“ಇದು ಸರಳ ಮತಗಳ್ಳತನವಲ್ಲ, ದೇಶದ ನಾಗರೀಕರ ಪೌರತ್ವದ ಕಳ್ಳತನ. ಕೇಂದ್ರ ಚುನಾವಣಾ ಆಯೋಗ ಎಸ್ಐಆರ್- ಮತದಾರ ಪಟ್ಟಿಯ ವಿಶೇಷ ತೀವ್ರತರ ಪರಿಷ್ಕರಣೆಯ ಹೆಸರಿನಲ್ಲಿ ಈ ದೇಶದ ನಾಗರಿಕನಿಗೆ ನೀನು ಈ ದೇಶದ ಪ್ರಜೆಯಲ್ಲ ಎಂದು ಧಿಕ್ಕರಿಸುತ್ತಿದೆ ಇದು ಅತ್ಯಂತ ಅಪಾಯಕಾರಿ ಕ್ರಮವಾಗಿದೆ” ಎಂದು ದಾವಣಗೆರೆಯಲ್ಲಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿಯ ಸದಸ್ಯರಾದ ಬಿ ಆರ್ ಅಪರ್ಣ ಕಳವಳ ವ್ಯಕ್ತಪಡಿಸಿದರು.

ದಾವಣಗೆರೆ ನಗರದ ಗಾಂಧಿ ವೃತದಲ್ಲಿ ಜರುಗಿದ ಎಸ್ಐಆರ್ ವಿರೋಧಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿಯ ಸದಸ್ಯರಾದ ಬಿ ಆರ್ ಅಪರ್ಣ “ಇಂದು ಮತಪಟ್ಟಿಯಲ್ಲಿ ಹೆಸರು ಸೇರಿಸಲು ಆಧಾರ್ ಕಾರ್ಡ್ ರೇಷನ್ ಕಾರ್ಡ್, ಅಥವಾ ತಾವೇ ನೀಡಿರುವ ವೋಟರ್ ಐಡಿ ಮುಂತಾದ ದಾಖಲೆಗಳು ಊರ್ಜಿತವಲ್ಲ. ಬದಲಿಗೆ ತಮ್ಮ ಜನ್ಮ ಪ್ರಮಾಣ ಪತ್ರವಲ್ಲದೆ ತನ್ನ ಅಪ್ಪ ಮತ್ತು ಅಮ್ಮ ಇಬ್ಬರದೂ ಜನ್ಮ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಚುನಾವಣಾ ಆಯೋಗ ಕೇಳುತ್ತಿದೆ. ಒಂದು ವೇಳೆ ಜನ್ಮ ಪ್ರಮಾಣ ಪತ್ರವನ್ನು ಕೊಡಲಾಗದಿದ್ದರೆ ನಿಮ್ಮನ್ನು ಮತದಾರ ಪಟ್ಟಿಯಲ್ಲಿ ಸೇರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ. ಇದು ಅತ್ಯಂತ ಮೋಸದ ಕ್ರಮವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ದೇಶದಲ್ಲಿ ಶೇಕಡ 70ಕ್ಕೂ ಹೆಚ್ಚು ಜನ ಅನಕ್ಷರಸ್ಥರು. ಓದು, ವಿದ್ಯೆ ತಿಳಿಯುವರು ಬಡವರು, ಗ್ರಾಮೀಣ ಜನರು ಅಥವಾ ಕಾಡುಮೇಡುಗಳಲ್ಲಿ ಬದುಕುತ್ತಿರುವ ಬುಡಕಟ್ಟು ಜನಾಂಗದವರಾಗಿರುವಾಗ ಅವರು ಜನ್ಮ ಪ್ರಮಾಣ ಪತ್ರವನ್ನು ಸಲ್ಲಿಸುವುದು ಹೇಗೆ ಸಾಧ್ಯ? ಅಂತಹ ಎಲ್ಲಾ ಬಡ ಜನರು, ಅನಕ್ಷರಸ್ಥರು ಮತದಾನ ಮಾಡುವ ಹಕ್ಕಿನಿಂದ ವಂಚಿತರಾಗುತ್ತಾರೆ. ಯಾಕೆಂದರೆ ಚುನಾವಣಾ ಆಯೋಗ ಅವರು ಈ ದೇಶದ ಪ್ರಜೆಗಳೇ ಅಲ್ಲ ಎಂದು ತೀರ್ಮಾನಿಸುತ್ತಿದೆ. ಬಿಹಾರ ರಾಜ್ಯದಲ್ಲಿ ನಡೆದ ಈ ಪರಿಷ್ಕರಣೆಯಲ್ಲಿ ಸುಮಾರು 65 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಕೈ ಬಿಡಲಾಗಿದೆ. ಬಿಹಾರವನ್ನು ಹೊಕ್ಕಿರುವ ಈ ಭೂತ ನಾಳೆ ಸಂಪೂರ್ಣ ದೇಶವನ್ನು ವ್ಯಾಪಿಸುತ್ತದೆ. ಎಲ್ಲರಿಗೂ ನೀನು ಮೌನವಾಗಿದ್ದರೆ ನಿನಗೆ ಕ್ಷೇಮ, ಇಲ್ಲದೆ ಹೋದರೆ ನೀನು ಈ ದೇಶದವನೇ ಅಲ್ಲ ನಿನ್ನ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆದರಿಕೆ ಹಾಕುತ್ತಿದೆ” ಎಂದು ಹೇಳಿದರು.
