ಇಸ್ಲಾಮಿಕ್ ರಿಪಬ್ಲಿಕ್ ಕಳೆದ 46 ವರ್ಷಗಳಿಂದ ಆಳಕ್ಕೆ ಬೇರು ಬಿಟ್ಟಿದೆ. ಅದನ್ನು ಅಲ್ಲಾಡಿಸುವುದು 35 ಸಾವಿರ ಅಡಿಗಳ ಎತ್ತರದಿಂದ ಬಾಂಬುಗಳನ್ನು ಎಸೆಯುವಷ್ಟು ಸುಲಭ ಅಲ್ಲ. ಇರಾಕ್, ಲಿಬ್ಯಾ ಹಾಗೂ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಹಸ್ತಕ್ಷೇಪ ವಿನಾಶಕ್ಕೇ ದಾರಿ ಮಾಡಿದ್ದು ಚಾರಿತ್ರಿಕ ಸತ್ಯ. ಗಾಝಾ ಮತ್ತು ಉಕ್ರೇನ್ ಸ್ಮಶಾನಗಳಾಗಿ ಹೋಗಿವೆ. ಹೀಗಾಗಿ ಇರಾನಿನ ಜನ ಟ್ರಂಪ್ ಮಾತಿಗೆ ಸಲೀಸಾಗಿ ಮರುಳಾಗುವ ಸಾಧ್ಯತೆ ಇಲ್ಲ.
ಇರಾನಿನ ಪರಮೋಚ್ಚ ನಾಯಕ ಅಯಾತೊಲ್ಲಾಹ್ ಅಲಿ ಖಮೇನಿ ಅವರ ಹತ್ಯೆ ಪಶ್ಚಿಮ ಏಷ್ಯಾದ ಬಹುದೊಡ್ಡ ವಿದ್ಯಮಾನ. ಈ ಹತ್ಯೆಯ ಜಂಟಿ ಜೋಡಿ ಅಮೆರಿಕ ಮತ್ತು ಇಸ್ರೇಲ್. ಕೇವಲ ಇರಾನ್ ಅಲ್ಲದೆ, ಇಡೀ ಅರಬ್ ದೇಶಗಳನ್ನೇ ಯುದ್ಧದ ಕಿಚ್ಚಿಗೆ ದೂಡಿರುವ ದುಷ್ಕೃತ್ಯವಿದು.
ಧಾರ್ಮಿಕ ಮುಖಂಡರ ಆಡಳಿತದ ಇರಾನ್ ತನ್ನ ತೈಲಬಾವಿಗಳ ಮೇಲೆ ಅಮೆರಿಕದ ಅಧಿಪತ್ಯಕ್ಕೆ ಅಂತ್ಯ ಹಾಡಿ ದಶಕಗಳೇ ಉರುಳಿವೆ. ಇರಾನ್ ಮೇಲೆ ಹೇರುತ್ತ ಬಂದಿರುವ ಅನೇಕ ನಿಷೇಧಗಳು- ನಿರ್ಬಂಧಗಳಿಗೆ ಸೊಪ್ಪು ಹಾಕಿಲ್ಲ. ಹೀಗಾಗಿಯೇ ಜನತಂತ್ರವನ್ನು ಉದಾರವಾದದ ರಕ್ಷಕನ ಸೋಗಿನಲ್ಲಿ ಯುದ್ಧ ಸಾರಿದೆ. ಧಾರ್ಮಿಕ ಮುಖಂಡರ ಆಡಳಿತವನ್ನು ಅಂತ್ಯಗೊಳಿಸಿದರೆ ಆ ದೇಶದ ತೈಲಬಾವಿಗಳ ಮೇಲೆ ಪುನಃ ತನ್ನ ಯಜಮಾನಿಕೆ ನಡೆಸಬಹುದು ಎಂಬುದು ಅಮೆರಿಕದ ಅಸಲು ಲೆಕ್ಕಾಚಾರ. ಉಳಿದದ್ದೆಲ್ಲ ಢೋಂಗು.
ಖಮೇನಿ ನಿರಂತರ 36 ವರ್ಷಗಳ ಕಾಲ ಉಕ್ಕಿನಹಸ್ತದಿಂದ ಇರಾನನ್ನು ಆಳಿದ ನಾಯಕ. 1979ರಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿಯ ನಂತರ ಖಮೇನಿಯವರ ತಂದೆ ಖೊಮೇನಿ ಅಧಿಕಾರ ಹಿಡಿದರು. ಅವರ ನಿಧನದ ನಂತರ ಮಗ ಖಮೇನಿಗೆ ಅಧಿಕಾರ ವರ್ಗಾವಣೆ ಆಗಿತ್ತು. ಧಾರ್ಮಿಕ ಮುಖಂಡರೇ ದೇಶದ ನಾಯಕರಾದರು.
