20 ವರ್ಷಗಳ ಕಾಲ ಅದೇ ಮುಖ್ಯಮಂತ್ರಿ ಮತ್ತು ಅವೇ ಆಡಳಿತ ಪಕ್ಷಗಳನ್ನು ನೋಡಿರುವ ಬಿಹಾರಿ ಮತದಾರರಲ್ಲಿ ಒಂದು ಬಗೆಯ ಬಳಲಿಕೆ ನುಸುಳಿದೆ. ಜೊತೆಗೆ ಕುಸಿದು ಹೋಗಿರುವ ಜೀವನಮಟ್ಟದ ಕುರಿತ ಅಂತರ್ಗತ ರೇಜಿಗೆಯಿದೆ. ಪ್ರತಿಪಕ್ಷಗಳು ಈ ಎರಡೂ ಅಂಶಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವಂತೆ ಸದ್ಯಕ್ಕೆ ತೋರುತ್ತಿಲ್ಲ. ತಮ್ಮ ಪ್ರತ್ಯಸ್ತ್ರಗಳನ್ನು ಇನ್ನೂ ಅನಾವರಣಗೊಳಿಸಬೇಕಿದೆ.
ಒಂದೆಡೆ ಹಳಸಿ ಹೋಗಿರುವ ಮೋದಿ ವರ್ಚಸ್ಸು, ಮಾಸಲಾಗಿರುವ ಹಿಂದು-ಮುಸ್ಲಿಮ್ ಕೋಮು ಧೃವೀಕರಣ ತಂತ್ರ. ಮತ್ತೊಂದೆಡೆ 20 ವರ್ಷಗಳ ಕಾಲ ಅಧಿಕಾರ ಹಿಡಿದು ವಯಸ್ಸು ಸಂದು ಅರುಳುಮರುಳಾಗಿ ಹೋಗಿರುವ ನಿತೀಶ್ ಕುಮಾರ್. ಈ ನಡುವೆ ಇಬ್ಬರಿಗೂ ಹತ್ತು ಹಲವು ಕಾರಣಗಳಿಗಾಗಿ ಬಿಹಾರವನ್ನು ಗೆಲ್ಲಲೇಬೇಕಾದ ಅನಿವಾರ್ಯ. ಹೀಗಾಗಿ ಮೋ-ಶಾ ಸರ್ಕಾರದ ಬತ್ತಳಿಕೆಯಲ್ಲಿ ಬಳಸದೆ ಉಳಿದಿರುವ ಅಸ್ತ್ರಗಳೆಂದರೆ ಮತದಾರರ ಯಾದಿಯಿಂದ ತನಗೆ ವೋಟು ಹಾಕದಿರುವ ಲಕ್ಷಾಂತರ ಹೆಸರುಗಳನ್ನು ಕೈಬಿಡುವುದು (SIR) ಮತ್ತು ಈಡೇರಿಸಲಾಗದ ಆಶ್ವಾಸನೆಗಳ ನೀಡಿಕೆ.
ಈ ಎರಡನ್ನೂ ಅತ್ಯಂತ ಸಮರ್ಥವಾಗಿ ಜಾರಿಗೆ ತರತೊಡಗಿದೆ ಎನ್.ಡಿ.ಎ. ಸರ್ಕಾರ. ಬಿಹಾರ ಸರ್ಕಾರದ ಆರ್ಥಿಕಸ್ಥಿತಿಗತಿ ಅನಾರೋಗ್ಯದಿಂದ ಹಾಸಿಗೆ ಹಿಡಿದು ಬಹುಕಾಲವಾಗಿದೆ. ತೀರಿಸಬೇಕಿರುವ ಸಾಲದ ಹೊರೆ ನಾಲ್ಕು ಲಕ್ಷ ಕೋಟಿ ರುಪಾಯಿಗಳನ್ನು ದಾಟಿದೆ. ಆದರೂ ಬೊಕ್ಕಸದ ಮೇಲೆ 33 ಸಾವಿರ ಕೋಟಿ ರುಪಾಯಿಗಳಷ್ಟು ಹೊರೆ ಹೇರುವ ಹೊಸ ಆಶ್ವಾಸನೆಗಳನ್ನು ನೀಡಿದ್ದಾರೆ ನಿತೀಶ್. ಈ ಆಶ್ವಾಸನೆಗಳ ಜಾಹೀರಾತುಗಳಲ್ಲಿ ನಿತೀಶ್ ಜೊತೆ ತಮ್ಮ ಫೋಟೋಗಳನ್ನೂ ಮಿಂಚಿಸಿಕೊಂಡಿದ್ದಾರೆ ಪ್ರಧಾನಿ ಮೋದಿ.
