‘ಈ ದಿನ’ ಸಂಪಾದಕೀಯ | ಗುಜರಾತನ್ನು ಮೆರೆಸಲು ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಮುಳುಗಿಸಿತೇ ಬಿಸಿಸಿಐ?

Date:

ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್‌ ಪಂದ್ಯಾವಳಿಯ ಉದ್ಘಾಟನಾ ಪಂದ್ಯವು ದೇಶದ ಕ್ರೀಡಾ ಇತಿಹಾಸದಲ್ಲೊಂದು ಕಪ್ಪು ಚುಕ್ಕೆ. ಕ್ರೀಡೆಯೊಂದರ ಘನತೆಗಿಂತ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಹರಾಜಾದ ದೇಶದ ಮರ್ಯಾದೆಗಿಂತ, ಕ್ರೀಡಾಪ್ರೇಮಿಗಳ ಹಿತಕ್ಕಿಂತ ಚಿಲ್ಲರೆ ರಾಜಕೀಯವೇ ಮೇಲುಗೈ ಸಾಧಿಸಿದ್ದು ವಿಪರ್ಯಾಸ

ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯಕ್ಕೆ ಸಿಕ್ಕಿರುವ ನೀರಸ ಪ್ರತಿಕ್ರಿಯೆಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕಂಗಾಲಾಗಿದೆ. ಇತ್ತ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾತ್ರ, ‘ಟೀಮ್ ಇಂಡಿಯಾ’ ಆಡದಿರುವ ಕಾರಣಕ್ಕೆ ಪ್ರೇಕ್ಷಕರು ಬಂದಿಲ್ಲ ಎಂಬ ಸಬೂಬು ಹೇಳಿದೆ.

ಅಕ್ಟೋಬರ್ ಐದರಂದು, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯಕ್ಕೆ ಆರಂಭದಲ್ಲಿ ಇದ್ದ ಪ್ರೇಕ್ಷಕರು ಸುಮಾರು ಐದು ಸಾವಿರ. ಮೊದಲ ಇನ್ನಿಂಗ್ಸ್ ಮುಗಿಯುವ ವೇಳೆಗೆ 17 ಸಾವಿರ ಮಂದಿ ಗ್ಯಾಲರಿಯಲ್ಲಿದ್ದರು. ಪಂದ್ಯದ ಫಲಿತಾಂಶ ಹೊರಬೀಳುವ ಸಮಯಕ್ಕೆ ಒಟ್ಟು 47 ಸಾವಿರ ಮಂದಿ ಕ್ರೀಡಾಂಗಣದಲ್ಲಿ ನೆರೆದಿದ್ದರು ಎಂದು ಗುಜರಾತ್ ಕ್ರಿಕೆಟ್ ಸಮಿತಿ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಆದರೆ, ಉದ್ಘಾಟನಾ ಪಂದ್ಯದಲ್ಲಿ ಪ್ರೇಕ್ಷಕರು ಅತ್ಯಂತ ಕಡಿಮೆ ಇದ್ದದ್ದು ಸುದ್ದಿಯಾದ ನಂತರ, ಗುಜರಾತ್ ಕ್ರಿಕೆಟ್ ಸಮಿತಿಯ ಅಧಿಕಾರಿಗಳ ಮೇಲೆ ಒತ್ತಡ ಉಂಟಾಗಿ, ಸಿಕ್ಕಸಿಕ್ಕವರನ್ನೆಲ್ಲ ಕ್ರೀಡಾಂಗಣಕ್ಕೆ ಕರೆತಂದು ಕೂರಿಸಲಾಯಿತು ಎಂಬ ಆರೋಪಗಳಿವೆ. ಇದಕ್ಕೆ ಪೂರಕವಾಗಿ, ಭಾರತ-ಪಾಕಿಸ್ತಾನದ ನಡುವಿನ ಪಂದ್ಯ ಎಂದು ಸುಳ್ಳು ಹೇಳಿ ಸ್ಥಳೀಯರನ್ನು ಕರೆತಂದ ಕುರಿತೂ ಸುದ್ದಿಯಾಗಿದೆ. ಇನ್ನೂ ಕೌತುಕದ ಸಂಗತಿ ಎಂದರೆ, ಎಲ್ಲ ಪಂದ್ಯಗಳ ಟಿಕೆಟ್ ಸಂಪೂರ್ಣ ಮಾರಾಟವಾಗಿದೆ ಎಂದು ಖುದ್ದು ಬಿಸಿಸಿಐ ಹೇಳಿಕೊಂಡಿರುವುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಹಮದಾಬಾದ್ ಕ್ರೀಡಾಂಗಣ ಅತ್ಯಂತ ದೊಡ್ಡದು, ಟೀಮ್ ಇಂಡಿಯಾ ಆಡುತ್ತಿರಲಿಲ್ಲ ಎಂಬ ಕಾರಣಗಳು ಸತ್ಯದೂರವಲ್ಲ. ಈ ಕ್ರೀಡಾಂಗಣ ತುಂಬಬೇಕೆಂದರೆ ಪ್ರೇಕ್ಷಕರ ಸಂಖ್ಯೆ ಒಂದು ಲಕ್ಷ ದಾಟಬೇಕು. ಇದೆಲ್ಲ ಮೊದಲೇ ಗೊತ್ತಿದ್ದರೂ ಅಹಮದಾಬಾದ್‌ನಲ್ಲೇ ಉದ್ಘಾಟನಾ ಪಂದ್ಯ ಆಯೋಜಿಸಿದ್ದೇಕೆ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣವೂ ಉಂಟು.

ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟವಾಗಿದ್ದು ಇದೇ ವರ್ಷದ ಜೂನ್‌ನಲ್ಲಿ. ಐಸಿಸಿ ಮತ್ತು ಬಿಸಿಸಿಐ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಒಟ್ಟು ಹತ್ತು ಕ್ರೀಡಾಂಗಣಗಳಲ್ಲಿ (ಅಹಮದಾಬಾದ್, ಹೈದರಾಬಾದ್, ಧರ್ಮಶಾಲಾ, ದೆಹಲಿ, ಚೆನ್ನೈ, ಲಖನೌ, ಪುಣೆ, ಬೆಂಗಳೂರು, ಮುಂಬೈ, ಕೊಲ್ಕತ್ತಾ) ಪಂದ್ಯಾವಳಿ ನಡೆಯಲಿದೆ ಎಂದು ಘೋಷಿಸಿದ್ದವು. ಪಂದ್ಯಗಳು ಯಾವ ಸ್ಥಳದಲ್ಲಿ ನಡೆಯಬೇಕು ಎಂಬ ವಿಷಯದಲ್ಲಿ ಆತಿಥೇಯ ದೇಶದ ತೀರ್ಮಾನವೇ ಅಂತಿಮ. ಅಂದರೆ, ವೇಳಾಪಟ್ಟಿಯನ್ನು ತಯಾರಿಸಿದ್ದು ಬಿಸಿಸಿಐ. ಉದ್ಘಾಟನಾ ಪಂದ್ಯಕ್ಕೆ ಕಡಿಮೆ ಪ್ರೇಕ್ಷಕರು ಸೇರುತ್ತಾರೆಂಬ ಲೆಕ್ಕಾಚಾರ ಮೊದಲೇ ಇದ್ದಿದ್ದರಿಂದ, ಅಹಮದಾಬಾದ್ ಬಿಟ್ಟು ಬೇರೆ ಕ್ರೀಡಾಂಗಣ ಆಯ್ಕೆ ಮಾಡುವ ಅವಕಾಶ ಬಿಸಿಸಿಐಗೆ ಖಂಡಿತ ಇತ್ತು. ಆದರೆ, ಇಂತಹ ತೀರ್ಮಾನಗಳನ್ನು ಕ್ರೀಡಾ ಲೆಕ್ಕಾಚಾರಗಳಿಗೆ ಅನುಗುಣವಾಗಿ ತೆಗೆದುಕೊಳ್ಳುವ ವಾತಾವರಣ ಬಿಸಿಸಿಐನಲ್ಲಿ ಇಲ್ಲ ಎಂಬುದು ಹಿರಿಯ ಕ್ರಿಕೆಟಿಗರ ಕಟು ಟೀಕೆ. ಸುನಿಲ್ ಗವಾಸ್ಕರ್ ನೇರವಾಗಿಯೇ ಇದನ್ನು ಹೇಳಿದ್ದಾಗಿದೆ. ರಾಜಕೀಯ ಲೆಕ್ಕಾಚಾರಗಳನ್ನು ಆಧರಿಸಿ ತೆಗೆದುಕೊಳ್ಳುವ ನಿರ್ಧಾರಗಳು ಹೇಗಿರುತ್ತದೆ ಎಂಬುದಕ್ಕೆ, ಉದ್ಘಾಟನಾ ಪಂದ್ಯವನ್ನು ಅಹಮದಾಬಾದ್‌ನಲ್ಲಿ ಆಯೋಜಿಸಿದ್ದು ಘನ ನಿದರ್ಶನ. ಈ ಪಂದ್ಯಾವಳಿಯ ಫೈನಲ್ ಪಂದ್ಯ ಕೂಡ ಇದೇ ಸ್ಟೇಡಿಯಂನಲ್ಲಿ ನಿಗದಿಯಾಗಿದೆ. ಉದ್ಘಾಟನಾ ಪಂದ್ಯದ ಕಹಿ ಅನುಭವದಿಂದ ಬಿಸಿಸಿಐ ಪಾಠ ಕಲಿಯಬಹುದು. ಜನ ಸೇರದಿದ್ದರೆ ನೂರಾರು ಬಸ್ಸುಗಳ ಭರ್ತಿ ಜನರನ್ನು ಮೋದಿ ಸ್ಟೇಡಿಯಮ್‌ಗೆ ಹೊತ್ತು ತರಲೂಬಹುದು.

