“ತನ್ನ ಸಮುದಾಯದವರು ಕಡಿಮೆ ಇದ್ದ ಕ್ಷೇತ್ರದಲ್ಲೂ ನಿರಂತರವಾಗಿ ಗೆದ್ದು ಬರುತ್ತಿದ್ದ ಶಾಮನೂರು ಶಿವಶಂಕರಪ್ಪ ದಾವಣಗೆರೆಗೆ ಉದ್ಯಮ ಸೇರಿ ವಿವಿಧ ರೀತಿಯ ಆಯಾಮಗಳನ್ನು ಕಲ್ಪಿಸಿ ವಿದ್ಯಾಕಾಶಿಯನ್ನಾಗಿ ರೂಪಿಸಿದ ಜಾತ್ಯತೀತ ನಾಯಕ” ಎಂದು ದಾವಣಗೆರೆ ಶಾಮನೂರು ಶಿವಶಂಕರಪ್ಪ ನುಡಿನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.

ದಾವಣಗೆರೆಯ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ನಡೆದ ಇತ್ತೀಚೆಗೆ ನಿಧನರಾದ ಅಖಿಲ ಭಾರತ ರಾಷ್ಟ್ರೀಯ ವೀರಶೈವ ಮಹಾಸಭಾ ರಾಷ್ಟಾಧ್ಯಕ್ಷರು, ಕಾಂಗ್ರೆಸಿನ ಹಿರಿಯ ನಾಯಕರು ಆದ ಶಾಮನೂರು ಶಿವಶಂಕರಪ್ಪ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಸದಾ ಲವಲವಿಕೆಯಿಂದ, ಜನಾನುರಾಗಿಯಾಗಿದ್ದ ಯಜಮಾನರು, ಎಲ್ಲರನ್ನೂ ಸಮಾನವಾಗಿ ಕಂಡ ಜಾತ್ಯತೀತ ನಾಯಕ, ಅಜಾತಶತ್ರು ಶಾಮನೂರು ಶಿವಶಂಕರಪ್ಪ. ದೀರ್ಘ ಕಾಲ ರಾಷ್ಟ್ರೀಯ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರಾಧ್ಯಕ್ಷ ರಾಗಿ, ಕಾಂಗ್ರೆಸ್ ಖಜಾಂಚಿಯಾಗಿ, ದೇಶದ ಹಿರಿಯ ಶಾಸಕರಾಗಿ ಕ್ರಿಯಾಶೀಲ ವ್ಯಕ್ತಿಯಾಗಿದ್ದರು” ಎಂದು ಸ್ಮರಿಸಿದರು.

“ಮಹಿಳಾ ವಿಶ್ವವಿದ್ಯಾಲಯ ಸ್ಥಾಪಿಸಿ ಶರಣೆ ಅಕ್ಕಮಹಾದೇವಿಯ ಹೆಸರಿಟ್ಟಿದ್ದಕ್ಕೆ, ಸರ್ಕಾರಿ ಕಛೇರಿಗಳಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸಲು ಆದೇಶಿಸಿದ್ದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಸನ್ಮಾನಿಸಿದ್ದರು. ಅವರನ್ನು ನಾನು ಯಾವಾಗಲೂ ಯಜಮಾನರೇ ಎಂದು ಕರೆಯುತ್ತಿದ್ದೆ” ಎಂದು ನೆನಪಿಸಿಕೊಂಡರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, “ಪಕ್ಷಾತೀತವಾಗಿ ಎಲ್ಲರಲ್ಲೂ ಉತ್ತಮ ಸ್ನೇಹ ಗಳಿಸಿದ್ದ ಸಮುದಾಯದ ನಾಯಕ ಶಾಮನೂರು ಶಿವಶಂಕರಪ್ಪ. ನನಗೆ ಹಿರಿಯಣ್ಣನಂತಿದ್ದರು. ಅವರು ನನ್ನ ಕಷ್ಟದ ಸಮಯದಲ್ಲಿ ಪಕ್ಷ ಮೀರಿ ನನ್ನೊಂದಿಗೆ ನಿಂತಿದ್ದರು” ಎಂದು ಸ್ಮರಿಸಿದರು.

