“ಜಾತಿ ಮತ್ತು ಧರ್ಮದ ಹೆಸರಲ್ಲಿ ಕಲಹ ಸೃಷ್ಟಿಸಿ ಬೆಂಕಿ ಹಚ್ಚುವ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ನಿಲುವು ಹೊಂದಿರುವ ಕೋಮು ಸಂಘಟನೆಯೇ ಈ ಆರೆಸ್ಸೆಸ್” ಎಂದು ಹಿರಿಯ ಪತ್ರಕರ್ತರು ಮತ್ತು ಹೋರಾಟಗಾರರಾದ ಇಂದೂಧರ ಹೊನ್ನಾಪುರ ಕಿಡಿಕಾರಿದರು.
ಬೆಂಗಳೂರು ನಗರದ ಗಾಂಧಿ ಭವನದಲ್ಲಿ ಮಂಗಳವಾರ ‘ದಲಿತ ಸಂಘರ್ಷ ಸಮಿತಿಗಳ ಒಕ್ಕೂಟʼದ ವತಿಯಿಂದ ನಡೆದ ಆರೆಸ್ಸೆಸ್ ವಿರುದ್ಧ ಡಿಎಸ್ಎಸ್ ಪ್ರತಿರೋಧ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಇದೊಂದು ಐತಿಹಾಸಿಕವಾದ ಸಮಾವೇಶ. ವೈಚಾರಿಕವಾದ ಪ್ರತಿರೋಧದ ಧ್ವನಿ ಮುಟ್ಟಿಸಲು ಸಭೆ ದೊಡ್ಡದಿರಬೇಕೆಂದಿನಿಲ್ಲ. ಸಭೆಯಲ್ಲಿ ಸೇರಿರುವ ಮನಸ್ಸಗಳು ದೊಡ್ಡದಾಗಿದ್ದರೆ ಸಾಕು. ದೇವರು ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆದು ಛಿದ್ರವನ್ನು ಮಾಡುತ್ತಿರುವ ಭಾಗವತರ ಸಂತಾನಕ್ಕೆ ನಮ್ಮ ಕೂಗು ಕೇಳಬೇಕು ಎಂದು “ಜೈ ಭೀಮ್” ಘೋಷಣೆಯನ್ನು ಕೂಗಿದರು.
ಮುಂದುವರೆದು ಮಾತನಾಡಿದ ಅವರು, “ದೊಣ್ಣೆ ಹಿಡಿದುಕೊಂಡು, ಕಾಕಿ ಚಡ್ಡಿ, ಕರಿ ಟೋಪಿ ಹಾಕಿಕೊಂಡು ದೇಶದ ತುಂಬಾ ಬೆಂಕಿ ಹಚ್ಚಿಕೊಂಡು ತಿರುಗಾಡುತ್ತಿರುವ ಆರೆಸ್ಸೆಸ್ ನವರಿಗೆ ಈ ಸಭೆಯ ಮೂಲಕ ದೊಡ್ಡ ಸಂದೇಶವನ್ನು ಕೊಡುತ್ತಿದ್ದೇವೆ ಎಂದು ಹೇಳಿದ ಅವರು ”ಭಾರತ ನಿರ್ಣಾಯಕ ಘಟ್ಟದಲ್ಲಿ ಬಂದು ನಿಂತಿದೆ. ಈ ದೇಶವನ್ನು ಉಳಿಸಬೇಕಿರುವವರು, ಕೋಮುವಾದಿಗಳಾ? ಅಥವಾ ಬುದ್ಧ, ಬಸವ, ಅಂಬೇಡ್ಕರ್ ತತ್ವ ಆಧಾರಿಸಿ ನಡೆಯುತ್ತಿರುವಂತಹ ಬಹುಜನರಾ? ಎಂಬ ಪ್ರಶ್ನೆಯನ್ನು ಮುಂದಿಟ್ಟರು.
“ಅಂಬೇಡ್ಕರ್ ಕೊಟ್ಟಂತಹ ಸಂವಿಧಾನವನ್ನು ಆರೆಸ್ಸೆಸ್ ನವರು ತಿರಸ್ಕರಿಸಿ, ‘ಭಾರತೀಯವಾದ ಯಾವ ಅಂಶವು ಸಂವಿಧಾನದಲ್ಲಿಲ್ಲ. ಪಾಶ್ಚಾತ್ಯ ಅಂಶಗಳಿಗೆ. ಆದ್ದರಿಂದ ನಾವು ಸಂವಿಧಾನವನ್ನು ಒಪ್ಪುವುದಿಲ್ಲ ಎಂದು ಅವರ ಮುಖವಾಣಿ ಪತ್ರಿಕೆಯಲ್ಲಿ ಬರೆದುಕೊಂಡಿದ್ದರು’. ಕೇಂದ್ರ ಸರ್ಕಾರದ ಹಿಂದೆ ಛಾಯಾ ಸರ್ಕಾರದ ರೀತಿಯಲ್ಲಿದ್ದು ಇಡೀ ಭಾರತದ ಬಹುತ್ವವನ್ನು ನಾಶಮಾಡುವ ಕೆಲಸ ಮಾಡ್ತಿದ್ದಾರೆ” ಎಂದು ಕಿಡಿಕಾರಿದರು.

