ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು, ವಿಲೀನಗೊಳಿಸುತ್ತಿರುವುದು- ಸುಧಾರಣೆಯ ನೆಪದಲ್ಲಿ ಶಿಕ್ಷಣ ಕ್ಷೇತ್ರ ಮತ್ತಷ್ಟು ವ್ಯಾಪಾರೀಕರಣ ಹಾಗೂ ಖಾಸಗೀಕರಣ ಆಗುತ್ತಿರುವ ಸೂಚನೆಯಲ್ಲವೇ? ಸರ್ಕಾರ ನಿಧಾನವಾಗಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿಲ್ಲವೇ?
2018ರಲ್ಲಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಉನ್ನತೀಕರಿಸಲು, ಖಾಸಗಿ ಶಾಲೆಗಳತ್ತ ಮುಖಮಾಡುತ್ತಿರುವ ಮಕ್ಕಳನ್ನು ಸರ್ಕಾರಿ ಶಾಲೆಗಳ ಕಡೆಗೆ ವಾಪಸ್ ಕರೆತರಲು, ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್)ಗಳತ್ತ ಮನಸ್ಸು ಮಾಡಿದ್ದರು.
ಅಂದರೆ, ಸರ್ಕಾರಿ ಶಾಲೆಗಳಲ್ಲಿ ಉನ್ನತ ಗುಣಮಟ್ಟದ, ಭವಿಷ್ಯ ಕೇಂದ್ರಿತ ಶಿಕ್ಷಣವನ್ನು ನೀಡಲು ಸಾಧ್ಯವಾಗುವಂತೆ ಸಂಯುಕ್ತ ಶಾಲಾ ಶಿಕ್ಷಣದ ಮಾದರಿಯನ್ನು ಅಳವಡಿಸಿಕೊಳ್ಳಲು ಸರ್ಕಾರ ನಿರ್ಧರಿಸಿತ್ತು. ಈ ಪಬ್ಲಿಕ್ ಶಾಲೆಗಳಲ್ಲಿ ಎಲ್ಕೆಜಿಯಿಂದ ಪಿಯುಸಿವರೆಗಿನ ಶಿಕ್ಷಣವನ್ನು ನೀಡುವ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿತ್ತು.
ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ನಂತರ, ಸಿದ್ದರಾಮಯ್ಯನವರು 2025-26ನೇ ಸಾಲಿನ ಆಯವ್ಯಯ ಮಂಡನೆಯ ಸಂದರ್ಭದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ವ್ಯಾಪಕವಾಗಿ ವಿಸ್ತರಿಸಿ ಅನುಷ್ಠಾನಗೊಳಿಸುವ ಘೋಷಣೆ ಮಾಡಿದ್ದರು. ಈ ಯೋಜನೆಗಾಗಿ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ನಿಂದ ಸಾಲ ಪಡೆಯುವ ಬಗ್ಗೆಯೂ ಹೇಳಿದ್ದರು. ಬಜೆಟ್ ಮಂಡನೆಯಾಗಿ ಆರು ತಿಂಗಳ ನಂತರ, ಈಗ ಸರ್ಕಾರದ ನಿರ್ಧಾರ ಅನುಷ್ಠಾನಗೊಳ್ಳತೊಡಗಿದೆ.
ಈ ಕುರಿತು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಕ್ಟೋಬರ್ 15, 2025ರಂದು ವಿವರವಾದ ಆದೇಶವನ್ನು ಹೊರಡಿಸಿದೆ. ಈ ಆದೇಶದ ಪ್ರಕಾರ 2026-26 ಮತ್ತು 2026-27ನೇ ಸಾಲಿನಲ್ಲಿ ಮ್ಯಾಗ್ನೆಟ್ ಶಾಲೆಗಳೆಂದು ಗುರುತಿಸಲಾಗಿರುವ ರಾಜ್ಯದ ಸರಕಾರಿ ಶಾಲೆಗಳನ್ನು ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು ಸರಕಾರ ಅನುಮೋದನೆ ನೀಡಿದೆ.
