“ಯಾವ ದೇಶದಲ್ಲಿ ಅಧಿಕಾರದಲ್ಲಿರುವವರಿಗೆ ವಿಶ್ವವಿದ್ಯಾನಿಲಯಗಳು ಕಂಡಾಗ, ಬೀದಿಯಲ್ಲಿ ನಡೆಯುವ ಪ್ರತಿಭಟನೆಗಳನ್ನು ಕಂಡಾಗ ಭಯವಾಗುತ್ತದೆಯೋ, ಅದು ದೇಶದ್ರೋಹ ಎಂದೆನಿಸುತ್ತದೆಯೋ ಅಂತಹ ದೇಶದಲ್ಲಿ ಪ್ರಜಾತಂತ್ರ ಬಿಕ್ಕಟ್ಟಿನಲ್ಲಿ ಇಲ್ಲದೆ ಹೋದರೂ ಬಿಕ್ಕಟ್ಟನ್ನು ಪ್ರವೇಶಿಸುವ ಹಾದಿಯಲ್ಲಿದೆ ಎಂಬುದು ನನ್ನ ಭಾವನೆ. ನಿಮ್ಮ ನಿರ್ಧಾರ ನಿಮಗೆ ಬಿಡುತ್ತೇನೆ” ಎಂದು ರಾಜಕೀಯ ಚಿಂತಕರಾದ ಎ ನಾರಾಯಣ ಹೇಳಿದರು.
ಭಾನುವಾರ ಬೆಂಗಳೂರು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ನಡೆದ ಸಮಾಜಮುಖಿ ಸಾಹಿತ್ಯ ಸಮ್ಮೇಳನದಲ್ಲಿ “ಬಿಕ್ಕಟ್ಟಿನಲ್ಲಿ ಗಣತಂತ್ರ ಮತ್ತು ಪ್ರಜಾಪ್ರಭುತ್ವ..?” ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು “ಯಾವ ದೇಶದಲ್ಲಿ ಲೆಕ್ಕವಿಲ್ಲದಷ್ಟು ಹಣವನ್ನು, ಲೆಕ್ಕ ನೀಡಲಾಗದಷ್ಟು ಹಣವನ್ನು ನೀವು ಖರ್ಚು ಮಾಡಿದರಷ್ಟೇ ಚುನಾವಣೆ ಗೆಲ್ಲಬಹುದು ಅಥವಾ ನೀವು ಜಾತಿಯ, ಮತದ್ವೇಷದ ವಿಷಯವನ್ನು ಜನರ ಮನಸ್ಸಿನಲ್ಲಿ ತುಂಬಿದರೆ ಮಾತ್ರ ಚುನಾವಣೆ ಗೆಲ್ಲಬಹುದು ಎಂಬ ಪರಿಸ್ಥಿತಿ ಇದೆಯೋ ಆ ದೇಶದಲ್ಲಿ ಪ್ರಜಾತಂತ್ರ ಬಿಕ್ಕಟ್ಟಿನಲ್ಲಿ ಇಲ್ಲದೆ ಹೋದರೂ ಬಿಕ್ಕಟ್ಟನ್ನು ಪ್ರವೇಶಿಸುವ ದಾರಿಯಲ್ಲಿದೆ ಎಂಬುದು ನನ್ನ ಅಭಿಪ್ರಾಯ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಸಾಹಿತ್ಯ-ಸಿನಿಮಾ ಎರಡಕ್ಕೂ ಅನುಭವ ಲೋಕ ಬಹಳ ಮುಖ್ಯ : ಗಿರೀಶ್ ಕಾಸರವಳ್ಳಿ
