್ನು ತಂದು ವಿವಾಹ ಮಾಡುತ್ತಿದ್ದಾರೆ.

ಇದನ್ನು ಓದಿದ್ದೀರಾ?: ವಿಬಿ- ಜಿ ರಾಮ್‌ ಜಿ | ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ಹೊಸ ಕಾಯಿದೆ

ಈಗ ನಮ್ಮ‌ ಮಂಡ್ಯ ಜಿಲ್ಲೆಯ ಪೋಷಕರು ಮತ್ತು ಯುವಕರು ಈ ನಿಟ್ಟಿನಲ್ಲಿ ಯೋಚಿಸಬೇಕು. ನೆರೆಯ ಆಂಧ್ರ ಮತ್ತು ತಮಿಳುನಾಡಿನ ಬಡಕುಟುಂಬದ ಹೆಣ್ಣುಮಕ್ಕಳನ್ನು ತಮ್ಮ ಕುಟುಂಬಕ್ಕೆ ಸೊಸೆಯಾಗಿ ತಂದುಕೊಳ್ಳಬೇಕು. ಇಲ್ಲಿ ಜಾತಿ, ಧರ್ಮವನ್ನು ಮೀರುವ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು. ಕುವೆಂಪು ಅವರ ವೈಚಾರಿಕ ಚಿಂತನೆಯನ್ನು ಓದಲಿಕ್ಕಲ್ಲ, ಬದುಕಿಗೂ ಅಳವಡಿಸಿಕೊಳ್ಳಬೇಕು.

ಒಕ್ಕಲಿಗರ ವೇದಿಕೆ, ಸಂಘಟನೆಗಳನ್ನು ಕಟ್ಟಿಕೊಂಡು ಸ್ವಾಮೀಜಿಗಳಿಗೆ, ಮಠಾಧೀಶರಿಗೆ, ರಾಜಕಾರಣಿಗಳಿಗೆ ಬಹುಪರಾಕ್ ಹಾಕುವ ಮಂದಿ, ತಮ್ಮ ಸಮುದಾಯದ ಯುವಕರ ಭವಿಷ್ಯದ ಬದುಕಿನ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ನೆರೆ ರಾಜ್ಯಗಳ ಬಡ ಹೆಣ್ಣುಮಕ್ಕಳನ್ನು ವಿವಾಹ ಮಾಡಿಸುವ ಬಗ್ಗೆ ವೇದಿಕೆ ನಿರ್ಮಾಣ ಮಾಡಬೇಕಿದೆ. ಹಾಗೂ ನಗರದಲ್ಲಿ ಗಂಡನ ಜೊತೆ ಮಾತ್ರ ಬದುಕಬೇಕು, ಅತ್ತೆ-ಮಾವಂದಿರು ಬೇಡ ಎನ್ನುವ ಹೆಣ್ಣುಮಕ್ಕಳ ಮನವೊಲಿಸಬೇಕಾಗಿದೆ. ಎದುರಾಗಿರುವ ಸಮಸ್ಯೆಯಿಂದ ಪಾರಾಗುವ ಮಾನವೀಯ ಮಾರ್ಗಗಳನ್ನು ಶೋಧಿಸಿಕೊಳ್ಳಬೇಕಾಗಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....