ಇದನ್ನು ಓದಿದ್ದೀರಾ?: ಮೋದಿಯಡಿ ದೇಶ ಸುರಕ್ಷಿತವೆಂಬ ಸುಳ್ಳುಗುಳ್ಳೆಯ ಒಡೆದ ಸ್ಫೋಟ
ಖಾಸಗಿ ಶಾಲೆಗಳ ಹಾವಳಿ ಹಾಗೂ ಸರಕಾರಿ ಶಾಲೆಗಳ ಕಳಪೆ ಗುಣಮಟ್ಟದ ಕುರಿತು ಪೋಷಕರ ಹೇವರಿಕೆಯಿಂದ ಅದೆಷ್ಟೋ ಸರಕಾರಿ ಶಾಲೆಗಳು ಈಗಾಗಲೇ ಮುಚ್ಚಿಹೋಗಿವೆ. ಈ ಸಮಯದಲ್ಲಿ ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವಂತೆ ಸರಕಾರಿ ಶಾಲೆಗಳನ್ನು, ಪ್ರತಿ ಶಾಲೆಗೆ 2ರಿಂದ 4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಉನ್ನತೀಕರಿಸುವ ಕಾರ್ಯಗಳು ನಡೆಯಲಿವೆ ಎಂದು ಸರ್ಕಾರ ಹೇಳಿದೆ. ಇದಕ್ಕೆ ಪೂರಕವಾಗಿ ಶಿಕ್ಷಣ ಸಚಿವರು ‘ರಾಜ್ಯದಲ್ಲಿ ಈ ವರ್ಷದಲ್ಲಿಯೇ ಒಟ್ಟು 900 ಹೊಸ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುತ್ತದೆ’ ಎಂದಿದ್ದಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇವೆಲ್ಲವೂ ಒಳ್ಳೆಯ ವಿಚಾರಗಳೇ ಆಗಿವೆ. ಆದರೆ ಇದೆಲ್ಲವೂ ಪರಿಣಾಮಕಾರಿಯಾಗಿ ಕಾರ್ಯಗತಗೊಳ್ಳಲು ರಾಜಕೀಯ ಇಚ್ಛಾಶಕ್ತಿ ಮತ್ತು ಆಡಳಿತಾತ್ಮಕ ದಕ್ಷತೆಯ ಅಗತ್ಯವೂ ಇದೆ.
ಈಗಾಗಲೇ 2018ರಿಂದ ರಾಜ್ಯದಲ್ಲಿ ಒಟ್ಟು 308 ಕರ್ನಾಟಕ ಪಬ್ಲಿಕ್ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು 2.8 ಲಕ್ಷ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಕೆಲವು ಪಬ್ಲಿಕ್ ಶಾಲೆಗಳು ಅತ್ಯುತ್ತಮ ರೀತಿಯಲ್ಲಿಅಭಿವೃದ್ಧಿಗೊಂಡಿದ್ದರೆ, ಇನ್ನು ಕೆಲವು ಶಾಲೆಗಳ ಹೆಸರು ಮಾತ್ರ ಬದಲಾಗಿದ್ದು, ಶಿಕ್ಷಣದ ಗುಣಮಟ್ಟ ಮೊದಲಿನಂತೆಯೇ ಇದೆ. ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯಬೇಕು ಎಂದರೆ ಸುಸಜ್ಜಿತ ಕಟ್ಟಡ, ಇಂಗ್ಲಿಷ್, ವಿಜ್ಞಾನ, ಗಣಿತ ಹಾಗೂ ಲ್ಯಾಬೊರೇಟರಿ, ಕಂಪ್ಯೂಟರ್ ಲ್ಯಾಬ್, ಸ್ಮಾರ್ಟ್ ಕ್ಲಾಸ್, ಆಟದ ಮೈದಾನ ಸೇರಿದಂತೆ ಎಲ್ಲ ಸೌಕರ್ಯವೂ ಅಲ್ಲಿರಬೇಕು. ಆದರೆ ಹಲವು ಪಬ್ಲಿಕ್ ಶಾಲೆಗಳು ಇಂದಿಗೂ ಈ ಮಟ್ಟಕ್ಕೆ ಅಭಿವೃದ್ಧಿ ಹೊಂದಿಲ್ಲದಿರುವುದು ನಮ್ಮ ಕಣ್ಣಮುಂದೆಯೇ ಇದೆ.