“ಯಾವ ದೇಶದಲ್ಲಿ ಪೊಲೀಸರನ್ನು ನೋಡುವಾಗ ಜನಸಾಮಾನ್ಯರಿಗೆ ಬೀದಿ ರೌಡಿಗಳನ್ನು ನೋಡಿದಾಗ ಆಗುವ ಭಯದಷ್ಟೇ ಭಯವಾಗುವುದಾದರೆ ಆ ದೇಶದಲ್ಲಿ ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿ ಇಲ್ಲದೆ ಹೋದರೂ ಬಿಕ್ಕಟ್ಟಿನ ಹಾದಿಯಲ್ಲಿದೆ. ಯಾವುದೇ ಒಂದು ದೇಶದಲ್ಲಿ ಜನವರ್ಗಕ್ಕೆ ತಮ್ಮದೇ ಆದ ಆಕ್ರೋಶಗಳಿರುತ್ತದೆ. ಆ ಆಕ್ರೋಶ ತಪ್ಪು ಎನ್ನಲಾಗದು. ಯುವಜನರಿಗೆ ಆಕ್ರೋಶ ಹೆಚ್ಚು. ಅಂತಹ ಗುಂಪು ಸಂಸತ್ತಿ ಕಾನೂನುಬದ್ಧವಾಗಿಯೇ ಹೋಗುತ್ತಾರೆ. ಅಲ್ಲಿ ಬಣ್ಣದ ಹೊಗೆ ಬಿಡುತ್ತಾರೆ. ಅದು ಅವರ ಪ್ರತಿಭಟನೆಯ ಅಸ್ತ್ರ. ಅವರನ್ನು ದೇಶದ್ರೋಹಿಗಳು ಎಂದು ಬಂಧಿಸಲಾಗುತ್ತದೆ. ಅದೇ ದೇಶದಲ್ಲಿ ಸಂಸತ್ತಿನಷ್ಟೇ ಮುಖ್ಯವಾದ ಇನ್ನೊಂದು ಅಂಗವಾದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶರಿಗೆ ಶೂ ಎಸೆಯಲಾಗುತ್ತದೆ. ಅವರು ಗೌರವದಿಂದ ಸ್ವೀಕರಿಸುತ್ತಾರೆ. ಈ ಬಗ್ಗೆ ಸರ್ಕಾರದ ಕಡೆಯಿಂದ ಯಾವ ಆಕ್ಷೇಪವೂ ವ್ಯಕ್ತವಾಗುವುದಿಲ್ಲ. ಇಲ್ಲಿ ಯಾರು ಮಾಡಿದ್ದು ತಪ್ಪು, ಯಾರು ಮಾಡಿದ್ದು ಸರಿ ಎಂದು ಹೇಳುವುದಿಲ್ಲ. ಆದರೆ ಇಲ್ಲಿ ಸಮಾನತೆಯ ಪ್ರಶ್ನೆಯಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರಾಗಿರುವಾಗ ಇಂತಹ ಘಟನೆಗಳು ಯಾವುದೇ ದೇಶದಲ್ಲಿ ನಡೆದರೆ ಅಲ್ಲಿ ಪ್ರಜಾತಂತ್ರ ಬಿಕ್ಕಟ್ಟಿನಲ್ಲಿ ಇಲ್ಲದೆ ಹೋದರೂ ಬಿಕ್ಕಟ್ಟಿನ ಹಾದಿಯಲ್ಲಿದೆ ಎಂಬುದು ನನ್ನ ಭಾವನೆ” ಎಂದರು.

ಈ ಗೋಷ್ಠಿಯಲ್ಲೇ ಮಾತನಾಡಿದ ಹಿರಿಯ ಚಿಂತಕ ಪ್ರೊ.ರಾಜಾರಾಮ್ ತೋಳ್ಪಾಡಿ, “ನಾವಿಲ್ಲಿ ಸಂವಾದ ಮಾಡುತ್ತಿರುವುದೇ ಪ್ರಜಾತಂತ್ರದ ಲಕ್ಷಣ. ಎಲ್ಲೋ ಒಂದೆಡೆ ಸತ್ಯ ಎಂಬುದಿಲ್ಲ. ಸತ್ಯ ಎಂಬುದನ್ನು ನಾವು ಒಟ್ಟಿಗೆ ಸೇರಿ ಸಮಾಲೋಚನೆ ನಡೆಸಿ ಸದ್ಯದ ಮಟ್ಟಿಗೆ ಸತ್ಯ ಎಂದು ತೀರ್ಮಾನಿಸುವ ಪ್ರಕ್ರಿಯೆಯನ್ನು ನಾವು ಪ್ರಜಾತಂತ್ರ ಎಂದು ಕರೆಯಬಹುದು” ಎಂದು ಅಭಿಪ್ರಾಯಪಟ್ಟರು.
