ಸ್ಥಳೀಯ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ ನಡೆಸದಿರುವುದರ ಹಿಂದೆ ಸಚಿವರ, ಶಾಸಕರ ಸ್ವಾರ್ಥವಿದೆ. ಬಲಾಢ್ಯ ಲಿಂಗಾಯತ-ಒಕ್ಕಲಿಗ ಸಮುದಾಯಗಳ ಒತ್ತಡವಿದೆ. ಒತ್ತಡಕ್ಕೆ ಮಣಿದ ಸರ್ಕಾರ, ತಳಸಮುದಾಯಗಳ ರಾಜಕೀಯ ಅವಕಾಶಗಳನ್ನು ಹೊಸಕಿಹಾಕಿದೆ.
ಕರ್ನಾಟಕ ಸರ್ಕಾರವು ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಸಕಾಲಕ್ಕೆ ನಡೆಸದ ಕಾರಣ 15ನೇ ಹಣಕಾಸು ಆಯೋಗದ 1,279 ಕೋಟಿ ಅನುದಾನಕ್ಕೆ ತಡೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅಂದರೆ, ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಕಾಲಿಕ ಚುನಾವಣೆಗಳನ್ನು ನಡೆಸಿದರೆ ಮಾತ್ರ ಹಣಕಾಸು ಆಯೋಗದ ಅನುದಾನ ಬಿಡುಗಡೆಯಾಗುತ್ತದೆ. ಇದು ನಿಯಮ. ಕರ್ನಾಟಕ ಸರ್ಕಾರವು 2020-21 ರಿಂದ ತಾಲ್ಲೂಕು ಪಂಚಾಯಿತಿಗಳು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆಗಳನ್ನು ನಡೆಸದ ಕಾರಣ ಅನುದಾನ ತಡೆ ಹಿಡಿಯಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಇಲ್ಲಿ ಎರಡು ಮುಖ್ಯ ಸಂಗತಿಗಳಿವೆ. ಒಂದು, ಸ್ಥಳೀಯ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ ನಡೆಸದಿರುವುದು. ಎರಡು, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನಕ್ಕೆ ಕತ್ತರಿ ಬಿದ್ದಿರುವುದು. ಅಂದರೆ ಜನಸಾಮಾನ್ಯರ ಕೈಗೆ ಅಧಿಕಾರ ಹಸ್ತಾಂತರಿಸದೆ ರಾಜ್ಯ ಸರ್ಕಾರ ದ್ರೋಹವೆಸಗುತ್ತಿದೆ. ಇದನ್ನೇ ನೆಪ ಮಾಡಿಕೊಂಡು ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡದೆ ಸತಾಯಿಸುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನರಿಂದ ಚುನಾಯಿಸಲ್ಪಟ್ಟ ಸರ್ಕಾರಗಳೇ ಆದರೂ, ಸ್ಥಳೀಯರಿಗೆ ರಾಜಕೀಯ ಅಧಿಕಾರ ಹಂಚಿಕೆಯಲ್ಲಿ ವಂಚಿಸುತ್ತಿವೆ.
