ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ದೆಹಲಿಗಳಲ್ಲಿ ಮಾಡಿದ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ನಿತೀಶ್ರನ್ನು ಬಿಜೆಪಿ ಹೇಗೆ ನೋಡುತ್ತಿದೆ, ಏನು ಮಾಡುತ್ತದೆ ಎಂಬುದು ಸ್ಪಷ್ಟವಾಗುತ್ತದೆ.
ಬಿಹಾರ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಮತದಾನದ ದಿನಾಂಕ ಹತ್ತಿರವಾದಂತೆಲ್ಲ, ಬಿಹಾರ ಯಾರಿಗೆ ಒಲಿಯಲಿದೆ, ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಪ್ರಶ್ನೆಗಳು ಮುನ್ನೆಲೆಗೆ ಬರುತ್ತಿವೆ. ಆರ್ಜೆಡಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಮಹಾಘಟಬಂಧನ್ ಮೈತ್ರಿಕೂಟದಿಂದ ಈಗಾಗಲೇ ತೇಜಸ್ವಿ ಯಾದವ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಆದರೆ ಜೆಡಿಯು, ಬಿಜೆಪಿ ಮತ್ತು ಇತರ ಪಕ್ಷಗಳ ಎನ್ಡಿಎ ಮೈತ್ರಿಕೂಟದಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವುದು ಇವತ್ತಿನವರೆಗೂ ಇತ್ಯರ್ಥವಾಗಿಲ್ಲ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ‘ನಾನೊಬ್ಬನೇ ಮುಖ್ಯಮಂತ್ರಿ ಯಾರೆಂದು ನಿರ್ಧರಿಸಲು ಸಾಧ್ಯವಿಲ್ಲ. ಎನ್ಡಿಎ ಮೈತ್ರಿಕೂಟವು ಹಲವು ಪಕ್ಷಗಳನ್ನು ಒಳಗೊಂಡಿದೆ. ಹಾಗಾಗಿ, ಚುನಾವಣೆಯ ನಂತರ, ಎಲ್ಲ ಪಕ್ಷಗಳು ಸಭೆ ಸೇರಿ ಮುಖ್ಯಮಂತ್ರಿ ಯಾರು ಎಂದು ನಿರ್ಧರಿಸಲಾಗುತ್ತದೆ’ ಎಂಬ ದಾಳ ಉರುಳಿಸಿದ್ದಾರೆ.
ಪ್ರಧಾನಿ ಮೋದಿಯವರು ಮೊನ್ನೆ ಬೇಗುಸರಾಯ್ ಮತ್ತು ಸಮಸ್ತೀಪುರದ ಭಾರೀ ಬಹಿರಂಗ ಸಭೆಗಳಲ್ಲಿ 13ರಿಂದ 14 ಬಾರಿ ನಿತೀಶ್ ಕುಮಾರ್ ಅವರ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಎದೆಯುಬ್ಬಿಸಿ ಹೇಳಿದ್ದಾರೆ. ಆದರೆ ಒಮ್ಮೆಯೂ ನಿತೀಶ್ ಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಹೇಳದೆ ನುಣುಚಿಕೊಂಡಿದ್ದಾರೆ.
ಕುತೂಹಲಕರ ಸಂಗತಿ ಎಂದರೆ, 2020ರ ಚುನಾವಣೆಯಲ್ಲಿಯೂ ಜೆಡಿಯು ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದವು. ಆಗಲೂ ಪ್ರಧಾನಿ ಮೋದಿಯವರು ಇದೇ ರೀತಿ ಬಿಹಾರದಲ್ಲಿ ಭಾರೀ ಬಹಿರಂಗ ಸಭೆಗಳನ್ನುದ್ದೇಶಿಸಿ ಮಾತನಾಡಿದ್ದರು. ಹೋದಲ್ಲಿ ಬಂದಲ್ಲಿ ಬಹಳ ಸ್ಪಷ್ಟವಾಗಿ ‘ನಿತೀಶ್ ಕುಮಾರ್ ಮುಂದಿನ ಮುಖ್ಯಮಂತ್ರಿ’ ಎಂದು ಹೇಳಿದ್ದರು. ಹೇಳಿದಂತೆಯೇ ಮಾಡಿದ್ದರು. ಆದರೆ ಈ ಬಾರಿ ಮೋದಿ, ಶಾರಿಂದ ಹಿಡಿದು ಬಿಜೆಪಿಯ ಯಾವ ನಾಯಕರೂ ನಿತೀಶ್ ಕುಮಾರ್ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳುತ್ತಿಲ್ಲ.