20 ವರ್ಷಗಳ ಕಾಲ ಅದೇ ಮುಖ್ಯಮಂತ್ರಿ ಮತ್ತು ಅವೇ ಆಡಳಿತ ಪಕ್ಷಗಳನ್ನು ನೋಡಿರುವ ಬಿಹಾರಿ ಮತದಾರರಲ್ಲಿ ಒಂದು ಬಗೆಯ ಬಳಲಿಕೆ ನುಸುಳಿದೆ. ಜೊತೆಗೆ ಕುಸಿದು ಹೋಗಿರುವ ಜೀವನಮಟ್ಟದ ಕುರಿತ ಅಂತರ್ಗತ ರೇಜಿಗೆಯಿದೆ. ಪ್ರತಿಪಕ್ಷಗಳು ಈ ಎರಡೂ ಅಂಶಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವಂತೆ ಸದ್ಯಕ್ಕೆ ತೋರುತ್ತಿಲ್ಲ. ತಮ್ಮ ಪ್ರತ್ಯಸ್ತ್ರಗಳನ್ನು ಇನ್ನೂ ಅನಾವರಣಗೊಳಿಸಬೇಕಿದೆ.
ಮೋ-ಶಾ ಜೋಡಿ ‘SIR’ನ್ನು ಮಾತ್ರವೇ ನೆಚ್ಚಿ ಕುಳಿತಿಲ್ಲ. ಮಹಿಳೆಯರ ಮತಗಳಿಗೆ ಬಹುದೊಡ್ಡ ಗಾಳ ಹಾಕಿದೆ. ಮೊನ್ನೆಮೊನ್ನೆ ಮತ್ತೊಂದು ‘ಬ್ರಹ್ಮಾಸ್ತ್ರ’ ಬಿಟ್ಟಿದೆ. ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರ ಬಿಹಾರದ 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 7,500 ರೂಪಾಯಿಗಳನ್ನು ವರ್ಗಾಯಿಸಿದೆ. ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆಯ ಹೆಸರಿನಲ್ಲಿ ನಡೆದ ಒಟ್ಟು 7,500 ಕೋಟಿ ರುಪಾಯಿಗಳ ಈ ವರ್ಗಾವಣೆಗೆ ಖುದ್ದು ಪ್ರಧಾನಮಂತ್ರಿ ಮೋದಿಯವರೇ ಚಾಲನೆ ನೀಡಿದ್ದಾರೆ. ಚುನಾವಣೆಯ ಹೊಸ್ತಿಲಿನಲ್ಲಿ ಜಾರಿ ಮಾಡಿರುವ ಈ ಯೋಜನೆಯನ್ನು ಮತದಾರರಿಗೆ ನೀಡಿದ ಲಂಚ ಎಂದು ಪ್ರತಿಪಕ್ಷಗಳು ಟೀಕಿಸಿವೆ. ಇಂತಹ ಯೋಜನೆಗಳನ್ನು ಕಟುವಾಗಿ ಟೀಕಿಸುತ್ತಿದ್ದ ಮೋದಿಯವರ ಮೂಗಿನ ಕೆಳಗೇ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗಳಲ್ಲಿ ‘ಲಾಡ್ಲೀ ಬೆಹನಾ’ ಮತ್ತು ‘ಲಡ್ಕೀ ಬಾಹಿನ್’ ನೇರ ನಗದು ವರ್ಗಾವಣೆ ಯೋಜನೆಗಳ ಆಮಿಷ ಒಡ್ಡಿ ಗೆದ್ದಿದೆ ಬಿಜೆಪಿ.
ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಮತ್ತು ದೆಹಲಿಯ ಆಮ್ ಆದ್ಮೀ ಪಾರ್ಟಿ ಸರ್ಕಾರದ ಹಲವು ಯೋಜನೆಗಳನ್ನು ‘ರೇವಡಿ’ (ಸೀರುಂಡೆ ಹಂಚುವ) ಯೋಜನೆ ಎಂದು ಲೇವಡಿ ಮಾಡಿದ್ದವರು ಇದೇ ಮೋದಿ. ಬಿಹಾರದಲ್ಲಿ ಕೋಟಿ ಕೋಟಿ ರುಪಾಯಿಗಳ ಸುರಿಮಳೆಯಾಗತೊಡಗಿದೆ. ಯೋಜನೆಗಳಿಗೆ ಹಣ ಹಂಚುವುದಲ್ಲ, ಹಣ ಹಂಚಲೆಂದೇ ಯೋಜನೆಗಳನ್ನು ಹುಡುಕಿ ಹುಡುಕಿ ರೂಪಿಸಲಾಗಿದೆ.
16 ಲಕ್ಷ ಕೂಲಿಕಾರರ ಖಾತೆಗಳಿಗೆ ಸಮವಸ್ತ್ರ ಖರೀದಿ ಯೋಜನೆಯ ಹೆಸರಿನಲ್ಲಿ ಒಟ್ಟು 800 ಕೋಟಿ ರುಪಾಯಿ ಹಾಕಲಾಗಿದೆ. ಅಲ್ಲಿ ಕೂಲಿಕಾರರು ಸಮವಸ್ತ್ರ ಧರಿಸಿ ಕೂಲಿ ಮಾಡಿದ್ದನ್ನು ಯಾರೂ ಕಂಡವರಿಲ್ಲ. ಹೊಸ ವಕೀಲರಿಗೆ ಮೂರು ವರ್ಷಗಳ ತನಕ ತಿಂಗಳಿಗೆ 5000 ರೂಪಾಯಿಗಳ ಸ್ಟೈಪೆಂಡ್ ಹಂಚಿಕೆ. ವಿಕಾಸಮಿತ್ರರು ‘ಟ್ಯಾಬ್ಲೆಟ್’ ಸಲಕರಣೆ ಖರೀದಿಸಲು ತಲಾ 25 ಸಾವಿರ ರುಪಾಯಿ ಹಂಚಿಕೆ, ಮಾಸಿಕ ಭತ್ಯೆ ಏರಿಕೆ, ಮಾಸಿಕ ಸ್ಟೇಷನರಿ ಭತ್ಯೆ 900 ರುಪಾಯಿಗಳಿಂದ 1500 ರುಪಾಯಿಗೆ ಏರಿಕೆ, ಶಿಕ್ಷಾಸೇವಕರಿಗೆ ಸ್ಮಾರ್ಟ್ ಫೋನ್ ಖರೀದಿಸಲು ತಲಾ 10 ಸಾವಿರ ರುಪಾಯಿ, ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲ ವೇತನಗಳ ಹೆಚ್ಚಳ, ಸಿ.ಎಂ. ಪ್ರತಿಗ್ಯಾ ಯೋಜನೆಯಡಿ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಗೆಂದು ಪ್ರತಿ ತಿಂಗಳು ನಾಲ್ಕರಿಂದ ಆರು ಸಾವಿರ ರುಪಾಯಿ, ಐಟಿಐ ಡಿಪ್ಲೊಮಾ ಯುವಕರಿಗೆ ತಿಂಗಳಿಗೆ ಐದು ಸಾವಿರ ರುಪಾಯಿ, ಬಿ.