ಇದನ್ನು ಓದಿದ್ದೀರಾ?: ಡಾ. ಸಿದ್ಧಲಿಂಗಯ್ಯನವರ ಸದನದ ಭಾಷಣಗಳು: ಅಲಕ್ಷಿತ ಸಮುದಾಯಗಳ ದನಿ
ವಿಪರ್ಯಾಸವೆಂದರೆ, ಪ್ರಜಾಪ್ರಭುತ್ವದ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ ಬುನಾದಿ ರೂಪದಲ್ಲಿರುವುದು ಸ್ಥಳೀಯ ಸಂಸ್ಥೆ. ಅದು ಗಟ್ಟಿಗೊಂಡಷ್ಟೂ ಪ್ರಜಾಪ್ರಭುತ್ವ ಸದೃಢಗೊಳ್ಳುತ್ತದೆ. ಸಮುದಾಯದ ಸಹಭಾಗಿತ್ವ ಹೆಚ್ಚಿದಷ್ಟೂ ಆಡಳಿತ ಜನಸಾಮಾನ್ಯರಿಗೆ ಹತ್ತಿರವಾಗುತ್ತದೆ. ಆದರೆ, ಆಡಳಿತ ವ್ಯವಸ್ಥೆಯ ಮೊದಲ ಮೆಟ್ಟಿಲಿನಂತಿರುವ ಸ್ಥಳೀಯ ಸಂಸ್ಥೆಗಳನ್ನು ಶಿಥಿಲಗೊಳಿಸುವ ಕೆಲಸ ಇತ್ತೀಚಿನ ವರ್ಷಗಳಲ್ಲಿ ಚುನಾಯಿತ ಸರ್ಕಾರಗಳಿಂದಲೇ ನಡೆಯುತ್ತಿದೆ.
ರಾಜ್ಯದ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ 2016ರ ಏಪ್ರಿಲ್ನಲ್ಲಿ ಚುನಾವಣೆ ನಡೆದಿತ್ತು. ಚುನಾಯಿತ ಸದಸ್ಯರ ಅವಧಿ 2021ರ ಏಪ್ರಿಲ್ 27ರಂದು ಮುಕ್ತಾಯವಾಗಿತ್ತು. ಚುನಾವಣೆ ನಡೆಸಲು ಸಿದ್ಧತೆ ಆರಂಭಿಸಿದ್ದ ರಾಜ್ಯ ಚುನಾವಣಾ ಆಯೋಗವು ಕ್ಷೇತ್ರ ಪುನರ್ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಹಾಗೂ ಮೀಸಲಾತಿ ಕರಡನ್ನು ಪ್ರಕಟಿಸಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಆಯೋಗದಿಂದ ಹಿಂಪಡೆದಿತ್ತು. ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ತಂದಿತ್ತು.
ಆನಂತರ ನಡೆದ ಬೆಳವಣಿಗೆಗಳಿಂದ ಬೊಮ್ಮಾಯಿ ಸರ್ಕಾರ ಸುಪ್ರೀಂ ಕೋರ್ಟ್ ಕಟ್ಟಾಜ್ಞೆಗೆ ಮಣಿದು, ನ್ಯಾ. ಭಕ್ತವತ್ಸಲ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಮೂರು ತಿಂಗಳೊಳಗೆ ವರದಿ ಕೊಡಲು ತಾಕೀತು ಮಾಡಿತ್ತು. ಸಮಿತಿ ತನ್ನ ಕಾಲಮಿತಿಯೊಳಗೆ ವರದಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಿದ್ದೂ ಆಯಿತು.
ಸರಕಾರ ನ್ಯಾ. ಭಕ್ತವತ್ಸಲ ಸಮಿತಿಯನ್ನು ರಚಿಸಲು ಇದ್ದ ತುರ್ತು ಏನು ಎಂದರೆ, ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳನ್ನು ಜನೋಪಯೋಗಿಯಾಗಿಸಲು ಹಾಗೂ ಆರ್ಥಿಕವಾಗಿ ಸದೃಢಗೊಳಿಸಲು ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿ ತರಲಾಯಿತು. ತಿದ್ದುಪಡಿ ತಂದ ಪ್ರಮುಖ ಉದ್ದೇಶ, ಹಿಂದುಳಿದವರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಸ್ಪರ್ಧಿಸಲು ಸ್ಥಾನಗಳ ಹಂಚಿಕೆಯಲ್ಲಿ ರಾಜಕೀಯ ಮೀಸಲಾತಿ ಕಲ್ಪಿಸುವುದಾಗಿತ್ತು. ಅದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು ಹಾಗೂ ಪಾಲಿಸುವಂತೆ ಸರ್ಕಾರಗಳಿಗೆ ಆದೇಶಿಸಿತ್ತು.
