ಈ ದಿನ ಸಂಪಾದಕೀಯ | ಇಸ್ರೇಲ್ ಸಂಗದಲ್ಲಿ ‘ಶಿಕಾರಿ’- ಪ್ಯಾಲೆಸ್ತೀನ್ ಜೊತೆ ‘ಪರಾರಿ’; ಕಪಟ ನಾಟಕವಲ್ಲವೇ ಮೋದೀಜಿ?

Date:

‘ಪ್ಯಾಲೆಸ್ತೀನ್ ಹೋರಾಟವನ್ನು ಬೆಂಬಲಿಸುತ್ತೇನೆ’ ಎಂಬ ವಿಶೇಷ ವಿನ್ಯಾಸದ ಹೆಗಲು ಚೀಲವನ್ನು ನೇತಾಡಿಸಿಕೊಂಡು ಸಂಸತ್ ಭವನಕ್ಕೆ ಬಂದ ಪ್ರಿಯಾಂಕಾ ಗಾಂಧಿ, ಪ್ಯಾಲೆಸ್ತೀನ್ ವಿದೇಶಾಂಗ ನೀತಿ ಕುರಿತು ಮೋದಿ ಸರ್ಕಾರಕ್ಕೆ ಬುದ್ಧಿ ಹೇಳಿರುವ ಸೋನಿಯಾಗಾಂಧಿ ಹಾಗೂ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪಕ್ಷದ ಆಡಳಿತವಿರುವ ಕರ್ನಾಟಕ ಸರ್ಕಾರವು ಪ್ಯಾಲೆಸ್ತೀನ್ ಪರ ಶಾಂತಿಯುತ ಪ್ರದರ್ಶನಗಳ ಕುರಿತು ತಳೆಯುತ್ತ ಬಂದಿರುವ ದಮನಕಾರಿ ನೀತಿಯತ್ತ ತುರ್ತಾಗಿ ಗಮನ ಹರಿಸಬೇಕಿದೆ.

ಪ್ಯಾಲೆಸ್ತೀನ್ ‘ಡೇರೆ’ಯನ್ನು ಅಂಗುಲಂಗುಲವಾಗಿ ಆಕ್ರಮಿಸಿದ ಇಸ್ರೇಲಿ ‘ಒಂಟೆ’, ಕಾಲಕ್ರಮೇಣ ಇಡೀ ಡೇರೆಯನ್ನು ತನ್ನದೆಂದು ಸಾರಿ, ಪ್ಯಾಲೆಸ್ತೀನಿ ನೆಲದ ಮಕ್ಕಳನ್ನು ನಿಂತಲ್ಲಿ ನಿಲ್ಲಲು ಬಿಡದೆ ಅಟ್ಟಾಡಿಸಿ, ಉಪವಾಸ ಕೆಡವಿ, ಬಾಂಬು ಸುರಿಸಿ ಅಳಿಸಿ ಹಾಕುತ್ತಿರುವ ಶಿಖರ ಕ್ರೌರ್ಯದ ಕತೆ ಪ್ಯಾಲೆಸ್ತೀನ್- ಇಸ್ರೇಲ್ ಸಂಘರ್ಷ.

