ಹಾಸನ ಕ್ಷೇತ್ರ | ದಾಸ ಒಕ್ಕಲಿಗರ ನಡುವಿನ ಕಾದಾಟವಾದರೂ, ಮುಸ್ಲಿಂ ಮತದಾರರೆ ನಿರ್ಣಾಯಕ

Date:

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಅಂತ ಏನಾದರೂ ಇದ್ದರೆ ಪ್ರೀತಂ ಮತ್ತು ಸ್ವರೂಪ್ ನಡುವೆ ಮಾತ್ರ. ದಿವಂಗತ ಪ್ರಕಾಶರ ಒಳ್ಳೆಯತನವೇನಾದರೂ ಉಪಯೋಗಕ್ಕೆ ಬಂದರೆ, ಮುಸ್ಲಿಮರು ಸಾರಾಸಗಟು ಜೆಡಿಎಸ್ ಕಡೆ ವಾಲಿದರೆ- ಸ್ವರೂಪ್ ಗೆಲುವು ಗ್ಯಾರಂಟಿ.

ಹಾಸನ ವಿಧಾನಸಭಾ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್-ಜೆಡಿಎಸ್ ಭದ್ರಕೋಟೆ. ಈ ಕೋಟೆಯಲ್ಲಿ ಒಕ್ಕಲಿಗರ ಉಪಜಾತಿಯಾದ ದಾಸಒಕ್ಕಲಿಗರ ಒಲವು-ನಿಲುವುಗಳೇ ಇಲ್ಲಿ ಮುಖ್ಯ. 2018ರ ಚುನಾವಣೆಯಲ್ಲಿ ಗೆದ್ದು ಶಾಸಕನಾಗಿರುವ ಬಿಜೆಪಿಯ ಪ್ರೀತಂ ಗೌಡ ಕೂಡ ಇದೇ ಒಳಪಂಗಡಕ್ಕೆ ಸೇರಿದವರು. ಕಾಂಗ್ರೆಸ್ಸಿನ ಹಿರಿಯ ನಾಯಕ ಕೆ.ಎಚ್. ಹನುಮೇಗೌಡರು, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ 1999ರಲ್ಲಿ ಶಾಸಕರಾಗಿದ್ದರು. ಅದಾಗಿ 19 ವರ್ಷಗಳ ನಂತರ, 2018ರಲ್ಲಿ ಹಾಸನ ಕ್ಷೇತ್ರದಲ್ಲಿ ಬಿಜೆಪಿಗೆ ಜಯ ಸಿಕ್ಕಿದೆ. ಈ ಬಾರಿಯ ಚುನಾವಣೆಯಲ್ಲೂ ಮತ್ತೊಮ್ಮೆ ಗೆದ್ದು, ಗೌಡರ ಜಿಲ್ಲೆಯಲ್ಲಿ ಕಮಲ ಅರಳಿಸುವ, ಆ ಮೂಲಕ ಜಿಲ್ಲೆಯಾದ್ಯಂತ ವಿಸ್ತರಿಸುವ ಯೋಚನೆ ಬಿಜೆಪಿ ವರಿಷ್ಠರದು.

ಹಾಲಿ ಶಾಸಕ ಪ್ರೀತಂ ಗೌಡ ಉತ್ಸಾಹಿ ಯುವಕ. ಜನರ ಸಮಸ್ಯೆಗಳಿಗೆ ಕಿವಿಯಾಗುವ ಗುಣವಿದೆ. ಅಭಿವೃದ್ಧಿ ಕೆಲಸಗಳೂ ಕಾಣುತ್ತವೆ. ಹಾಗಾಗಿ ಅವರನ್ನು ಕ್ಷೇತ್ರದ ಜನ `ಕೆಲಸಗಾರ’ ಎನ್ನುತ್ತಾರೆ. ಜೆಡಿಎಸ್ ಅದನ್ನು `ಕಾಮಗಾರಿ ಕೆಲಸಗಾರ’ ಎಂದು ಜರೆಯುತ್ತದೆ. ಮುಂದುವರೆದು, `ನಾವು ಗುತ್ತಿಗೆದಾರರನ್ನಾದರೂ ಬೆಳೆಸುತ್ತೇವೆ, ಇವರು ಶಾಸಕರೂ ಅವರೆ, ಗುತ್ತಿಗೆದಾರರೂ ಅವರೆ. 40% ಕಮಿಷನ್ ಬಂದದ್ದೇ ಹಾಸನದಿಂದ’ ಎನ್ನುತ್ತಾರೆ.