ಪಶ್ಚಿಮ ಜಗತ್ತನ್ನು ಅನುಮಾನದಿಂದಲೇ ನೋಡಿ ದೂರವಿಟ್ಟಿದ್ದರು ಖಮೇನಿ. ತಮ್ಮ ನೇತೃತ್ವದ ವಿರುದ್ಧ ಪ್ರತಿರೋಧವನ್ನು ಮಾತ್ರವಲ್ಲ, ಸುಧಾರಣೆಗಳನ್ನು ಕೂಡ ಹೊಸಕಿ ಹಾಕಿದ್ದವರು. ಈ ಹತ್ಯೆಯು ಇರಾನ್ ದೇಶವನ್ನು ಧಾರ್ಮಿಕ ಮುಖಂಡರ ಹಿಡಿತದಿಂದ ಬಿಡಿಸೀತು ಎಂಬ ನಿರೀಕ್ಷೆ ಈಗಲೂ ಖಮೇನಿ ವಿರೋಧಿ ವಲಯಗಳಲ್ಲಿದೆ. ಆದರೆ ಸದ್ಯಕ್ಕೆ ಅಂತಹ ಸಾಧ್ಯತೆ ತೋರುತ್ತಿಲ್ಲ. ನಿರಂಕುಶವಾದಿಯ ಜಾಗದಲ್ಲಿ ಪುನಃ ನಿರಂಕುಶವಾದ ಮತ್ತು ಅವ್ಯವಸ್ಥೆಯನ್ನು ನೋಡಲು ಬಯಸುತ್ತಿಲ್ಲ ಇರಾನಿ ಪ್ರಜೆಗಳು. ಆದರೆ ಧಾರ್ಮಿಕ ನಿರಂಕುಶವಾದಕ್ಕೆ ಪ್ರಬಲ ಹೊಡೆತ ಬಿದ್ದಿದೆ ಎಂಬುದು ಸದ್ಯದ ವಾಸ್ತವ. ಖಮೇನಿ ಅವರ ಸ್ಥಾನಕ್ಕೆ ಹಂಗಾಮಿ ವ್ಯವಸ್ಥೆಯಾಗಿ ಅಲಿರೆಜಾ ಅರಾಫಿ ಬಂದಿದ್ದಾರೆ. ಖಮೇನಿಯವರ ಆರೋಗ್ಯ ಕಳೆದ ಕೆಲ ವರ್ಷಗಳಿಂದ ನಾಜೂಕಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರಾಧಿಕಾರದ ಆಲೋಚನೆ ನಡೆದೇ ನಡೆದಿರುತ್ತದೆ.
ಸದ್ಯಕ್ಕೆ ಮುಂದುವರೆಯುವಂತೆ ಕಂಡು ಬರುತ್ತಿರುವ ಧಾರ್ಮಿಕ ಮುಖಂಡರ ಆಡಳಿತ ಈಗಾಗಲೆ, ತಮ್ಮ ನಾಯಕನ ಹತ್ಯೆಗೆ ಪ್ರತೀಕಾರದ ಶಪಥ ತೊಟ್ಟಿದೆ. ಅದೇ ದಾರಿಯಲ್ಲಿ ತನ್ನ ಪ್ರತಿದಾಳಿಗಳನ್ನು ಇನ್ನಷ್ಟು ತೀವ್ರಗೊಳಿಸುತ್ತಿದೆ. ಕುಸಿಯುತ್ತಲೇ ನಡೆದಿರುವ ತಮ್ಮ ಜನಪ್ರಿಯತೆಯನ್ನು ಹೇಗಾದರೂ ಮಾಡಿ ಎತ್ತಿ ಹಿಡಿಯಲು ಮುಂದಾಗಿರುವ ಹತಾಶ ಅಮೆರಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಅಮೆರಿಕಕ್ಕೆ ರಫ್ತು ಮಾಡುವ ಎಲ್ಲ ದೇಶಗಳ ಮೇಲೆ ಮನಸಿಗೆ ಬಂದಂತೆ ಸುಂಕ ಹೇರಿ ಗುಡುಗಿದರು. ವಿಶ್ವಕ್ಕೊಬ್ಬ ಸರ್ವಾಧಿಕಾರಿ ಇದ್ದರೆ ಅದು ನಾನೇ ಎಂಬ ಸಂದೇಶ ರವಾನಿಸಿದರು. ಅಮೆರಿಕವನ್ನು ಮತ್ತೆ ಮಹಾನ್ ಮಾಡುತ್ತೇನೆಂಬ ಅವರ ಆಶ್ವಾಸನೆ ಹೊಳಪು ಕಳೆದುಕೊಂಡಿದೆ. ಅದನ್ನು ತಿಕ್ಕಿ ಬೆಳಗಿಸಲು ಹೆಣಗುತ್ತಿದ್ದಾರೆ. ಮತ್ತೊಂದು ದುಷ್ಟದೇಶ ಇಸ್ರೇಲ್ ಜೊತೆ ಸೇರಿಕೊಂಡು ಇರಾನ್ ವಿರುದ್ಧ ಕಾಲು ಕೆದರಿದ್ದಾರೆ. ಈ ಹಿಂದಿನ ಡೆಮಕ್ರಾಟ್ ಪಕ್ಷದವರು ಅಮೆರಿಕವನ್ನು ಇಲ್ಲಸಲ್ಲದ ಯುದ್ಧಗಳಲ್ಲಿ ತೊಡಗಿಸಿ ದೇಶದ ಬೊಕ್ಕಸಕ್ಕೆ ಭಾರೀ ಹೊರೆಯಾದರು ಎಂದು ಟೀಕಿಸಿಯೇ ಅಧಿಕಾರಕ್ಕೆ ಬಂದಿದ್ದವರು ಟ್ರಂಪ್. ಯುದ್ಧಗಳನ್ನು ನಿಲ್ಲಿಸುವುದಾಗಿ ವಚನ ನೀಡಿದ್ದರು. ಹೀಗೆ ಹೇಳಿದ ಅವರು ತಾವೇ ಯುದ್ಧ ಸಾರಿರುವುದು ಬಹುದೊಡ್ಡ ವಿಡಂಬನೆ.
ಒಂದೆಡೆ ಇರಾನ್ ಜೊತೆ ಸಂಧಾನ ನಡೆದಿದ್ದಾಗಲೇ ದಾಳಿ ನಡೆಸಿದ್ದು ಟ್ರಂಪ್ ವಿಶ್ವಾಸಘಾತದ ವರ್ತನೆ. ಜಿನೀವಾದಲ್ಲಿ ಓಮಾನ್ ದೇಶದ ಮಧ್ಯಸ್ಥಿಕೆಯಲ್ಲಿ ಅಮೆರಿಕ-ಇರಾನ್ ನಡುವೆ ಅಣ್ವಸ್ತ್ರ ಸಂಧಾನ ಮಾತುಕತೆಗಳು ನಡೆದಿವೆ. ಮತ್ತು ಈ ಮಾತುಕತೆಗಳು ಫಲಿತಾಂಶದತ್ತ ಸಾಗುತ್ತಿರುವ ಎಲ್ಲ ಸೂಚನೆಗಳು ಒಡಮೂಡಿದ್ದವು. ಆದರೆ ಅಮೆರಿಕ ಮಾತುಕತೆಗಳನ್ನು ಕೇವಲ ನೆಪವಾಗಿ ಬಳಸಿಕೊಂಡಿರುವುದು ನಿಚ್ಚಳವಾಗಿದೆ. ಮಾತುಕತೆಯಲ್ಲ, ಯುದ್ಧವೇ ಅದರ ಗುರಿ ಎಂಬ ಹಂಚಿಕೆ ಬಯಲಾಗಿದೆ. ಅಸಲು ಗುರಿ ಮಾತುಕತೆಯಲ್ಲ, ಇರಾನಿನ ಧಾರ್ಮಿಕ ಆಡಳಿತವನ್ನು ಕಿತ್ತೊಗೆಯುವುದೇ ಆಗಿದೆ ಎಂಬುದು ಅಮೆರಿಕ ಮತ್ತು ಇಸ್ರೇಲ್ ಹೇಳಿಕೆಗಳಿಂದ ಹೆಚ್ಚು ನಿಚ್ಚಳವಾಗಿದೆ. ಅಮೆರಿಕದ ಅಧ್ಯಕ್ಷರು ಯಾರೇ ಇರಲಿ, ಯಾವುದೇ ಪಕ್ಷದಿಂದ ಆರಿಸಿ ಬಂದಿರಲಿ. ಅವರ ವರ್ತನೆ ವೈಖರಿಗಳಲ್ಲೇ ಅಚ್ಚಾಗಿ ಹೋಗಿರುತ್ತದೆ ವಿಶ್ವದ ದೊಣೆನಾಯಕ ಅಮೆರಿಕವೇ ಎಂಬ ಸಾಮ್ರಾಜ್ಯಶಾಹಿ ಧೋರಣೆಯಿದು.
