ಸ್ಯಾನಿಟರಿ ಪ್ಯಾಡ್ ಬದಲಿಗೆ ಮುಟ್ಟಿನ ಕಪ್ಗಳನ್ನು ನೀಡುವುದು ಸದ್ಯದ ಮಟ್ಟಿಗೆ ಬಹಳ ಪ್ರಗತಿಪರವಾದ ನಿರ್ಧಾರ. ಆದರೆ, ಅಷ್ಟೇ ಸವಾಲಿನ ಕೆಲಸ. ಅದನ್ನು ಅಧಿಕಾರಿಗಳು ಅರ್ಥ ಮಾಡಿಕೊಂಡು ಮಕ್ಕಳಿಗೆ ಸೂಕ್ತ ತರಬೇತಿ ನೀಡುವ ಮೂಲಕ, ಮುಟ್ಟಿನ ಕಪ್ ಬಗ್ಗೆ ಇರುವ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಿ ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಮುಟ್ಟಿನ ದಿನಗಳನ್ನು ಸಹ್ಯಗೊಳಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ.
ಕಾಲ ಬದಲಾದಂತೆ, ಕಾಲದ ತುರ್ತು ಮತ್ತು ಅಗತ್ಯಗಳಿಗೆ ಅನುಗುಣವಾಗಿ ನಮ್ಮ ಜೀವನ ಶೈಲಿ ಕೂಡ ಬದಲಾಗುತ್ತದೆ, ಬದಲಾಗಬೇಕು. ಆದರೆ, ಮಹಿಳೆಯರು ಮತ್ತು ಶೋಷಿತರ ಬದುಕಲ್ಲಿ ಎಲ್ಲವೂ ಸಾಧ್ಯವಾಗಲು ಹೋರಾಟ ಬೇಕು ಜೊತೆಗೆ ಅಧಿಕಾರ ನಡೆಸುವವರಿಗೆ ತಾಯಿ ಹೃದಯ ಇರಬೇಕು. ಕರ್ನಾಟಕದ ಪಾಲಿಗೆ ಕಾಂಗ್ರೆಸ್ ಸರ್ಕಾರ ಅದರಲ್ಲೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಿದ ರೀತಿ, ಸೂಕ್ಷ್ಮ ಸಂವೇದನೆಯಿಂದ ಜಾರಿಗೆ ತಂದ ಯೋಜನೆಗಳು ಇತಿಹಾಸದಲ್ಲಿ ದಾಖಲಾಗಲಿವೆ. ಮಹಿಳಾ ಸಬಲೀಕರಣದ ಘನ ಉದ್ದೇಶದಿಂದ ರಾಜ್ಯದಾದ್ಯಂತ ಉಚಿತ ಪ್ರಯಾಣದ ʼಶಕ್ತಿʼ ಯೋಜನೆ ಹಾಗೆಯೇ ಗೃಹಿಣಿಯರ ಖಾತೆಗೆ ಮಾಸಿಕ ಎರಡು ಸಾವಿರ ರೂಪಾಯಿ ಹಾಕುವ ʼಗೃಹಲಕ್ಷ್ಮಿʼ ಯೋಜನೆ ಜಾರಿ ಮಾಡಿದ್ದ ಸಿದ್ದರಾಮಯ್ಯ ಸರ್ಕಾರ ಮಹಿಳೆಯರ ಪರ ಲಿಂಗಸೂಕ್ಷ್ಮತೆಯಿಂದ ಯೋಚಿಸುವುದನ್ನು ಮುಂದುವರಿಸಿದೆ. ಕಳೆದ ವರ್ಷಾಂತ್ಯದಲ್ಲಿ ಸರ್ಕಾರಿ ಮತ್ತು ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯಿದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವ ನಿಯಮ ಜಾರಿಗೆ ತಂದಿತ್ತು. ಇದರ ವಿರುದ್ಧ ಹೋಟೇಲ್ ಮಾಲಿಕರ ಸಂಘ ಹೈಕೋರ್ಟ್ ಮೆಟ್ಟಲೇರಿದಾಗಲೂ ಸರ್ಕಾರ ಬಲವಾಗಿ ಸಮರ್ಥನೆ ಮಾಡಿಕೊಂಡಿದೆ.