ಇದನ್ನು ಓದಿದ್ದೀರಾ?: ಶ್ರವಣಬೆಳಗೊಳ ಕ್ಷೇತ್ರ | ಗೌಡರ ಗದ್ದಲದಲ್ಲಿ `ದೊಡ್ಡ’ಗೌಡರಿಗೇ ಗೆಲುವು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅದೇ ಪ್ರೀತಂ ಗೌಡ, ದೇವೇಗೌಡರ ಕುಟುಂಬದ ಬಗ್ಗೆ ತೀರಾ ಹಗುರವಾಗಿ ಮಾತನಾಡಿದ್ದು, ಅವು ಅಹಂಕಾರದ ಮಾತುಗಳು ಎಂದು ಕ್ಷೇತ್ರದಾದ್ಯಂತ ಪ್ರಚಾರ ಪಡೆದು, ಎಚ್.ಡಿ. ರೇವಣ್ಣ ಅಖಾಡಕ್ಕಿಳಿಯುವಂತೆ ಮಾಡಿತ್ತು. ಭವಾನಿ ರೇವಣ್ಣ ಅಭ್ಯರ್ಥಿಯಾಗಿ ಪ್ರೀತಂ ಮಣಿಸಲು ಮುಂದಾಗಿದ್ದರು. ಒಂದೇ ಒಂದು ಮಾತು ಇಷ್ಟೆಲ್ಲ ರಾದ್ಧಾಂತವಾಗಿದ್ದನ್ನು ಕಂಡ ಪ್ರೀತಂ ಗೌಡ, `ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವುದಿಲ್ಲ’ವೆಂದು ಶಪಥ ಮಾಡಿದ್ದೂ ಆಯಿತು. ಆದರೆ ಪ್ರೀತಂ-ಭವಾನಿ ನಡುವಿನ ಕಿಚ್ಚು ಹಚ್ಚುವ ಮಾತುಗಳು ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಆ ಮಾತುಗಳು ಕ್ಷೇತ್ರದಾದ್ಯಂತ ಬೇರೆಯದೇ ಆದ ತಿರುವು ಪಡೆದು ಯಾರಿಗೆ ಲಾಭ, ಯಾರಿಗೆ ನಷ್ಟ ತರುತ್ತವೋ ಕಾದು ನೋಡಬೇಕು.  

