ಕಷ್ಟಪಟ್ಟು ದ್ವಿತೀಯ ಪರೀಕ್ಷೆ ಬರೆದ ವಿದ್ಯಾರ್ಥಿಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪಕರು ಸರಿಯಾದ ರೀತಿಯಲ್ಲಿ ಮೌಲ್ಯಮಾಪನ ಮಾಡದೇ ಲೋಪವೆಸಗಿದ್ದಾರೆ. ಇದರಿಂದಾಗಿ, ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಬೇಕಾದ ವಿದ್ಯಾರ್ಥಿ, ಕನಿಷ್ಠ ಅಂಕ ಪಡೆದಿರುವುದು ಮಂಡ್ಯ ತಾಲ್ಲೂಕಿನ ಕೊಮ್ಮೇರಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಕೊಮ್ಮೇರಹಳ್ಳಿ ವಿಶ್ವಮಾನವ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ನೂತನ್ ಹೆಚ್.ಎನ್ ಮಾಲ್ಯಮಾಪಕರ ನಿರ್ಲಕ್ಷ್ಯದಿಂದಾಗಿ ರ್ಯಾಂಕ್ನಿಂದ ವಂಚಿತನಾಗಿದ್ದಾರೆ. ಕಡಿಮೆ ಅಂಕ ಗಳಿಸಿದ್ದ ಮಾನಸಿಕ ತೊಳಲಾಟ ಅನುಭವಿಸಿದ್ದಾರೆ. ನೂತನ್ ಕನ್ನಡದಲ್ಲಿ 78 ಅಂಕಗಳು, ಭೌತವಿಜ್ಞಾನದಲ್ಲಿ 99, ರಸಾಯನಶಾಸ್ತ್ರದಲ್ಲಿ 100, ಗಣಿತದಲ್ಲಿ 97, ಜೀವಶಾಸ್ತ್ರದಲ್ಲಿ 98 ಅಂಕಗಳನ್ನು ಪಡೆದಿದ್ದಾರೆ.
ಆದರೆ, ಇಂಗ್ಲಿಷ್ ವಿಷಯದಲ್ಲಿ ಮಾತ್ರ 52 ಅಂಕಗಳನ್ನಷ್ಟೇ ಪಡೆದುಕೊಂಡಿದ್ದಾರೆ. ಇದರಿಂದ ಬೇಸರಗೊಂಡ ವಿದ್ಯಾರ್ಥಿ ತನ್ನ ಉತ್ತರ ಪತ್ರಿಕೆಯ ‘ಫೋಟೋಕಾಪಿ’ ಒದಗಿಸುವಂತೆ ಅರ್ಜಿ ಅಲ್ಲಿಸಿದ್ದರು. ತಮಗೆ ಸಿಕ್ಕ ಫೋಟೋಕಾಪಿಯನ್ನು ಪರಿಶೀಲಿಸಿದಾಗ, ಆತ ಇಂಗ್ಲಿಷ್ ವಿಷಯದ ಪ್ರಶ್ನೆ ಪತ್ರಿಕೆಗೆ ಒಟ್ಟು 22 ಪುಟಗಳಲ್ಲಿ ಉತ್ತರಗಳನ್ನು ಬರೆದಿದ್ದು, ಮೌಲ್ಯಮಾಪನ ಮಾಡಿದ ಶಿಕ್ಷಕರು ಕೇವಲ 13 ಪುಟಗಳನಷ್ಟೆ ಮೌಲ್ಯಮಾಪನ ಮಾಡಿದ್ದಾರೆ. ಉಳಿದ 9 ಪುಟಗಳ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡದೇ ನಿರ್ಲಕ್ಷ್ಯ ವಹಿಸಿರುವುದು ಬೆಳಕಿಗೆ ಬೆಂದಿದೆ.

ಇದನ್ನು ಗಮನಿಸಿದ ಬಳಿಕ, ಆತನ ಕನ್ನಡ ಭಾಷಾ ವಿಷಯದಲ್ಲೂ ಕೇವಲ 78 ಅಂಕಗಳು ಬಂದಿರುವ ಬಗ್ಗೆಯೂ ವಿದ್ಯಾರ್ಥಿಯ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕೆಲವು ಮೌಲ್ಯಮಾಪಕರ ನಿರ್ಲಕ್ಷದಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಮುಂದಿನ ಉನ್ನತ ವ್ಯಾಸಂಗದಲ್ಲಿ ದ್ವಿತೀಯ ಪಿಯುಸಿ ಅಂಕಗಳನ್ನೆ ಪರಿಗಣಿಸುವುದರಿಂದ ಇಂತಹ ವಿದ್ಯಾರ್ಥಿಗಳು ಜೆಇಇ, ನೀಟ್ ಪರೀಕ್ಷೆಗಳಲ್ಲಿ ನಿರೀಕ್ಷಿತ ಫಲಿತಾಂಶ ಗಳಿಸಲು ಸಾಧ್ಯವಾಗದೇ ಇರುವ ಅಂತಕವು ಇರುತ್ತದೆ. ಅಲ್ಲದೇ ಇಂತಹ ಘಟನೆಗಳಿಂದ ವಿದ್ಯಾರ್ಥಿಯು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯು ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.