ಗಾಝಾ ಪಟ್ಟಿಯ ಆಳವನ್ನು ಅಗೆದರೆ ಅಲ್ಲಿ ಸಿಗುವುದು ಪ್ಯಾಲೆಸ್ತೀನೀ ಮಕ್ಕಳು, ಹೆಣ್ಣುಮಕ್ಕಳು, ಗಂಡಾಳುಗಳ ಶವಗಳ ರಾಶಿ ರಾಶಿ ಅಸ್ಥಿಪಂಜರಗಳೇ. ಇಂತಹ ಸಮಾಧಿಯ ಮೇಲೆ ‘ಸ್ವರ್ಗಸದೃಶ ವಿಲಾಸೀ ನಗರ’ ನಿರ್ಮಿಸಿ, ಅಲ್ಲಿನ ವಸತಿವೈಭವವನ್ನು ವಿಶ್ವದ ಸಿರಿವಂತರಿಗೆ ಮಾರಾಟ ಮಾಡುವುದು ಟ್ರಂಪ್ ಎಂಬ ನೀಚ ಮನಸ್ಥಿತಿಯ ದುಷ್ಟ ಯೋಜನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ಯಾಲೆಸ್ತೀನ್ ಒಂದು ಸ್ವತಂತ್ರ ಸಾರ್ವಭೌಮ ರಾಷ್ಟ್ರವಾಗಿ ಇಸ್ರೇಲ್ ನೆರೆಹೊರೆಯಲ್ಲಿ ಶಾಂತಿಯುತವಾಗಿ ಸಹಬಾಳ್ವೆ ನಡೆಸಬೇಕೆಂಬುದು ಭಾರತ ಲಾಗಾಯತಿನಿಂದ ನಡೆಸಿಕೊಂಡು ಬಂದಿರುವ ವಿದೇಶಾಂಗ ನೀತಿ. 1967ರ ಹಿಂದಿದ್ದ ಗಡಿ ಪ್ರದೇಶಗಳಿಗೆ ಅನುಗುಣವಾಗಿ ಈ ವ್ಯವಸ್ಥೆ ಇರಬೇಕು ಎಂಬುದು ನಮ್ಮ ದೃಢ ನಿಲುವು.

ಮಹಾತ್ಮಗಾಂಧೀ, ನೆಹರೂ, ಜನಸಂಘದ ದೀನದಯಾಳ ಉಪಾಧ್ಯಾಯ, ಜನಸಂಘ – ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ, ವಿಯೆಟ್ನಾಮಿನ ಹೋ- ಚಿ- ಮಿನ್, ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲ ಎಲ್ಲರೂ ಪ್ಯಾಲೆಸ್ತೀನನ್ನು ಇಸ್ರೇಲ್ ಆಕ್ರಮಿಸಿಕೊಂಡಿದೆಯೆಂದು ಸಾರಿದ್ದರು ಮತ್ತು ಸ್ವತಂತ್ರ ಪ್ಯಾಲೆಸ್ತೀನನ್ನು ಬೆಂಬಲಿಸಿದ್ದರು.

ಇತ್ತೀಚೆಗೆ ಮುಕ್ತಾಯಗೊಂಡ ಭಾರತ-ಅರಬ್ ವಿದೇಶಾಂಗ ಮಂತ್ರಿಗಳ ಎರಡನೆಯ ಸಭೆಯ ಆತಿಥ್ಯವನ್ನು ಭಾರತ ಸರ್ಕಾರವೇ ವಹಿಸಿಕೊಂಡಿತ್ತು. ಗಾಝಾ ಶಾಂತಿ ಯೋಜನೆಯೂ ಸೇರಿದಂತೆ ನಡೆದಿರುವ ಶಾಂತಿ ಪ್ರಯತ್ನಗಳಿಗೆ ಭಾರತದ ಮುಂದುವರೆದ ಬೆಂಬಲ ಮತ್ತು ಪ್ಯಾಲೆಸ್ತೀನ್ ಜನರ ಹೋರಾಟದೊಂದಿಗೆ ಗಟ್ಟಿಯಾಗಿ ನಿಲ್ಲುವ ಭಾರತದ ನೀತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.

ಜನಸಂಘ-ಬಿಜೆಪಿಯ ತಾಯಿಬೇರು ಆರೆಸ್ಸೆಸ್. ಸೈದ್ಧಾಂತಿಕವಾಗಿ ಇಸ್ರೇಲ್ ಮತ್ತು ಇಸ್ರೇಲಿ ರಾಷ್ಟ್ರೀಯತೆಯನ್ನು ಆದರ್ಶವಾಗಿ ಪರಿಗಣಿಸಿದೆ ಆರೆಸ್ಸೆಸ್. ಆರೆಸ್ಸೆಸ್‌ನ ಬಹು ಎತ್ತರದ ನೇತಾರ ಮಾಧವರಾವ್ ಸದಾಶಿವರಾವ್ ಗೋಲ್ವಲ್ಕರ್ ಅವರ ಚಿಂತನೆಗಳನ್ನು ಗೊಂಚಲಾಗಿ ಕಟ್ಟಿಕೊಟ್ಟಿರುವ ಕೃತಿ ‘ಬಂಚ್ ಆಫ್ ಥಾಟ್ಸ್’ ಅಥವಾ ‘ಚಿಂತನಗಂಗಾ’ದಲ್ಲಿ ಈ ಆದರ್ಶವನ್ನು ಸಂಶಯಕ್ಕೆ ಎಡೆಯಿಲ್ಲದಂತೆ ಚಿತ್ರಿಸಲಾಗಿದೆ.