“ಭಾರತದ ಪ್ರಜಾತಂತ್ರವೆಂದರೆ ಅದು ಪಾಶ್ಚಿಮಾತ್ಯದಿಂದ, ವಿಶೇಷವಾಗಿ ಬ್ರಿಟನ್ನ ಪ್ರಜಾತಂತದ ಅನುಕರಣೆ ಎಂಬ ವಾದವಿದೆ. ಪ್ರಸ್ತುತ ನಮ್ಮಲ್ಲಿರುವ ಪ್ರಜಾತಂತ್ರ ನಮ್ಮ ಅನುಭವದ ವಸ್ತುವಲ್ಲ ಎಂಬ ವಾದವೂ ಇದೆ. ಆದರೆ ಇದು ಬಹಳ ಅಪಾಯಕಾರಿ ತಿಳುವಳಿಕೆ. ಯಾಕೆಂದರೆ ಭಾರತದ ಪ್ರಜಾತಂತ್ರಕ್ಕೆ ಒಂದು ಸುದೀರ್ಘ ಇತಿಹಾಸವಿದೆ. ಸ್ವಾತಂತ್ರ್ಯ ಹೋರಾಟದ ಇತಿಹಾಸ ಮಾತ್ರವಲ್ಲ. ಸಮಾಜ ಸುಧಾರಣೆಯ 19ನೇ ಶತಮಾನದ ಇತಿಹಾಸವಿದೆ. ಈ ಸುದೀರ್ಘ ಇತಿಹಾಸವನ್ನು ಬಿಟ್ಟು ನಾವು ಪಾಶ್ಚಿಮಾತ್ಯ ಪ್ರಜಾತಂತ್ರ ಅನುಸರಿಸುತ್ತಿದ್ದೇವೆ ಎಂದು ಹೇಳುವುದು ಸರಿಯಲ್ಲ” ಎಂದು ಹೇಳಿದರು.
“ಯಾವುದೇ ಪ್ರಜಾತಂತ್ರವಾದರೂ ಅದು ನಿಜವಾದ ಪ್ರಜಾತಂತ್ರವೇ ಎಂದು ಖಾತರಿಪಡಿಸಿಕೊಳ್ಳಲು ಆ ಪ್ರಜಾತಂತ್ರದಲ್ಲಿ ಭಿನ್ನಮತಕ್ಕೆ ಯಾವ ಸ್ಥಾನಮಾನವಿದೆ ಎಂದು ನೋಡಬೇಕಾಗುತ್ತದೆ. ಪ್ರಜಾತಂತ್ರ ಪ್ರತಿರೋಧಕ್ಕೆ ಹೇಗೆ ಸ್ಪಂಧಿಸುತ್ತದೆ ಎಂಬುದು ಮುಖ್ಯವಾಗುತ್ತದೆ. ಯಾವ ಪ್ರಜಾತಂತ್ರದಲ್ಲಿ ಭಿನ್ನಮತ, ಪ್ರತಿರೋಧಕ್ಕೆ ಸ್ಥಾನ, ಗೌರವವಿಲ್ಲವೋ, ಸ್ಪಂದನೆ ಇಲ್ಲವೋ ಅದು ಪ್ರಜಾತಂತ್ರವಲ್ಲ” ಎಂದು ಅಭಿಪ್ರಾಯಿಸಿದರು.
