- ಸಿ.ವಿ ರಾಮನ್ ನಗರದ ಹಾಲಿ ಶಾಸಕರಿಂದ ಅವಮಾನ
- ಶಾಸಕರ ನಡೆಗೆ ಸಾಮಾಜಿಕ ಜಾಲಾತಾಣದಲ್ಲಿ ಆಕ್ರೋಶ
ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸಿದ್ದೇವೆಂದು ಚುನಾವಣಾ ಅಖಾಡಕ್ಕೆ ಇಳಿದು ದಲಿತರ ಮತ ಬೇಟೆಗೆ ಬಿಜೆಪಿ ಸಿದ್ದತೆ ನಡೆಸುತ್ತಿದೆ. ಇದೇ ಸಂದರ್ಭದಲ್ಲಿ, ಬೆಂಗಳೂರಿನ ಸಿ ವಿ ರಾಮನ್ ನಗರದ ಬಿಜೆಪಿ ಹಾಲಿ ಶಾಸಕ ಎಸ್ ರಘು ಅವರು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿರುವ ಘಟನೆ ನಡೆದಿದೆ.
ಸಿ.ವಿ ರಾಮನ್ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಶಾಸಕ ಎಸ್ ರಘು ಅವರು ಅಂಬೇಡ್ಕರ್ ಪ್ರತಿಮೆ ಬಳಿ ನಿಂತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಹಲವು ಅಭಿಮಾನಿಗಳು ಎಸ್ ರಘು ಅವರಿಗೆ ಜೈಕಾರ ಹಾಕುತ್ತಾ ಹೂವಿನ ಹಾರ ಹಾಕಿ ಶಾಲು ಹೊದಿಸಿ ಸನ್ಮಾನ ಮಾಡಿದರು.
ಈ ಸುದ್ದಿ ಓದಿದ್ದೀರಾ? : ಕಡೇ ಕ್ಷಣದ ಹೈಡ್ರಾಮ: ಕೊತ್ತೂರು ಮಂಜು ಒತ್ತಡಕ್ಕೆ ಮುಳುಬಾಗಿಲು ಅಭ್ಯರ್ಥಿಯನ್ನೇ ಬದಲಿಸಿದ ಕಾಂಗ್ರೆಸ್
ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿದ ಶಾಸಕ ಎಸ್ ರಘು, ತಮ್ಮ ಕೊರಳಿನಲ್ಲಿದ್ದ ಹಾರವನ್ನು ತೆಗೆದು ಅಂಬೇಡ್ಕರ್ ಪ್ರತಿಮೆಗೆ ಹಾಕಿ ಅವಮಾನ ಮಾಡಿ, ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಶಾಸಕ ಎಸ್ ರಘು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕರ್ನಾಟಕ ಯೂತ್ ಕಾಂಗ್ರೆಸ್ ಕೂಡ ಟ್ವಿಟ್ ಮಾಡಿ ಕಿಡಿ ಕಾರಿದೆ.