ಇದನ್ನು ಓದಿದ್ದೀರಾ?: ಟನಲ್ ರೋಡ್ ದೈತ್ಯ ಯೋಜನೆಯನ್ನು ಸಾರ್ವಜನಿಕ ಚರ್ಚೆಗಿಡಲಿ ಸರ್ಕಾರ
ನಿತೀಶ್ ಕುಮಾರ್ ಅವರಿಗೆ ವಯಸ್ಸಾಗಿದೆ, ಆರೋಗ್ಯ ಕೆಟ್ಟಿದೆ, ವರ್ಚಸ್ಸು ಕಳೆಗುಂದಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿಲ್ಲ. ಈಗಲೂ ನಿತೀಶ್ ಕುಮಾರ್, ಒಂದೇ ದಿನದಲ್ಲಿ ಏಳೆಂಟು ಸಭೆಗಳನ್ನು ಮಾಡುವ ಮೂಲಕ ಮುಂಚೂಣಿಯಿಂದ ಹಿಂದೆ ಸರಿದಿಲ್ಲ. ಆರೋಗ್ಯ ಸ್ವಲ್ಪ ಕೈ ಕೊಟ್ಟಿರಬಹುದು, ದುರ್ಬಲರಲ್ಲ. ಆದರೆ ನಿತೀಶ್ ಮತ್ತು ವಿರೋಧಪಕ್ಷಗಳಿಗಿಂತ ಹೆಚ್ಚಾಗಿ ಎನ್ಡಿಎ ಒಳಗಿನಿಂದಲೇ ನಿತೀಶ್ ಅನಾರೋಗ್ಯದ ಬಗ್ಗೆ ಅಪಸ್ವರಗಳೇಳುತ್ತಿವೆ. ಸೈಡಿಗೆ ಸರಿಸುವ ಸಂಚು ಜಾರಿಯಲ್ಲಿದೆ.
ಇದಕ್ಕೆ ಪೂರಕವಾಗಿ, ಎನ್ಡಿಎ ಮೈತ್ರಿಕೂಟದಿಂದ ಚುನಾವಣಾ ಪ್ರಚಾರಕಾರ್ಯಕ್ಕಾಗಿ ಪ್ರತಿದಿನ 13 ಹೆಲಿಕಾಪ್ಟರ್ಗಳು ಬಿಹಾರದ ಆಗಸದಲ್ಲಿ ಹಾರಾಡುತ್ತಿವೆ. 11 ಹೆಲಿಕಾಪ್ಟರ್ಗಳನ್ನು ಬಿಜೆಪಿ ಉಪಯೋಗಿಸಿದರೆ, ಕೇವಲ 2 ಜೆಡಿಯುಗೆ ಕೊಡಲಾಗಿದೆ. ಪ್ರತಿದಿನ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಕೇವಲ ಹೆಲಿಕಾಪ್ಟರ್ಗಾಗಿಯೇ ಖರ್ಚು ಮಾಡಲಾಗುತ್ತಿದೆ. ಈ ತಾರತಮ್ಯ ಮತ್ತು ಇಷ್ಟೊಂದು ಹಣ ಖರ್ಚು ಮಾಡುತ್ತಿರುವುದು ನಿತೀಶ್ರನ್ನು ಮುಖ್ಯಮಂತ್ರಿ ಮಾಡಲೋ ಅಥವಾ ಮಾಡದಿರಲೋ ಎಂಬ ಪ್ರಶ್ನೆ ಎದುರಾಗುತ್ತದೆ.
