ಬೆಂಗಳೂರು ನಗರದ ಯಲಹಂಕ ಸಮೀಪದ ಕೋಗಿಲು ಬಡಾವಣೆಯ ಫಕೀರ್ ಕಾಲೋನಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಅಧಿಕಾರಿಗಳು ಇಂದು ಮಧ್ಯಾಹ್ನ 12:30ರ ವೇಳೆಗೆ ಬೇಲಿ ಹಾಕಲು ಹವಣಿಸಿದ್ದಾರೆ.
ಸ್ಥಳಕ್ಕೆ 3 ಜೆಸಿಬಿ ಗಳು, ಇಬ್ಬರು ಪೊಲೀಸ್ ಅಧಿಕಾರಿಗಳು, ಜಿಬಿಎ ಅಧಿಕಾರಿಗಳು ಹಾಗೂ 25-30 ಜಿಬಿಎ ಮಾರ್ಷಲ್ ಗಳು ಬಂದು ಬೇಲಿ ಹಾಕಲು ಗುಂಡಿ ತೋಡಿಸಲು ಮುಂದಾಗಿದ್ದಾರೆ. ಸ್ಥಳೀಯ ನಿವಾಸಿಗಳು ಮತ್ತು ಸಂಘಟನೆಗಳ ಮುಖಂಡರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಮಾತಿನ ಚಕಮಕಿ ನಡೆದಿದೆ. ಮಾನವ ಸರಪಳಿ ನಿರ್ಮಿಸಿ ಜಿಬಿಎ ಅಧಿಕಾರಿಗಳಿಗೆ ಮರಳಿ ಹೋಗುವಂತೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : 180 ಮನೆಗಳನ್ನು ನೆಲಸಮಗೊಳಿಸಿದ GBA : ನಿರಾಶ್ರಿತರಿಗೆ ತಕ್ಷಣದ ಪರಿಹಾರ ಸಿಗುವುದೇ?
“ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೆವೆ. ಇದಕ್ಕೆ ಕೃಷ್ಣ ಬೈರೇಗೌಡರೇ ಕಾರಣ”, “ನಮಗೆ ನ್ಯಾಯ ಬೇಕು, ಇಲ್ಲದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಇದಕ್ಕೆ ಸರ್ಕಾರವೇ ಕಾರಣ” ಇವೆಲ್ಲವೂ ಸ್ಥಳದಲ್ಲಿ ನೆರೆದಿದ್ದ ಜನರು ತಮ್ಮ ಕೈಯಲ್ಲಿ ಪ್ಲೇಕಾರ್ಡ್ ಹಿಡಿದು ಕೂಗಿದ ಘೋಷಣೆಗಳು.

ಈ ಕುರಿತು ಅಭಿಪ್ರಾಯ ಪಡೆಯಲು ಘನತ್ಯಾಜ್ಯ ನಿರ್ವಹಣೆ ನಿಯಮಿತ ಸಿಇಒ ಕರೀಗೌಡ, ಐಎಎಸ್ ಅವರನ್ನು ‘ಈದಿನ ಡಾಟ್ ಕಾಮ್’ ಸಂಪರ್ಕಿಸಲು ಪ್ರಯತ್ನಿಸಿತು. ಆದರೆ ಅವರು ಕರೆಯನ್ನು ಸ್ವೀಕರಿಸಲಿಲ್ಲ.
ಕಳೆದ ಶನಿವಾರದಂದು (20/12/2025) ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೋಗಿಲು ಗ್ರಾಮದ ಸರ್ವೆ ನಂ.99ರಲ್ಲಿ ಜಿಬಿಎ ಅಧಿಕಾರಿಗಳು ಸುಮಾರು 180 ಮನೆಗಳನ್ನು ನೆಲಸಮಗೊಳಿಸಿ, 2,500 ಕ್ಕೂ ಹೆಚ್ಚು ನಿವಾಸಿಗಳನ್ನು ಬೀದಿಪಾಲು ಮಾಡಿದ್ದಾರೆ.
