‘ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು’ ಎನ್ನುವುದು ಕೇವಲ ಒಂದು ಪೊಲಿಟಿಕಲ್ ಸ್ಟೇಟ್ಮೆಂಟ್, ಅಷ್ಟೇ. ಆದರೆ ಅದು ಬಿಜೆಪಿ ವಲಯದಲ್ಲಿ ಸೃಷ್ಟಿಸಿದ ಸಂಚಲನ ಸಾಮಾನ್ಯದ್ದಲ್ಲ. ಉಂಟು ಮಾಡಿದ ತಲ್ಲಣ ಅಷ್ಟಿಷ್ಟಲ್ಲ. ಕಳೆದ ಹತ್ತು ವರ್ಷಗಳಿಂದ ಪ್ರಭುತ್ವದ ವಿರುದ್ಧ ಮಾತನಾಡಿದವರನ್ನು ಬಗ್ಗು ಬಡಿದಿದ್ದವರು, ಈಗ ಬೆಚ್ಚಿ ಬೀಳುತ್ತಿದ್ದಾರೆ. ಸಾಮಾನ್ಯರ ಸದ್ದು ಕೇಳಿಸುತ್ತಿದೆ, ಸರ್ವಾಧಿಕಾರಿಯ ಸದ್ದು ಅಡಗುತ್ತಿದೆ… ಭಾರತ ದೇಶ ಬದಲಾಗುತ್ತಿದೆ.
ಆಮ್ ಆದ್ಮಿ ಪಕ್ಷದ ಮುಖಂಡ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜೈಲಿನಿಂದ ಹೊರಬಂದ ತಕ್ಷಣ, ಮೊದಲ ಸಾರ್ವಜನಿಕ ಭಾಷಣದಲ್ಲಿ, ‘ಮುಂದಿನ ವರ್ಷದ ಸೆಪ್ಟೆಂಬರ್ 17ಕ್ಕೆ ಮೋದಿಗೆ 75 ವರ್ಷ ತುಂಬುತ್ತದೆ. 75 ಆದವರಿಗೆ ಬಿಜೆಪಿಯಲ್ಲಿ ಕಡ್ಡಾಯ ನಿವೃತ್ತಿ, ಸ್ವತಃ ಅವರೇ ನಿಯಮ ರೂಪಿಸಿದ್ದಾರೆ. ಅದರಂತೆ ಎಲ್ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಮಿತ್ರಾ ಮಹಾಜನ್, ಯಶವಂತ್ ಸಿನ್ಹಾ ನಿವೃತ್ತರಾದರು. ಈಗ ಪ್ರಧಾನಿ ಮೋದಿ ಸರದಿ. ಹಾಗಾದರೆ ಎನ್ಡಿಎ ಮೈತ್ರಿಕೂಟದ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು? ಮೋದಿ ಪ್ರಧಾನಿಯಾಗುವುದೇ ಗ್ಯಾರಂಟಿ ಇಲ್ಲದಾಗ ಮೋದಿ ಗ್ಯಾರಂಟಿಗಳನ್ನು ಜಾರಿಗೆ ತರುವವರು ಯಾರು?’ ಎಂದು ವಿರೋಧಿ ಪಾಳೆಯಕ್ಕೆ ಪ್ರಶ್ನೆ ಎಸೆದರು.
ಕೇಜ್ರಿವಾಲ್ ಮಾತನಾಡಿ ಮುಗಿಯುವಷ್ಟರಲ್ಲಿ ಗೃಹ ಮಂತ್ರಿ ಅಮಿತ್ ಶಾ, ’75 ದಾಟಿದ ಮೇಲೂ ಮೋದಿಯೇ ಪ್ರಧಾನಿ’ ಎಂದು ಬಡಬಡಿಸಿದರು. ಸಾಲದು ಎಂದು ಸಹಾಯಕ್ಕೆ ಸಚಿವರನ್ನು ಸೆಳೆದು ತೇಪೆ ಹಚ್ಚಲು ತಿಣುಕಾಡಿದರು. ಅಮಿತ್ ಶಾರಿಂದ ಶುರುವಾದ ‘ಮೋದಿಯೇ ಪ್ರಧಾನಿ’ ಅಭಿಯಾನದ ರೂಪ ಪಡೆಯಿತು. ಮೋದಿ ಪರಿವಾರ ಅದನ್ನು ದೇಶದಾದ್ಯಂತ, ಇವತ್ತಿನವರೆಗೂ ಹಂಚುತ್ತಲೇ ಇದೆ.
