ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಫೆ.3 ರಂದು “ಭೂಮಿ ಹಬ್ಬ – ಜಾಗೃತಿ ಸಮಾವೇಶ” ಎಂಬ ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಿದೆ.
“ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಿಂದ ಸರ್ಕಾರ ಹಿಂದೆ ಸರಿದಿದ್ದರೂ, ‘ಶಾಶ್ವತ ವಿಶೇಷ ಕೃಷಿ ವಲಯ‘ ಎಂಬ ಆದೇಶವನ್ನು ಹೊರಡಿಸಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವ ಹುನ್ನಾರ ನಡೆಸಿದಂತೆ ಕಾಣುತ್ತಿದೆ. ರೈತರ ಬದುಕಿನ ಮೇಲೆ ಪ್ರಭಾವ ಬೀರುವ ವಿದ್ಯಮಾನಗಳು ಹಾಗೂ ಸರ್ಕಾರದ ಆದೇಶದ ವಿರುದ್ದ ಜಾಗೃತಿ ಮೂಡಿಸುವ ಸಲುವಾಗಿ ಈ ಸಮಾವೇಶ ನಡೆಸಲಾಗುತ್ತಿದೆ” ಎಂದು 13 ಗ್ರಾಮಗಳ ರೈತರು ಒಕ್ಕೊರಲಿನಿಂದ ಹೇಳಿದ್ದಾರೆ.
ಸಮಾವೇಶದಲ್ಲಿ ಸರ್ಕಾರ ಹೊರಡಿಸಿರುವ “ಶಾಶ್ವತ ವಿಶೇಷ ಕೃಷಿ ವಲಯ” ಆದೇಶದ ವಿರುದ್ಧ ಮುಂದಿನ ಹೋರಾಟದ ರೂಪುರೇಷೆಯ ಬಗ್ಗೆ ಚರ್ಚಿಸಲಾಗುವುದು.
‘ದೇವನಹಳ್ಳಿ ಭೂಸ್ವಾಧೀನ ಹೋರಾಟ ಸಮಿತಿ’ 1,198 ದಿನಗಳು ನಡೆಸಿದ ಸತತ ಹೋರಾಟದ ಪರಿಣಾಮವಾಗಿ 1,777 ಎಕರೆ ಕೃಷಿ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಸರ್ಕಾರ ಹಿಂಪಡೆದಿತ್ತು. ಹೋರಾಟ ಐತಿಹಾಸಿಕ ಯಶಸ್ಸನ್ನು ಕಂಡಿದ್ದರೂ, ಅದು ತೃಪ್ತಿಕರವಾಗಿಲ್ಲ.
ಇದನ್ನು ಓದಿ : ದೇವನಹಳ್ಳಿ ರೈತರೊಂದಿಗೆ ಸಿಎಂ ಮಹತ್ವದ ಸಭೆ; ರೈತರ ಹೋರಾಟ-ಹಕ್ಕೊತ್ತಾಯ ಗೌರವಿಸುತ್ತದಾ ಸರ್ಕಾರ?
ಇದೇ ಜನವರಿ 1ರಂದು ಹೊರಡಿಸಿದ ‘ಕರ್ನಾಟಕ ರಾಜ್ಯಪತ್ರ’ದಲ್ಲಿ “ಶಾಶ್ವತ ವಿಶೇಷ ಕೃಷಿ ವಲಯ” ಎಂಬ ಆದೇಶವು ರೈತರಲ್ಲಿ ಆತಂಕ ಸೃಷ್ಟಿಸಿದೆ. ಆದೇಶದಲ್ಲಿ “ದೇವನಹಳ್ಳಿ ತಾಲ್ಲೂಕು, ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿನ 1,777 ಎಕರೆ ಕೃಷಿ ಭೂಮಿಯನ್ನು ಹಸಿರು ವಲಯವನ್ನಾಗಿ ಮುಂದುವರೆಸುವ ಸಲುವಾಗಿ ‘ಶಾಶ್ವತ ವಿಶೇಷ ಕೃಷಿ ವಲಯ” (Permanent Special Agriculture Zone)” ಎಂದು ಉಲ್ಲೇಖಿಸಲಾಗಿದೆ.
ಇದರ ಜೊತೆಗೆ ಮೂರು ಮುಖ್ಯ ಷರತ್ತುಗಳನ್ನು ವಿಧಿಸಲಾಗಿದೆ.
- ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಹಾಗೂ ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶಗಳ ಅನುಮೋದಿತ ಮಹಾಯೋಜನೆಯ ನಕ್ಷೆಗಳಲ್ಲಿ ಹಾಗೂ ವಲಯ ನಿಯಮಾವಳಿಗಳಲ್ಲಿ ಅಳವಡಿಸಿಕೊಳ್ಳತಕ್ಕದ್ದು.
- ಈ ಪ್ರದೇಶದಲ್ಲಿ ಯಾವುದೇ ಭೂ ಉಪಯೋಗ ಬದಲಾವಣೆ ಪ್ರಸ್ತಾವನೆಗಳನ್ನು ಸಲ್ಲಿಸತಕ್ಕದ್ದಲ್ಲ.
- ಸಂಬಂಧಪಟ್ಟ ಯೋಜನಾ ಪ್ರಾಧಿಕಾರಗಳು/ಸ್ಥಳೀಯ ಸಂಸ್ಥೆಗಳು ಈ ಪ್ರದೇಶದಲ್ಲಿ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹೊರತುಪಡಿಸಿ ಇತರೆ ಯಾವುದೇ ಉದ್ದೇಶಕ್ಕೆ(ಕೃಷಿಯೇತರ ಚಟುವಟಿಕೆ) ಅನುಮತಿಸತಕ್ಕದ್ದಲ್ಲ.
ಈ ಆದೇಶಕ್ಕೆ ರೈತ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ಭೂಮಿ ಹಿಂತಿರುಗಿಸಿದ್ದರೂ ‘ಶಾಶ್ವತ ವಿಶೇಷ ಕೃಷಿ ವಲಯ’ ಎಂದು ಘೋಷಿಸಿ ರೈತರ ಬೆನ್ನಿನ ಮೇಲೆ ಬರೆ ಎಳೆಯುವ ಪ್ರಯತ್ನದಂತಿದೆ.

ಶಾಶ್ವತ ವಿಶೇಷ ಕೃಷಿ ವಲಯ ಘೋಷಣೆಯಿಂದ ರೈತರಿಗೆ ಅನೇಕ ತೊಡಕುಗಳು ಎದುರಾಗಬಹುದು. ರೈತರದ್ದೇ ಸ್ವಂತ ಭೂಮಿಯಲ್ಲಿ ಮನೆಯನ್ನು ಕಟ್ಟಬೇಕಾದರೂ ಅನುಮತಿ ಪಡೆಯಬೇಕಾಗಬಹುದು. ರೈತರು ಕೃಷಿಯ ಜೊತೆಗೆ ಸಣ್ಣ ಪ್ರಮಾಣದಲ್ಲಿ ಹೈನುಗಾರಿಕೆ, ಗುಡಿ ಕೈಗಾರಿಕೆಗಳನ್ನು ಮಾಡಲು ನಿರ್ಧರಿಸಿದರೆ ಅನೇಕ ಸವಾಲುಗಳು ಎದುರಾಗಬಹುದು.
“ಕೃಷಿ ಕ್ಷೇತ್ರದಲ್ಲಿರುವ ಬಂಡವಾಳಶಾಹಿಗಳಿಗೆ ಈ ಭೂಮಿಯನ್ನು ವರ್ಗಾಯಿಸಿ ಕೊಡುವುದು ಸರ್ಕಾರದ ಹುನ್ನಾರದಂತಿದೆ” ಎನ್ನುವುದು ರೈತ ಮುಖಂಡರ ಒಕ್ಕೊರಲಿನ ಅಭಿಪ್ರಾಯವಾಗಿದೆ.