ಪ್ರೀತಂ ಗೌಡ ಬಿಜೆಪಿ ಅಭ್ಯರ್ಥಿಯಾಗಿ ಮತ್ತೊಮ್ಮೆ ಜನರ ಮುಂದೆ ನಿಂತಿದ್ದಾರೆ. ಅವರ ಎದುರಾಳಿಯಾಗಿ ಹೆಚ್ಚೂಕಡಿಮೆ ಅವರದೇ ವಯಸ್ಸಿನ ಮಾಜಿ ಶಾಸಕ ಎಚ್.ಎಚ್. ಪ್ರಕಾಶ್ ಅವರ ಪುತ್ರ ಎಚ್.ಪಿ ಸ್ವರೂಪ್, ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ಗಳ ಆರ್ಭಟ, ಅಟ್ಟಹಾಸ, ಹಣಬಲ-ಜಾತಿಬಲಗಳ ಮುಂದೆ ಕೊಂಚ ಕಳೆಗುಂದಿದಂತೆ ಕಾಣುವ ಕಾಂಗ್ರೆಸ್, ಬನವಾಸೆ ರಂಗಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿದೆ. ಪ್ರೀತಂ, ಸ್ವರೂಪ್ ಮತ್ತು ರಂಗಸ್ವಾಮಿ- ಮೂವರೂ ದಾಸಒಕ್ಕಲಿಗ ಪಂಗಡಕ್ಕೆ ಸೇರಿದವರು. ಈಗ ಜಿದ್ದಾಜಿದ್ದಿನ ಪೈಪೋಟಿ ಇರುವುದು ಪ್ರೀತಂ- ಸ್ವರೂಪ್ ನಡುವೆಯೇ. ಕಾಂಗ್ರಸ್ಸಿನ ಬನವಾಸೆ ರಂಗಸ್ವಾಮಿ, ಇಬ್ಬರ ಜಗಳದಲ್ಲಿ ತಮಗೊಂದು ಚಾನ್ಸ್ ಸಿಗಬಹುದಾ ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಹಾಗೆ ನೋಡಿದರೆ, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗರೇ ಬಹುಸಂಖ್ಯಾತರು. ಅದರಲ್ಲೂ ಒಕ್ಕಲಿಗರಲ್ಲಿಯೇ ಉಪಪಂಗಡವಾದ ದಾಸ ಒಕ್ಕಲಿಗರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿಯವರೆಗೆ ಗೆದ್ದ ಶಾಸಕರು ಕೂಡ ಹೆಚ್ಚಿನವರು ಆ ಒಳಪಂಗಡದವರೇ ಆಗಿದ್ದಾರೆ. ಇವುಗಳ ನಡುವೆಯೇ, 1967ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಜೈನ ಧರ್ಮಕ್ಕೆ ಸೇರಿದ ಜ್ವಾಲನಯ್ಯನವರು ಗೆದ್ದಿದ್ದು ಈ ಕ್ಷೇತ್ರದ ವಿಶೇಷಗಳಲ್ಲೊಂದು. ಹಾಗೆಯೇ 1983 ಮತ್ತು 1985ರಲ್ಲಿ ಜನತಾಪಕ್ಷದಿಂದ ಬಿ.ವಿ. ಕರೀಗೌಡರು ಗೆಲ್ಲುವ ಮೂಲಕ, ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಅಭ್ಯರ್ಥಿಯೂ ಜಯ ಗಳಿಸಬಹುದು ಎಂಬುದನ್ನು ಸಾಬೀತುಪಡಿಸಿದರು. ಅದು ಮುಂದೆ ಜನತಾದಳಕ್ಕೆ, ಜಾತ್ಯತೀತ ಜನತಾದಳಕ್ಕೆ ಅನುಕೂಲಕರ ವೇದಿಕೆಯನ್ನು ನಿರ್ಮಿಸಿಕೊಟ್ಟಿತು.

1985ರ ನಂತರದ ಚುನಾವಣೆಗಳು ಕಾಂಗ್ರೆಸ್ ಮತ್ತು ಜನತಾದಳ, ಜೆಡಿಎಸ್ ಗಳ ನಡುವಿನ ನೇರ ಹಣಾಹಣಿಯಾದರೂ, ಇವುಗಳ ನಡುವೆಯೇ 1999ರಲ್ಲಿ ಹಾಗೂ 2018ರಲ್ಲಿ ಬಿಜೆಪಿ ಗೆದ್ದು ಬೀಗಿದ್ದೂ ಇದೆ.  ನಾಲ್ಕು ಬಾರಿ ಗೆದ್ದು, ಐದನೆ ಬಾರಿಗೆ ಗೆಲ್ಲುವ ನಿರೀಕ್ಷೆಯಲ್ಲಿದ್ದ ಎಚ್.ಎಸ್.ಪ್ರಕಾಶ್ 2018ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಮತ್ತೆ ಅಭ್ಯರ್ಥಿಯಾಗಿದ್ದರು. ಆದರೆ ಎಚ್.ಡಿ.ರೇವಣ್ಣನವರ ಅವಕೃಪೆಗೆ ಒಳಗಾಗಿ, 13 ಸಾವಿರ ಮತಗಳ ಅಂತರದಿಂದ ಬಿಜೆಪಿಯ ಪ್ರೀತಂಗೌಡರಿಂದ ಪರಾಭವಗೊಳ್ಳಬೇಕಾಯಿತು. ಸೋತ ನಂತರ ಅಕಾಲಿಕ ನಿಧನ ಹೊಂದಿದರು. ಜೆಡಿಎಸ್ ನ ಭದ್ರಕೋಟೆ ಎನಿಸಿಕೊಂಡಿದ್ದ ಹಾಸನ ಬಿಜೆಪಿಯ ತೆಕ್ಕೆಗೆ ಹೋಗಲು ಪರೋಕ್ಷವಾಗಿ ರೇವಣ್ಣರೇ ಕಾರಣ ಎನ್ನುವುದನ್ನು ಹಾಸನದ ಮತದಾರರೇ ಮಾತಾಡಿಕೊಳ್ಳುತ್ತಾರೆ.

