ಮುಖ್ಯಮಂತ್ರಿಗಳ ವೈಮಾನಿಕ ಸಮೀಕ್ಷೆ ಮತ್ತೊಂದು ಕಾಟಾಚಾರದ ಸಮೀಕ್ಷೆ ಆಗದೆ, ಅಲ್ಲಿನ ಜನರ ನಿರೀಕ್ಷೆಯನ್ನು ಹುಸಿಗೊಳಿಸದೆ, ನೆಲಕ್ಕಿಳಿದು ನೋಡಿ ಸಂತೈಸಿ ಸಮರೋಪಾದಿಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಿದೆ.
2018ರಲ್ಲಿ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಿ ಭೀಮಾನದಿಗೆ 5 ಲಕ್ಷ ಕ್ಯೂಸೆಕ್ ನೀರು ಹರಿದು ಬಂದು, ರಾಜ್ಯದ ವಿಜಯಪುರ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಸುಮಾರು 100 ಗ್ರಾಮಗಳು ಜಲಾವೃತವಾಗಿದ್ದವು. ಜನರ ಬೆಳೆ ಮತ್ತು ಬದುಕು ಬರಿದಾಗಿದ್ದವು.
ಈಗ, 2025ರಲ್ಲಿ ಮತ್ತೆ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಿದೆ, ಭೀಮಾ ನದಿಗೆ ನೀರು ಹರಿದಿದೆ. ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಆವರಿಸಿದೆ. ಆಗ, 2018ರಲ್ಲಿ 5 ಲಕ್ಷ ಕ್ಯೂಸೆಕ್ ಆಗಿದ್ದರೆ, ಈಗ 24 ಲಕ್ಷ ಕ್ಯೂಸೆಕ್ ನೀರು ಭೀಮಾನದಿಗೆ ಹರಿದು ಬಂದಿದೆ. ನೀರಿನ ರಭಸಕ್ಕೆ ಯಾದಗಿರಿ ನಗರ ಜಲಾವೃತವಾಗಿದೆ. ವಿಜಯಪುರ, ಕಲಬುರಗಿ, ಬೀದರ್ ಜಿಲ್ಲೆಗಳಿಗೂ ವ್ಯಾಪಿಸಿದೆ. ಜೊತೆಗೆ ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಸುಮಾರು ನೂರಕ್ಕೂ ಹೆಚ್ಚು ಗ್ರಾಮಗಳು ನೀರಿನಲ್ಲಿ ತೇಲುತ್ತಿವೆ. ಕಂದಾಯ ಸಚಿವ ಕೃಷ್ಣಬೈರೇಗೌಡರ ಅಂಕಿ-ಅಂಶದ ಪ್ರಕಾರವೇ 8.60 ಲಕ್ಷ ಹೆಕ್ಟೇರ್ನಷ್ಟು ಬೆಳೆ ಹಾನಿಯಾಗಿದೆ. ರೈತರಿಗೆ ಭಾರೀ ನಷ್ಟ ಸಂಭವಿಸಿದೆ. ಹೀಗೆ ಇದ್ದಕ್ಕಿದ್ದಂತೆ ಭೀಮಾನದಿಗೆ ನೀರು ನುಗ್ಗುವುದರ ನೆದರಿಲ್ಲದ, ಸರಿಯಾದ ಸೂರಿಲ್ಲದ ಕೆಲ ಬಡವರ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಕೆಲವರ ಪ್ರಾಣಪಕ್ಷಿ ಹಾರಿಹೋಗಿದೆ.
