- ಬಿಜೆಪಿ ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಶನಿವಾರ ಬೆಳಗ್ಗೆ ಪ್ರತಿಭಟನೆ
- ಸಮುದಾಯಗಳ ನಡುವೆ ಪರಸ್ಪರ ಕಿಚ್ಚು ಹಚ್ಚುವುದು ಮನುವಾದಿಗಳಿಗೆ ರಕ್ತಗತ : ಬಿಎಸ್ಪಿ
ಬಿಜೆಪಿ ಸರ್ಕಾರವು, ಮುಸಿಂ ಸಮುದಾಯಕ್ಕೆ ಪ್ರವರ್ಗ ‘ಬಿ’ನಲ್ಲಿ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿ ರದ್ದುಪಡಿಸಿದ್ದನ್ನು ವಿರೋಧಿಸಿ ಬಹುಜನ ಸಮಾಜ ಪಾರ್ಟಿ ರಾಜ್ಯ ಘಟಕ (ಬಿಎಸ್ಪಿ) ಶನಿವಾರ (ಏ.1) ಪ್ರತಿಭಟನೆಗೆ ಕರೆ ನೀಡಿದೆ.
ಬಿಜೆಪಿ ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ ಬಿಎಸ್ಪಿಯಿಂದ ಪ್ರತಿಭಟನೆ ನಡೆಯಲಿದೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಎಸ್ಪಿ, “ಮುಸಿಂ ಸಮುದಾಯಕ್ಕೆ ಪ್ರವರ್ಗ ‘ಬಿ’ನಲ್ಲಿ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿ ರದ್ದುಪಡಿಸಿರುವುದು ಅತ್ಯಂತ ಘೋರವಾದ ಹೃದಯಹೀನ ಜನವಿರೋಧಿ ಕ್ರಮವಾಗಿದೆ ಎಂದು ಬಿಎಸ್ಪಿ ಖಂಡಿಸಿದೆ.
ಸಂವಿಧಾನ ವಿರೋಧಿ ನಿರ್ಣಯವನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮುಸ್ಲಿಮರಿಗೆ ನೀಡಲಾಗಿದ್ದ ಶೇ. 4 ಮೀಸಲಾತಿಯನ್ನು ಕಸಿದುಕೊಂಡು ಒಕ್ಕಲಿರಿಗೆ ಮತ್ತು ಲಿಂಗಾಯತರಿಗೆ ತಲಾ 2 ನೀಡಿದ್ದಾರೆ. ಬೊಮ್ಮಾಯಿ ಅವರ ಈ ನಿರ್ಧಾರ ಸಂವಿಧಾನದ ಬಗ್ಗೆ ಅವರಿಗಿರುವ ಅಜ್ಞಾನವನ್ನು ಎತ್ತಿ ತೋರಿಸುತ್ತದೆ” ಎಂದು ಬಿಎಸ್ಪಿ ಕಿಡಿಕಾರಿದೆ.
“ಮೇಲ್ವಾತಿ ಬಡವರಿಗೆ ಮೀಸಲಾತಿ ನೀಡಿರುವುದರಿಂದ ಹಾಗೂ ಎಸ್.ಸಿ./ಎಸ್.ಟಿ. ಗಳ ಮೀಸಲಾತಿ ಪ್ರಮಾಣ ಹೆಚ್ಚಿಸಿರುವುದರಿಂದ ಈಗಾಗಲೇ ಮೀಸಲಾತಿ ಪ್ರಮಾಣ ಶೇ.50ರ ಮಿತಿ ಮೀರಿದೆ. ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಲು ಮುಸ್ಲಿಂ ಮೀಸಲಾತಿ ಕಸಿದುಕೊಳ್ಳುವ ಮೂಲಕ ಒಂದು ವಂಚಿತ ಸಮುದಾಯದ ವಿರುದ್ಧ ಎರಡು ಬಲಿಷ್ಠ ಸಮುದಾಯಗಳನ್ನು ಎತ್ತಿಕಟ್ಟುವಂತಹ ಪರಮ ನೀಚತನದ ಕೆಲಸವನ್ನು ಬೊಮ್ಮಾಯಿ ಮಾಡಿದ್ದಾರೆ. ಇದರಿಂದ ತಿಳಿಯುತ್ತೆ ಸಮುದಾಯಗಳ ನಡುವೆ ಪರಸ್ಪರ ಕಿಚ್ಚು ಹಚ್ಚುವುದು ಮನುವಾದಿಗಳಿಗೆ ರಕ್ತಗತವಾಗಿಬಿಟ್ಟಿದೆ” ಎಂದು ಹರಿಹಾಯ್ದಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ| ಶ್ರೀರಾಮ ‘ಅಸ್ಪೃಶ್ಯ’ರ ಮೈಮೇಲೆ ಹಚ್ಚೆಯಾದ- ಸ್ಥಾವರ ಇಳಿದು ಜಂಗಮನಾದ
“ದೇಶದ ಮತ್ತು ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಮುಸ್ಲಿಮರ ಹಕ್ಕುಗಳನ್ನು ಸಂರಕ್ಷಿಸಲು ಬಹುಜನ ಸಮಾಜ ಪಾರ್ಟಿಯು ಪಣತೊಟ್ಟು ಹೋರಾಟಕ್ಕೆ ಮುಂದಾಗಿದೆ. ಏಪ್ರಿಲ್ 1, 2023 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಾಗೂ ರಾಜ್ಯದ ಎಲ್ಲ 31 ಜಿಲ್ಲಾ ಕೇಂದ್ರಗಳಲ್ಲಿ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಯಲಿದೆ” ಎಂದು ಬಿಎಸ್ಪಿ ತಿಳಿಸಿದೆ.
“ಮುಸ್ಲಿಮರ ಸಂವಿಧಾನಾತ್ಮಕ ಮೀಸಲಾತಿ ಕಸಿದುಕೊಂಡಿರುವ ಬಿಜೆಪಿ ಸರ್ಕಾರವು ನಾಳೆ ಎಲ್ಲ ದಲಿತ, ಆದಿವಾಸಿ ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳನ್ನು ಕಸಿದುಕೊಳ್ಳುವುದು ಮತ್ತು ಸಂವಿಧಾನದ ಆಶಯವನ್ನೇ ನಾಶಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಆದಕಾರಣ ಬಹುಜನ ಸಮಾಜಕ್ಕೆ ಸೇರಿದ ಎಲ್ಲ ಎಸ್. ಸಿ./ಎಸ್ ಟಿ./ಒಬಿಸಿ ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರೆಲ್ಲರೂ ಈ ಪ್ರತಿಭಟನೆಯಲ್ಲಿ ಭಾಗವಹಿಸಿ, ಸರ್ಕಾರದ ಸಂವಿಧಾನ ವಿರೋಧಿ ನಿರ್ಣಯವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಬೇಕು” ಎಂದು ಕೋರಿದೆ.





