ನಕಲಿ ಸರಕು ಸರಬರಾಜುದಾರರಿಗೆ ಕೊನೆಪಕ್ಷ ಶಿಕ್ಷೆಯಾದರೂ ಆಗುತ್ತದೆ. ಆದರೆ ದೇವರು-ಧರ್ಮವನ್ನು ಮಾರಾಟಕ್ಕಿಡುವ 'ಸಭ್ಯ'ರಿಗೆ ಶಿಕ್ಷೆಯಾಗುವುದಿರಲಿ, ಅವರ ಬಗ್ಗೆ ಮಾತನಾಡಿದರೆ, ಧರ್ಮದ್ರೋಹಿ ಪಟ್ಟ ಕಟ್ಟಲಾಗುತ್ತದೆ. ಇದು ದೇವರಿಗೇ ನಾಮ ಹಾಕುವ ಮೋದಿ ಭಾರತ.
ದಾನಿಗಳಿಗೆ ನೀಡುವ, ಸನ್ಮಾನಕ್ಕೆ ಬಳಸುವ ಮತ್ತು ದೇವಾಲಯದ ಆಶೀರ್ವಾದ ಆಚರಣೆಗಳಲ್ಲಿ ಉಪಯೋಗಿಸುವ ಶಲ್ಯಗಳ ಸರಬರಾಜಿನಲ್ಲಿ ಆಂಧ್ರದ ತಿರುಮಲ ತಿರುಪತಿ ದೇವಸ್ಥಾನಮ್(ಟಿಟಿಡಿ)ಗೆ ಗುತ್ತಿಗೆದಾರ ಸಂಸ್ಥೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಶಲ್ಯಗಳನ್ನು ಕಡ್ಡಾಯವಾಗಿ ಶುದ್ಧ ಮಲ್ಬೆರಿ ರೇಷ್ಮೆಯಿಂದ ತಯಾರಿಸಿರಬೇಕೆಂಬ ನಿಯಮವಿದೆ. ಆದರೆ ವಿಆರ್ಎಸ್ ಎಕ್ಸ್ಪೋರ್ಟ್ ಸಂಸ್ಥೆಯು ಟೆಂಡರ್ ದಾಖಲೆಗಳಲ್ಲಿ ಶುದ್ಧ ಮಲ್ಬೆರಿ ರೇಷ್ಮೆ ಉತ್ಪನ್ನಗಳೆಂದು ಉಲ್ಲೇಖಿಸಿ, ಕಳೆದ ಹತ್ತು ವರ್ಷಗಳ ಕಾಲ ರೂ. 350 ಬೆಲೆಯ ಪಾಲಿಸ್ಟರ್ ಶಲ್ಯಕ್ಕೆ ರೂ. 1,389ರಂತೆ ಬಿಲ್ ಮಾಡಿ, ಪೂರೈಸಿದೆ. ಟಿಟಿಡಿಯಿಂದ ಸುಮಾರು 54 ಕೋಟಿಗೂ ಹೆಚ್ಚು ಮೌಲ್ಯದ ಶಲ್ಯಗಳನ್ನು ಖರೀದಿಸಲಾಗಿದೆ. ಇದರಿಂದ ಟಿಟಿಡಿಗೆ ಭಾರೀ ನಷ್ಟವಾಗಿದೆ ಎಂದು ಟಿಟಿಡಿಯ ಆಂತರಿಕ ಜಾಗೃತ ದಳದ ತನಿಖೆಯಿಂದ ತಿಳಿದು ಬಂದಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಗಂಡಿಗೊಂದು ಅಳತೆಗೋಲು, ಹೆಣ್ಣಿಗೆ ಮತ್ತೊಂದೇ?