“ಈ ದೇಶದ ಕಾನೂನಿನಡಿ ಯಾವುದೇ ಸಂಘಸಂಸ್ಥೆಗಳು ನೋಂದಣಿ ಮಾಡಿಕೊಂಡು ಕೆಲಸ ಮಾಡಬೇಕು. ತನಗೆ ಬಂದ ಆದಾಯದಲ್ಲಿ ಸರ್ಕಾರಕ್ಕೆ ತೆರಿಗೆ ಪಾವತಿಸಬೇಕು. ತನಗೆ ಎಷ್ಟು ಸಂಪತ್ತಿದೆ. ಹಣಕಾಸಿನ ಮೂಲದ ಬಗ್ಗೆ ಸರ್ಕಾರಕ್ಕೆ ದಾಖಲೆಗಳನ್ನು ಸಲ್ಲಿಸಬೇಕು. ಆದರೆ ಆರೆಸ್ಸೆಸ್ನವರು ಯಾವುದನ್ನು ಕೊಡುವುದಿಲ್ಲವಂತೆ. ಈ ದೇಶವನ್ನು ಹಿಂದೂ ರಾಷ್ಟ್ರ ಮಾಡುತ್ತೀವಿ ಎಂದು ಹೇಳಿಕೆ ಕೊಟ್ಟಿದ್ದ ಮೋಹನ್ ಭಾಗವತರೆ ಹೊಟ್ಟೆ ಅನ್ನ ತಿನ್ನುತ್ತೀರಾ? ಅಥವಾ ಬೇರೇನಾದರೂ ತಿನ್ನುತ್ತೀರಾ?” ಎಂದು ಕಟುವಾಗಿ ಪ್ರಶ್ನಿಸಿದರು.
“ಆರೆಸ್ಸೆಸ್ ಎಂದರೆ, ರಾಷ್ಟ್ರೀಯ ಸುಳ್ಳುಗಾರರ ಸಂಘ. ಸುಳ್ಳನ್ನೆ ತಮ್ಮ ಬಂಡವಾಳ ಮಾಡಿಕೊಂಡಿದ್ದಾರೆ. ಹಿಂದೂ ಧರ್ಮದ ಬಗ್ಗೆ ಸುಳ್ಳುಗಳನ್ನು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ದೇಶದಲ್ಲಿ ಜನರು ಅನ್ನವಿಲ್ಲದೆ, ಕುಡಿಯಲು ನೀರಿಲ್ಲದೆ, ಸರಿಯಾದ ರಸ್ತೆಯಿಲ್ಲದೆ, ಬಡತನದಿಂದ ಬಳಲುತ್ತಿದ್ದಾರೆ. ಎಂದಾದರೂ ಜನರ ಸಮಸ್ಯೆಯ ಬಗ್ಗೆ ಮಾತನಾಡಿದ್ದೀರಾ?” ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿದ್ದ ಹಿರಿಯ ದಲಿತ ಹೋರಾಟಗಾರರಾದ ಮಾವಳ್ಳಿ ಶಂಕರ್ ಅವರು ಮಾತನಾಡಿ, “ಇಟಲಿಯ ಪ್ಯಾಸಿಸ್ಟ್ ನಾಯಕ ಮುಸಲೋನಿ ಕೊಟ್ಟ ಕರಿ ಟೋಪಿ, ಖಾಕಿ ಚಡ್ಡಿಯನ್ನು ಹಾಕಿಕೊಂಡು ಇಲ್ಲಿ ಸವಾರಿ ಮಾಡ್ತಿದ್ದಾರೆ. ಇವರು ರಕ್ತದ ಶ್ರೇಷ್ಠತೆಯ ಪಾಠ ಕಲಿತಿದ್ದು ಹಿಟ್ಲರ್ ನಿಂದ. ಇವರ(ಆರೆಸ್ಸೆಸ್) ಡಿಎನ್ಎನಲ್ಲಿರೋದು ಮುಸಲೋನಿ ಮತ್ತು ಹಿಟ್ಲರ್ ರಕ್ತ. ಭಾರತೀಯ ರಕ್ತವಿಲ್ಲ” ಎಂದು ಕಿಡಿಕಾರಿದರು.

“ಭಾರತೀಯ ರಕ್ತ ಇರುವುದು ಅಂಬೇಡ್ಕರ್ ವಾದಿಗಳಲ್ಲಿ ಮತ್ತು ಸಮಾನತೆಯನ್ನು ಬಯಸುವ ನಮ್ಮಲ್ಲಿದೆ. ದೆಹಲಿಯ ಇಂಡಿಯಾ ಗೇಟ್ ನಲ್ಲಿರುವ ಶಿಲೆಯಲ್ಲಿ ದೇಶಕ್ಕಾಗಿ ಪ್ರಾಣಕೊಟ್ಟವರ ಹೆಸರನ್ನು ಕೆತ್ತಿದ್ದಾರೆ. ಅದರಲ್ಲಿ ಶೇ 80ರಷ್ಟು ಮುಸ್ಲಿಂ ಸಮುದಾಯದವರೂ ಇದ್ದಾರೆ. ಆರೆಸ್ಸೆಸ್ ನ ಒಬ್ಬನ ಹೆಸರು ಸ್ವಾತಂತ್ರ್ಯ ಹೋರಾಟದಲ್ಲಿ ಸಿಗುವುದಿಲ್ಲ” ಎಂದು ಹೇಳಿದರು.