”ಸಂವಿಧಾನದ 42ನೇ ಪರಿಚ್ಛೇದದಡಿ ದುಡಿಯುವ ಸ್ಥಳದಲ್ಲಿ ನ್ಯಾಯಯುತ ಮತ್ತು ಮಾನವೀಯ ಸ್ಥಿತಿ ಮತ್ತು ಮಾತೃತ್ವದ ಪರಿಹಾರಕ್ಕಾಗಿ ಸರಕಾರ ಆದೇಶಿಸುವುದಕ್ಕೆ ಅವಕಾಶವಿದೆ. ಪರಿಚ್ಛೇದ 15(3)ರ ಪ್ರಕಾರ ರಾಜ್ಯ ಸರಕಾರಗಳಿಗೆ ಈ ರೀತಿಯ ಜನಪರ ಆದೇಶಗಳನ್ನು ಮಾಡುವುದಕ್ಕೆ ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ,” ಎಂದು ಸರ್ಕಾರ ಹೈಕೋರ್ಟ್ ಪೀಠಕ್ಕೆ ಮನವರಿಕೆ ಮಾಡಿದೆ.
ಇದೀಗ ಮತ್ತೊಂದು ಸ್ತೀಪರವಾದ ಯೋಜನೆಗೆ ಸಿದ್ದರಾಮಯ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರವು ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ ಒದಗಿಸುವ ಯೋಜನೆಯೊಂದನ್ನು ಪ್ರಾಯೋಗಿಕವಾಗಿ ಆರಂಭಿಸಲು ನಿರ್ಧರಿಸಿದೆ. ಆಯ್ದ ಕೆಲ ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ ನೀಡಿ ಬಳಿಕ ರಾಜ್ಯದಾದ್ಯಂತ ವಿಸ್ತರಿಸಲು ಸರ್ಕಾರ ಮುಂದಾಗಿದೆ. ಸದ್ಯ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿಮಿಟೆಡ್ ಮೂಲಕ 61 ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚದಲ್ಲಿ 10,38,912 ಮುಟ್ಟಿನ ಕಪ್ ನೀಡಲು ಸರ್ಕಾರ ಅನುಮೋದನೆ ನೀಡಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದಲೇ 9 ರಿಂದ 12 ನೇ ತರಗತಿಯ ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ಗಳನ್ನು ಪೂರೈಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಈಗಾಗಲೇ 6ರಿಂದ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸರ್ಕಾರ ಸ್ಯಾನಿಟರಿ ಪ್ಯಾಡ್ಗಳ ವಿತರಣೆ ಮಾಡುತ್ತಿದೆ. ಆದರೆ ಅದರ ವಿಲೇವಾರಿಯೇ ದೊಡ್ಡ ತಲೆ ನೋವಾಗಿದೆ. ಇದೀಗ ಮುಟ್ಟಿನ ಕಪ್ ನೀಡಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ಇವು ವಿದ್ಯಾರ್ಥಿನಿಯರ ಮುಟ್ಟಿನ ದಿನಗಳ ಆತಂಕ, ಮುಜುಗರ ದೂರ ಮಾಡಲಿದೆ. ಶುಚಿತ್ವದ ಖಾತ್ರಿ ನೀಡಲಿದೆ ಎಂದೇ ಭಾವಿಸಲಾಗಿದೆ.
ಸ್ಯಾನಿಟರಿ ಪ್ಯಾಡ್ ಬದಲಿಗೆ ಮುಟ್ಟಿನ ಕಪ್ಗಳನ್ನು ನೀಡುವುದು ಸದ್ಯದ ಮಟ್ಟಿಗೆ ಬಹಳ ಪ್ರಗತಿಪರವಾದ ನಿರ್ಧಾರ. ಆದರೆ, ಅಷ್ಟೇ ಸವಾಲಿನ ಕೆಲಸ. ಅದನ್ನು ಅಧಿಕಾರಿಗಳು ಅರ್ಥ ಮಾಡಿಕೊಂಡು ಮಕ್ಕಳಿಗೆ ಸೂಕ್ತ ತರಬೇತಿ ನೀಡುವ ಮೂಲಕ, ಮುಟ್ಟಿನ ಕಪ್ ಬಗ್ಗೆ ಇರುವ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಿ ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಮುಟ್ಟಿನ ದಿನಗಳನ್ನು ಸಹ್ಯಗೊಳಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ.