ಧಾರ್ಮಿಕ ಆಡಳಿತವನ್ನು ಕಿತ್ತೊಗೆಯಬೇಕೆಂಬ ಅಮೆರಿಕ-ಇಸ್ರೇಲ್ ಸನ್ನಾಹಕ್ಕೆ ಇಂಬು ದೊರೆತದ್ದು, ತಿಂಗಳ ಹಿಂದೆ ಇರಾನಿನಲ್ಲಿ ಸ್ಫೋಟಗೊಂಡ ಆರ್ಥಿಕ ಸಂಕಟ. ಹಣದುಬ್ಬರ ಬೆಲೆ ಏರಿಕೆಗಳಿಂದ ತತ್ತರಿಸಿದ ಜನ ಭಾರೀ ಸಂಖ್ಯೆಯಲ್ಲಿ ರಸ್ತೆಗಳಿಗಿಳಿದು ಪ್ರತಿಭಟಿಸಿದರು. ಆದರೆ ಈ ಆರ್ಥಿಕ ಸಂಕಟ ಕೇವಲ ಖಮೇನಿ ಆಡಳಿತದ ವೈಫಲ್ಯವಾಗಿರಲಿಲ್ಲ. ಅನೇಕ ದಿಗ್ಬಂಧನ-ನಿರ್ಬಂಧಗಳನ್ನು ಹೇರಿ ದಶಕಗಳಿಂದ ಇರಾನಿನ ಕೈಕಾಲುಗಳನ್ನು ಕಟ್ಟಿ ಹಾಕಿದ್ದ ಅಮೆರಿಕದ ದುಷ್ಟ ನೀತಿಯ ಪಾತ್ರ ಬಹುದೊಡ್ಡದು.
ಇಸ್ಲಾಮಿಕ್ ರಿಪಬ್ಲಿಕ್ ಕಳೆದ 46 ವರ್ಷಗಳಿಂದ ಆಳಕ್ಕೆ ಬೇರು ಬಿಟ್ಟಿದೆ. ಅದನ್ನು ಅಲ್ಲಾಡಿಸುವುದು 35 ಸಾವಿರ ಅಡಿಗಳ ಎತ್ತರದಿಂದ ಬಾಂಬುಗಳನ್ನು ಎಸೆಯುವಷ್ಟು ಸುಲಭ ಅಲ್ಲ. ಇರಾಕ್, ಲಿಬ್ಯಾ ಹಾಗೂ ಅಪ್ಘಾನಿಸ್ತಾನದಲ್ಲಿ ಅಮೆರಿಕದ ಹಸ್ತಕ್ಷೇಪ ವಿನಾಶಕ್ಕೇ ದಾರಿ ಮಾಡಿದ್ದು ಚಾರಿತ್ರಿಕ ಸತ್ಯ. ಗಾಝಾ ಮತ್ತು ಉಕ್ರೇನ್ ಸ್ಮಶಾನಗಳಾಗಿ ಹೋಗಿವೆ. ಹೀಗಾಗಿ ಇರಾನಿನ ಜನ ಟ್ರಂಪ್ ಮಾತಿಗೆ ಸಲೀಸಾಗಿ ಮರುಳಾಗುವ ಸಾಧ್ಯತೆ ಇಲ್ಲ.
ಈ ಯುದ್ಧದ ಜ್ವಾಲೆಗಳ ಬಿಸಿಯಿಂದ ಭಾರತ ದೂರ ಉಳಿಯುವುದು ಶಕ್ಯವೇ ಇಲ್ಲ. ಕೊಲ್ಲಿ ದೇಶಗಳಲ್ಲಿ ಒಂದು ಕೋಟಿಯಷ್ಟು ಭಾರತೀಯರು ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದಾರೆ. ಭಾರತದಲ್ಲಿ ಅವರ ಅವಲಂಬಿತರ ಲೆಕ್ಕ ಹಿಡಿದರೆ ಈ ಸಂಖ್ಯೆ ಹಲವು ಕೋಟಿಗಳಿಗೆ ಹಿಗ್ಗೀತು. ಕಚ್ಚಾತೈಲದ ದರ ತೀವ್ರವಾಗಿ ಏರುವ ಆತಂಕವೂ ದಟ್ಟವಾಗಿದೆ. ಪೆಟ್ರೋಲ್, ಡೀಸೆಲ್, ಎಲ್ ಪಿ ಜಿ, ಎಲ್ ಎನ್ ಜಿ ದರ ಏರಿದರೆ ಜನಸಾಮಾನ್ಯರ ಬವಣೆಗಳಿಗೆ ಹೊಸ ಕಿಚ್ಚು ಹೊತ್ತಲಿದೆ. ಏರ್ಪಡುವ ಪರಿಸ್ಥಿತಿ ಊಹಾತೀತ. ಈ ಯುದ್ಧವನ್ನು ಅಮೆರಿಕ-ಇಸ್ರೇಲ್ ಒಡನೆಯೇ ನಿಲ್ಲಿಸುವುದರಲ್ಲಿ ಭಾರತದ ಮತ್ತು ವಿಶ್ವದ ಹಿತ ಅಡಗಿದೆ.