‘ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು’ ಎನ್ನುವುದು ಕೇವಲ ಒಂದು ಪೊಲಿಟಿಕಲ್ ಸ್ಟೇಟ್ಮೆಂಟ್, ಅಷ್ಟೇ. ಆದರೆ ಅದು ಬಿಜೆಪಿ ವಲಯದಲ್ಲಿ ಸೃಷ್ಟಿಸಿದ ಸಂಚಲನ ಸಾಮಾನ್ಯದ್ದಲ್ಲ. ಉಂಟು ಮಾಡಿದ ತಲ್ಲಣ ಅಷ್ಟಿಷ್ಟಲ್ಲ. ಬಿಜೆಪಿಯ ಅಕ್ಷೋಹಿಣಿ ಸೈನ್ಯ(ಐಟಿ ಸೆಲ್)ವಂತೂ ಅಲ್ಲಾಡಿಹೋಗಿದೆ. ಹೊಸ ಹೊಸ ನರೇಟಿವ್ ಕಟ್ಟಲು, ಬ್ರಹ್ಮಾಂಡಕ್ಕೆ ಬಿತ್ತಲು, ಭಕ್ತರನ್ನು ಹಿಡಿದಿಟ್ಟುಕೊಳ್ಳಲು ಶಕ್ತಿಮೀರಿ ಶ್ರಮಿಸುತ್ತಿದೆ.
ಕೇವಲ ಒಂದೇ ಒಂದು ರಾಜಕೀಯ ಹೇಳಿಕೆಗೆ ಕಂಗಾಲಾಗಿಹೋಗಿರುವ ಬಿಜೆಪಿ, ಕಳೆದ ಹತ್ತು ವರ್ಷಗಳಿಂದ ಅಂತಹ ತಲ್ಲಣಗಳನ್ನು ಉಂಟು ಮಾಡುವ ಸ್ಥಾನದಲ್ಲಿ ತಳವೂರಿತ್ತು. ತಮ್ಮ ವಿರುದ್ಧ ಮಾತನಾಡುವವರನ್ನು ಕಂಗಾಲಾಗಿಸುವುದೇ ಅದರ ಕೆಲಸವಾಗಿತ್ತು. ಬಿಜೆಪಿ ಸರ್ಕಾರ ಮತ್ತು ಮೋದಿ ವಿರುದ್ಧ ಮಾತನಾಡಿದ ಪತ್ರಕರ್ತರು, ಬುದ್ಧಿಜೀವಿಗಳು, ಚಿಂತಕರು, ಕಲಾವಿದರು, ಸಾಮಾನ್ಯರು, ಸಾಮಾಜಿಕ ಹೋರಾಟಗಾರರು ಮತ್ತು ರಾಜಕೀಯ ನಾಯಕರನ್ನು ಬಿಜೆಪಿ ಬಗ್ಗು ಬಡಿದಿತ್ತು. ಕೆಲವರನ್ನು ಕಾರಣವಿಲ್ಲದೆ ಬಂಧಿಸಿ, ಯುಎಪಿಎ ಕಾಯ್ದೆಯಡಿ ಕಂಬಿ ಹಿಂದೆ ಕೂರಿಸಿತ್ತು. ಅವರಿಗೆ ಜಾಮೀನು ಕೂಡ ಸಿಗದಂತೆ ನೋಡಿಕೊಂಡಿತ್ತು.
ಆ ಮೂಲಕ ದೇಶದಲ್ಲಿ ಪ್ರಭುತ್ವವನ್ನು ಪ್ರಶ್ನಿಸುವ, ಮುಕ್ತವಾಗಿ ಮಾತನಾಡುವ ವಾತಾವರಣವೇ ಇಲ್ಲದಂತಾಗಿತ್ತು. ಪ್ರಜೆಗಳು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳಿಂದಲೇ ಪ್ರಜೆಗಳ ಹಕ್ಕಿನ ಹರಣವಾಗಿತ್ತು. ಪ್ರಜಾಪ್ರಭುತ್ವ ಕಾಲು ಮುರಿದುಕೊಂಡು ಕೂತಿತ್ತು. ಸರ್ವಾಧಿಕಾರ ಸದ್ದು ಮಾಡುತ್ತಿತ್ತು.