ಅಟಲ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಸಣ್ಣಗೆ ಆರಂಭವಾದ ಭಾರತದ ಇಸ್ರೇಲಿ ದೋಸ್ತಿ, ಮೋದಿಯುಗದಲ್ಲಿ ಹೆಮ್ಮರವಾಗಿ ಬೆಳೆದಿದೆ. ಈ ಹೆಮ್ಮರದ ಕರಿನೆರಳು ಭಾರತದ ಪ್ಯಾಲೆಸ್ತೀನ್ ಪರ ನೀತಿ ನಿರ್ಧಾರಗಳ ಮೇಲೆ ಚಾಚಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮತ್ತು ಮೋದಿಯವರು ಪರಮಮಿತ್ರರಾಗಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಗುಟ್ಟೇನೂ ಇಲ್ಲ. ಆದರೆ ವೈಯಕ್ತಿಕ ಸ್ನೇಹವು ಭಾರತದ ಅನೂಚಾನ ವಿದೇಶಾಂಗ ನೀತಿಗೆ ಗ್ರಹಣ ಹಿಡಿಸಿದರೆ ಅದು ಖಡಾಖಂಡಿತವಾಗಿ ಸಲ್ಲದು.

ಆದರೆ ಬೇರು ಮಟ್ಟದಲ್ಲಿ ಮೋದಿ-ನೇತನ್ಯಾಹು ದೋಸ್ತಿಯ ನೆರಳೇ ಪ್ರತಿಫಲಿಸತೊಡಗಿದೆ. ಇದು ಕಣ್ಣಿಗೆ ಕಾಣುವ ಕಟು ವಾಸ್ತವ. ಭಾರತದಲ್ಲಿನ ಪ್ಯಾಲೆಸ್ತೀನ್ ಪರ ಶಾಂತಿಯುತ ಪ್ರತಿಭಟನೆಗಳು- ಪ್ರದರ್ಶನಗಳು- ಸಭೆಗಳು-ವಿಚಾರಸಂಕಿರಣಗಳ ಮೇಲೆ, ವಿಶೇಷವಾಗಿ 2023–2024ರಿಂದ ಕಠಿಣ ಕ್ರಮಗಳನ್ನು ಜರುಗಿಸಲಾಗುತ್ತಿದೆ. ಈ ಮಾತಿಗೆ ಸಾಕಷ್ಟು ಪುರಾವೆಗಳಿವೆ. – ಪ್ಯಾಲೆಸ್ತೀನ್ ಧ್ವಜ ಹಾರಿಸುವುದು, ಆನ್‌ಲೈನ್‌ನಲ್ಲಿ ಬೆಂಬಲ ವ್ಯಕ್ತಪಡಿಸುವುದು, ಮೆರವಣಿಗೆಗಳ ಸಂಘಟನೆ ಅಥವಾ ಇಸ್ರೇಲಿ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿದ ಕಾರಣಕ್ಕೆ ಯುಪಿಎ ಅಥವಾ ದೇಶದ್ರೋಹ ಕಾನೂನಿಡಿ ಬಂಧನಗಳು/ನಿರ್ಬಂಧಗಳು ವರದಿಯಾಗಿವೆ. ಪ್ಯಾಲೆಸ್ತೀನೀಯರ ಕುರಿತು ಮರುಗಿರುವ ಮುಸಲ್ಮಾನರು ಈ ದಮನಕ್ಕೆ ನೇರವಾಗಿ ಹೆಚ್ಚಿನ ಪ್ರಮಾಣದಲ್ಲಿ ಬಾಧಿತರು.

