ಬಿಜೆಪಿ ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡುತ್ತಿದ್ದರೆ, ರಾಜ್ಯದಲ್ಲಿರುವ ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಕಾಂಗ್ರೆಸ್ ಉದ್ದೇಶಿಸಿದೆ. ಭ್ರಷ್ಟಾಚಾರ, ಬೆಲೆ ಏರಿಕೆಯಂತಹ ವಿಷಯಗಳ ಮೇಲೆ ಚುನಾವಣೆಗೆ ಹೋಗಲು ಜೆಡಿಎಸ್ ಮುಂದಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನದ ದಿನ ಹತ್ತಿರವಾಗುತ್ತಿದ್ದು, ಪ್ರಚಾರ ವೇಗ ಪಡೆದುಕೊಳ್ಳುತ್ತಿದೆ. ಎಲ್ಲ ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳು ಅಬ್ಬರದ ಚುನಾವಣಾ ಪ್ರಚಾರ ಮಾಡುತ್ತಿವೆ. ಎಲ್ಲ ಚುನಾವಣೆಗಳಲ್ಲಿಯೂ ಚರ್ಚಾ ವಿಷಯವಾಗಿರುತ್ತಿದ್ದ ಕೋಮುವಾದ ಸ್ಪಷ್ಟವಾಗಿ ಕಾಣೆಯಾಗಿದೆ. ವಿಶೇಷ ಅಂದರೆ, ಕೋಮು ರಾಜಕಾರಣವನ್ನೇ ಜೀವಾಳವಾಗಿಸಿಕೊಂಡಿರುವ ಬಿಜೆಪಿಯೂ ಮತೀಯವಾದದ ಬಗ್ಗೆ ಮಾತನಾಡುತ್ತಿಲ್ಲ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭಿವೃದ್ಧಿ ಮತ್ತು ಭ್ರಷ್ಟಾಚಾರದಂತಹ ವಿಷಯಗಳ ಮೇಲೆ ತಮ್ಮ ಪ್ರಚಾರ ಕೇಂದ್ರೀಕರಿಸಿವೆ. ಕಳೆದ ಒಂದು ವರ್ಷದಲ್ಲಿ ಇಡೀ ದೇಶವೇ ರಾಜ್ಯದತ್ತ ನೋಡುವಂತೆ ಮಾಡಿದ್ದ ಹಿಜಾಬ್, ಆಜಾನ್ ಮತ್ತು ಹಲಾಲ್ ವಿವಾದಗಳು ಅಕ್ಷರಶಃ ಮರೆಯಾಗಿವೆ.
ಪ್ರತಿ ಬಾರಿಯೂ ಕೋಮು ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಕಾಂಗ್ರೆಸ್ ಭರವಸೆ ನೀಡುತ್ತಿತ್ತು. ಆದರೆ, ಈ ಬಾರಿ, ಮುಸ್ಲಿಮರಿಗೆ 2ಬಿ ಮೀಸಲಾತಿಯನ್ನು ಮರಳಿ ಒದಗಿಸುವುದನ್ನು ಬಿಟ್ಟರೆ, ಬೇರಾವುದೇ ರೀತಿಯ ಕೋಮು ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಏನನ್ನೂ ಹೇಳುತ್ತಿಲ್ಲ. ಇದರಿಂದಾಗಿ, ಬಿಜೆಪಿಗೆ ಅಸ್ತ್ರವೇ ಇಲ್ಲದಂತಾಗಿದ್ದು, ಕೋಮು ಪರಿಭಾಷೆ ಬಳಸಿ, ಕಾಂಗ್ರೆಸ್ ವಿರುದ್ಧವಾಗಲೀ, ಅಲ್ಪಸಂಖ್ಯಾತರ ವಿರುದ್ಧವಾಗಲೀ ಹೆಚ್ಚಾಗಿ ಮಾತನಾಡಲಾಗುತ್ತಿಲ್ಲ. ಬಿಜೆಪಿ ಸಂಸದ ಪ್ರತಾಪ್ ಸಿಂಹ, ಶಾಸಕ ಸಿ.ಟಿ ರವಿ ಹಾಗೂ ಅವರಂತಹ ಕೆಲವು ಅಪಕ್ವ ಮುಖಂಡರು ‘ಸಿದ್ದರಾಮುಲ್ಲಾ ಖಾನ್’ ಎಂದು ಸಿದ್ದರಾಮಯ್ಯರನ್ನು ವೈಯಕ್ತಿಕವಾಗಿ ನಿಂದಿಸುವ ಯತ್ನ ಮಾಡುತ್ತಿದ್ದಾರಷ್ಟೇ. ಆದರೆ, ಅದೂ ಫಲ ಕೊಡುತ್ತಿಲ್ಲ.
ಉಳಿದಂತೆ, ಹಿಂದುತ್ವ, ಹಿಂದು ರಾಷ್ಟ್ರ, ರಾಮ, ಹನುಮಂತ, ಮಂದಿರ, ಮಸೀದಿ, ಹಿಜಾಬ್, ಹಲಾಲ್ನಂತಹ ಯಾವ ವಿಚಾರಗಳೂ ಚರ್ಚೆಗೆ ಬರುತ್ತಿಲ್ಲ. ಬಿಜೆಪಿ ನಾಯಕರೂ ಮುಸ್ಲಿಮರ ವಿರುದ್ಧ ವಾಗ್ದಾಳಿ ನಡೆಸುತ್ತಿಲ್ಲ.