ಪ್ರಾಕೃತಿಕ ವಿಕೋಪ ತಡೆಯುವುದು, ನಿಯಂತ್ರಿಸುವುದು ಕಷ್ಟ, ನಿಜ. ಆದರೆ 2018ರಲ್ಲಿ ಭೀಮಾನದಿಯಲ್ಲಿ ಇದೇ ರೀತಿ ನೀರು ಹರಿದಿತ್ತು. ನದಿಪಾತ್ರದ ಜನರ ಕಷ್ಟ-ನಷ್ಟಕ್ಕೆ, ಸಾವು-ನೋವಿಗೆ ಕಾರಣವಾಗಿತ್ತು. ಆಳುವ ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಅದು ತಿಳಿದಿತ್ತು. ಅಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ ಎಂಬುದರ ಮಾಹಿತಿಯೂ ಇತ್ತು. ಗೊತ್ತಾದ ತಕ್ಷಣ ಮುನ್ಸೂಚನೆ ಮತ್ತು ಪರಿಹಾರ ಕ್ರಮಗಳನ್ನು ದಕ್ಷವಾಗಿ ನಿರ್ವಹಿಸಿದ್ದರೆ ಹಾನಿಯ ಪ್ರಮಾಣವನ್ನು ಸಾಕಷ್ಟು ಕಡಿಮೆ ಮಾಡಬಹುದಿತ್ತು.
ಇದನ್ನು ಓದಿದ್ದೀರಾ?: ಪಹಲ್ಗಾಮ್ ದಾಳಿ, ಯುದ್ಧ ಮತ್ತು ಕ್ರಿಕೆಟ್- ಮೋದಿ ಅಸಹ್ಯ ರಾಜಕಾರಣಕ್ಕೆ ಎಲ್ಲವೂ ಬಲಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಳೆದ ಭಾನುವಾರ ಪತ್ರಕರ್ತರನ್ನು ಕರೆದು, ಸುದ್ದಿ ಮಾಡಿದ್ದಾರೆ. ಸೋಮವಾರದಿಂದ ಕಲ್ಯಾಣ ಕರ್ನಾಟಕದಲ್ಲಿ ಪ್ರವಾಸ ಆರಂಭಿಸಿದ್ದಾರೆ. ಪ್ರತಿಪಕ್ಷ ನಾಯಕರು ಪ್ರವಾಸ ಕೈಗೊಂಡಿದ್ದರಿಂದ ಕೊಂಚ ವಿಚಲಿತರಾದ ಆಳುವ ಪಕ್ಷದ ಸಚಿವರಾದ ಎಂ.ಬಿ ಪಾಟೀಲ್ ಪ್ರವಾಹಪೀಡಿತ ಪ್ರದೇಶಗಳಾದ ವಿಜಯಪುರ ಜಿಲ್ಲೆಯ ಕೆಲ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳನ್ನು ಕರೆದು ಸಮಗ್ರ ಸಮೀಕ್ಷೆ ಮಾಡಲು ಸೂಚನೆ ನೀಡಿದ್ದಾರೆ.
ಹಾಗೆಯೇ ಕಲ್ಯಾಣ ಕರ್ನಾಟಕ ಭಾಗದ ಸಚಿವರಾದ ಈಶ್ವರ ಖಂಡ್ರೆ ಮತ್ತು ರಹೀಂ ಖಾನ್, ತೀವ್ರ ಮಳೆ ಮತ್ತು ಪ್ರವಾಹದಿಂದ ಹಾನಿ ಉಂಟಾಗಿರುವ ಹಿನ್ನೆಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ತುರ್ತು ಪರಿಹಾರ ಹಾಗೂ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಸಚಿವರ ಮನವಿಗೆ ಓಗೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಂದಾಯ ಸಚಿವರಿಗೆ, ಮುಖ್ಯ ಕಾರ್ಯದರ್ಶಿಗಳಿಗೆ ಪರಿಸ್ಥಿತಿ ಮೇಲೆ ನಿಗಾ ವಹಿಸಿ, ರಕ್ಷಣಾ ಮತ್ತು ಪರಿಹಾರ ಕಾರ್ಯ ಕೈಗೊಳ್ಳುವಂತೆ ಸೂಚಿಸಿದ್ದಾರೆ. ವೈಮಾನಿಕ ಸಮೀಕ್ಷೆಗೆ ಮುಂದಾಗಿದ್ದಾರೆ.