2024–2025ರಲ್ಲಿ ದೆಹಲಿ ವಿಶ್ವವಿದ್ಯಾಲಯ, ಹೈದರಾಬಾದಿನ ಇಎಫ್‌ಎಲ್‌ಯು, ಉತ್ತರಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಮುಂತಾದ ಕ್ಯಾಂಪಸ್‌ಗಳಲ್ಲಿ ಪ್ರತಿಭಟನೆಗಳನ್ನು ಚದುರಿಸಲು ಪೊಲೀಸರ ಹಸ್ತಕ್ಷೇಪ- ಬಲಪ್ರಯೋಗ, ಹಲ್ಲೆ ಅಥವಾ ಎಬಿವಿಪಿ ಮುಂತಾದ ಬಲಪಂಥೀಯ ಗುಂಪುಗಳೊಂದಿಗೆ ಪೊಲೀಸರು ಸಹಕರಿಸಿರುವ ಆರೋಪಗಳಿವೆ.

ಪೂರ್ವಾನುಮತಿ ಇಲ್ಲದೆ ಕ್ಯಾಂಪಸ್ ಚರ್ಚೆಗಳು ಅಥವಾ ಘೋಷಣೆಗಳ ಮೇಲೆ ನಿಷೇಧ/ನಿರ್ಬಂಧಗಳು ಮತ್ತು ಪ್ಯಾಲೆಸ್ತೀನ್ ಪರ ಅಭಿವ್ಯಕ್ತಿಗಳ ಅಪರಾಧೀಕರಣ ಜರುಗಿದೆ. ವಿರೋಧಾಭಾಸ ಎಂಬಂತೆ ಇಸ್ರೇಲ್ ಪರ ರ್ಯಾಲಿಗಳಿಗೆ ಕಡಿಮೆ ನಿರ್ಬಂಧಗಳು ಎದುರಾದ ವರದಿಗಳಿವೆ.

ಅಧಿಕಾರಿಗಳು ಈ ಕ್ರಮಗಳನ್ನು ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕಾಪಾಡುವುದು ಅಥವಾ “ತೀವ್ರವಾದ”ವನ್ನು ನಿಯಂತ್ರಿಸುವುದು ಎಂದು ಸಮರ್ಥಿಸಿಕೊಳ್ಳುತ್ತಾರೆ.. ಆದರೆ ಮಾನವ ಹಕ್ಕು ಸಂಘಟನೆಗಳು ಮತ್ತು ಅವುಗಳ ಕಾರ್ಯಕರ್ತರು ಇದನ್ನೇ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಎಂದಿದ್ದಾರೆ. ಇಸ್ರೇಲ್ ಪರ ನಿಲುವಿನೊಂದಿಗೆ ಹೊಂದಾಣಿಕೆ ಎಂದು ಬಣ್ಣಿಸಿದ್ದಾರೆ. ಭಾರತದ ಪ್ಯಾಲೆಸ್ತೀನ್ ಪರ ವಿದೇಶಾಂಗ ನೀತಿಯ ಪಕ್ಕದಲ್ಲಿ ಇರಿಸಿ ನೋಡಿದರೆ ಈ ದಮನಕ್ರಮಗಳು ದ್ವಂದ್ವ ಮಾನದಂಡಗಳತ್ತ ಬೆರಳು ಮಾಡಿ ತೋರುತ್ತಿವೆ.

ಇದು ಪ್ಯಾಲೆಸ್ತೀನ್ ಅಥವಾ ಇಸ್ರೇಲ್ ನಡುವೆ ಒಂದನ್ನು ಆರಿಸಿಕೊಳ್ಳುವ ವಿಷಯ ಅಲ್ಲ. ಬದಲಿಗೆ ಸತ್ಯ ಮತ್ತು ಸಿದ್ಧಾಂತದ ಸಂಗಡ ನಿಲ್ಲುವುದು. ತೆಪ್ಪಗಿರುವುದು ಅನ್ಯಾಯವನ್ನು ಸದ್ದಿಲ್ಲದೆ ಸಮರ್ಥಿಸಿದಂತೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾಗಾಂಧೀ ಹೇಳಿದ್ದಾರೆ.