ಶೋಷಿತರ, ಅಸಹಾಯಕರ, ದಮನಿತರ ದನಿಯಾಗಿ ಕೆಲಸ ಮಾಡಬೇಕಾದ ಸುದ್ದಿ ಮಾಧ್ಯಮಗಳು ಪ್ರಭುತ್ವದ ಪರ ವಕಾಲತ್ತು ವಹಿಸತೊಡಗಿದವು. ಸಾರಾಸಗಟು ಖರೀದಿಗೊಳಪಟ್ಟು ‘ಗೋದಿ ಮೀಡಿಯಾ’ ಎಂಬ ಹೊಸ ವ್ಯಾಖ್ಯಾನವನ್ನೇ ಹುಟ್ಟುಹಾಕಿದವು. ಅಳಿದುಳಿದ ಭಿನ್ನ ಧ್ವನಿಗಳಾದ ರಾಜದೀಪ್ ಸರದೇಸಾಯಿ, ಬರ್ಕಾ ದತ್, ಪ್ರಣಯ್ ರಾಯ್, ರವೀಶ್ ಕುಮಾರ್, ಪ್ರಸೂನ್ ಬಾಜಪೈ, ಕರನ್ ಥಾಪರ್ಗಳಂತಹ ಹತ್ತಾರು ಭಾಷೆಗಳ ನೂರಾರು ಪತ್ರಕರ್ತರಿಗೆ ಸುದ್ದಿ ಸಂಸ್ಥೆಗಳಲ್ಲಿ ಸ್ಥಳವಿಲ್ಲದಂತಾಯಿತು. ಹಲವರ ಮೇಲೆ ಐಟಿ ದಾಳಿ ಮಾಡಿಸಿ, ನೈತಿಕವಾಗಿ ಕುಗ್ಗಿಸಲಾಯಿತು. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಷ್ಟವಾಯಿತು.
ಇನ್ನು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಒಂದು ಹೇಳಿಕೆ ನೀಡಿದರೆ, ಅದನ್ನು ಆ ಕ್ಷಣವೇ ಬಿಜೆಪಿ ಐಟಿ ಸೆಲ್ ತಿರುಚಿ, ಅದನ್ನು ವಾಟ್ಸಾಪ್ ಯೂನಿವರ್ಸಿಟಿಗೆ ರವಾನಿಸುತ್ತಿತ್ತು. ಅದು ಅತ್ಯಂತ ವೇಗವಾಗಿ ಇಡೀ ದೇಶಕ್ಕೆ ತಲುಪಿ, ರಾಹುಲ್ ಎಂದರೆ ನಗೆಪಾಟಲಿನ ವ್ಯಕ್ತಿ ಎಂದು ಬಿಂಬಿಸಲಾಗುತ್ತಿತ್ತು. ಎಚ್ಚೆತ್ತುಕೊಂಡ ರಾಹುಲ್, ಮತ್ತೊಂದು ಟ್ವೀಟ್ ಮೂಲಕ ತಪ್ಪನ್ನು ಸರಿ ಮಾಡಿ ಹಂಚುವಷ್ಟರಲ್ಲಿ ಸುಳ್ಳು ಊರಾಡಿ ಬಂದಿರುತ್ತಿತ್ತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ದೂರುಗಳಿಗೆ ಬೆಲೆ ಇಲ್ಲ, ಕ್ರಮ ಕೈಗೊಳ್ಳಲ್ಲ, ಆಯೋಗಕ್ಕೆ ಹಲ್ಲೂ ಇಲ್ಲ
ಟ್ವಿಟರ್, ಫೇಸ್ ಬುಕ್, ವಾಟ್ಸಾಪ್, ಯೂ ಟ್ಯೂಬ್, ಇನ್ಸ್ಟಾಗ್ರಾಂಗಳೆಂಬ ಸಾಮಾಜಿಕ ಮಾಧ್ಯಮಗಳನ್ನು ಬಿಜೆಪಿ ವ್ಯವಸ್ಥಿತವಾಗಿ ಬಳಸಿಕೊಂಡಿತು. ಈ ಸಾಮಾಜಿಕ ಮಾಧ್ಯಮಗಳು ಹೊರದೇಶದ ಮಾಲೀಕತ್ವ ಹೊಂದಿದ್ದು, ಅವುಗಳು ದೇಶದಲ್ಲಿ ಅಂಗಡಿ ತೆರೆಯಲು, ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಕೇಂದ್ರದ ಬಿಜೆಪಿ ಸರ್ಕಾರ ಸಹಕರಿಸಿತು. ಅವರು ಬಿಜೆಪಿಯ ಐಟಿ ಸೆಲ್ ಸೃಷ್ಟಿಸುವ ಸುಳ್ಳುಗಳಿಗೆ ವೇದಿಕೆ ಒದಗಿಸಿಕೊಟ್ಟರು.
