ಸಾಹಿತಿಗಳ ಬದುಕು ಶರಣ ಸಂತರಂತೆ ಇರುತ್ತದೆ. ಸಾಹಿತಿಗಳು ಸಾಹಿತ್ಯ ಬರವಣಿಗೆಯ ಮೂಲಕ ಸಮಾಜದ ಸುಧಾರಣಾ ಕಾರ್ಯಗಳನ್ನು ಮಾಡುತ್ತಾರೆ. ಸಾಹಿತಿಗಳ ಬದುಕು ತಪಸ್ಸಿಗೆ ಸಮಾನವಾದದ್ದು. ಇವರು ಸಮಾಜದಲ್ಲಿ ಭಾವೈಕ್ಯತೆ ಹಾಗೂ ಸಾಮರಸ್ಯದ ರಾಯಭಾರಿಗಳಾಗಿರುತ್ತಾರೆ ಎಂದು ಹಭಪ ಶ್ರೀ ಸುಭಾಷ್ ಶೇವಾಳೆ ಗುರೂಜಿ ಅಭಿಪ್ರಾಯಪಟ್ಟರು.
ಕುಡಚಿಯ ಜುನ್ನೇದಿಯಾ ಪ್ರೌಢ ಶಾಲೆಯ ಸಭಾಂಗಣದಲ್ಲಿ ನಡೆದ ಎಂ.ಕೆ.ಶೇಖ್ ರವರ ಕಥಾ ಸಂಕಲನ “ಕೊಳೆ ತೊಳೆದ ಮಳೆ” ಹಾಗೂ ಅಸ್ಲಂ ಮುಲ್ಲಾ ರವರ “ಅಕಾಯ ಭಕ್ತಿಯ ಮೊಹರಂ ಪದಗಳು” ಕೃತಿಗಳನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉದ್ಘಾಟಕರಾಗಿ ಆಗಮಿಸಿದ ಡಾ. ವಿ ಎಸ್ ಮಾಳಿ ಮಾತನಾಡಿ, “ಸಾಹಿತಿಗಳು ನಿರಂತರ ಅಧ್ಯಯನಶೀಲರಾಗಿರಬೇಕು. ಸದಾ ಅಧ್ಯಯನದೊಂದಿಗೆ ಸಾಹಿತ್ಯ ಕೃಷಿ ಮಾಡುತ್ತಿರಬೇಕು” ಎಂದು ಹೇಳಿದರು.
ಇದನ್ನೂ ಓದಿ: ಬೆಳಗಾವಿ | ನಾವು ಅಧಿಕಾರಕ್ಕೆ ಬಂದ ನಂತರ 520 ಕೋಟಿ ಠೇವಣಿ ಹೆಚ್ಚಳ: ಅಣ್ಣಾಸಾಹೇಬ ಜೊಲ್ಲೆ
ಕಾರ್ಯಕ್ರಮದಲ್ಲಿ ಡಾ. ಜೆ ಪಿ ದೊಡಮನಿಯವರು ಸರ್ವಾಧ್ಯಕ್ಷರಾಗಿದ್ದು, ಎಂ ಕೆ ಶೇಖ್ ರವರ ಕಥಾ ಸಂಕಲನ ಹಿಂದಿ, ಆಂಗ್ಲ ಭಾಷೆಗೆ ಅನುವಾದಗೊಂಡು ಅನ್ಯ ಭಾಷೆಯ ಓದುಗರಿಗೂ ತಲುಪುವಂತಾಗಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಜುನ್ನೇದಿಯಾ ಎಜುಕೇಷನ್ ಸೊಸೈಟಿ ಅಧ್ಯಕ್ಷರು ಅಲಹಜ್ ಇಕ್ಬಾಲ್ ಅಹ್ಮದ್ ಸತ್ತಾರರವರು, ಶಂಕರ ಕ್ಯಾಸ್ತಿ, ಶಿವಾನಂದ ಬೆಳಕೂಡ, ಶ್ರೀಶೈಲ ದರೂರೆ, ಹಾಗೂ ಅಬೂಲ್ ಮಾರುಫ, ರೇಖಾ ಗುಪ್ತೆ, ಯಾಸ್ಮಿನ್ ಅರ್ಕಾಟೆ ರವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕವಿಗೋಷ್ಠಿ ನಡೆಯಿತು.