ಈ ಗೋಷ್ಠಿಯಲ್ಲಿ ಹಿರಿಯ ರಾಜಕಾರಣಿಯಾದ ಬಿ ಎಲ್ ಶಂಕರ್ ಅವರು ಮಾತನಾಡಿ “ಶಾಸನ ಸಭೆಗಳಿಗೆ, ಸಂಸತ್ತುಗಳಿಗೆ ಅವಧಿ ಕಾಲಕಾಲಕ್ಕೆ ಚುನಾವಣೆಗಳು ನಡೆಯುತ್ತವೆ. ಆದರೆ ನಮ್ಮ ಸ್ಥಳೀಯ ಸಂಸ್ಥೆಗಳಾದ, ನಗರ ಸಭೆಗಳಿಗೆ, ಪಂಚಾಯಿತಿಗಳಿಗೆ ಚುನಾವಣೆ ನಡೆಯದಿರುವುದು ಪ್ರಜಾತಂತ್ರದ ಬಿಕ್ಕಟ್ಟನ್ನು ಪ್ರತಿಬಿಂಬಿಸುತ್ತವೆ” ಎಂದು ಅಭಿಪ್ರಾಯಪಟ್ಟರು.

ಮುಂದುವರೆದು ಮಾತನಾಡಿ “ಈ ದೇಶಕ್ಕೆ ಪ್ರಧಾನ ಮಂತ್ರಿಗಳ ಸ್ಥಾನ ಎಷ್ಟು ಮುಖ್ಯವೋ, ಅದೇ ರೀತಿ ಗ್ರಾಮ ಪಂಚಾಯಿತಿ ಸದಸ್ಯರುಗಳ ಸ್ಥಾನ ಅಷ್ಟೇ ಮುಖ್ಯ. ಸ್ಥಳೀಯ ಸಂಸ್ಥೆಗಳಿಗೂ ಕಾಲಕಾಲಕ್ಕೆ ಚುನಾವಣೆಗಳು ನಡೆಯಬೇಕು. ಇಲ್ಲವಾದರೆ ಪ್ರಶ್ನೆ ಮಾಡುವ ಗುಣವೆ ನಮ್ಮಲ್ಲಿ ಸತ್ತು ಹೋಗುತ್ತದೆ” ಎಂದರು.
“ಕುಟುಂಬ ರಾಜಕಾರಣ, ಜಾತಿ ಮತ್ತು ಮತ ಆಧಾರಿತ ರಾಜಕರಾಣ, ಬದುಕು ಮತ್ತು ಭಾವನೆ ನಡುವೆ ನಡೆಯುವ ರಾಜಕಾರಣ, ಜೊತೆಗೆ ರಾಜಕಾರಣದ ವ್ಯಾಪಾರಿಕರಣದಿಂದ ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಮೂಲ ಆಧಾರವೇ ಕುಸಿಯುತ್ತಿದೆ. ಜೈಲಿನಲ್ಲಿರಬೇಕಾದ ಶೇ35 ರಷ್ಟು ಜನರು ಶಾಸನಸಭೆಯಲ್ಲಿದ್ದಾರೆ. ಇದಕ್ಕೆ ಎಲ್ಲ ಪಕ್ಷಗಳು ಸಹಭಾಗಿತ್ವವು ಇದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಚುನಾಯಿತ ಸರ್ವಾಧಿಕಾರ ಎನ್ನುವುದು ಎಲ್ಲ ಪಕ್ಷಗಳಲ್ಲೂ ಇದೆ. ಸಾಂವಿಧಾನಿಕ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳು ಸಹ ಪ್ರಜಾತಂತ್ರದ ಬಿಕ್ಕಟ್ಟಿಗೆ ಕಾರಣ” ಎಂದರು.