“ಬಿಜೆಪಿಯು ವ್ಯಾಪಕ ಚಿಂತನೆಯ ನಂತರ ಚುನಾವಣಾ ಪ್ರಚಾರದ ಕೊನೆಯ ಹಂತದ ಕಾರ್ಯತಂತ್ರವನ್ನು ರೂಪಿಸಿದೆ. ಹೊಸ ತಂತ್ರದಂತೆ, ಡಬಲ್ ಎಂಜಿನ್ ಸರ್ಕಾರ ಸಾಧಿಸಿದ ಅಭಿವೃದ್ಧಿ ಕೆಲಸಗಳನ್ನು ತಮ್ಮ ಪ್ರಚಾರದಲ್ಲಿ ಹೈಲೈಟ್ ಮಾಡಲು ಪಕ್ಷವು ಮುಂದಾಗಿದೆ” ಎಂದು ಕಲ್ಯಾಣ ಕರ್ನಾಟಕ ಭಾಗದ ಪ್ರಚಾರದ ಉಸ್ತುವಾರಿಯನ್ನೂ ಹೊತ್ತಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹೇಳಿದ್ದಾರೆ.
“ಬೊಮ್ಮಾಯಿ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿರುವ ಒಳ ಮೀಸಲಾತಿ ಜಾರಿಯು ಬಿಜೆಪಿ ಹೈಲೈಟ್ ಮಾಡಲು ಯೋಜಿಸಿರುವ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಲಿಂಗಾಯತರು, ಒಕ್ಕಲಿಗರು ಮತ್ತು ದಲಿತ ಸಮುದಾಯವನ್ನು ತಮ್ಮತ್ತ ಸೆಳೆಯಲು ಇದು ನೆರವಾಗುತ್ತದೆ” ಎಂದು ಪಕ್ಷವು ಭಾವಿಸಿದೆ.
ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ಬಿಜೆಪಿಗೆ ನೆಲೆ ಇಲ್ಲದ ಕೋಲಾರದಲ್ಲಿ ‘ಅಮುಲ್-ನಂದಿನಿ ವಿವಾದ’ದ ಪ್ರಭಾವವೇನು?
ಲಿಂಗಾಯತ ಮತ ಬ್ಯಾಂಕ್ ಉಳಿಸಿಕೊಳ್ಳಲು ಬಿಜೆಪಿ ಕಸರತ್ತು ನಡೆಸುತ್ತಿದೆ. ಇದೇ ಸಮಯದಲ್ಲಿ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಯಂತಹ ಪ್ರಭಾವಿ ನಾಯಕರು ಪಕ್ಷ ತೊರೆದಿರುವುದು ಕೇಸರಿ ಪಡೆಗೆ ಹಿನ್ನಡೆ ಉಂಟು ಮಾಡಿದೆ. ಈ ನಡುವೆ, ‘ಸಿದ್ದರಾಮಯ್ಯ ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂದಿದ್ದಾರೆ’ ಎಂಬುದನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ಅನ್ನು ಲಿಂಗಾಯತ ವಿರೋಧಿಯೆಂದು ಬಿಂಬಿಸಲು ಮುಂದಾಗಿದೆ. ಜೊತೆಗೆ, ಒಕ್ಕಲಿಗರ ಬೆಂಬಲವಿಲ್ಲದೇ ಬಹುಮತ ಪಡೆಯುವುದು ಕಷ್ಟವೆಂದು ಅರಿತಿರುವ ಬಿಜೆಪಿ ನಾಯಕರು, ಒಕ್ಕಲಿಗರನ್ನು ಒಲಿಸಿಕೊಳ್ಳಲೂ ಯತ್ನಿಸುತ್ತಿದ್ದಾರೆ. ಅದಕ್ಕಾಗಿ, ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ರಂತಹ ಪ್ರಭಾವಿ ಕೇಸರಿ ನಾಯಕರು ಹಳೇ ಮೈಸೂರು ಭಾಗಕ್ಕೆ ಹೆಚ್ಚೆಚ್ಚು ಭೇಟಿ ನೀಡಲಾರಂಭಿಸಿದ್ದಾರೆ.
ಇದೆಲ್ಲದರ ನಡುವೆ, ರಾಜ್ಯದಲ್ಲಿ ಬಿಜೆಪಿ ಆಡಳಿತದ ವಿರುದ್ಧ ಆಡಳಿತ ವಿರೋಧಿ ಅಲೆಯೂ ಇದೆ. ಅದರ ಆಧಾರದ ಮೇಲೆ ಮತಗಳ ಕ್ರೋಡೀಕರಣದತ್ತ ಕಾಂಗ್ರೆಸ್ ಗಮನ ಹರಿಸುತ್ತಿದೆ. ‘ಕೋಮು ವಿಚಾರಗಳಲ್ಲಿ ಬಿಜೆಪಿ ನಮ್ಮನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ. ಆದರೆ, ನಾವು ಅವರ ದಾಳಕ್ಕೆ ಸಿಲುಕಿಕೊಳ್ಳುವುದಿಲ್ಲ’ ಎಂದು ಕರ್ನಾಟಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.
ಜೆಡಿಎಸ್ ಸಹ ಕೋಮುವಾದದ ವಿಷಯಗಳಿಗಿಂತ ಇತರ ವಿಷಯಗಳತ್ತ ಗಮನ ಹರಿಸಲು ನಿರ್ಧರಿಸಿದೆ. ಹಾಗಾಗಿಯೆ ಅದು ಹೆಚ್ಚಾಗಿ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದೆ.