ಕಳೆದ ಹತ್ತು ವರ್ಷಗಳಲ್ಲಿ ದೇಶದ ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾ ಬಿಜೆಪಿ ಮತ್ತು ಮೋದಿಯ ಪರವಿದ್ದು, ಭಿನ್ನ ಧ್ವನಿಯ ಸದ್ದು ಅಡಗಿಸಲಾಗಿತ್ತು. ಮೋದಿ ಮಹಾನ್ ನಾಯಕನಾಗಿ ಹೊರಹೊಮ್ಮಲು ಅನುಕೂಲವಾಗಿತ್ತು. ಅವರು ಹೇಳಿದ್ದೇ ಸತ್ಯ, ಮಾಡಿದ್ದೇ ಸರಿ ಎನ್ನುವಂತಹ ವಾತಾವರಣ ಸೃಷ್ಟಿಯಾಗಿತ್ತು. ಇಡೀ ದೇಶವೇ ಉಸಿರುಗಟ್ಟಿಸುವ ಸ್ಥಿತಿಯಲ್ಲಿತ್ತು.
ಇಂತಹ ಸಂದರ್ಭದಲ್ಲಿ, ದೇಶದ ಸರ್ವೋಚ್ಚ ನ್ಯಾಯಾಲಯ ಚುನಾವಣಾ ಬಾಂಡ್ ಬಗ್ಗೆ ಖಡಕ್ ತೀರ್ಪು ನೀಡಿತು. ಎಸ್ಬಿಐಗೆ ಅಂಕಿ-ಅಂಶ ನೀಡುವಂತೆ, ಅದನ್ನು ಚುನಾವಣಾ ಆಯೋಗ ಸಾರ್ವಜನಿಕವಾಗಿ ಪ್ರಕಟಿಸುವಂತೆ ತಾಕೀತು ಮಾಡಿತು. ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಯಿತು. ಬಿಜೆಪಿ ಕಟ್ಟಿದ್ದ ಸುಳ್ಳಿನ ಸೌಧ ಕುಸಿದುಬಿದ್ದಿತು. ಅಲ್ಲಿಂದ ಬೆಚ್ಚಿ ಬೀಳುವ ಸರದಿ ಬಿಜೆಪಿಯದಾಯಿತು.
ಬಿಜೆಪಿಯ ಬೆನ್ನಿಗೆ ನಿಂತು ಬೆಂಬಲಿಸಿದ್ದ ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾಗಳು, ಈಗ ಬಿಜೆಪಿ ಮತ್ತು ಮೋದಿಯಿಂದ ಅಂತರ ಕಾಯ್ದುಕೊಳ್ಳತೊಡಗಿವೆ. ಸಣ್ಣಪುಟ್ಟ ಸುದ್ದಿ ಸಂಸ್ಥೆಗಳು ಕೂಡ ಪ್ರಭುತ್ವದ ವಿರುದ್ಧ ಮಾತನಾಡುತ್ತಿವೆ. ಸಿಟಿಜನ್ ಜರ್ನಲಿಸ್ಟ್ಗಳು ಮುನ್ನೆಲೆಗೆ ಬಂದಿದ್ದಾರೆ. ಸುಳ್ಳು ಸುದ್ದಿ ಹರಡುವ ಪತ್ರಕರ್ತರ ವಿರುದ್ಧ ದೂರು ದಾಖಲಾಗುತ್ತಿದೆ. ಸರಿ-ತಪ್ಪುಗಳ ಕುರಿತು ಮುಕ್ತ ಸಂವಾದ ಸಾಧ್ಯವಾಗುತ್ತಿದೆ. ಸಾಮಾನ್ಯರ ಸದ್ದು ಕೇಳಿಸುತ್ತಿದೆ. ಭಾರತ ಬದಲಾಗುತ್ತಿದೆ.
1977ರಲ್ಲಿ ದೇಶ ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯಿಂದ ದಾಟಿ ಬಂದಂತೆ, ಮೋದಿಯ ಸರ್ವಾಧಿಕಾರಿ ಹಿಡಿತದಿಂದ ಈಗ ದೇಶ ನಿಧಾನವಾಗಿ ಕಳಚಿಕೊಳ್ಳುತ್ತ ಮತ್ತೆ ತನ್ನ ಹಳೆಯ ಲಯಕ್ಕೆ, ನಿಜವಾದ ಪ್ರಜಾಪ್ರಭುತ್ವಕ್ಕೆ ಹಿಂದಿರುಗುತ್ತಿದೆ. ಇದಲ್ಲವೇ ಆಗಬೇಕಾದ್ದು?