ಅಂದರೆ, ಆಳುವ ಪಕ್ಷ ಹಾಗೂ ಕೇಳುವ ಪಕ್ಷ- ಎರಡೂ ಎಚ್ಚೆತ್ತವರಂತೆ ನಾಟಕವಾಡುತ್ತಿವೆ. ಸರ್ಕಾರ ವೈಮಾನಿಕ ಸಮೀಕ್ಷೆ, ಪರಿಹಾರದ ಬಗ್ಗೆ ಮಾತನಾಡುತ್ತಿದೆ. ವಿರೋಧಪಕ್ಷ ಪ್ರವಾಸದ ನೆಪದಲ್ಲಿ ಪ್ರಚಾರ ಪಡೆಯಲು ಹವಣಿಸುತ್ತಿದೆ. ಸರ್ಕಾರ ಪರಿಹಾರಕ್ಕಾಗಿ ಕೇಂದ್ರವನ್ನು ದೂರುತ್ತಿದೆ. ವಿಪಕ್ಷ ರಾಜ್ಯ ಸರ್ಕಾರದಿಂದ ತಕ್ಷಣ 3 ಸಾವಿರ ಕೋಟಿ ರೂ. ಪರಿಹಾರ ಘೋಷಿಸಿ ವಿತರಣೆ ಮಾಡಬೇಕು ಎಂದು ಒತ್ತಾಯಿಸುತ್ತಿದೆ. ಅಸಲಿಗೆ, ಸಮಸ್ಯೆ ಎದುರಾದಾಗ ಎಚ್ಚರಗೊಂಡು ಓಡಾಡುವುದು, ಒಂದಷ್ಟು ಕಾಳಜಿ ತೋರುವುದು ಆಳುವ-ಕೇಳುವ ಪಕ್ಷಗಳ ಕಣ್ಣೊರೆಸುವ ತಂತ್ರದ ಭಾಗವೇ ಆಗಿಹೋಗಿದೆ.
ಏತನ್ಮಧ್ಯೆ ಭೀಮಾನದಿ ಉಕ್ಕಿ ಹರಿಯುತ್ತಿದೆ. ಮೊದಲೇ ಬಡತನ, ಸಣ್ಣ ಸೂರಿನ ಸಂಸಾರಗಳು. ಪ್ರವಾಹಪೀಡಿತ ಪ್ರದೇಶದ ಜನರ ಗೋಳಾಟ ಕೇಳದಾಗಿದೆ. ಬೆವರು ಸುರಿಸಿ ಬೆಳೆದ ಬೆಳೆ ನೀರು ಪಾಲಾಗಿದೆ. ಸಾಲ ಶೂಲದಂತೆ ಇರಿಯುತ್ತಿದೆ. ಜೊತೆಗೆ ಪ್ರಾಣ ಉಳಿಸಿಕೊಂಡರೆ ಸಾಕೆಂದು ಮನೆ-ಮಠ ಬಿಟ್ಟು ಗಂಜಿಕೇಂದ್ರಗಳತ್ತ ಓಡುವಂತಾಗಿದೆ. ಇಂತಹವರ ಬಳಿ ಆಸ್ತಿಯ ದಾಖಲೆಗಳಿರುವುದಿಲ್ಲ. ದಾಖಲೆಗಳಿಲ್ಲದೆ ಪರಿಹಾರ ಸಿಗುವುದಿಲ್ಲ.