ಇಸ್ರೇಲ್- ಪ್ಯಾಲೆಸ್ತೀನ್ ಸಂಘರ್ಷ ಕುರಿತ ಭಾರತದ ನಿಲುವು ನಿರಾಶಾಜನಕ. ಮೋದಿ ಸರ್ಕಾರದ ಗಾಢ ಮೌನವು ಮಾನವೀಯತೆ ಮತ್ತು ನೈತಿಕತೆಗೆ ವಿಶ್ವಾಸದ್ರೋಹ ಬಗೆದಂತೆ. ಲಾಗಾಯಿತಿನಿಂದ ನಡೆದುಕೊಂಡು ಬಂದಿರುವ ಭಾರತದ ವಿದೇಶಾಂಗ ನೀತಿಗೆ ಅನುಗುಣವಾದ ನಡೆಯಲ್ಲ ಇದು. ನೈತಿಕತೆ ಮತ್ತು ನಾಗರಿಕತೆಯೊಂದಿಗೆ ಲಗತ್ತಾಗಿರುವ ಹೊಣೆಗಾರಿಕೆ ಕೂಡ. ಸ್ವಾತಂತ್ರ್ಯಪೂರ್ವದಲ್ಲೇ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ವಿರುದ್ಧ ದನಿ ಎತ್ತಿತ್ತು ಭಾರತ. 1971ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ (ಇಂದಿನ ಬಾಂಗ್ಲಾದೇಶ) ನರಮೇಧ ನಿಲ್ಲಿಸಲು ಭಾರತ ನಿರ್ಣಾಯಕ ಮಧ್ಯಪ್ರವೇಶ ಮಾಡಿತ್ತು ಎಂಬ ಸಂಗತಿಗಳನ್ನು ಸೋನಿಯಾ ಅವರು, ಮೋದಿ ಸರ್ಕಾರಕ್ಕೆ ನೆನಪಿಸಿಕೊಟ್ಟಿದ್ದಾರೆ.

ಆದರೆ ಇಲ್ಲೊಂದು ಮಹಾನ್ ವಿಡಂಬನೆ-ವಿಪರ್ಯಾಸವಿದೆ. ಕಾಂಗ್ರೆಸ್ ಶಾಸಿತ ರಾಜ್ಯ ಸರ್ಕಾರಗಳೂ ಮೋದಿಯವರ ವ್ಯಕ್ತಿಗತ ಇಸ್ರೇಲ್ ಪರ ಒಲವು ನಿಲುವುಗಳನ್ನೇ ಚಾಚೂತಪ್ಪದೆ ಅನುಸರಿಸತೊಡಗಿವೆ