ಹಾಗೆಯೇ ಅಕ್ಟೋಬರ್ 29ರಂದು ಬಿಜೆಪಿ ಕಡೆಯಿಂದ ಅಮಿತ್ ಶಾ, ಯೋಗಿ ಆದಿತ್ಯನಾಥ್, ರಾಜನಾಥ್ ಸಿಂಗ್, ನಾಯಬ್ ಸಿಂಗ್ ಸೈನಿ, ರೇಖಾ ಗುಪ್ತಾ, ಮೋಹನ್ ಯಾದವ್, ಬಾಬೂಲಾಲ್ ಮರಾಂಡಿ ಅವರ ಬಹಿರಂಗ ಸಭೆಗಳನ್ನು ಏರ್ಪಡಿಸಲಾಗಿದೆ. ಇವರೆಲ್ಲ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಲು ಶ್ರಮಿಸುತ್ತಿದ್ದಾರೆಯೇ ಎಂಬ ಅನುಮಾನವೂ ಕಾಡುತ್ತದೆ.
ನಿತೀಶ್ ಕುಮಾರ್ ಸಾಮಾನ್ಯರಲ್ಲ. 1975ರ ತುರ್ತು ಪರಿಸ್ಥಿತಿಯಲ್ಲಿ ಉದ್ಭವಿಸಿದ ರೆಬೆಲ್ ನಾಯಕ. ಜಯಪ್ರಕಾಶ್ ನಾರಾಯಣ್ ಅವರ ಅನುಯಾಯಿ. ಸತತ 6 ಬಾರಿ ಸಂಸದರಾಗಿ ಆಯ್ಕೆಯಾಗಿ, ಕೇಂದ್ರದಲ್ಲಿ ಹಲವು ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ ಪ್ರಭಾವಿ. ಹಾಗೆಯೇ 2005ರಿಂದ ಇಲ್ಲಿಯವರೆಗೆ, 9 ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ, ಸುಮಾರು 18 ವರ್ಷ 4 ತಿಂಗಳ ಕಾಲ ಆಡಳಿತ ನಡೆಸಿದ ರಾಜಕೀಯ ಮುತ್ಸದ್ದಿ. ದೀರ್ಘಕಾಲ ಮುಖ್ಯಮಂತ್ರಿಯಾಗಿದ್ದರೂ, ಬಿಹಾರವನ್ನು ಉದ್ಧಾರ ಮಾಡಿದವರಲ್ಲ. ಆದರೂ, ಈಗಲೂ ಬಿಹಾರದಲ್ಲಿ ತಮ್ಮದೇ ಆದ ವರ್ಚಸ್ಸನ್ನು ಹೊಂದಿರುವ ಜನನಾಯಕ. ಇಂತಹ ನಾಯಕ ನಿತೀಶ್ರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸುತ್ತಿಲ್ಲವೇಕೆ?
ಅಂದರೆ, ಬಿಜೆಪಿ ನಾಯಕರಿಗೆ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಮನಸ್ಸಿಲ್ಲ; ಮಾಡುವುದಿಲ್ಲ ಅಂತಲೂ ಹೇಳುತ್ತಿಲ್ಲ. ಬದಲಿಗೆ ‘ನಿತೀಶ್ ಮುಖ್ಯಮಂತ್ರಿಯಾಗಿದ್ದರು, ಆಗಿದ್ದಾರೆ, ಆಗಿಯೇ ಉಳಿಯುತ್ತಾರೆ’ ಎಂಬ ಚಮತ್ಕಾರಿಕ ಮಾತುಗಳನ್ನಾಡುತ್ತಿದ್ದಾರೆ. ಅಂದರೆ ಗೆಲ್ಲಲು ನಿತೀಶ್ ಕುಮಾರ್ ಬೇಕು, ಗೆದ್ದ ನಂತರ ಬೇಡ. ಇದನ್ನು ಕೂಡ ಬಿಜೆಪಿ ಬಹಿರಂಗವಾಗಿ ಹೇಳುತ್ತಿಲ್ಲ.