ಬಾಳೆಹೊನ್ನೂರು ರಂಭಾಪುರೀ ಪೀಠದ ವೀರಸೋಮೇಶ್ವರ ಶ್ರೀಗಳು ಮಾತನಾಡಿ “ವೀರಶೈವ ಲಿಂಗಾಯತ ಸಮುದಾಯದ ಹಿರಿಯ ನಾಯಕರಾಗಿ ಸಮುದಾಯವನ್ನು ಒಟ್ಟಾಗಿಸಲು ಸದಾ ಕೆಲಸ ಮಾಡಿದ ಹಿರಿಯರು. ಎಲ್ಲಾ ಸಮುದಾಯಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಉದ್ದಿಮೆಗಳನ್ನು ಸ್ಥಾಪಿಸಿ, ವಿದ್ಯಾ ಕೇಂದ್ರಗಳನ್ನು ಸ್ಥಾಪಿಸಿ ದಾವಣಗೆರೆಗೆ ಭೌಗೋಳಿಕವಾಗಿ ವಿಭಿನ್ನ ಆಯಾಮ ಖ್ಯಾತಿ ನೀಡಿದ ಶಾಮನೂರು ಶಿವಶಂಕರಪ್ಪನವರಿಗೆ “ಕರ್ನಾಟಕ ರತ್ನ” ನೀಡಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ,”ಹೃದಯ ಶ್ರೀಮಂತಿಕೆ ಹೊಂದಿದ್ದ ಹಿರಿಯ ನಾಯಕ ಅವರ ನಡೆ ನುಡಿ ಆದರ್ಶನೀಯ. ಹೃದಯ ವೈಶಾಲ್ಯತೆ ಹೊಂದಿದ್ದ ಅವರು ಕೋವಿಡ್ ಸಮಯದಲ್ಲಿ ಹತ್ತಾರು ಕೋಟಿ ಖರ್ಚು ಮಾಡಿ ಜನರಿಗೆ ಲಸಿಕೆ ಕೊಡಿಸಿದ್ದರು. ಇದಕ್ಕೆ ನಾನೇ ಸಾಕ್ಷಿಯಾಗಿದ್ದೆ” ಎಂದು ನೆನಪಿಸಿಕೊಂಡರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್
ಮಾತನಾಡಿ, “ತಂದೆಯವರು ನನ್ನನ್ನು ಮಗನಿಗಿಂತ ಹೆಚ್ಚಾಗಿ ಸ್ನೇಹಿತನಂತೆ ಕಾಣುತ್ತಿದ್ದರು. ಉದ್ಯಮ, ಕೈಗಾರಿಕೆ, ಶಿಕ್ಷಣ ಸೇರಿದಂತೆ ಮಕ್ಕಳಿಗೆ ಮಾರ್ಗದರ್ಶಕರಾಗಿದ್ದರು. ಅವರ ದಾನಧರ್ಮದ ಗುಣವೇ ಆದರ್ಶ. ಕೋಮುಗಲಭೆ ಸಂದರ್ಭದಲ್ಲಿ ವೈಯಕ್ತಿಕವಾಗಿ ನೆರವು ನೀಡಿದ್ದರು. ಅವರನ್ನು ಪಡೆದ ನಾವೇ ಧನ್ಯರು” ಎಂದು ಸ್ಮರಿಸಿದರು.

ಉಜ್ಜಯಿನಿ ಶ್ರೀಗಳು, ಶ್ರೀಶೈಲ ಶ್ರೀಗಳು,
ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು, ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು, ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ, ಮದರಸಾ ಕಾರ್ಯಾಧ್ಯಕ್ಷ ಮೌಲಾನ ಅಬುಸುಫಾನ್, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು , ಮೂರುಸಾವಿರ ಮಠದ ಗುರುಸಿದ್ದರಾಜ ಯೋಗೀಂದ್ರ ಸ್ವಾಮೀಜಿ, ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಅನ್ನದಾನಿ ಅಪ್ಪಣ್ಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? http://ದಾವಣಗೆರೆ | ‘ಮದ್ಯದಂಗಡಿಗೆ ಕೋಟಿ ಖಜಾನೆ ಲೂಟಿ’ ಜನತೆಗೆ ಹೊಸವರ್ಷದ ಕೊಡುಗೆ; ಕೇಂದ್ರ ಸಚಿವ ಕುಮಾರಸ್ವಾಮಿ
ಶಾಮನೂರು ಕುಟುಂಬದ ಪುತ್ರರಾದ ಎಸ್ ಎಸ್ ಗಣೇಶ್, ಎಸ್ ಎಸ್ ಬಕ್ಕೇಶ್, ಸೊಸೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಚಿವರಾದ ಎಂ.ಬಿ. ಪಾಟೀಲ, ಎಚ್.ಕೆ. ಪಾಟೀಲ, ಆರ್.ಬಿ. ತಿಮ್ಮಾಪುರ, ಈಶ್ವರ ಖಂಡ್ರೆ, ವಿಧಾನಸಭೆ ಮುಖ್ಯಸಚೇತಕ ಅಶೋಕ್ ಪಟ್ಟಣ, ಎಐಸಿಸಿ ವೀಕ್ಷಕ ಮಯೂರ ಜಯಕುಮಾರ್, ಶಾಸಕರಾದ ಕೆ.ಎಸ್. ಬಸವಂತಪ್ಪ, ಟಿ. ರಘುಮೂರ್ತಿ, ಬಿ. ದೇವೇಂದ್ರಪ್ಪ, ಡಿ.ಜಿ. ಶಾಂತನಗೌಡ, ಬಸವರಾಜು ಶಿವಗಂಗಾ, ಶ್ರೀನಿವಾಸ್, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವರಾದ ಎಚ್. ಅಂಜನೇಯ, ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಆರ್.ಎಸ್. ಪಾಟೀಲ, ಸಾರ್ವಜನಿಕರು ಹಾಗೂ ಕುಟುಂಬದವರು ಹಾಜರಿದ್ದರು.