ವಿಶ್ವಕಪ್ ಪಂದ್ಯಗಳನ್ನು ಎಲ್ಲೆಲ್ಲಿ ನಡೆಸಬೇಕು ಎಂದು ತೀರ್ಮಾನ ಮಾಡುವಲ್ಲಿಯೂ ಬಿಸಿಸಿಐನೊಳಗೆ ರಾಜಕೀಯ ಕೆಲಸ ಮಾಡಿದೆ. ವಿಶ್ವಕಪ್, ಅಂತಾರಾಷ್ಟ್ರೀಯ ಏಕದಿನ ಮತ್ತು ಟೆಸ್ಟ್ ಪಂದ್ಯಗಳಿಗಾಗಿ ಹೆಸರು ಮಾಡಿದ ಮಧ್ಯಪ್ರದೇಶದ ಇಂದೋರ್ ಕ್ರೀಡಾಂಗಣದಲ್ಲಿ ಈ ಬಾರಿ ಒಂದೂ ಪಂದ್ಯ ನಡೆಯುತ್ತಿಲ್ಲ. ಪಂಜಾಬ್‌ನ ಮೊಹಾಲಿ ಕ್ರೀಡಾಂಗಣವನ್ನೂ ಪರಿಗಣಿಸಿಲ್ಲ. ಈ ಎರಡೂ ರಾಜ್ಯದ ಕ್ರಿಕೆಟ್ ಸಮಿತಿಗಳು ಬಿಸಿಸಿಐ ತೀರ್ಮಾನಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದವು. ಝಾರ್ಖಂಡ್‌ನ ರಾಂಚಿ, ಮಹಾರಾಷ್ಟ್ರದ ನಾಗಪುರ ಹಾಗೂ ಸ್ವತಃ ಗುಜರಾತ್‌ನ ರಾಜ್‌ಕೋಟ್‌ ಕ್ರೀಡಾಂಗಣಗಳೂ ಇಂಥದ್ದೇ ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ಇವೆಲ್ಲ ಬೆಳವಣಿಗೆಗಳು – ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆ ನರೇಂದ್ರ ಮೋದಿಯವರ ಹೆಸರು ಹೆಚ್ಚು-ಹೆಚ್ಚು ಕಾಣಿಸಿಕೊಳ್ಳುವಂತೆ, ಕೇಳಿಬರುವಂತೆ ಮಾಡುವ ಭಟ್ಟಂಗಿ ತಂತ್ರಗಾರಿಕೆಯ ಭಾಗ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅಹಮದಾಬಾದ್‌ ಕ್ರೀಡಾಂಗಣದ ಹೆಸರು ಪ್ರಧಾನಿಯವರ ಹೆಸರನ್ನೇ ಹೊತ್ತಿದೆ. ಇದೇ ಜಾಗದಲ್ಲಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಹೆಸರಿನ ಕ್ರಿಕೆಟ್ ಕ್ರೀಡಾಂಗಣವನ್ನು ಒಡೆದುಹಾಕಿ, ವಿಶ್ವದಲ್ಲೇ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ಮೋದಿಯವರು ನಿರ್ಮಿಸಿದರು. ಹಳೆಯ ಕ್ರೀಡಾಂಗಣಕ್ಕಿದ್ದ ಸರ್ದಾರ್ ಪಟೇಲ್ ಹೆಸರನ್ನು ಕೈಬಿಟ್ಟು ತಮ್ಮದೇ ಹೆಸರನ್ನು ಇರಿಸಿಕೊಂಡರು. ಇದೀಗ ಇದು ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣ.