“ಶಾಶ್ವತ ವಿಶೇಷ ಕೃಷಿ ವಲಯ ಎಂದು ಘೋಷಿಸಿಕೊಂಡಿರುವ ಬೇರೆ ರಾಜ್ಯಗಳಲ್ಲಿ ಕೃಷಿ ಭೂಮಿಯನ್ನು ಬಂಡವಾಳ ಶಾಹಿಗಳಿಗೆ ನೀಡಿ ‘ಕೈಗಾರಿಕಾ ಕೃಷಿ’ ನಡೆಸಲಾಗುತ್ತಿದೆ. ಇವೆಲ್ಲವನ್ನೂ ಕಂಪನಿಗಳು ನಿಯಂತ್ರಿಸುವ ಸಾಧ್ಯತೆಯಿದೆ. ಬೇರೆಲ್ಲ ರಾಜ್ಯಗಳಲ್ಲಿ ಆಗಿರುವುದು ‘ಕೈಗಾರಿಕ ಕೃಷಿ’ ಬೆಳವಣಿಗೆ. ಇದರಿಂದ ನಮ್ಮ ರೈತರ ಬೆಳೆಗಳಿಗೆ ಮಾನ್ಯತೆಯೇ ಇಲ್ಲದಂತಾಗುತ್ತದೆ” ಎಂದು ಭೂಸ್ವಾಧೀನ ಹೋರಾಟ ಸಮಿತಿಯ ರಮೇಶ್ ಚಿ.ಮಾಚನಹಳ್ಳಿ ‘ಈದಿನ ಡಾಟ್ ಕಾಮ್’ ಜೊತೆ ಅಳಲನ್ನು ತೋಡಿಕೊಂಡರು.
ಶಾಶ್ವತ ಕೃಷಿ ವಲಯ ಘೋಷಣೆ
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಭೂಮಿಯನ್ನು ಕೆಐಎಡಿಬಿ ಭೂ ಸ್ವಾಧೀನದಿಂದ ಕೈಬಿಡುವಂತೆ ರೈತರು ನಡೆಸಿದ್ದ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಅಸ್ತು ಎಂದಿದ್ದರೂ, ಕಳೆದ ವರ್ಷ ಡಿಸೆಂಬರ್ 4 ರಂದು ನಡೆದ ಸಚಿವ ಸಂಪುಟ ಸಭೆ ಅಡ್ಡಗಾಲು ಹಾಕಿತು. ಈ ಭೂಮಿಯನ್ನು ಹಸಿರು ವಲಯವನ್ನಾಗಿ ಮುಂದುವರೆಸುವ ಸಲುವಾಗಿ “ಶಾಶ್ವತ ವಿಶೇಷ ಕೃಷಿ ವಲಯ” (Permanent Special Agriculture Zone) ಎಂದು ಘೋಷಿಸಿತು. ಇದೇ ಜನವರಿ 1 ರಂದು ಸರ್ಕಾರ ‘ಕರ್ನಾಟಕ ರಾಜ್ಯಪತ್ರ’ವನ್ನು ಸಹ ಬಿಡುಗಡೆ ಮಾಡಿದೆ.
“ಇಂತಹ ಶಿಫಾರಸು ರೈತ ವಿರೋಧಿಯಾಗಿದೆ. ರೈತರ ವಿರುದ್ಧ ಸರ್ಕಾರ ಸೇಡು ತೀರಿಸಿಕೊಳ್ಳುವ ಹುನ್ನಾರ ನಡೆಸುತ್ತಿದೆ. ನಮ್ಮ ಭೂಮಿ ಮೌಲ್ಯ ಕುಗ್ಗಿಸಲು ಮಾಡಿರುವ ಷಡ್ಯಂತ್ರ. ಇಂತಹ ಯಾವುದೇ ಷರತ್ತುಗಳನ್ನು ವಿಧಿಸದೆ ಭೂಸ್ವಾಧೀನ ಕೈ ಬಿಡಬೇಕು” ಎಂದು ರೈತರು ಒಮ್ಮತದಿಂದ ಆಗ್ರಹಿಸಿದ್ದಾರೆ.
“ಶಾಶ್ವತ ವಿಶೇಷ ಕೃಷಿ ವಲಯದ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದು ಅನಗತ್ಯವಾಗಿ ರೈತರಿಗೆ ಹಿಂಸೆ ಮತ್ತು ಕಿರುಕುಳ ನೀಡುವುದನ್ನು ಬಿಡಬೇಕು. ಕಳೆದ ಮೂರುವರೆ ವರ್ಷಗಳಿಂದ ಅತಂತ್ರವಾಗಿ ಬದುಕುತ್ತಿರುವ ರೈತರಿಗೆ ನೆಮ್ಮದಿಯಿಂದ ಕೃಷಿ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು” ಎಂದು ನಲ್ಲಪ್ಪನಹಳ್ಳಿ ನಂಜಪ್ಪ ಹೇಳಿದರು.
ದೇವನಹಳ್ಳಿ ರೈತ ಹೋರಾಟದ ಹಿನ್ನೆಲೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು, ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ 1,777 ಎಕರೆ ಕೃಷಿ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನಪಡಿಸಿಕೊಳ್ಳಲು ಆದೇಶ ಹೊರಡಿಸಿತ್ತು.