ಸುಪ್ರೀಂ ಕೋರ್ಟ್ ಆದೇಶ ಸ್ಪಷ್ಟವಾಗಿದ್ದರೂ, ಸೂಕ್ತ ಆಯೋಗವೊಂದನ್ನು ರಚಿಸಿ ರಾಜಕೀಯವಾಗಿ ಹಿಂದುಳಿದ ಜಾತಿ-ವರ್ಗಗಳನ್ನು ಗುರುತಿಸುವ ಉಸಾಬರಿಗೆ ಹೋಗದ ಬೊಮ್ಮಾಯಿಯವರ ಬಿಜೆಪಿ ಸರಕಾರ, ಶೇ. 50ಕ್ಕಿಂತ ಮೀರಿ ಹೋಗಿದ್ದ ಮೀಸಲಾತಿ ಕೋಟಾವನ್ನು ಮಾತ್ರ ಕಡಿಮೆಗೊಳಿಸಿ ಕೈ ತೊಳೆದುಕೊಂಡಿತು. ಅಷ್ಟೇ ಅಲ್ಲ, ಬಿಜೆಪಿ ಸರ್ಕಾರ ರಚಿಸಿದ ನ್ಯಾ. ಭಕ್ತವತ್ಸಲ ಸಮಿತಿಯ ವರದಿಯಲ್ಲಿ, ಸುಪ್ರೀಂ ಕೋರ್ಟ್ ವಿಧಿಸಿದ್ದ ಯಾವ ಷರತ್ತನ್ನೂ (ತ್ರಿಸ್ತರ) ಪಾಲಿಸಿರಲಿಲ್ಲ. ಜೊತೆಗೆ ಸರಕಾರ ಆ ವರದಿಯನ್ನು ಶಾಸನ ಸಭೆಗಳಲ್ಲಿ ಮಂಡಿಸಲಿಲ್ಲ. ಸಾರ್ವಜನಿಕ ಅಭಿಪ್ರಾಯವನ್ನೂ ಪಡೆಯಲಿಲ್ಲ.
ಆ ನಂತರ ಬಂದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ, ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧದ ನ್ಯಾ. ಭಕ್ತವತ್ಸಲ ಸಮಿತಿ ಮಾಡಿರುವ ಶಿಫಾರಸುಗಳನ್ನು ಕೈ ಬಿಟ್ಟಿತೋ, ಇಲ್ಲವೋ ಎನ್ನುವುದನ್ನು ಹೇಳಲಿಲ್ಲ. ಬದಲಿಗೆ, ನಗರಾಭಿವೃದ್ಧಿ ಇಲಾಖೆ ಹಾಗೂ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಚುನಾವಣಾ ಘಟಕಗಳನ್ನು ಆಯಾ ಇಲಾಖೆಗಳ ನಿಯಂತ್ರಣದಲ್ಲಿ ಉಳಿಸಿ, ಪ್ರಸಕ್ತ ಚಾಲ್ತಿಯಲ್ಲಿರುವ ವ್ಯವಸ್ಥೆಯನ್ನು ಮುಂದುವರಿಸುವ ನಿರ್ಣಯ ಕೈಗೊಂಡಿತು.
ಅಂದರೆ, ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರ- ಎರಡೂ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡದೆ, ಒಳದಾರಿಗಳನ್ನು ಹುಡುಕಿಕೊಂಡು ವಿಳಂಬದ್ರೋಹವೆಸಗಿದವು.
ಈತನ್ಮಧ್ಯೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ವಿಳಂಬದ ವಿರುದ್ಧ ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್ ಮೊರೆ ಹೋಯಿತು. ಸಿದ್ದರಾಮಯ್ಯನವರ ಸರ್ಕಾರಕ್ಕೆ ಅದು ಗುರಾಣಿಯಾಯಿತು. ಕೋರ್ಟಿನ ನೆಪ ಮುಂದಿಟ್ಟು, ಸ್ಥಳೀಯ ಸಂಸ್ಥೆಗಳಿಗೆ ನಡೆಸಬೇಕಾದ ಚುನಾವಣೆಗಳನ್ನು ಮುಂದೂಡುತ್ತಲೇ ಬಂದಿದೆ.
