ರಾಜ್ಯದಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಸಮೀಕ್ಷೆಯನ್ನು ಪೂರ್ಣಗೊಳಿಸುವುದಕ್ಕಾಗಿ ಶಾಲೆಗಳ ದಸರಾ ರಜೆಯನ್ನು ವಿಸ್ತರಿಸಲಾಗಿತ್ತು. ರಜೆ ವಿಸ್ತರಣೆಯಿಂದ ನಡೆಯದೇ ಉಳಿದಿರುವ ತರಗತಿಗಳ ಸಮಯವನ್ನು ಸರಿದೂಗಿಸಲು ಹೆಚ್ಚುವರಿ ತರಗತಿಗಳನ್ನು ನಡೆಸುವಂತೆ ಶಾಲೆಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚಿಸಿದೆ. ಪ್ರತಿದಿನ ಒಂದು ಗಂಟೆ ಹೆಚ್ಚವರಿ ತರಗತಿ ನಡೆಸಬೇಕೆಂದು ತಿಳಿಸಿದೆ.
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 2026ರ ಫೆಬ್ರವರಿ 5ರವರೆಗೆ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 2024ರ ಜನವರಿ 24ರವರೆಗೆ ಹೆಚ್ಚುವರಿ ತರಗತಿ ನಡೆಸುವಂತೆ ಇಲಾಖೆ ಸೂಚಿಸಿದೆ. ಆದರೆ, ಹೆಚ್ಚುವರಿ ತರಗತಿಯನ್ನು ಬೆಳಿಗ್ಗೆ ಅಥವಾ ಸಂಜೆ ನಡೆಸಬೇಕೆ ಎಂದು ಶಾಲೆಗಳು ನಿರ್ಧರಿಸಬಹುದು ಎಂದು ಹೇಳಿದೆ.
ಸುತ್ತೋಲೆಯಲ್ಲಿ ಉಲ್ಲೇಖಿಸಿದಂತೆ, ದಸರಾ ರಜೆಯನ್ನು ವಿಸ್ತರಣೆ ಮಾಡಿದ್ದರಿಂಧ ಎರಡು ಅರ್ಧ ದಿನಗಳ (ಶನಿವಾರಗಳು) ಮತ್ತು ಎಂಟು ಪೂರ್ಣ ಶಾಲಾ ದಿನಗಳು ನಷ್ಟವಾಗಿವೆ. ಈ 10 ದಿನ ತರಗತಿಗಳು ನಡೆದಿಲ್ಲ. ಆ ದಿನಗಳ ಸಮಯದವನ್ನು ಜನವರಿ ಅಂತ್ಯದ ವೇಳೆಗೆ ಸರಿದೂಗಿಸಬೇಕೆಂದು ಇಲಾಖೆ ಲೆಕ್ಕಾಚಾರ ಹಾಕಿದೆ.
ಜಾತಿಗಣತಿ ಆರಂಭವಾದಾಗ ಕೆಲವು ತಾಂತ್ರಿಕ ತೊಡಕುಗಳು ಎದುರಾಗಿದ್ದವು. ಪರಿಣಾಮ, ಗಣತಿ ನಿರೀಕ್ಷಿತ ಅವಧಿಯೊಳಗೆ ಪೂರ್ಣಗೊಂಡಿರಲಿಲ್ಲ. ಹೀಗಾಗಿ, ಗಣತಿಯನ್ನು ಪೂರ್ಣಗೊಳಿಸಲು ಅಕ್ಟೋಬರ್ 16ರವರೆಗೆ ಗಡುವನ್ನು ವಿಸ್ತರಿಸಲಾಗಿತ್ತು. ಹೀಗಾಗಿ, ಶಾಲೆಗಳು ದೀಪಾವಳಿಯ ನಂತರವೇ ಪುನರಾರಂಭಗೊಂಡವು. ಶಾಲೆಗಳು ಹೆಚ್ಚುವರಿ ತರಗತಿಗಳನ್ನು ನಡೆಸುವಂತೆ ಆದೇಶ ಹೊರಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.