ಅತ್ಯಾಧುನಿಕ ಕೈಗಾರಿಕಾ ಟೌನ್ ಶಿಪ್ ಸ್ಥಾಪನೆಗಾಗಿ 2021ರಲ್ಲಿ ಪ್ರಾಥಮಿಕ ಅಧಿಸೂಚನೆ, 2022ರಲ್ಲಿ ಅಂತಿಮ ಆದೇಶ ಹೊರಡಿಸಲಾಗಿತ್ತು. ಇದರ ವಿರುದ್ಧ 13 ಗ್ರಾಮಗಳ ರೈತರು ‘ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ’ಯಡಿ ಚನ್ನರಾಯಪಟ್ಟಣ ಹೋಬಳಿ ಕಚೇರಿಯ ಬಳಿ ಧರಣಿ ಆರಂಭಿಸಿದ್ದರು. ತಮ್ಮ ಬದುಕು, ಭೂಮಿ ಕಳೆದುಕೊಳ್ಳುವ ಭೀತಿಯ ಜೊತೆಗೆ, ನೀಡುವ ಪರಿಹಾರ ಮೊತ್ತ ಕಡಿಮೆ ಇರುತ್ತದೆ ಮತ್ತು ಕೈಗಾರಿಕೆಗಳಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬುದು ಅವರ ಪ್ರಮುಖ ಕಳವಳವಾಗಿತ್ತು.

ಗ್ರಾಮಸ್ಥರು, ವಿವಿಧ ಸಂಘಟನೆಗಳು ಮತ್ತು ರಾಜಕೀಯ ನಾಯಕರು ಹೋರಾಟಕ್ಕೆ ಬೆಂಬಲ ನೀಡಿದರು. ರೈತರ ನಿರಂತರ ಪ್ರತಿಭಟನೆಗಳು, ಜಾಥಾ ಮತ್ತು ಮನವಿಗಳಿಗೆ ಮಣಿದ ಸರ್ಕಾರ, ಅಂತಿಮವಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಪಡಿಸುವುದಾಗಿ ಸಾರ್ವಜನಿಕವಾಗಿ ಘೋಷಿಸಿತು.
ಸತತ 1,198 ದಿನಗಳ ಹೋರಾಟ ಇಡೀ ದೇಶದ ಗಮನ ಸೆಳೆದಿತ್ತು. ಸಂಯುಕ್ತ ಹೋರಾಟ ಕರ್ನಾಟಕ ಇದರ ಭಾಗವಾಯಿತು. ಕೊನೆಗೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜುಲೈ 15ರಂದು ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲು ನಿರ್ಧರಿಸಿತು.
ಇಡೀ ರೈತ ಕುಲಕ್ಕೆ ಈ ನಿರ್ಧಾರ ಮಹತ್ವದ್ದಾಗಿತ್ತು. ರೈತರ ಸತತ ಹೋರಾಟದಿಂದ ಸರ್ಕಾರ ಮಂಡಿಯೂರಬೇಕಾಯಿತು.

ಹೋರಾಟ ತೀವ್ರಗೊಳ್ಳುವ ಸಾಧ್ಯತೆ
ಸಾವಿರಕ್ಕೂ ಹೆಚ್ಚು ದಿನಗಳ ಹೋರಾಟವನ್ನು ಮಾಡಿ ತಮ್ಮ ಭೂಮಿಯನ್ನು ಮರಳಿ ಪಡೆದ ದೇವನಹಳ್ಳಿಯ ರೈತರು, ಫೆ.3 ರ ಸಮಾವೇಶದ ನಂತರ ಯಾವ ರೀತಿಯ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ ಎಂಬುದು ಸದ್ಯ ಕುತೂಹಲ ಹೆಚ್ಚಿಸಿದೆ. ದೇವನಹಳ್ಳಿಯ ‘ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ’ ಮತ್ತೆ ಹೋರಾಟಕ್ಕೆ ಸಜ್ಜುಗೊಳ್ಳುತ್ತಿದೆ. ‘ಶಾಶ್ವತ ವಿಶೇಷ ಕೃಷಿ ವಲಯ’ ಘೋಷಣೆಯಿಂದ ಸರ್ಕಾರ ಹಿಂದೆ ಸರಿಯಬಹುದಾ ಎಂಬ ಪ್ರಶ್ನೆ ಮೂಡಿದೆ.