ರಾಜ್ಯದ ಸರಕಾರಿ ಹಾಗೂ ಅನುದಾನಿತ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರ ಆರೋಗ್ಯ ಸಂರಕ್ಷಣೆಗಾಗಿ ಮೈತ್ರಿ ಮುಟ್ಟಿನ ಕಪ್ ವಿತರಣಾ ಕಾರ್ಯಕ್ರಮವನ್ನು 2023ರಲ್ಲಿಯೇ ಕುಟುಂಬ ಕಲ್ಯಾಣ ಇಲಾಖೆ ಆರಂಭಿಸಿತ್ತು. ಆರಂಭಿಕವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹನ್ನೊಂದು ಸಾವಿರ ಮತ್ತು ಚಾಮರಾಜನಗರದ ನಾಲ್ಕು ಸಾವಿರ ವಿದ್ಯಾರ್ಥಿನಿಯರಿಗೆ ತಲಾ ಒಂದರಂತೆ ಹದಿನೈದು ಸಾವಿರ ಕಪ್ ವಿತರಿಸಲಾಗಿತ್ತು. ಅವುಗಳ ಸಾಧಕ ಬಾಧಕ ಅರಿತೇ ಈ ಮುಂದುವರಿಕೆಗೆ ಸರ್ಕಾರ ಮುಂದಾಗಿದೆ ಅನ್ನಿಸುತ್ತದೆ.
ಕರ್ನಾಟಕದಲ್ಲಿ ಭೀಕರ ಪ್ರವಾಹ ಬಂದಾಗ ಮಹಿಳೆಯರ ತಂಡವೊಂದು ಪ್ರವಾಹಪೀಡಿತ ಮಹಿಳೆಯರಿಗೆ ಉಚಿತವಾಗಿ ಮುಟ್ಟಿನ ಕಪ್ಗಳನ್ನು ಖುದ್ದು ಹೋಗಿ ವಿತರಿಸಿತ್ತು. ಪ್ರಗತಿಪರ ಮಹಿಳೆಯರು ಸಂತ್ರಸ್ತ ಮಹಿಳೆಯರಿಗೆ ಸುರಕ್ಷಿತವಾಗಿ ಬಳಸುವ ವಿಧಾನದ ಬಗ್ಗೆ ತರಬೇತಿ ನೀಡಿದ್ದರು. ಸಾರ್ವಜನಿಕರು ಉದಾರ ದೇಣಿಗೆ ನೀಡಿ ಸಹಕರಿಸಿದ್ದರು. ಈಗಾಗಲೇ ಕೆಲವು ಸ್ವಯಂಸೇವಾ ಸಂಸ್ಥೆಗಳು ಇಂತಹ ಸೇವಾ ಕಾರ್ಯಗಳನ್ನು ಮಾಡುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಮುಟ್ಟಿನ ಕಪ್ಗಳು ಇನ್ನೂ ಪ್ರಚಾರದಲ್ಲಿಲ್ಲ. ಇದೀಗ ಸರ್ಕಾರ ಶಾಲಾ ಮಕ್ಕಳಿಗೆ ಕಪ್ ವಿತರಿಸುವ ಯೋಜನೆಯಿಂದ, ತಾಯಂದಿರು ಕೂಡ ಮುಟ್ಟಿನ ಕಪ್ ಬಗ್ಗೆ ಆಸಕ್ತಿ ತೋರಬಹುದು.