ಸ್ಥಳೀಯ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ ನಡೆಸದಿರುವುದರ ಹಿಂದೆ ಸಚಿವರ, ಶಾಸಕರ ಸ್ವಾರ್ಥವೂ ಅಡಗಿದೆ. ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರು ಚುನಾಯಿತರಾದರೆ, ತಮ್ಮ ಅಧಿಕಾರ ಮತ್ತು ಅನುದಾನ ಕಡಿತಗೊಳ್ಳಬಹುದೆಂಬ ಆತಂಕ ಅಧಿಕಾರಸ್ಥರಲ್ಲಿದೆ. ಹೀಗಾಗಿ, ಜನಪ್ರತಿನಿಧಿಗಳಾರೂ ವಿಳಂಬದ ವಿರುದ್ಧ ದೊಡ್ಡ ದನಿಯಲ್ಲಿ ಮಾತನಾಡುವುದಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುವುದರ ಹಿಂದೆ ಸಚಿವರು, ಶಾಸಕರನ್ನು ಸಂತೃಪ್ತಿಪಡಿಸುವ ಉದ್ದೇಶ ಆಳುವ ಸರ್ಕಾರಕ್ಕಿದೆ. ಜೊತೆಗೆ ಬಹುಸಂಖ್ಯಾತ, ಬಲಾಢ್ಯ ಲಿಂಗಾಯತ-ಒಕ್ಕಲಿಗ ಸಮುದಾಯಗಳ ಒತ್ತಡವೂ ಇದೆ.
ಇದನ್ನು ಓದಿದ್ದೀರಾ?: ಇಸ್ಲಾಮ್ ದ್ವೇಷ ಮತ್ತು ಯಹೂದಿ ದ್ವೇಷ ಒಂದಕ್ಕೆ ಮತ್ತೊಂದು ಎಣ್ಣೆ ಎರೆಯುತ್ತಿವೆಯೇ?
ಒತ್ತಡಕ್ಕೆ ಮಣಿದ ಸರ್ಕಾರ, ತಳಸಮುದಾಯಗಳ ರಾಜಕೀಯ ಅವಕಾಶಗಳನ್ನು ಹೊಸಕಿಹಾಕಿದೆ. ಸಾಂವಿಧಾನಿಕವಾಗಿ ಹಿಂದುಳಿದ ವರ್ಗಗಳಿಗೆ ಸಿಕ್ಕ ಹಕ್ಕುಗಳನ್ನು ದಮನ ಮಾಡಿದೆ. ‘ರಾಜಕೀಯ ಶಕ್ತಿಯು ನೀವು ಪ್ರತಿಯೊಂದು ಬೀಗವನ್ನು ತೆರೆಯುವ ಪ್ರಮುಖ ಕೀಲಿಕೈ ಆಗಿದೆ’ ಎಂದು ಹಿಂದುಳಿದ ವರ್ಗಗಳಿಗೆ ಬಾಬಾ ಸಾಹೇಬರು ಹೇಳಿದ್ದ ಮಾತು, ಮಾತಾಗಿಯೇ ಉಳಿದಿದೆ.
ಏತನ್ಮಧ್ಯೆ, ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು 2026ರ ಏಪ್ರಿಲ್ ನಲ್ಲಿ ನಡೆಸಲು ಚರ್ಚಿಸಿದೆ. ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ ಎಂಬ ಸುದ್ದಿ ಇದೆ. ಹಿಂದುಳಿದ ನಾಯಕ ಎನಿಸಿಕೊಂಡಿರುವ, ಅವರ ಬಲದಿಂದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು, ಹಿಂದುಳಿದವರಿಗೆ ನ್ಯಾಯ ಒದಗಿಸುತ್ತಾರ, ಕಾದು ನೋಡಬೇಕಿದೆ.