“ಬೆಲೆ ಏರಿಕೆ, ನಿರುದ್ಯೋಗ ಜನರನ್ನು ಕಾಡುತ್ತಿದೆ. ಊಟ, ವಸತಿ, ಆರೋಗ್ಯ, ಶಿಕ್ಷಣದಂತಹ ಮೂಲಭೂತ ಅಗತ್ಯಗಳಿಂದಲೂ ಜನ ವಂಚಿತರಾಗಿದ್ದಾರೆ. ರೈತರು, ಕಾರ್ಮಿಕರು, ಕುಶಲಕರ್ಮಿಗಳು, ಕೆಳಮಧ್ಯಮ ವರ್ಗದವರು ತೀವ್ರವಾಗಿ ಬಳಲುತ್ತಿದ್ದಾರೆ. ಆಡಳಿತ ಸರ್ಕಾರಗಳ ಬಗ್ಗೆ ಭರವಸೆ ಕಳೆದುಕೊಂಡಿದ್ದಾರೆ. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಆಡಳಿತ ಪಕ್ಷವನ್ನು ಧಿಕ್ಕರಿಸಿ ಪರ್ಯಾಯ ಪಕ್ಷಗಳನ್ನು ಆಯ್ಕೆ ಮಾಡಿಕೊಳ್ಳಲು ಸಜ್ಜಾಗುತ್ತಿದ್ದಾರೆ ಎಂಬ ಭಯ ಆಡಳಿತಾರೂಢ ಪಕ್ಷ, ಸರ್ಕಾರಕ್ಕೆ ಕಾಡುತ್ತಿದೆ. ಆದ್ದರಿಂದ ಜನರ ಪೌರತ್ವವನ್ನೇ ನಿರಾಕರಿಸಿ ಮತಪಟ್ಟಿಯಲ್ಲಿ ತಮ್ಮವರ ಮೋಸದ ಹೆಸರುಗಳನ್ನು ಸೇರಿಸಿ ಚುನಾವಣೆ ಗೆಲ್ಲುವ ಹೀನ ಹುನ್ನಾರ ನಡೆದಿದೆ ಇದನ್ನು ಸೋಲಿಸಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.

ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿಯ ಸದಸ್ಯರಾದ ಡಾ. ಸುನೀತ್ ಕುಮಾರ್ ಟಿ ಎಸ್ ಮಾತನಾಡಿ “ಚುನಾವಣಾ ಆಯೋಗವು ಸಂವಿಧಾನಕ್ಕೆ ಬದ್ಧವಾಗಿರಬೇಕೇ ಹೊರತು, ಯಾವುದೇ ಪಕ್ಷಕ್ಕಾಗಲಿ ಅಥವಾ ವ್ಯಕ್ತಿಗಾಗಲಿ ಬದ್ಧವಾಗಿರಬಾರದು. ಆದರೆ ದುರಂತವೆಂದರೆ ಇಂದಿನ ಚುನಾವಣಾ ಆಯೋಗ ಆಡಳಿತರೂಢ ಪಕ್ಷಕ್ಕೆ ಬದ್ಧವಾಗಿರುವಂತೆ ಗೋಚರವಾಗುತ್ತಿದೆ. ಚುನಾವಣಾ ಆಯೋಗವನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ ಮತ್ತು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರು ಉಳ್ಳ ಸಮಿತಿಯಿಂದ ಆಯ್ಕೆ ಮಾಡಲಾಗುತ್ತಿತ್ತು. ಆದರೆ ಇತ್ತೀಚಿಗೆ ಸರ್ಕಾರವು ತಿದ್ದುಪಡಿ ತಂದು ಪ್ರಧಾನಮಂತ್ರಿ, ಮತ್ತು ಅವರ ಸಂಪುಟದ ಓರ್ವ ಸಚಿವರು ಮತ್ತು ವಿರೋಧ ಪಕ್ಷದ ಓರ್ವ ನಾಯಕರನ್ನುಳ್ಳ ಸಮಿತಿಯನ್ನು ಮಾಡಿದ ಆಯೋಗ ರಚಿಸಲಾಯಿತು. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನು ಆಯ್ಕೆ ಸಮಿತಿಯಲ್ಲಿ ಕೈ ಬಿಡಲಾಗಿದೆ. ಅಂದರೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಶಾಮೀಲಾಗಿ ಆಯೋಗವನ್ನು ಆಯ್ಕೆ ಮಾಡುತ್ತಾರೆ. ಪಕ್ಷಕ್ಕೆ ಬದ್ಧರಾಗಿರುವವರನ್ನು ಆಯೋಗದ ಸದಸ್ಯರನ್ನಾಗಿ ಮಾಡಿಕೊಳ್ಳುತ್ತವೆ. ಆದ್ದರಿಂದ ಈ ಆಯೋಗ ಜನತೆಗೆ ಬದ್ಧವಾಗಿರದೆ, ಸಂವಿಧಾನಕ್ಕೆ ಬದ್ಧವಾಗಿರದೆ, ಜನರನ್ನು ಮತದಾನದ ಹಕ್ಕಿನಿಂದ ವಂಚಿಸುವ ಪೌರತ್ವ ನಿರಾಕರಣೆಯ ಹುನ್ನಾರವನ್ನು ನಡೆಸಿದೆ. ಇದು ಅತ್ಯಂತ ಅಪಾಯಕಾರಿ ಮತ್ತು ಫ್ಯಾಸಿಸ್ಟ್ ಕ್ರಮವಾಗಿದೆ ಆದ್ದರಿಂದ ಕ್ರಮವನ್ನು ಸೋಲಿಸಲು ಸಮಸ್ತ ಜನತೆ ಮುಂದೆ ಬರಬೇಕು” ಎಂದು ಕರೆ ನೀಡಿದರು.
ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಮಂಜುನಾಥ ಕುಕ್ಕವಾಡ ಮಾತನಾಡಿ “ಜನತೆ ಜಾಗೃತರಾಗಿ ಪ್ರಬಲ ಹೋರಾಟದ ಮೂಲಕ ಈ ಜನರನ್ನು ವಂಚಿಸಲು ಮಾಡಿರುವ ಈ ವಿಶೇಷ ಮತಪಟ್ಟಿಯ ತೀವ್ರತರ ಪರಿಷ್ಕರಣೆಯನ್ನು ಸೋಲಿಸಬೇಕು. ಇದಕ್ಕೆ ಬೇರೆ ಪರ್ಯಾಯಗಳಿಲ್ಲ ಚಳುವಳಿ ಒಂದೇ ಮಾರ್ಗ, ಸಮಸ್ತ ಜನತೆಗೆ ಹೋರಾಟಕ್ಕಿಳಿಯಬೇಕಿದೆ” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಿದ್ಯಾರ್ಥಿಗಳ ಅನುಕೂಲಕ್ಕೆ ಮಾದಿಹಳ್ಳಿಗೆ ಬಸ್ ಸೇವೆಗೆ ಆಗ್ರಹಿಸಿ ಕೆ ಎಸ್ ಆರ್ ಟಿ ಸಿ ಗೆ ಎಐಡಿಎಸ್ಓ ಮನವಿ
ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಕೆನರಾ ಬ್ಯಾಂಕ್ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ನ ಮಾಜಿ ನಾಯಕರಾದ ನಿವೃತ್ತ ಬ್ಯಾಂಕ್ ನೌಕರರಾದ ಶ್ರೀ ಹಿರೇಮಠ, ಜಿಲ್ಲಾ ಸಮಿತಿ ಸದಸ್ಯರಾದ ಟಿವಿಎಸ್ ರಾಜು, ಮಧು ತೊಗಲೇರಿ , ತಿಪ್ಪೇಸ್ವಾಮಿ ಅಣಬೇರು ಹಾಗೂ ಪರಶುರಾಮ್ , ರಾಜು, ಅನಿಲ್, ಕೆನರಾ ಬ್ಯಾಂಕ್ ಯೂನಿಯನ್ ನ ಮುಖಂಡರಾದ ಹಿರೇಮಠ್, ಮಂಜುಳಾ ಹರಿಹರ, ಶಿವಾಜಿ ರಾವ್, ಬೀರಲಿಂಗಪ್ಪ , ಕುಬೇರಪ್ಪ ದ್ಯಾಮನಳ್ಳಿ ಭಾಗವಹಿಸಿದ್ದರು.