ಬಿಜೆಪಿ ವಕ್ತಾರರಾದ ಪ್ರಕಾಶ್ ಶೇಷರಾಘವಚಾರ್ ಅವರು ಮಾತನಾಡಿ “ವಿಧಾನ ಸಭೆಗಳು, ಸಂಸತ್ತುಗಳು ಇದರುವುದು ಚರ್ಚೆ ಮಾಡಲು. ಆದರೆ ಅಲ್ಲಿ ಗದ್ದಲಗಳು ಹೆಚ್ಚಾಗಿರುವುದರಿಂದ ಯಾವ ಬಿಲ್ ಪಾಸ್ ಆಗುತ್ತದೆ ಎಂಬುದು ಸರಿಯಾಗಿ ಚರ್ಚೆಗೆ ಬರುವುದಿಲ್ಲ” ಎಂದರು.
“ಸದನದಲ್ಲಿ ಒಳ್ಳೆಯ ಚರ್ಚೆ ನಡೆಯದೆ ಇದ್ದರೆ ನಷ್ಟವಾಗುವುದು ವಿರೋಧ ಪಕ್ಷಗಳಿಗೆ. ಗುಣ ಮಟ್ಟದ ಚರ್ಚೆಯೆ ಬದಲು ಗದ್ದಲಗಳೆ ಹೆಚ್ಚಾಗಿವೆ.” ಎಂದರು. 2023 ರಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ 146 ಸಂಸದರನ್ನು ಅಮಾನತುಗೊಳಿಸಿದ್ದನ್ನು ಸಮರ್ಥಿಸಿಕೊಂಡು, “ಕರ್ನಾಟಕದಲ್ಲಿ 6 ತಿಂಗಳವರೆಗೆ ನಮ್ಮ ಶಾಸಕರನ್ನು ಸ್ಪಿಕರ್ ಯು ಟಿ ಖಾದರ್ ಹೊರಹಾಕಿದರಲ್ಲವೆ” ಎಂದು ಮರುಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ವಕ್ತಾರೆಯಾದ ಯು ಟಿ ಫಾರ್ಝಾನ ಅವರು ಮಾತನಾಡಿ, “ಸಂಸತ್ತಿನಲ್ಲಿ ಯಾರು ಒಬ್ಬರು ಅಲ್ಪಸಂಖ್ಯಾತ ಸಮುದಾಯವರು ಇರದೆ ಇರುವುದು ಬೇಸರದ ಸಂಗತಿ. ಇದನ್ನು ನೊಡಿದಾಗ ಪ್ರಜಾತಂತ್ರ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದೆ ಅನಿಸುತ್ತದೆ” ಎಂದರು.
ಗುಜಾರತ್ ನಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯವರಿಗೆ ಚುನಾವಣೆಗಳಿಗೆ ಟಿಕೆಟ್ ಕೊಡದೆ ನಿರಾಕರಿಸುವುದು ತಪ್ಪು. ಈ ದೇಶ ಕೇವಲ ಬಹುಸಂಖ್ಯಾತರಿಂದ ಇಲ್ಲ. ಅಲ್ಪಸಂಖ್ಯಾಂತರು, ಮಹಿಳೆಯರು, ಬುಡಕಟ್ಟುಗಳು, ಎಸ್ಸಿ ಎಸ್ಟಿ ಗಳು, ಹಿಂದುಳಿದ ವರ್ಗದವರು ಎಲ್ಲರು ಸೇರಿ ಈ ದೇಶ ನಿರ್ಮಾಣವಾಗಿರುವುದು” ಎಂದರು.
ಈ ಗೋಷ್ಠಿಯಲ್ಲಿ ಹಿರಿಯ ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿ ಇದ್ದರು. ಜೊತೆಗೆ ಈ ಗೋಷ್ಠಿಯ ಸಮನ್ವಯತೆಯನ್ನು ಎಂ.ಕೆ.ಆನಂದ ರಾಜೇ ಅರಸ್ ವಹಿಸಿಕೊಂಡಿದ್ದರು.