ಇದೇ ರೀತಿ, ಕಳೆದ ವರ್ಷ ದೇವರ ಹುಂಡಿಗೇ ಕೈ ಹಾಕಿ ಎಗರಿಸಿದ್ದು, ಕಲಬೆರಕೆ ತುಪ್ಪ ಬೆರಸಿ ಲಡ್ಡು ತಯಾರಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು. ಸುಮಾರು 250 ಕೋಟಿ ರೂ. ಮೌಲ್ಯದ 68 ಲಕ್ಷ ಕೆಜಿ ಕಲಬೆರಕೆ ತುಪ್ಪವನ್ನು ಉತ್ತರಾಖಂಡದ ಭೋಲೆ ಬಾಬಾ ಡೈರಿ ಪೂರೈಸಿದೆ ಎಂಬುದು ಕೇಂದ್ರ ತನಿಖಾ ದಳದ ನೇತೃತ್ವದ ಎಸ್ಐಟಿ ತನಿಖೆಯಿಂದ ಪತ್ತೆಯಾಗಿತ್ತು.
ಪುರಾಣ ಪ್ರಸಿದ್ದ ತಿರುಮಲ ತಿರುಪತಿ ದೇವಾಲಯದ ಪ್ರಸಿದ್ದ ಪ್ರಸಾದ ಲಡ್ಡು ತಯಾರಿಕೆಗೆ ನಕಲಿ ತುಪ್ಪವನ್ನು ಬಳಸಲಾಗಿತ್ತು ಎನ್ನುವ ವಿಚಾರ, ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆಗ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮಾಡಿದ್ದ ಟ್ವೀಟ್ ವೈರಲ್ ಆಗಿತ್ತು. ಅದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪವಿತ್ರ ಪ್ರಸಾದಕ್ಕೆ ಕೊಬ್ಬು ಬೆರೆಸಲಾಗಿದೆ, ಅಪವಿತ್ರಗೊಳಿಸಲಾಗಿದೆ ಎಂದದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ತೆಲುಗುದೇಶಂ ಪಕ್ಷದ ಚಂದ್ರಬಾಬು ನಾಯ್ಡು ಅವರ ಈ ವಿವಾದಾತ್ಮಕ ಹೇಳಿಕೆಯ ಹಿಂದೆ ಮಾಜಿ ಸಿಎಂ ಜಗನ್ರ ಮೇಲೆ ಕಮಿಷನ್ ಆರೋಪ ಹೊರಿಸುವ ಹುನ್ನಾರವಿತ್ತು. ಆತನ ಕ್ರೈಸ್ತ ಧರ್ಮವನ್ನು ಎಳೆದುತಂದು ಹಿಂದೂಗಳನ್ನು ಪ್ರಚೋದಿಸುವ ಷಡ್ಯಂತ್ರವಿತ್ತು. ಬಿಜೆಪಿ, ಸಂಘಪರಿವಾರ, ಸಂತರು, ಸ್ವಾಮೀಜಿಗಳನ್ನು ಮೆಚ್ಚಿಸುವ ಇರಾದೆ ಇತ್ತು. ಹಾಗೆಯೇ ತನ್ನ ಹೆರಿಟೇಜ್ ಡೈರಿ ಉದ್ಯಮ ತಿರುಪತಿ ವ್ಯವಹಾರದಲ್ಲಿ ಮೂಗು ತೂರಿಸಲು ಹಾದಿ ಸುಗಮಗೊಳಿಸಿಕೊಂಡಿತ್ತು.
ನಾಯ್ಡುವಿನ ಸ್ವಾರ್ಥ ಮತ್ತು ರಾಜಕಾರಣ ಇದಾದರೆ, ಲಡ್ಡು ವಿವಾದದಿಂದಾಗಿ ಹಿನ್ನೆಲೆಯಲ್ಲಿದ್ದ ‘ಹಿಂದೂ’ಗಳು ಮುನ್ನೆಲೆಗೆ ಬಂದಿದ್ದರು. ಹಿಂದುತ್ವ ಸಂಘಟನೆಗಳು, ಸಂತರು, ಸ್ವಾಮೀಜಿಗಳು ಎದ್ದುಕುಳಿತಿದ್ದರು. ಆ ಮೂಲಕ ತಮ್ಮ ಮಾತು ಕೇಳುವ, ಕೇಂದ್ರದ ಮೋದಿ ಸರ್ಕಾರದ ಮೇಲೆ ಹಿಂದೂ ದೇವಾಲಯಗಳನ್ನು ಸರಕಾರಗಳ ಹಿಡಿತದಿಂದ ಬಿಡುಗಡೆ ಮಾಡಿ, ಅವುಗಳ ಆಡಳಿತ ನಿರ್ವಹಣೆಯನ್ನು ಭಕ್ತರಿಗೇ ನೀಡಬೇಕೆಂಬ ಒತ್ತಡ ಹಾಕತೊಡಗಿದ್ದರು.