ಪರಿಸ್ಥಿತಿ ಹೀಗಿರುವಾಗ, ಶಿಕ್ಷಣ ಇಲಾಖೆಯಿಂದ ಮತ್ತೊಂದು ಆದೇಶ ಹೊರಬಿದ್ದಿದೆ. ಅದರ ಪ್ರಕಾರ, 800 ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗಳು ಎಂದು ಗುರುತಿಸಲಾಗಿದೆ. ಅಂದರೆ ಪಬ್ಲಿಕ್ ಶಾಲೆಯ ಸುತ್ತಮುತ್ತಲಿನ 1ರಿಂದ 5 ಕಿ.ಮೀ ವ್ಯಾಪ್ತಿಯ, 50ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಚಿಕ್ಕಪುಟ್ಟ ಶಾಲೆಗಳನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳಲಿದೆ ಎನ್ನಲಾಗಿದೆ. ಇದರ ಬೆನ್ನಿಗೇ ಶಿಕ್ಷಣ ಇಲಾಖೆಯಿಂದ ಮತ್ತೊಂದು ಜ್ಞಾಪನ ಪತ್ರ- ಚನ್ನಪಟ್ಟಣ ತಾಲೂಕಿನ 7 ಶಾಲೆಗಳನ್ನು ಹತ್ತಿರದ ಕೆಪಿಎಸ್ ಹೊಂಗನೂರು ಶಾಲೆ(ಕಣ್ವ ಫೌಂಡೇಷನ್ ಸಂಸ್ಥೆಯ ಶಾಲೆ)ಯೊಂದಿಗೆ ವಿಲೀನಗೊಳಿಸುವ ಆದೇಶ ಹೊರಬಿದ್ದಿದೆ.
ಸರ್ಕಾರ ಹೇಳುತ್ತಾ ಬಂದಿರುವುದು 50ಕ್ಕಿಂತ ಕಡಿಮೆ ಮಕ್ಕಳ ಹಾಜರಾತಿ ಇರುವ ಶಾಲೆಗಳ ವಿಲೀನ ಎಂದು. ಆದರೆ ಶಿಕ್ಷಣ ಇಲಾಖೆಯ ಜ್ಞಾಪನ ಪತ್ರದ ಪ್ರಕಾರವೇ ಚನ್ನಪಟ್ಟಣ ತಾಲೂಕಿನ 7 ಶಾಲೆಗಳ ಪೈಕಿ ಎರಡರಲ್ಲಿ 50ಕ್ಕಿಂತ ಕಡಿಮೆಯಿದ್ದು, ಮಿಕ್ಕ ಐದರಲ್ಲಿ 70, 77, 80, 82, 100 ವಿದ್ಯಾರ್ಥಿಗಳಿದ್ದಾರೆ. ಸಂಖ್ಯೆ ಹೆಚ್ಚಾಗಿರುವ ಶಾಲೆಗಳನ್ನೂ ಮುಚ್ಚಿ, ವಿಲೀನಗೊಳಿಸಲಾಗುತ್ತಿದೆ.