ಬಿಹಾರದಲ್ಲಿ ಶೇ. 36ರಷ್ಟಿರುವ ಇಬಿಸಿ ಹಾಗೂ ನಿತೀಶ್ ಕುಮಾರ್ ಜಾತಿಯಾದ ಕುರ್ಮಿ-ಕುಶ್ವಾಹ ಸಮುದಾಯ ಶೇ. 7ರಷ್ಟಿದ್ದು, ಅದು ಬಿಜೆಪಿಯೊಂದಿಗಿಲ್ಲ. ಮಹಿಳೆಯರು ನಿತೀಶ್ ಪರವಾಗಿದ್ದರೆ, ಯುವಕರು ಜೆಡಿಯು ಪರವಿದ್ದಾರೆ. ಏಕಾಂಗಿಯಾಗಿ ಬಿಹಾರದಲ್ಲಿ ಗೆದ್ದು ಅಧಿಕಾರಕ್ಕೇರುವ ದಮ್ಮು-ತಾಕತ್ತು ಬಿಜೆಪಿಗಿಲ್ಲ. ಹಾಗಾಗಿ ಅನಿವಾರ್ಯವಾಗಿ, ಚುನಾವಣೆ ಗೆಲ್ಲಲಿಕ್ಕಾಗಿ ನಿತೀಶ್ರೊಂದಿಗೆ ಬಿಜೆಪಿ ಕೈಜೋಡಿಸದೆ ವಿಧಿಯಿಲ್ಲ.
ಜೊತೆಗೆ, ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ದೆಹಲಿಗಳಲ್ಲಿ ಮಾಡಿದ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ನಿತೀಶ್ರನ್ನು ಬಿಜೆಪಿ ಹೇಗೆ ನೋಡುತ್ತಿದೆ, ಏನು ಮಾಡುತ್ತದೆ ಎಂಬುದು ಸ್ಪಷ್ಟವಾಗುತ್ತದೆ.
ಇದನ್ನು ಓದಿದ್ದೀರಾ?: ಆರ್ಎಸ್ಎಸ್ ಸಮವಸ್ತ್ರಕ್ಕೆ ‘ಗಣವೇಷ’ ಎನ್ನುವುದು ತಪ್ಪಲ್ಲವೇ?
ಮಹಾರಾಷ್ಟ್ರದಲ್ಲಿ ಶಿವಸೇನೆಯ ಏಕನಾಥ್ ಶಿಂದೆ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಯಿತು, ಗೆದ್ದಮೇಲೆ ಬಿಜೆಪಿಯ ದೇವೇಂದ್ರ ಫಡಣವೀಸ್ ಮುಖ್ಯಮಂತ್ರಿಯಾದರು. ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ನಾಯಕತ್ವದಲ್ಲಿ ಚುನಾವಣೆ ನಡೆಸಲಾಯಿತು, ಗೆದ್ದ ನಂತರ ಮೋಹನ್ ಯಾದವ್ ಮುಖ್ಯಮಂತ್ರಿ ಆದರು. ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲಾಯಿತು.
ಇದು ಬಿಜೆಪಿಯ ಬದ್ನಾಮ್ ರಾಜಕಾರಣ. ಇದು ನಿತೀಶ್ ಕುಮಾರ್ಗೂ ಗೊತ್ತಿದೆ. ನಿತೀಶ್ ಗೆದ್ದರೂ, ಸೋತರೂ- ಈ ಚುನಾವಣೆಯೇ ಅಂತಿಮ ಎನ್ನುವುದಂತೂ ಸ್ಪಷ್ಟ. ಅದನ್ನು ಬಿಜೆಪಿ ಬರೆಯುತ್ತದೋ ಅಥವಾ ಸಂದರ್ಭವೇ ಸೂಚಿಸುತ್ತದೋ ಕಾದು ನೋಡಬೇಕು.





