“ಜನಚಳವಳಿಗಳು, ಹೋರಾಟಗಳ ಮೂಲಕ 2023ರಲ್ಲಿ ಬಿಜೆಪಿ ಸರ್ಕಾರವನ್ನು ಉರುಳಿಸಿ, ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದೆವು. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೂ ಸಹ ಬಿಜೆಪಿ ರೀತಿಯಲ್ಲಿಯೇ ವರ್ತಿಸುತ್ತಿದೆ” ಎಂದು ಸಾಮಾಜಿಕ ಹೋರಾಟಗಾರರಾದ ನೂರ್ ಶ್ರೀಧರ್ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ನಗರದ ಪ್ರೆಸ್ ಕ್ಲಬ್ನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ, ಸಂಯುಕ್ತ ಹೋರಾಟ ಕರ್ನಾಟಕ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದ ಜನಸಾಮಾನ್ಯರು ಎದುರಿಸುತ್ತಿರುವ, ಜನಚಳವಳಿಗಳು ನಿರಂತರವಾಗಿ ಒತ್ತಾಯಿಸುತ್ತಾ ಬರುತ್ತಿರುವ, ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಮಾತುಕೊಟ್ಟಿದ್ದ, ಹದಿನೈದು ಪ್ರಮುಖ ಹಕ್ಕೊತ್ತಾಯಗಳ ಪರಿಹಾರಕ್ಕಾಗಿ ಆಗ್ರಹಿಸಿ ಮತ್ತು ಕೇಂದ್ರ ಸರ್ಕಾರದ ನೀತಿಗಳನ್ನು ಧಿಕ್ಕರಿಸಿ, ಸಂಯುಕ್ತ ಕಿಸಾನ್ ಮೋರ್ಚಾ, ಜೆಸಿಟಿಯು ಹಾಗೂ ರಾಜ್ಯದ ವಿವಿಧ ಪ್ರಗತಿಪರ ಸಂಘಟನೆಗಳು ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ಇದೇ ತಿಂಗಳ ನವೆಂಬರ್ 26 ರಂದು “ಬೃಹತ್ ಬೆಂಗಳೂರು ಚಲೋ” ನಡೆಸಲು ತೀರ್ಮಾನಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ “ರಾಜಕಾರಣಿಗಳು ಕಾರ್ಪೋರೆಟ್ ಲಾಭಿಗಳಿಗೆ ಶರಣಾಗಿದ್ದಾರೆ. ಜನರ ಸಮಸ್ಯೆಗಳನ್ನು ಗಾಳಿಗೆ ತೂರಿ ತಮಗೆ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ” ಎಂದು ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ರಾಜಕಾರಣಿಗಳಿಗೆ ಕುರ್ಚಿಯ ಚಿಂತೆ, ಹಣವಂತರಿಗೆ ಆಸ್ತಿಯ ಚಿಂತೆ, ದುಡಿಯುವವರಿಗೆ ಅನ್ನ ಮತ್ತು ಸೂರಿನ ಚಿಂತೆ. ಜಗತ್ತಿಗೆ ಅನ್ನ, ಸೂರು, ಸಕಲ ಸೌಲಭ್ಯವನ್ನೂ ಕೊಟ್ಟು ನಿತ್ಯದ ಅನ್ನಕ್ಕೆ ನೆಮ್ಮದಿಯ ಸೂರಿಗೆ ಪರದಾಡುತ್ತಿರುವ ಕಷ್ಟಜೀವಿಗಳ ಬದುಕನ್ನು ಕಾಡುತ್ತಿರುವ 15 ಅತಿಮುಖ್ಯ ಸಮಸ್ಯೆಗಳ ಕುರಿತು ಸಮಾಜದ, ಸರ್ಕಾರದ ಹಾಗೂ ಮಾಧ್ಯಮಗಳ ಗಮನ ಸೆಳೆಯಲು ಸಂವಿಧಾನದ ದಿನವಾದ ನವೆಂಬರ್ 26 ರಂದು ಫ್ರೀಡಂ ಪಾರ್ಕಿನಲ್ಲಿ ಸಕಲ ಶೋಷಿತ ಜನರ ಬೃಹತ್ ಪ್ರತಿಭಟನೆಯನ್ನು ನಡೆಸಲು ಸಂಯುಕ್ತ ಹೋರಾಟ ಕರ್ನಾಟಕ ತೀರ್ಮಾನಿಸಿದೆ ಎಂದು ಹೇಳಿದರು.