ಈ ಬೇಡಿಕೆಯ ಹಿಂದೆ ತಿರುಪತಿ ದೇವಸ್ಥಾನಕ್ಕೆ ಹರಿದು ಬರುವ ವಾರ್ಷಿಕ ಅಂದಾಜು 5,141.74 ಕೋಟಿ ರೂಪಾಯಿಗಳ ಹಣದ ಥೈಲಿ ಇತ್ತು. ಲಡ್ಡು ಮಾರಾಟದಿಂದಲೇ ವರ್ಷಕ್ಕೆ ಸುಮಾರು 600 ಕೋಟಿ ರೂಪಾಯಿಗಳ ಆದಾಯವಿದೆ ಎಂದಾಗ- ವ್ಯಾಪಾರ, ವಹಿವಾಟು ಮುನ್ನೆಲೆಗೆ ಬಂದಿತ್ತು.
ಮಾರಾಟವೆಂದರೆ ವ್ಯಾಪಾರ, ವ್ಯಾಪಾರವೆಂದರೆ ಲಾಭ-ನಷ್ಟದ ಬಾಬತ್ತು. ವಾಸ್ತವದಲ್ಲಿ ಲಡ್ಡು ಪ್ರಸಾದವಲ್ಲ, ಶಲ್ಯ ಆಶೀರ್ವಚನದ ವಸ್ತ್ರವಲ್ಲ. ಬದಲಿಗೆ, ಹಣ ಪಡೆದು ಮಾರಾಟ ಮಾಡುವ ಸರಕು. ದುಡ್ಡು ಕೊಟ್ಟು ಖರೀದಿಸುವುದು ಪ್ರಸಾದವಾಗುತ್ತದೆಯೇ? ಆದರೂ ಭಕ್ತರು ಲಡ್ಡುಗಳನ್ನು ಕಣ್ಣಿಗೊತ್ತಿಕೊಂಡು ಪ್ರಸಾದವೆಂದು ಸ್ವೀಕರಿಸುತ್ತಾರೆ. ಭಕ್ತರ ಈ ನಂಬಿಕೆಯೇ ಟಿಟಿಡಿಗೆ ಆದಾಯದ ಮೂಲವಾಗಿದೆ. ಹಣದ ಹೊಳೆ ಹರಿಸುತ್ತಿದೆ.
ಹೀಗೆ ದೇವರ ನೆಪದಲ್ಲಿ ಯಾವುದಾವುದೋ ಮೂಲಗಳಿಂದ ತಿರುಪತಿಗೆ ಹರಿದು ಬರುವ ಆದಾಯ ವರ್ಷಕ್ಕೆ ಐದು ಸಾವಿರ ಕೋಟಿ ರೂ.ಗಳಾಗುತ್ತದೆ. ಈ ಹಣದ ಹರಿವಿರುವ ತಿರುಮಲ ತಿರುಪತಿ ದೇವಸ್ಥಾನದ ಮೇಲೆ ಭಾರೀ ಉದ್ಯಮಿಗಳ, ಅಧಿಕಾರಸ್ಥ ರಾಜಕಾರಣಿಗಳ, ಸಂಘಪರಿವಾರದವರ ಕಣ್ಣು ಬಿದ್ದಿದೆ. ಅದನ್ನು ಹೇಗಾದರೂ ಮಾಡಿ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂಬ ನಿರಂತರ ಪ್ರಯತ್ನದಲ್ಲಿದ್ದಾರೆ. ಅವರಿಗೆ ಈ ನಕಲಿ ಶಲ್ಯ, ಕಲಬೆರಕೆ ತುಪ್ಪ ಸರಬರಾಜು ನೆಪವಾಗಿದೆ.