ಬಹಳ ವರ್ಷಗಳಿಂದ ಬಳಕೆಯಲ್ಲಿರುವ ಪ್ಯಾಡ್ಗಳು ಪರಿಸರಕ್ಕೆ ಮಾರಕ, ವರ್ಷಗಳ ಕಾಲ ಅವು ಮಣ್ಣಿನಲ್ಲಿ ಕರಗುವುದಿಲ್ಲ ಎಂದು ಅಧ್ಯಯನ ವರದಿಗಳು ಹೇಳಿವೆ. ಹಲವು ಕಂಪನಿಗಳು ಪರಿಸರಸ್ನೇಹಿ ಪ್ಯಾಡ್ಗಳನ್ನು ಪರಿಚಯಿಸಿವೆ. ತಿಂಗಳಿಗೆ ಕನಿಷ್ಠ ಐವತ್ತರಿಂದ ನೂರು ರೂಪಾಯಿ ಪ್ಯಾಡ್ಗಳಿಗೆ ಖರ್ಚಾಗುತ್ತದೆ. ಬಡ ಹೆಣ್ಣುಮಕ್ಕಳಿಗೆ ಇದು ದುಬಾರಿಯೇ ಸರಿ. ಮುಟ್ಟಿನ ಕಪ್ಗಳಾದರೆ ಒಮ್ಮೆ ಖರೀದಿಸಿದರೆ ಬಹಳ ವರ್ಷಗಳ ಕಾಲ ಬಳಸಬಹುದು. ಆದರೆ, ಸರ್ಕಾರ ಪೂರೈಸುವ ಕಪ್ಗಳ ಗುಣಮಟ್ಟದ ಬಗ್ಗೆ ಖಾತ್ರಿಪಡಿಸುವ ಅಗತ್ಯವಿದೆ. ಗುಣಮಟ್ಟದ ಕಪ್ಗಳನ್ನು ಮೆಡಿಕಲ್ ಗ್ರೇಡ್ ಸಿಲಿಕಾನ್ನಿಂದ ತಯಾರಿಸಲಾಗುತ್ತದೆ. ಸರ್ಕಾರದ ಬಹುತೇಕ ಯೋಜನೆಗಳು ಕಳಪೆ ಗುಣಮಟ್ಟದ ವಸ್ತುಗಳನ್ನು ಪೂರೈಸುವ ಮೂಲಕ ಹಳ್ಳ ಹಿಡಿಯುವುದು ಸಾಮಾನ್ಯ. ಈ ಯೋಜನೆಯೂ ಹಾಗೆ ಆಗದಂತೆ ಮುತುವರ್ಜಿ ವಹಿಸುವುದು ಅಗತ್ಯ.
ಇದನ್ನೂ ಓದಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್: ತಪ್ಪು ಕಲ್ಪನೆ ಬಿಡಿ; ಹೆಣ್ಣುಮಕ್ಕಳಿಗೆ ಬಳಕೆ ತರಬೇತಿ ನೀಡಿ
ಗ್ರಾಮೀಣ ಭಾಗದಲ್ಲಿ ಮುಟ್ಟಿನ ಬಗ್ಗೆಯೇ ಮೂಢನಂಬಿಕೆಗಳು ಇನ್ನೂ ಢಾಳಾಗಿವೆ. ಈ ಮಾಹಿತಿ ತಂತ್ರಜ್ಞಾನದ ಯುಗದಲ್ಲೂ ಮಹಿಳೆಯರನ್ನು ಮುಟ್ಟಿನ ದಿನಗಳಲ್ಲಿ ಊರಾಚೆ ಗುಡಿಸಲಲ್ಲಿ ಶುಚಿತ್ವ, ಸುರಕ್ಷತೆ ಇಲ್ಲದ ಜಾಗಗಳಲ್ಲಿ ಕಳೆಯುವಂತೆ ಮಾಡುವ ಅಮಾನವೀಯ ಪದ್ಧತಿಯಿದೆ. ಒಂದು ಕಡೆ ಪ್ಯಾಡ್ ಬಳಸುವುದಕ್ಕೂ ಅನುಕೂಲವಿಲ್ಲದ ಬಡತನ, ಮತ್ತೊಂದು ಕಡೆ ಊರಾಚೆ ಕಳೆಯುವ ನರಕಯಾತನೆ ಇವೆರಡನ್ನೂ ಮಹಿಳೆಯರು ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮುಟ್ಟಿನ ಕಪ್ ಬಳಕೆಯ ಬಗ್ಗೆ ಮನೆ ಮನೆಗೂ ಜಾಗೃತಿ ಮೂಡಿಸುವ ಅಗತ್ಯವಿದೆ. ಸರ್ಕಾರ ಪೂರೈಸಿದರೂ ಅದನ್ನು ಬಳಕೆ ಮಾಡುವ ಬಗ್ಗೆ ಮಕ್ಕಳಿಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ. ಶಾಲಾ- ಕಾಲೇಜು ಆವರಣಗಳು ಇದಕ್ಕೆ ಪೂರಕವಾಗಿ ಲಿಂಗಸೂಕ್ಷ್ಮತೆಯಿಂದ ವರ್ತಿಸಬೇಕಿದೆ.