ಈ ಭವ್ಯ ಕ್ರೀಡಾಂಗಣದಲ್ಲಿ ಮೋದಿಯವರು ಏರ್ಪಡಿಸಿದ ಮೊದಲನೆಯ ವಿದ್ಯಮಾನ ಕ್ರಿಕೆಟ್‌ಗೆ ಸಂಬಂಧಿಸಿರಲಿಲ್ಲ. ಬದಲಾಗಿ, ಅಮೆರಿಕದ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನಮೆಚ್ಚಿಸುವ ‘ನಮಸ್ತೆ ಟ್ರಂಪ್’ ರಾಜಕೀಯ ರ್‍ಯಾಲಿ ಏರ್ಪಡಿಸಿದ್ದರು. ಲಕ್ಷಗಟ್ಟಲೆ ಜನರನ್ನು ಕರೆತಂದು ಕ್ರೀಡಾಂಗಣವನ್ನು ತುಂಬಿಸಲಾಗಿತ್ತು. ಟ್ರಂಪ್ ಖುಷಿಯಾದರು. ಮೋದಿ ಬಿರಿದು ಬೀಗಿದರು. ಇದೀಗ 2024ರ ಲೋಕಸಭಾ ಚುನಾವಣೆಗಳು ಹೊಸ್ತಿಲಲ್ಲಿವೆ. ಪೂರಕವಾಗಿ, ಗೃಹ ಸಚಿವ ಅಮಿತ್ ಶಾ ಅವರ ಮುದ್ದುಮಗ ಜಯ್ ಶಾ ಬಿಸಿಸಿಐನ ಅತ್ಯಂತ ಪ್ರಭಾವಿ ಕಾರ್ಯದರ್ಶಿ. ಮೋದಿ, ಶಾ, ಜಯ್ ಶಾ ಮೆರೆದಾಡಬೇಕು. ಹೀಗೆ, ಕ್ರೀಡೆಯೊಂದರ ಘನತೆಗಿಂತ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಹರಾಜಾದ ದೇಶದ ಮರ್ಯಾದೆಗಿಂತ, ಕ್ರೀಡಾಪ್ರೇಮಿಗಳ ಹಿತಕ್ಕಿಂತ ಚಿಲ್ಲರೆ ರಾಜಕೀಯವೇ ಮೇಲುಗೈ ಸಾಧಿಸಿದ್ದು ವಿಪರ್ಯಾಸ. ದೇಶದ ಕ್ರೀಡಾ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....