ಎ. ಮತ್ತು ಎಂ.ಎ.ಪದವೀಧರರಿಗೆ ಪ್ರತಿ ತಿಂಗಳು ಆರು ಸಾವಿರ ರುಪಾಯಿ, ಮುಖ್ಯಮಂತ್ರಿ ಸ್ವಯಂನೆರವು ಭತ್ಯ ಯೋಜನೆಯ ಪ್ರಕಾರ 20-25 ವರ್ಷ ವಯೋಮಿತಿಯ ಒಂದು ಲಕ್ಷ ನಿರುದ್ಯೋಗಿ ಯುವಕರಿಗೆ ಎರಡು ವರ್ಷಗಳ ಕಾಲ ತಿಂಗಳಿಗೆ ತಲಾ ಆರು ಸಾವಿರ ರುಪಾಯಿ, 8,053 ಪಂಚಾಯಿತಿಗಳಲ್ಲಿ 4,200 ಕೋಟಿ ರುಪಾಯಿಗಳ ವೆಚ್ಚದಲ್ಲಿ ಕಲ್ಯಾಣ ಮಂಟಪಗಳ ನಿರ್ಮಾಣ, ಸೆಪ್ಟಂಬರ್ 20ರಂದು ಮುಖ್ಯಮಂತ್ರಿ ನಿತೀಶ್ ಕುಮಾರ್ 49 ಲಕ್ಷ ಲಾಭಾರ್ಥಿಗಳ ಖಾತೆಗೆ 3920 ಕೋಟಿ ರುಪಾಯಿಗಳನ್ನು ಶಿಕ್ಷಣ ಯೋಜನೆಗೆ ಸಂಬಂಧಿಸಿದಂತೆ ವರ್ಗಾವಣೆ ಮಾಡಿದರು.
ಅಳಿವಿನ ಅಂಚಿನಲ್ಲಿರುವ ಕಲೆಗಳನ್ನು ಮರುಜೀವಿತಗೊಳಿಸಲು ಮುಖ್ಯಮಂತ್ರಿ ಗುರು-ಶಿಷ್ಯ ಪರಂಪರೆ ಯೋಜನೆಯಡಿ ಗುರುಗಳಿಗೆ ಪ್ರತಿ ತಿಂಗಳು 15 ಸಾವಿರ ರುಪಾಯಿ, ಕಲಾಕಾರರಿಗೆ ಏಳೂವರೆ ಸಾವಿರ, ಶಿಷ್ಯರಿಗೆ ಮೂರು ಸಾವಿರ ರುಪಾಯಿ ಕೊಡಲಾಗುತ್ತಿದೆ. ಈ ಯೋಜನೆಗೂ ಚಾಲನೆ ಸಿಕ್ಕಿದ್ದು ಸೆಪ್ಟಂಬರ್ ನಲ್ಲಿಯೇ. ಪತ್ರಕರ್ತರ ಪಿಂಚಣಿಯನ್ನು ಆರರಿಂದ 15 ಸಾವಿರ ರುಪಾಯಿಗಳಿಗೆ ಏರಿಕೆ, ಹೀಗೆಯೇ ಏಳೂವರೆ ಕೋಟಿ ಮತದಾರರ ಬ್ಯಾಂಕ್ ಖಾತೆಗಳಿಗೆ ಒಂದಲ್ಲ ಒಂದು ರೀತಿಯ ಯೋಜನೆಗಳ ಹೆಸರಿನಲ್ಲಿ ನಗದನ್ನು ಜಮಾ ಮಾಡುತ್ತಿದೆ ಬಿಜೆಪಿ-ಜೆಡಿಯು ಸರ್ಕಾರ. ಅರ್ಥಾತ್ ಎರಡೂ ಕಾಲು ಕೋಟಿ ಜನರ ಖಾತೆಗಳಿಗೆ ಒಂದಲ್ಲ ಒಂದು