ಸೋನಿಯಾ ಅವರ ಮಾತುಗಳನ್ನು ಕಾಂಗ್ರೆಸ್ ಶಾಸಿತ ರಾಜ್ಯ ಸರ್ಕಾರಗಳು ಗಾಳಿಗೆ ತೂರಿದಂತೆ ವರ್ತಿಸತೊಡಗಿವೆ. ಬಹಳ ದೂರ ಹೋಗುವ ಅಗತ್ಯವಿಲ್ಲ. ಕರ್ನಾಟಕದಲ್ಲಿನ ಪರಿಸ್ಥಿತಿಯೇ ಕಣ್ಣೆಗೆ ರಾಚುವಷ್ಟು ನಿಚ್ಚಳವಾಗಿದೆ. ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ದಮನವನ್ನು ಖಂಡಿಸಿ, ಪ್ಯಾಲೆಸ್ತೀನೀಯರ ಹೋರಾಟವನ್ನು ಬೆಂಬಲಿಸಿ ನಡೆಸುವ ಶಾಂತಿಯುತ ಸಭೆಗಳು ಪ್ರದರ್ಶನಗಳನ್ನು ಸಿದ್ದರಾಮಯ್ಯ ಅವರ ಸರ್ಕಾರದ, ಡಾ.ಜಿ.ಪರಮೇಶ್ವರ್ ನೇತೃತ್ವದ ಪೊಲೀಸ್ ಇಲಾಖೆ ಉಕ್ಕಿನ ಹಸ್ತದಿಂದ ಹತ್ತಿಕ್ಕುತ್ತ ಬಂದಿದೆ. ಪ್ಯಾಲೆಸ್ತೀನ್ ಧ್ವಜ ಹಾರಿಸಲು ನಿರ್ಬಂಧಗಳಿವೆ. ಪ್ರದರ್ಶನಕಾರರು 50 ಮಂದಿ ಇದ್ದರೆ ಪೊಲೀಸರು 150 ಮಂದಿ ಅವರನ್ನು ಮುತ್ತಿರುತ್ತಾರೆ. ಬಿಜೆಪಿ ನೇತೃತ್ವದ ಸರ್ಕಾರವನ್ನು ಸೋಲಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ನಂತರವೂ ಈ ಸ್ಥಿತಿ ಎಳ್ಳಷ್ಟೂ ಬದಲಾಗಿಲ್ಲ. ಈ ದಮನದ ಕುರಿತು ನಾಡಿನ ಪ್ರಜ್ಞಾವಂತ ವರ್ಗ ತೀವ್ರ ಆಘಾತ ಮತ್ತು ಸೋಜಿಗವನ್ನು ಪ್ರಕಟಿಸುತ್ತ ಬಂದಿದೆ. ಈಗ ನಡೆಯುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೂಡ ಪ್ಯಾಲೆಸ್ತೀನ್ ಚಲನಚಿತ್ರಗಳಿಗೆ ಅವಕಾಶ ನಿರಾಕರಿಸಲಾಗಿದೆ. ಉತ್ಸವಕ್ಕೆ ಚಾಲನೆ ನೀಡಿದ ನಟ ಪ್ರಕಾಶ್ ರೈ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆಯೇ ಈ ಕುರಿತು ತಮ್ಮ ಪ್ರತಿಭಟನೆ ದಾಖಲಿಸಿದರು. ಪ್ಯಾಲೆಸ್ತೀನಿ ಕವಿತೆಗಳನ್ನು ಓದಿ ತಮ್ಮ ವಿರೋಧ ದಾಖಲಿಸಿದರು.

‘ನಾನು ಪ್ಯಾಲೆಸ್ತೀನ್ ಹೋರಾಟವನ್ನು ಬೆಂಬಲಿಸುತ್ತೇನೆ’ ಎಂದು ಬರೆದ ವಿಶೇಷ ವಿನ್ಯಾಸದ ರಂಗುರಂಗಿನ ಹೆಗಲು ಚೀಲವನ್ನು ನೇತಾಡಿಸಿಕೊಂಡು ಸಂಸತ್ ಭವನಕ್ಕೆ ಬಂದ ಪ್ರಿಯಾಂಕಾ ಗಾಂಧೀ, ಮೋದಿ ಸರ್ಕಾರಕ್ಕೆ ಬುದ್ಧಿ ಹೇಳಿರುವ ಸೋನಿಯಾಗಾಂಧೀ ಹಾಗೂ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧೀ ಅವರು ತಮ್ಮ ಪಕ್ಷದ ಸರ್ಕಾರಗಳು ಪ್ಯಾಲೆಸ್ತೀನ್ ಪರ ಶಾಂತಿಯುತ ಪ್ರದರ್ಶನಗಳ ಕುರಿತು ತಳೆಯುತ್ತ ಬಂದಿರುವ ದಮನಕಾರಿ ನೀತಿಯತ್ತ ತುರ್ತಾಗಿ ಗಮನ ಹರಿಸಬೇಕಿದೆ. ಇಲ್ಲವಾದರೆ ಈ ತಾಯಿ-ಮಕ್ಕಳ ಮಾತುಗಳಿಗೆ ಅರ್ಥ ಉಳಿಯುವುದಿಲ್ಲ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....