ತಿರುಪತಿಗೆ ಹೋಗುವವರಲ್ಲಿ ಹೆಚ್ಚಿನವರು ಶೂದ್ರರು. ತಿರುಪತಿ ತಿಮ್ಮಪ್ಪನ ಆದಾಯದ ಮೂಲವೇ ಅವರು. ಅಂತಹ ಶೂದ್ರರು ದೇವರು, ಭಕ್ತಿ, ನೇಮ, ನಿಯಮಗಳ ಬಂಧಿಗಳಾಗಿದ್ದಾರೆ. ಆ ದೇವರನ್ನೇ ಸಾಧು, ಸಂತರು, ಸದ್ಗುರು, ಸ್ವಾಮೀಜಿಗಳು ಹಾಗೂ ಸಂಘಟನೆಗಳ ನಾಯಕರು ಮಾರಾಟದ ವಸ್ತುವನ್ನಾಗಿಸಿದ್ದಾರೆ.
ಇದನ್ನು ಓದಿದ್ದೀರಾ?: ಸರ್ಕಾರಗಳು ಬದಲಾದರೂ ಉತ್ತರ ಕರ್ನಾಟಕದ ಜನರ ಬದುಕು ಬದಲಾಗಲಿಲ್ಲವೇಕೆ?
ತಿರುಪತಿ ತಿಮ್ಮಪ್ಪ ಎಂದಾಕ್ಷಣ ನೆನಪಾಗುವುದು ದೊಡ್ಡ ಮೂರು ನಾಮ. ತಿಮ್ಮಪ್ಪನ ದರ್ಶನ ಪಡೆಯಲು ಪ್ರಪಂಚದ ಮೂಲೆ ಮೂಲೆಯಿಂದ ತಿರುಪತಿಗೆ ಬರುವ ಭಕ್ತರು, ಭಕ್ತಿಭಾವದಿಂದ ನಮಿಸಿ ನಾಮ ಧರಿಸುವುದುಂಟು. ಅಂತಹ ತಿಮ್ಮಪ್ಪನಿಗೇ ನಾಮ ಹಾಕುವ ದೂರ್ತರ ದಂಡು- ಸಕ್ಕರೆಗೆ ಇರುವೆ ಮುತ್ತಿದಂತೆ- ತಿರುಪತಿ ತಿಮ್ಮಪ್ಪನ ದುಡ್ಡಿನ ಸುತ್ತ ಠಳಾಯಿಸುತ್ತಿದೆ. ತಿಮ್ಮಪ್ಪನನ್ನೇ ವಂಚಿಸುತ್ತಿದೆ.
ದುರದೃಷ್ಟಕರ ಸಂಗತಿ ಎಂದರೆ, ಕಲಬೆರಕೆ ತುಪ್ಪ, ನಕಲಿ ಶಲ್ಯ ಮತ್ತು ದೇವರ ದುಡ್ಡಿಗೆ ಕನ್ನ ಹಾಕುವ ಧೂರ್ತರಿಗೂ; ದೇವರು ಮತ್ತು ಧರ್ಮವನ್ನು ಮಾರಾಟಕ್ಕಿಡುವ ‘ಸಭ್ಯ’ರಿಗೂ ವ್ಯತ್ಯಾಸವಿಲ್ಲ. ಒಬ್ಬರು ದೇವರ ದುಡ್ಡು ದೋಚುವವರಾದರೆ, ಮತ್ತೊಬ್ಬರು ಸಭ್ಯರ ಸೋಗಿನ ಸ್ವಾರ್ಥಿಗಳು. ನಕಲಿ ಸರಕು ಸರಬರಾಜುದಾರರಿಗೆ ಕೊನೆಪಕ್ಷ ಶಿಕ್ಷೆಯಾದರೂ ಆಗುತ್ತದೆ. ಆದರೆ ದೇವರು-ಧರ್ಮವನ್ನು ಮಾರಾಟಕ್ಕಿಡುವ ‘ಸಭ್ಯ’ರಿಗೆ ಶಿಕ್ಷೆಯಾಗುವುದಿರಲಿ, ಅವರ ಬಗ್ಗೆ ಮಾತನಾಡಿದರೆ, ಧರ್ಮದ್ರೋಹಿ-ದೇಶದ್ರೋಹಿ ಪಟ್ಟ ಕಟ್ಟಲಾಗುತ್ತದೆ. ಇದು ದೇವರಿಗೇ ನಾಮ ಹಾಕುವ ಮೋದಿ ಭಾರತ.





