ಸ್ಯಾಂಡಲ್ವುಡ್ನ ಸ್ಟಾರ್ ನಟ ಕಿಚ್ಚ ಸುದೀಪ್ ಈ ಬಾರಿಯ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ಸೂಚಿಸಿ, ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸಿದ್ದರು. ಅವರು ಹೋದಲೆಲ್ಲ ಕಿಕ್ಕಿರಿದು ತುಂಬಿಕೊಳ್ಳುತ್ತಿದ್ದ ಜನ ಜೈ ಘೋಷ, ಶಿಳ್ಳೆ, ಚಪ್ಪಾಳೆ, ಕೇಕೆಯ ಮೂಲಕ ಭರ್ಜರಿ ಸ್ವಾಗತ ನೀಡಿದ್ದರು. ಕೊನೆಗೆ ಈ ನಟನನ್ನು ನೋಡುವ ಸಲುವಾಗಿ ಹಲವರು ಲಾಠಿ ಏಟನ್ನು ಕೂಡ ತಿಂದಿದ್ದರು. ಆದರೆ, ಸುದೀಪ್ ಅವರ ಈ ತಾರಾ ವರ್ಚಸ್ಸು ಯಾವ ರೀತಿಯಲ್ಲೂ ಬಿಜೆಪಿಗರ ಕೈ ಹಿಡಿದಿಲ್ಲ. ಕಿಚ್ಚನ ಪ್ರಭಾವಳಿ ಏನಿದ್ದರೂ ಶಿಳ್ಳೆ, ಚಪ್ಪಾಳೆಗೆ ಸೀಮಿತ ಎಂಬುದನ್ನು ಮತದಾರರು ಸಾಬೀತುಪಡಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸುದೀಪ್, ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ಪರ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಪರ ಚುನಾವಣಾ ಪ್ರಚಾರ ಆರಂಭಿಸಿದ್ದರು. ಅದಾದ ಬಳಿಕ ರಾಜ್ಯ ರಾಜಕಾರಣದಲ್ಲಿ ಪ್ರಭಾವಿಗಳು ಎನ್ನಿಸಿಕೊಂಡಿರುವ ಬಿಜೆಪಿಯ ವಿ. ಸೋಮಣ್ಣ, ಶ್ರೀರಾಮುಲು, ಸುಧಾಕರ್, ಬಿ.ಸಿ ಪಾಟೀಲ್, ಮುರುಗೇಶ್ ನಿರಾಣಿ, ಹಾಲಪ್ಪ ಆಚಾರ್, ಎಂಟಿಬಿ ನಾಗರಾಜ್ ಸೇರಿದಂತೆ ಹಲವು ಬಿಜೆಪಿ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಿ, ಮತ ಯಾಚಿಸಿದ್ದರು. ಆದರೆ, ಮೇಲೆ ಹೆಸರಿಸಿದ ಪ್ರಭಾವಿ ನಾಯಕರನ್ನು ಒಳಗೊಂಡು ಸುದೀಪ್ ಬೆಂಬಲಿಸಿದ ಬಹುತೇಕ ಬಿಜೆಪಿ ಅಭ್ಯರ್ಥಿಗಳು ಹೀನಾಯ ಸೋಲು ಕಂಡಿದ್ದಾರೆ.
ಸೋತ ಬಿಜೆಪಿಯ ಅಭ್ಯರ್ಥಿಗಳು
ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ರೋಡ್ ಶೋನಲ್ಲಿ ಭಾಗಿಯಾಗಿದ್ದ ಸುದೀಪ್, ಅದಾದ ನಂತರ ಚಿತ್ರದುರ್ಗದಿಂದ ಚುನಾವಣಾ ಪ್ರಚಾರ ಮುಂದುವರೆಸಿದ್ದರು. ಚಿತ್ರದುರ್ಗ ಕ್ಷೇತ್ರದಲ್ಲಿ ಸುದೀಪ್ ಬೆಂಬಲಿಸಿದ್ದ ಬಿಜೆಪಿಯ ಹಿರಿಯ ಶಾಸಕ ತಿಪ್ಪಾರೆಡ್ಡಿ, ಮೊಳಕಾಲ್ಮೂರು ಕ್ಷೇತ್ರದಲ್ಲಿ ತಿಪ್ಪೆಸ್ವಾಮಿ, ಜಗಳೂರು ಕ್ಷೇತ್ರದ ಎಸ್.ವಿ ರಾಮಚಂದ್ರ, ದಾವಣಗೆರೆ ಉತ್ತರ ಕ್ಷೇತ್ರದ ಲೋಕಿಕೆರೆ ನಾಗರಾಜ್ ಮತ್ತು ದಕ್ಷಿಣ ಕ್ಷೇತ್ರದ ಅಜಯ್ ಕುಮಾರ್, ರಾಣೆಬೆನ್ನೂರು ಕ್ಷೇತ್ರದ ಅರುಣ್ ಕುಮಾರ್, ಹಾವೇರಿ ಕ್ಷೇತ್ರದ ಗವಿಸಿದ್ದಪ್ಪ, ಬ್ಯಾಡಗಿ ಕ್ಷೇತ್ರದ ಬಿ.