ಮುಖ್ಯಮಂತ್ರಿಗಳು ಮತ್ತು ಸಚಿವರು, ನಾವು ಯಾವುದೇ ಕಾರಣಕ್ಕೂ ಸರಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಬಹಿರಂಗವಾಗಿ ಹೇಳುತ್ತಾರೆ. ಆದರೆ ಶಿಕ್ಷಣ ಇಲಾಖೆಯ ಮೂಲಕ ಮುಚ್ಚುವ ಪ್ರಕ್ರಿಯೆ ಜಾರಿಯಲ್ಲಿಟ್ಟಿದ್ದಾರೆ. ಇರುವ ಶಾಲೆಗಳಿಗೆ ಸರಿಯಾದ ಸೌಲಭ್ಯಗಳನ್ನು ನೀಡಿ, ಶಿಕ್ಷಕರನ್ನು ನೇಮಿಸಿದರೆ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಅದನ್ನು ಬಿಟ್ಟು ಈ ರೀತಿ ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಸರಿಯೇ ಎಂಬ ಪ್ರಶ್ನೆಯೂ ಎದುರಾಗುತ್ತದೆ.
ಜೊತೆಗೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸರಿಯಾಗಿ ನಡೆಯದ ಕಾರಣ ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಸದ್ಯ ಶಿಕ್ಷಕರ ಕೊರತೆ ಎದ್ದು ಕಾಣಿಸುತ್ತಿದೆ. ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವುದನ್ನು ಬಿಟ್ಟು ಸರ್ಕಾರ ಅತಿಥಿ ಶಿಕ್ಷಕರಿಂದ ಮಕ್ಕಳಿಗೆ ಪಾಠ ಮಾಡಿಸುತ್ತಿದೆ. ಶಿಕ್ಷಕರ ಕೊರತೆ ಮರೆಮಾಚಲು ಸರ್ಕಾರವೇ ಇಂತಹ ನಿರ್ಧಾರಕ್ಕೆ ಬಂದಿದೆ ಎನ್ನುವ ಮಾತೂ ಕೇಳಿಬರುತ್ತಿದೆ.
ಏತನ್ಮಧ್ಯೆ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು, ‘ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಒಂದನೇ ತರಗತಿಯಲ್ಲಿ ಕಂಪ್ಯೂಟರ್ ಶಿಕ್ಷಣ ಹಾಗೂ ಆರನೇ ತರಗತಿಯಲ್ಲಿ ಕೌಶಲ ಅಭಿವೃದ್ಧಿ ತರಬೇತಿ ನೀಡಲಾಗುತ್ತದೆ’ ಎಂದಿದ್ದಾರೆ. ಅದು, 50ಕ್ಕಿಂತ ಕಡಿಮೆ ಹಾಜರಾತಿ ಇರುವ ಸುಮಾರು 27 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುವ, ಪಬ್ಲಿಕ್ ಶಾಲೆಗಳ ಜೊತೆ ಸಂಯೋಜಿಸುವ ಕುರಿತಾಗಿ ಮಾತ್ರ ಹೇಳುತ್ತಿಲ್ಲ. ಬದಲಾಗಿ 6ನೇ ತರಗತಿಯಿಂದಲೇ ವೃತ್ತಿಪರ ತರಬೇತಿಗಳನ್ನು ಆರಂಭಿಸುವ, ಆ ತರಬೇತಿಗೆ ಖಾಸಗಿ ಉದ್ಯಮಪತಿಗಳೊಂದಿಗೆ ಕೈಜೋಡಿಸುವ, ಪ್ರಮಾಣ ಪತ್ರ ಕೊಡಿಸುವ ಯೋಜನೆಯೂ ಅಡಗಿದೆ. ಅಂದರೆ, ಖಾಸಗಿ ಉದ್ದಮಪತಿಗಳಿಗೆ ಬೇಕಾದ ಕುಶಲಕರ್ಮಿಗಳನ್ನು ನಿರ್ಮಾಣ ಮಾಡಲು ಸರಕಾರಿ ಶಾಲೆಗಳಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. 10-12 ತರಗತಿಗಳ ನಂತರ ನಿರ್ಗಮನ ಆಯ್ಕೆಗಳನ್ನು ತೆರೆಯುವ ಕಾರಣ ಆ ವಿದ್ಯಾರ್ಥಿಗಳು ಖಾಸಗಿ ಕಂಪನಿಗಳು ನೀಡಿದ ಪ್ರಮಾಣ ಪತ್ರಗಳ ಆಧಾರದಲ್ಲಿ ಖಾಸಗಿ ಕಂಪನಿಗಳ ಕಾರ್ಮಿಕರಾಗಿ ಉನ್ನತ ವ್ಯಾಸಂಗವನ್ನು ಮೊಟಕುಗೊಳಿಸಲಿದ್ದಾರೆ.