ಮಳೆ-ಪ್ರವಾಹದಿಂದಾದ ಅನಾಹುತಗಳು, ಒಂದು ರೀತಿಯಲ್ಲಿ ಹೃದಯವಿದ್ರಾವಕ ವಿಷಯವಾದರೆ; ಧುತ್ತನೆ ಎದುರಾಗುವ ಅವಘಡಗಳು ಪರೋಕ್ಷವಾಗಿ ಅಧಿಕಾರಸ್ಥರಿಗೆ ಮತ್ತು ಅಧಿಕಾರಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತವೆ. ರಕ್ಷಣಾ ಕಾರ್ಯಾಚರಣೆ, ಸುರಕ್ಷಿತ ತಾಣಗಳತ್ತ ಸಂತ್ರಸ್ತರ ರವಾನೆ, ತಾತ್ಕಾಲಿಕ ಊಟ-ವಸತಿ ವ್ಯವಸ್ಥೆಯತ್ತ ಗಮನ ಹರಿಸುವ ಜಿಲ್ಲಾಡಳಿತ; ಆ ನಂತರ ಕೊಚ್ಚಿಹೋದ ರಸ್ತೆಗಳು, ಮುರಿದುಬಿದ್ದ ಸೇತುವೆಗಳ ಮರು ನಿರ್ಮಾಣದ ಕಾಮಗಾರಿಗಳತ್ತ ಕಣ್ಣಾಯಿಸುತ್ತದೆ. ‘ತುರ್ತು’ ನೆಪದಲ್ಲಿ ಕೋಟ್ಯಂತರ ರೂಪಾಯಿಗಳು ಕಣ್ಮುಚ್ಚಿಬಿಡುವುದರೊಳಗೆ ನೀರಿನಂತೆಯೇ ಹರಿದುಹೋಗುತ್ತದೆ.
ಬರ, ನೆರೆ, ಪ್ರವಾಹಗಳು ಪ್ರತಿವರ್ಷ ಪುನರಾವರ್ತನೆಯಾಗುವ, ಸಮಸ್ಯೆ ಸೃಷ್ಟಿಸುವ ಅವಘಡಗಳು. ತಾಲೂಕಿಗೊಬ್ಬರು ಶಾಸಕರು, ಜಿಲ್ಲೆಗೊಬ್ಬರು ಸಚಿವರು ಮತ್ತು ಜಿಲ್ಲಾಡಳಿತ ಅದರ ಪರೋಕ್ಷ ಫಲಾನುಭವಿಗಳು. ಜನ-ಜಾನುವಾರು, ಮನೆ-ಬೆಳೆ ನೀರಿನಲ್ಲಿ ತೇಲಾಡುವುದು, ಅಧಿಕಾರಸ್ಥರು ಆಕಾಶದಲ್ಲಿ ಹಾರಾಡುವುದು ಕೂಡ ಪ್ರತಿವರ್ಷದ ಪುನರಾವರ್ತಿತ ಪ್ರಸಂಗಗಳೇ ಆಗಿಹೋಗಿವೆ.
ಇದನ್ನು ಓದಿದ್ದೀರಾ?: ಹಿಂದುಳಿದ ವರ್ಗಗಳ ಹಿತಕ್ಕೆ ಕೊಳ್ಳಿ ಇಡಲು ಹೊರಟ ಬಿಜೆಪಿ
ಮೊದಲೇ ಹಿಂದುಳಿದ ಉತ್ತರ ಕರ್ನಾಟಕ, ಈಗ ಎದುರಾದ ಪ್ರವಾಹ ಪರಿಸ್ಥಿತಿಯಿಂದ ಇನ್ನಷ್ಟು ಹಿಂದಕ್ಕೆ ಸರಿಯಲಿದೆ. ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು, ಸಚಿವರು ಮತ್ತು ಸರ್ಕಾರ ಈಗಲಾದರೂ ಪ್ರವಾಹಪೀಡಿತರ ಬಳಿ ಸಾಗಿ, ಅವರ ಸಂಕಟದಲ್ಲಿ ಸಹಭಾಗಿಗಳಾಗಬೇಕಿದೆ. ಮುಖ್ಯಮಂತ್ರಿಗಳ ವೈಮಾನಿಕ ಸಮೀಕ್ಷೆ ಮತ್ತೊಂದು ಕಾಟಾಚಾರದ ಸಮೀಕ್ಷೆ ಆಗದೆ, ಅಲ್ಲಿನ ಜನರ ನಿರೀಕ್ಷೆಯನ್ನು ಹುಸಿಗೊಳಿಸದೆ, ನೆಲಕ್ಕಿಳಿದು ನೋಡಿ ಸಂತೈಸಿ ಸಮರೋಪಾದಿಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಿದೆ. ಸರ್ಕಾರ ನಿಮ್ಮೊಂದಿಗಿದೆ ಎಂಬ ಧೈರ್ಯ ತುಂಬಬೇಕಿದೆ.






