ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಕಚೇರಿಗೆ ಬರುವ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸೌಕರ್ಯ ಒದಗಿಸದೆ ವಂಚಿಸಿದ್ದು ಅಲ್ಲದೆ, ಅಕ್ರಮವಾಗಿ ಬಿಲ್ ಪಡೆದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಆರೋಪಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದ್ದು, ಸುಮಾರು ₹7 ಲಕ್ಷ ಹಣ ಖರ್ಚು ಮಾಡಿ ಯಾವ ಪುರುಷಾರ್ಥಕ್ಕೆ ನಿರ್ಮಿಸಿದ್ದಾರೆ. ಈವರೆಗೂ ಒಂದು ಲೀಟರ್ ನೀರನ್ನೂ ಕೊಟ್ಟಿಲ್ಲ. ಆದರೆ ಇದಕ್ಕೆ ಸಂಬಂಧಪಟ್ಟ ಬಿಲ್ ಪಾವತಿಯಾಗಿದೆ ಎಂದು ಹೇಳಿದರು.
“ಚಳ್ಳಕೆರೆಯ ಕೆಆರ್ಐಡಿಎಲ್ನವರು ನಿರ್ಮಿಸಿ, ನಗರಸಭೆಗೆ ಹಸ್ತಾಂತರ ಮಾಡಿದ್ದಾರೆಂದು ತಿಳಿದುಬಂದಿದೆ. ಆದರೆ ಹನಿ ನೀರನ್ನೂ ಕೊಟ್ಟಿಲ್ಲ. ಒಬ್ಬರ ಮೇಲೊಬ್ಬರು ಸಬೂಬು ಹೇಳುತ್ತಾ ಕಾಲ ತಳ್ಳಿದ್ದಾರೆಯೇ ಹೊರತು, ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ. ಹಳ್ಳಿಗಳಿಂದ ಬರುವ ಸಾವಿರಾರು ಜನ ಪ್ರತಿದಿನ ನೀರಿಲ್ಲದೆ ಪರದಾಡುತ್ತಿದ್ದಾರೆ. ತಾಲೂಕು ಕಚೇರಿ, ಸರ್ವೇ, ಆಹಾರ ಇಲಾಖೆ, ನೋಂದಣಿ ಇಲಾಖೆ, ಜನನ ಮರಣ ಪ್ರಮಾಣ ಪತ್ರದ ಇಲಾಖೆ, ಬ್ಯಾಂಕ್ ಕೆಲಸಕ್ಕೆಂದು ಬರುವ ಬಹುತೇಕ ಮಂದಿ ಕುಡಿಯಲು ನೀರಿಲ್ಲದೆ ಒಣ ಬಾಯಿಂದ ಹೋಗುತ್ತಾರೆ. ಹೋಟೆಲ್, ಅಂಗಡಿಗಳಲ್ಲಿ ಇಪ್ಪತ್ತು ರೂಪಾಯಿಗೆ ಒಂದು ಲೀಟರ್ ನೀರು ಕೊಂಡು ಕುಡಿಯಲು ಆಗುತ್ತದೆಯೇ” ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾವೇರಿ | ಸ್ಮಶಾನವಿಲ್ಲದೆ ಅರಣ್ಯ, ಕೆರೆ ದಂಡೆ, ಕಾಡಿನ ಬದಿ, ಜಮೀನುಗಳಲ್ಲಿ ಶವ ಸಂಸ್ಕಾರ
ಸಂಬಂಧಪಟ್ಟವರು ಈಗಲಾದರು ಎಚ್ಚೆತ್ತುಕೊಂಡು ಜನರಿಗೆ ಶುದ್ದ ಕುಡಿಯುವ ನೀರು ಒದಗಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕರೊಂದಿಗೆ ಪ್ರತಿಭಟಿಸಬೇಕಾದ ಅನಿವಾರ್ಯತೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಸಾಮಾಜಿಕ ಕಾರ್ಯಕರ್ತ ಮ್ಯಾಕ್ಲೊರಹಳ್ಳಿ ಮೃತ್ಯುಂಜಯ ಇದ್ದರು.