ಯೋಜನೆಯಡಿ ನಗದು ವರ್ಗಾವಣೆ. ಕಳೆದ ಎರಡು ತಿಂಗಳುಗಳಲ್ಲಿ ಬಿಹಾರ ಸರ್ಕಾರ ನೀಡಿರುವ ಆಶ್ವಾಸನೆಗಳು ಮತ್ತು ಮಾಡಿರುವ ನಗದ ವರ್ಗಾವಣೆಯ ಎಲ್ಲ ವೆಚ್ಚಗಳು ಸೇರಿದಂತೆ ಬಿಹಾರ ಸರ್ಕಾರದ ಖಜಾನೆ ಪ್ರತಿ ವರ್ಷ ಭರಿಸಬೇಕಿರುವ ಒಟ್ಟು ಹೊರೆ 33,926 ಕೋಟಿ ರುಪಾಯಿಗಳು. ಹೀಗೆ ನಗದು ಹಂಚಲೆಂದೇ 16 ಸಾವಿರ ಕೋಟಿ ರುಪಾಯಿಗಳ ಸಾಲವನ್ನು ಬಿಹಾರ ಸರ್ಕಾರ ತೆಗೆದುಕೊಂಡಿದೆ ಎಂದು ದೈನಿಕ್ ಭಾಸ್ಕರ್ ಹಿಂದೀ ಪತ್ರಿಕೆ ವರದಿ ಮಾಡಿದೆ. ಐದು ವರ್ಷ ಆರಾಮಾಗಿದ್ದು, ನಿರುದ್ಯೋಗಿ ಯುವಜನರಿಗೆ ಲಾಠಿ ಏಟುಗಳ ರುಚಿ ಉಣಿಸಿ, ಕಡೆಯ ವರ್ಷ ಹಣ ಹಂಚಿ, ಅಡಿಗಲ್ಲುಗಳನ್ನಿಟ್ಟರೆ ಸಾಕಲ್ಲ?
ನಿತೀಶ್ ಪ್ರಕಟಿಸಿರುವ ಎಲ್ಲ ಆಶ್ವಾಸನೆಗಳನ್ನು ಜಾರಿಗೊಳಿಸಲು ಏಳು ಲಕ್ಷ ಕೋಟಿ ರುಪಾಯಿಗಳೇ ಬೇಕೆಂದು ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ ಟೀಕಿಸಿದ್ದಾರೆ.
ಮಾಸಿಕ ಆರು ಸಾವಿರ ರುಪಾಯಿಗಳಿಗೂ ಕಡಿಮೆ ಆದಾಯವಿರುವ 94 ಲಕ್ಷ ಕುಟುಂಬಗಳಿಗೆ ತಲಾ ಎರಡು ಲಕ್ಷ ರುಪಾಯಿ ನೀಡುವ ಹಳೆಯ ಭರವಸೆಯನ್ನು ನಿತೀಶ್ ಕುಮಾರ್ ಸರ್ಕಾರ ಈಡೇರಿಸಿಯೇ ಇಲ್ಲ. ಈ ಬಡಕುಟುಂಬಗಳು ದಿನನಿತ್ಯದ ವೆಚ್ಚಕ್ಕೂ ಸಾಲ ಮಾಡುವ ದುಸ್ಥಿತಿಯಲ್ಲಿವೆ. ಕಿರುಸಾಲ ನೀಡುವ ಕಂಪನಿಗಳ ಕಿರುಕುಳಕ್ಕೆ ತುತ್ತಾಗಿವೆ. ಬಿಹಾರದಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನ 1,500-1,600 ಮಾತ್ರ.
