ಪರಿಸರಕ್ಕೆ ಎಲ್ಲವನ್ನು ಪೊರೆಯುವ ಶಕ್ತಿ ಇದೆ. ಆದರೆ ಅತಿ ಆಸೆಯನ್ನು ಪೊರೆಯುವ ಶಕ್ತಿ ಇಲ್ಲ. ಪಶ್ಚಿಮ ಘಟ್ಟಗಳ ಉಳಿವಿಗಾಗಿ ನಾಲ್ಕು ದಶಕಗಳಿಂದ ಹೋರಾಟಗಳು ನಡೆಯುತ್ತಲೆ ಇದೆ. ಅಭಿವೃದ್ಧಿಯ ಹೆಸರಿನಲ್ಲಿ ಪಶ್ಚಿಮ ಘಟ್ಟಗಳ ಮೇಲೆ ನಡೆಯುತ್ತಿರುವ ದಾಳಿ ಇಂದಿಗೂ ನಿಲ್ಲುತ್ತಿಲ್ಲ. ನಮ್ಮ ಅಭಿವೃದ್ಧಿ ಮಾನದಂಡಗಳಲ್ಲಿ ಬದಲಾವಣೆ ಆಗಬೇಕಿದೆ ಎಂದು ಚಿತ್ರ ನಿರ್ದೇಶ ಗಿರೀಶ್ ಕಾಸರವಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರು ನಗರದ ಚಿತ್ರಕಲಾ ಪರಿಷತ್ತಿನಲ್ಲಿ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಕುರಿತು ಚಿತ್ರಕಲೆ ಪ್ರದರ್ಶನ ಹಾಗೂ ಪರಿಸರ ತಜ್ಞರ ರಾಷ್ಟ್ರ ಮಟ್ಟದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಇದನ್ನು ಓದಿದ್ದೀರಾ? ಬಿಂಬ-ಬಿಂಬನ: ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳ ಆತ್ಮಕತೆ
‘ಸುಮಾರು 25-30 ವರ್ಷಗಳ ಹಿಂದೆ ಭಾರತದಲ್ಲಿ ಎರಡನೆ ಅತಿ ಹೆಚ್ಚು ಮಳೆಬಿಳುವ ಜಾಗ ಕಮ್ಮರಡಿ. ಇಂದು ಆ ಊರಿನಲ್ಲಿ ನೀರಿಗೆ ಕ್ಷಾಮ ಇದೆ ಎಂಬುದು ನಂಬಲಾಗುವುದಿಲ್ಲ. ಪಶ್ಚಿಮ ಘಟ್ಟ ಉಳಿಸಿ ಎಂದರೆ ಕೇವಲ ಮರ ಉಳಿಸಿ ಎಂದಲ್ಲ. ಅಲ್ಲಿನ ಜನ, ಮಾನವೀಯ ಇತಿಹಾಸ, ಅಲ್ಲಿನ ಸಂಸ್ಕೃತಿಯನ್ನು ಉಳಿಸಬೇಕು’ ಎಂದರು.
‘ನಾನು ಪಶ್ಚಿಮ ಘಟ್ಟದ ಚಿಕ್ಕ ಹಳ್ಳಿಯಲ್ಲಿ ಹುಟ್ಟಿದ್ದು. ನನ್ನ ಸಂಪೂರ್ಣ ಒಡನಾಟ ಇದ್ದದ್ದಹ ಇಂಬಳ, ಹಾವುಗಳು, ಅನೇಕ ಜೀವಜಂತುಗಳು, ಕೆಲವೊಮ್ಮೆ ಹುಲಿಗಳ ಜೊತೆಗೂ ಬದುಕಿದ್ದೆವೆ’ ಎಂದು ಬಾಲ್ಯವನ್ನು ನೆನೆಪಿಸಿಕೊಂಡರು.

ಕಾರ್ಯಕ್ರಮವನ್ನು ಆಯೋಜಿಸಿದ ಚಿತ್ರಕಲಾವಿದ ಹಾಗೂ ಪರಿಸರವಾದಿ ಸುರೇಶ್ ಹೆಬ್ಳೀಕರ್ ಅವರು ಮಾತನಾಡಿ, ನೂರಕ್ಕೆ ತೊಂಬತ್ತರಷ್ಟು ರೈತರು ಮಳೆಯ ಮೇಲೆ ಅವಲಂಬಿಸಿದ್ದಾರೆ. 65 ಮುಖ್ಯವಾದ ನದಿಗಳು ಪಶ್ಚಿಮ ಘಟ್ಟದಲ್ಲಿ ಹುಟ್ಟುತ್ತವೆ. ಇಂದು ನಾವೆಲ್ಲರು ಪಶ್ಚಿಮ ಘಟ್ಟಗಳನ್ನು ಉಳಿಸಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಭಾಗ್ಯ ಅಜಯ್ ಕುಮಾರ್, ಅಗ್ನಿ ಹೋತ್ರಿ, ಪ್ರದೀಪ್ ಕುಮಾರ್ ಸೇರಿ 50 ರಿಂದ 60 ಕಲಾವಿದರೆಲ್ಲ ಸೇರಿ ಪಶ್ಚಿಮ ಘಟ್ಟ ಉಳಿಸುವ ಬಗ್ಗೆ ಕಲಾಕೃತಿಗಳನ್ನು ತಯಾರು ಮಾಡಿದ್ದಾರೆ.

ವೇದಿಕೆಯ ಮೇಲೆ ಹಿರಿಯ ಕಲಾವಿದರಾದ ಎಸ್ ಜಿ ವಾಸುದೇವ್, ಲಿಲಿತ ಕಲಾ ಅಕಾಡೆಮಿಯ ಅಧ್ಯಕ್ಷರಾದ ಪಸ ಕುಮಾರ್, ಆರ್ಟ್ ಫೌಂಡೇಶನ್ ನ ಭಾಗ್ಯ ಅಜಯ್ ಕುಮಾರ್, ಗೀತಾ ಪ್ರಿಯ (ಕೃಪಾ ನಿಧಿ), ಕಲಾವಿದರಾದ ಚಂದ್ರನಾಥ ಆಚಾರ್ಯ ಹಾಗೂ ನಿರೂಪಣೆಯಲ್ಲಿ ಪತ್ರಕರ್ತರಾದ ಅಚ್ಯುತ್ತ ಸಂಕೇತಿ ಉಪಸ್ಥಿತರಿದ್ದರು.