ನವೆಂಬರ್ 26ರ ಬೃಹತ್ ಬೆಂಗಳೂರು ಚಲೋದ ಕುರಿತು, ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ ಇವರು, ಕೇಂದ್ರ ಸರ್ಕಾರದ ಮೇಲೆ ನಮಗೆ ಯಾವ ವಿಶ್ವಾಸವೂ ಉಳಿದಿಲ್ಲ. ಅದು ಸಂಪೂರ್ಣವಾಗಿ ಜನದ್ರೋಹಿಯಾಗಿ ಪರಿವರ್ತನೆಯಾಗಿದೆ. ಐತಿಹಾಸಿಕ ದೆಹಲಿ ರೈತಾಂದೋಲನ ನಡೆದು ಐದು ವರ್ಷಗಳಾದವು ಆ ಹೋರಾಟದ ಅಂತಿಮ ಲಿಖಿತ ಒಪ್ಪಂದದ ಒಂದೇ ಒಂದು ಅಂಶವನ್ನೂ ಅದು ಪಾಲಿಸಿಲ್ಲ. ಮಾತ್ರವಲ್ಲ ಕಾರ್ಪೊರೇಟ್ಗಳಿಗೆ ನಮ್ಮ ಭೂಮಿ ಮತ್ತು ಬೆಳೆಯನ್ನು ಬಸಿದುಕೊಡುವ ಕೆಲಸ ಮಾಡುತ್ತಲೇ ಇದೆ. ನಾಲ್ಕು ಕಾರ್ಮಿಕ ಕೋಡ್ಗಳ ಹೆಸರಿನಲ್ಲಿ ಕಾರ್ಮಿಕರ ಶ್ರಮವನ್ನು ಅಗ್ಗಗೊಳಿಸಿ, ಅವರ ಹಕ್ಕುಗಳ ಹರಣ ಮಾಡಿ ದಯನೀಯ ಪರಿಸ್ಥಿತಿಯಲ್ಲಿ ಅವರನ್ನು ದಾಸ್ಯಕ್ಕೆ ಹಚ್ಚಲು ಹೊರಟಿದೆ. ವಿದ್ಯುತ್ ಕ್ಷೇತ್ರವನ್ನು ಖಾಸಗೀಯವರಿಗೆ ಪರಭಾರೆ ಮಾಡು ಜಿಎಸ್ಟಿ ಹೆಸರಿನಲ್ಲಿ ಜನಸಾಮಾನ್ಯರ ಸುಲಿಗೆ ನಡೆಸಿದೆ. ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚುವುದು ಮಾತ್ರ ಅದಕ್ಕೆ ಗೊತ್ತು. ಜನಹಿತ ಅದಕ್ಕೆ ಬೇಕೇ ಆಗಿಲ್ಲ. ಅದರ ಪ್ರತಿನಿಧಿಯಾಗಿರುವ ರಾಜ್ಯದ ವಿರೋಧ ಪಕ್ಷವಾದ ಬಿಜೆಪಿ ಸಹ ಮಾಡುತ್ತಿರುವುದು ಅದೇ ಕೆಲಸವನ್ನೇ. ಜನರ ಒಂದೇ ಒಂದು ಸಮಸ್ಯೆ ತೆಗೆದುಕೊಂಡು ಅವರು ವಿಧಾನ ಸಭೆಯಲ್ಲಿ ದನಿ ಎತ್ತಲು ರೆಡಿ ಇಲ್ಲ, ಬೀದಿಗೆ ಇಳಿಯಲು ಸಿದ್ಧರಿಲ್ಲ. ಕೇಂದ್ರಕ್ಕೆ ಹೋಗಿ ಜನಪರ ಕೆಲಸ ಮಾಡಿಸಿಕೊಂಡು ಬರುವ ತಾಕತ್ತಂತೂ ಅವರಿಗೆ ಇಲ್ಲವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾವು ಅಧಿಕಾರಕ್ಕೆ ತಂದರೆ ಅವರು ತಂದ ನೀತಿಗಳನ್ನೆಲ್ಲಾ ರದ್ದುಗೊಳಿಸುತ್ತೇವೆ, ಎಲ್ಲಾ ಜನ ವರ್ಗದ ಬದುಕನ್ನು ಉನ್ನತೀಕರಿಸಲು ಇಂತಿಂತಹ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಮಾತುಕೊಟ್ಟ ಗ್ಯಾರಂಟಿ ಸರ್ಕಾರ ಏನು ಮಾಡುತ್ತಿದೆ? ಸಾಮಾಜಿಕ ನ್ಯಾಯದ ಮಾತನಾಡುವ ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ? ಅನೇಕ ಜನಪರ ನಿಲುವುಗಳ ಜೊತೆ ಮಾತನಾಡುವ ವಿವಿಧ ಇಲಾಖೆಗಳ ಸಚಿವರುಗಳು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.