ವಿ ರುದ್ರಪ್ಪ, ರೋಣ ಕ್ಷೇತ್ರದ ಕಳಕಪ್ಪ ಬಂಡಿ, ಗದಗ ಕ್ಷೇತ್ರದ ಅನಿಲ್ ಪಿ, ಕಲಘಟಗಿ ಕ್ಷೇತ್ರದ ಛಬ್ಬಿ ನಾಗರಾಜ್, ಯಮಕನಮರಡಿ ಕ್ಷೇತ್ರದ ಬಸವರಾಜ ಹುಂಡ್ರಿ, ಬಾಗಲಕೋಟೆ ಕ್ಷೇತ್ರದ ಚರಂತಿಮಠ, ಮಾನ್ವಿ ಕ್ಷೇತ್ರದ ಬಿ.ವಿ ನಾಯಕ್, ಕೂಡ್ಲಿಗಿ ಕ್ಷೇತ್ರದ ಲೋಕೆಶ್ ನಾಯಕ್, ಬಾದಾಮಿ ಕ್ಷೇತ್ರದ ಎಸ್ ಟಿ ಪಾಟೀಲ್, ಸುರಪುರ ಕ್ಷೇತ್ರದ ರಾಜುಗೌಡ, ಯಾದಗಿರಿ ಕ್ಷೇತ್ರದ ವೆಂಕಟರೆಡ್ಡಿ ಮುಂಡಾಳ್, ಸಂಡೂರು ಕ್ಷೇತ್ರದ ಶಿಲ್ಪಾ ರಾಘವೇಂದ್ರ, ಕಿತ್ತೂರು ಕ್ಷೇತ್ರದ ಡಿ ಮಹಾಂತೇಶ್, ಶಹಾಪುರ ಕ್ಷೇತ್ರದ ಅಮೀನ್ ರೆಡ್ಡಿ ಯಳಗ, ಹನೂರು ಕ್ಷೇತ್ರದ ಪ್ರೀತಮ್, ಗುಂಡ್ಲುಪೇಟೆ ಕ್ಷೇತ್ರದ ನಿರಂಜನ್ ಕುಮಾರ್, ಕೊಳ್ಳೆಗಾಲ ಕ್ಷೇತ್ರದ ಎನ್. ಮಹೇಶ್, ಕೊಪ್ಪಳ ಕ್ಷೇತ್ರದ ಕರಡಿ ಮಂಜುಳಾ, ದೇವನಹಳ್ಳಿ ಕ್ಷೇತ್ರದ ಪಿಳ್ಳ ಮುನಿಶಾಮಪ್ಪ, ಶಿಡ್ಲಘಟ್ಟ ಕ್ಷೇತ್ರದ ಸೀಕಲ್ ರಾಮೇಗೌಡ ಸೇರಿದಂತೆ ಹಲವು ಬಿಜೆಪಿ ಅಭ್ಯರ್ಥಿಗಳು ಸೋಲನುಭವಿಸಿದ್ದಾರೆ.
ಗೆದ್ದ ಬಿಜೆಪಿಯ ಅಭ್ಯರ್ಥಿಗಳು
ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ, ಶಿಕಾರಿಪುರದಲ್ಲಿ ವಿಜಯೇಂದ್ರ, ದೊಡ್ಡಬಳ್ಳಾಪುರದಲ್ಲಿ ಧೀರಜ್, ಲಿಂಗಸಗೂರಿನಲ್ಲಿ ಮಾನಪ್ಪ ವಜ್ಜಲ್, ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ, ರಾಯಚೂರಿನಲ್ಲಿ ಶಿವರಾಜ್ ಪಾಟೀಲ್, ಕುಷ್ಟಗಿಯಲ್ಲಿ ಜಿಎಚ್ ಪಾಟೀಲ್, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ನಲ್ಲಿ ಮಹೇಶ್ ಟೆಂಗಿನಕಾಯಿ, ಜಮಖಂಡಿಯಲ್ಲಿ ಜಗದೀಶ್ ಗುಡಗಂಟಿ ಹೀಗೆ ಸುದೀಪ್ ಬೆಂಬಲಿಸಿದ್ದ 9 ಮಂದಿ ಬಿಜೆಪಿ ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸಿದ್ದಾರೆ. ಇವರುಗಳ ಪೈಕಿ ಬಹುತೇಕರು ತಮ್ಮ ವೈಯಕ್ತಿಕ ಮತ್ತು ಪಕ್ಷದ ವರ್ಚಸ್ಸಿನಿಂದ ಗೆದ್ದಿದ್ದಾರೆ, ಸುದೀಪ್ ಅವರ ಪ್ರಚಾರದಿಂದಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಸುದೀಪ್ ಬಿಜೆಪಿ ಪರ ನಡೆಸಿದ ಪ್ರಚಾರ ಯಾವುದೇ ರೀತಿಯ ಪ್ರಭಾವ ಬೀರಿಲ್ಲ ಎಂಬುದು ಸ್ಪಷ್ಟವಾಗಿದೆ.