ಎರಡು ದಿನ ಸಚಿವ ಮತ್ತು ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣ ಬೈರೇಗೌಡ ಅವರ ಮನೆ ಮುಂದೆ ಹಗಲು-ರಾತ್ರಿ ನಿರಂತರ ಧರಣಿಯ ನಂತರ, ಎರಡು ದಿನದ ಬಳಿಕ ಸೋಮವಾರದಂದು (ಡಿ.22) ಸ್ಥಳೀಯರು ಮತ್ತು ಕೆಲವು ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕೃಷ್ಣ ಬೈರೇಗೌಡರು, “ಕಂದಾಯ ಇಲಾಖೆಯ ಬಳಿ ಇದ್ದ ಜಾಗವನ್ನು ಜಿಬಿಎ ಅವರಿಗೆ ವರ್ಗಾಯಿಸಲಾಗಿತ್ತು. ಅದರಂತೆ ಜಿಬಿಎ ಘನತ್ಯಾಜ್ಯ ನಿರ್ವಹಣೆ ವಿಭಾಗದವರು ಆ ಜಾಗವನ್ನು ವಶಕ್ಕೆ ಪಡೆದುಕೊಳ್ಳಲು ಮುಂದಾಗಿದ್ದಾರೆ. ಅಲ್ಲಿರುವ ಜನರ ಬಗ್ಗೆ ನನಗೆ ತಿಳಿದಿರಲಿಲ್ಲ. ಆ ಜಾಗವನ್ನು ಮರಳಿ ಪಡೆದು, ಅದೇ ಜಾಗದಲ್ಲಿ ಅಲ್ಲಿದ್ದ ಜನರಿಗೆ ಮನೆಯನ್ನು ಇನ್ನು ಮೂರು ತಿಂಗಳಲ್ಲಿ ನಿರ್ಮಿಸಿ ಕೊಡುತ್ತೇವೆ” ಎಂದ ಭರವಸೆ ಕೊಟ್ಟಿದ್ದರು ಎಂದು ದುಡಿಯುವ ಜನರ ವೇದಿಕೆಯ ಸಂಘಟಕರಾದ ನಂದಿನಿ ‘ಈ ದಿನ ಡಾಟ್ ಕಾಮ್’ ಗೆ ತಿಳಿಸಿದ್ದರು.

ಎರಡು ದಿನಗಳ ಹಿಂದೆ ಜಿಬಿಎ ಅಧಿಕಾರಿಗಳು ಸ್ಥಳಕ್ಕೆ (ಫಕೀರ್ ಕಾಲೋನಿ) ಬಂದು, ‘ಇಲ್ಲಿಂದ 5 ಕಿ.ಮೀ ದೂರದಲ್ಲಿರುವ ಹೆಗ್ಗಡೆ ನಗರದಲ್ಲಿ ಗಂಜಿ ಕೇಂದ್ರ ನಿರ್ಮಿಸಿದ್ದೇವೆ, ಇಲ್ಲಿರುವ ಎಲ್ಲರೂ ಅಲ್ಲಿಗೆ ಹೋಗಿ’ ಎಂದು ಹೇಳಿದ್ದಾರೆ. ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ‘ಇಲ್ಲೇ ಹತ್ತಿರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಜಾಗ ಮಾಡಿಕೊಡಿ ಎಂದು ಕೇಳಿದ್ದಾರೆ. ಅದಕ್ಕೆ ಜಿಬಿಎ ಅಧಿಕಾರಿಗಳು ಆಗೊಲ್ಲ’ ಎಂದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೋಗಿಲು ಗ್ರಾಮದಲ್ಲಿ 14 ಎಕರೆ 36 ಗುಂಟೆ ವಿಸ್ತೀರ್ಣದ ಪಾಲಿಕೆ ಜಾಗದಲ್ಲಿ 180 ಮನೆಗಳನ್ನು ಆಕ್ರಮವಾಗಿ ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ವಿಭಾಗ ಮತ್ತು ಜಿಬಿಎ ಸೇರಿ ಶನಿವಾರದಂದು (ಡಿ.20) ಬೆಳಗ್ಗೆ 6 ಗಂಟೆಗೆ 6 ಜೆಸಿಬಿಗಳು, 300 ಕ್ಕೂ ಹೆಚ್ಚು ಪೊಲೀಸರು ಮತ್ತು ಜಿಬಿಎ ಮಾರ್ಷಲ್ ಗಳನ್ನು ಬಳಸಿಕೊಂಡು 180 ಮನೆಗಳನ್ನು ನೆಲಸಮಗೊಳಿಸಿದ್ದವು. ಮಕ್ಕಳು, ಬಾಣಂತಿಯರು, ವಯಸ್ಸಾದವರು, ಅನಾರೋಗ್ಯಕ್ಕೀಡಾದವರು, ಭಿಕ್ಷೆ ಬೇಡಿ ಬದುಕುತ್ತಿದ್ದ ಜನರೆಲ್ಲರೂ ಬೀದಿಪಾಲಾಗಿದ್ದಾರೆ. ಮಲಗಲು ಸೂರಿಲ್ಲದೆ ಸುಮಾರು 2500 ಕ್ಕೂ ಹೆಚ್ಚು ಜನರ ಬದುಕು ಅತಂತ್ರ ಸ್ಥಿತಿಗೆ ಸಿಲುಕಿದೆ.