ಇದನ್ನು ಓದಿದ್ದೀರಾ?: ದಿಲ್ಲಿಗೆ ಬಾಂಬ್ ಬಿದ್ದಿದೆ, ಪ್ರಧಾನಿ ಮೋದಿ ಎಂದಿನಂತೆ ವಿದೇಶ ಪ್ರವಾಸದಲ್ಲಿದ್ದಾರೆ!
ಅಂದರೆ, ಒಂದೆಡೆ ರಾಜ್ಯದಲ್ಲಿರುವ ಸರಕಾರಿ ಶಾಲೆಗಳನ್ನು ಮುಚ್ಚುವುದು, ಪಬ್ಲಿಕ್ ಶಾಲೆಗಳಲ್ಲಿ ಓದುವ ದಲಿತ-ಹಿಂದುಳಿದ ವರ್ಗಗಳಿಗೆ ಸೇರಿದ ಬಡವರ ಮಕ್ಕಳನ್ನು ಕುಶಲಕರ್ಮಿಗಳನ್ನಾಗಿ ತಯಾರು ಮಾಡುವುದು. ಸರ್ಕಾರದ ಮೂಗಿನಡಿಯಲ್ಲಿಯೇ ಖಾಸಗಿ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವುದು. ಈಗಾಗಲೇ ಶಿಕ್ಷಣ ಕ್ಷೇತ್ರ ಖಾಸಗಿಯವರ ಕೈವಶವಾಗಿದೆ. ಅಳಿದುಳಿದ ಬಡವರ ಮಕ್ಕಳನ್ನೂ ಖಾಸಗಿ ಉದ್ಯಮಪತಿಗಳ ಶ್ರಮಿಕವರ್ಗವನ್ನಾಗಿ ಮಾಡಿದರೆ, ಅವರ ಭವಿಷ್ಯವೇನಾಗಬಹುದು?
ಭಾರತೀಯ ಸಂವಿಧಾನದ ಪ್ರಕಾರ ಶಿಕ್ಷಣದ ಹಕ್ಕು ಮೂಲಭೂತ ಹಕ್ಕಾಗಿದೆ. ಸಕಲ ಸಮುದಾಯದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಯಾವುದೇ ರೀತಿಯ ತಾರತಮ್ಯ ಇಲ್ಲದೆ ಕೈಗೆಟಕುವಂತೆ ಮಾಡುವುದು ಸರ್ಕಾರದ ಹೊಣೆಗಾರಿಕೆಯಾಗಿದೆ. ಆದರೆ, ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು, ಖಾಸಗಿ ಸಹಭಾಗಿತ್ವದ ಪಬ್ಲಿಕ್ ಶಾಲೆಗಳೊಂದಿಗೆ ವಿಲೀನಗೊಳಿಸುತ್ತಿರುವುದು- ಸರ್ಕಾರ ನಿಧಾನವಾಗಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದನ್ನು ಸೂಚಿಸುತ್ತಿಲ್ಲವೇ? ಸುಧಾರಣೆಯ ನೆಪದಲ್ಲಿ ಶಿಕ್ಷಣ ಕ್ಷೇತ್ರ ಮತ್ತಷ್ಟು ವ್ಯಾಪಾರೀಕರಣ ಹಾಗೂ ಖಾಸಗೀಕರಣ ಆಗುತ್ತಿರುವ ದ್ಯೋತಕವಲ್ಲವೇ? ಇದು ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಯಂತೆ- ಖಾಸಗಿ ಕೇಂದ್ರಿತ, ಬಡ ಮಕ್ಕಳ ವಿರುದ್ಧವಾಗಿಲ್ಲವೇ?