ಕಳೆದ 12 ವರ್ಷಗಳ ಡಬಲ್ ಎಂಜಿನ್ ಸರ್ಕಾರ ಬಿಹಾರಿಗಳ ವರ್ತಮಾನ-ಭವಿಷ್ಯತ್ತುಗಳನ್ನು ಬಂಜರಾಗಿಸಿದೆ. ಸುಮಾರು 71 ಸಾವಿರ ಕೋಟಿ ರುಪಾಯಿಗಳ ವೆಚ್ಚಕ್ಕೆ ಸಂಬಂಧಿಸಿದ ವಿನಿಯೋಗ ಪತ್ರಗಳನ್ನೇ (ಯುಟಿಲೈಸೇಷನ್ ಸರ್ಟಿಫಿಕೇಟ್ಸ್) ಕೊಟ್ಟಿಲ್ಲ ಬಿಹಾರ ಸರ್ಕಾರ ಎಂದು ನಿಯಂತ್ರಕರು ಮತ್ತು ಮಹಾಲೇಖಪಾಲರ (ಸಿಎಜಿ) ವರದಿ ಕಳೆದ ಜುಲೈ ತಿಂಗಳಿನಲ್ಲಿ ತಕರಾರು ತೆಗೆದಿತ್ತು. ಭ್ರಷ್ಟಾಚಾರ ಮುಡಿಯಿಂದ ಅಡಿವರೆಗೆ ಮೆರೆದಾಡಿದೆ. ಒಂದೊಮ್ಮೆ ಸುಶಾಸನಬಾಬು ಎಂದು ಹೆಸರಾಗಿದ್ದ ನಿತೀಶ್ ಮೂಗಿನ ಕೆಳಗೆ ಕುಶಾಸನ ವಿಜೃಂಭಿಸಿದೆ. ಭ್ರಷ್ಟಾಚಾರದ ಧೃತರಾಷ್ಟ್ರ ಆಗಿ ಹೋಗಿದ್ದಾರೆಂದು ಪ್ರತಿಪಕ್ಷಗಳು ಲೇವಡಿಯೆಬ್ಬಿಸಿವೆ. ನಿತೀಶ್ ಕುಮಾರ್ ಬಿಜೆಪಿ ಮೈತ್ರಿಯಿಂದ ಹೊರಬಿದ್ದು ಆರ್.ಜೆ.ಡಿ. ಜೊತೆ ಕೆಲ ಕಾಲ ಗೆಳೆತನ ಬೆಳೆಸಿದ್ದರು. ಆ ಕಾಲದಲ್ಲಿ ನಿತೀಶ್ ಕುಮಾರ್ ವಿರುದ್ಧ ಭ್ರಷ್ಟಾಚಾರದ 32 ಪ್ರಕರಣಗಳನ್ನು ಪಟ್ಟಿ ಮಾಡಿದ್ದರು ಪ್ರಧಾನಿ ಮೋದಿ. ಇದೀಗ ಅವೇ ಪ್ರಕರಣಗಳನ್ನು ಪ್ರತಿಪಕ್ಷಗಳು ಎನ್.ಡಿ.ಎ. ಮುಖಕ್ಕೆ ರಾಚುತ್ತಿವೆ.
ಬಿಜೆಪಿ ಗೆದ್ದಿರುವ ರಾಜ್ಯಗಳಲ್ಲಿ ನೀಡಿರುವ ಆಶ್ವಾಸನೆಗಳನ್ನು ಅರೆಬರೆಯಾಗಿ ಜಾರಿಗೆ ತರುತ್ತಿದೆ. ಮಹಾರಾಷ್ಟ್ರದ ಲಡ್ಕೀ ಬಹೀಣಾ ಯೋಜನೆ ಈ ಮಾತಿಗೆ ದೊಡ್ಡ ಉದಾಹರಣೆ. ಜಾರಿಗೆ ತರಲು ಇನ್ನೂ ಕಾಲಾವಕಾಶ ಇದೆಯಲ್ಲ, ಮೊದಲ ವರ್ಷಗಳಲ್ಲೇ ಜಾರಿಗೆ ತರುತ್ತೇವೆಂದು ಗ್ಯಾರಂಟಿ ನೀಡಿರಲಿಲ್ಲ ಎಂದು ಭಂಡವಾದಕ್ಕೆ ಇಳಿದಿದೆ ದೆಹಲಿಯ ರೇಖಾ ಗುಪ್ತಾ ಸರ್ಕಾರ. ರಾಜಕೀಯವಾಗಿ ಅತ್ಯಂತ ಜಾಗೃತರು ಎನಿಸಿಕೊಂಡಿರುವ ಬಿಹಾರಿಗಳು ಈ ಸಲವೂ ಕನ್ನಡಿಯ ಗಂಟುಗಳನ್ನು ಕಂಡು ಪಿಗ್ಗಿ ಬೀಳುತ್ತಾರೆಯೇ ಅಥವಾ ಎಚ್ಚೆತ್ತುಕೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಿದೆ.