ಈ ಬಾರಿಯ ಚುನಾವಣೆಯಲ್ಲಿ ಅದೇ ಸಜ್ಜನ ಪ್ರಕಾಶರ ಪುತ್ರ ಸ್ವರೂಪ್ ಜೆಡಿಎಸ್‌ ಹುರಿಯಾಳು ಆಗಿದ್ದಾರೆ. ದೇವೇಗೌಡರಾದಿಯಾಗಿ, ಮನೆಮಕ್ಕಳೆಲ್ಲ ಸ್ವರೂಪ್ ಬೆನ್ನಿಗೆ ನಿಂತು ಓಡಾಡುತ್ತಿದ್ದಾರೆ. ಅದರಲ್ಲೂ ಭವಾನಿ ರೇವಣ್ಣರಂತೂ `ಸ್ವರೂಪ್ ನನ್ನ ಮಗ, ಅವನ ಗೆಲುವನ್ನು ದೊಡ್ಡಗೌಡರ ಬರ್ತಡೇಗೆ ಉಡುಗೊರೆಯಾಗಿ ಕೊಡಲಿದ್ದೇವೆ’ ಎಂದು ಹೇಳಿಕೊಂಡು ತಿರುಗುತ್ತಿರುವುದು ಸ್ವರೂಪ್ ಗೆ ಆನೆ ಬಲವೋ ಅಥವಾ ಆನೆ ತುಳಿತವೋ, ಫಲಿತಾಂಶವೇ ಹೇಳಬೇಕು. ಆದರೆ, ಕ್ಷೇತ್ರದಲ್ಲಿ 30ರಿಂದ 40ಸಾವಿರದಷ್ಟಿರುವ ಮುಸ್ಲಿಂ ಮತದಾರರು `ಈ ಬಾರಿ ಸ್ವರೂಪ್’ ಎಂದು ಬಹಿರಂಗವಾಗಿಯೇ ಬೀದಿಗಿಳಿದು ಪ್ರಚಾರ ಕೈಗೊಂಡಿರುವುದು, ಬಿಜೆಪಿಗೆ ನಡುಕ ಹುಟ್ಟಿಸಿರುವುದಂತೂ ದಿಟ.

ಮುಸ್ಲಿಮರ ವಿಷಯದಲ್ಲಿ ಆಳುವ ಬಿಜೆಪಿ ಸರ್ಕಾರ ತೀರಾ ಕ್ಷುಲ್ಲಕವಾಗಿ ವರ್ತಿಸಿತು. ಅದು ಬಿಜೆಪಿಗೆ ಈ ಚುನಾವಣೆಯಲ್ಲಿ ದುಬಾರಿಯಾಗಲಿದೆ. ಕಾಂಗ್ರೆಸ್ಸಿನಿಂದ ಕಣದಲ್ಲಿರುವ ಬನವಾಸೆ ರಂಗಸ್ವಾಮಿ, ಇದ್ದುದರಲ್ಲಿ ಸಂಭಾವಿತ ಎಂಬ ಹೆಸರಿದೆ. ಆದರೆ ಕಾಂಗ್ರೆಸ್ ಪಕ್ಷ, ಯಾರಿಗೂ ಈ ಕ್ಷೇತ್ರದ ಅಭ್ಯರ್ಥಿ ಎಂದು ಹೆಸರಿಸದೆ ಇದ್ದದ್ದು, ಕಡೇ ಕ್ಷಣದಲ್ಲಿ ಮೂವರಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟಿದ್ದು ಇಲ್ಲಿ ತೊಡಕಾಗಿದೆ. ಅವರೆಲ್ಲರೂ ಒಟ್ಟಾಗಿ ದುಡಿದರೂ ಗೆಲುವು ಕಷ್ಟಕರ ಎಂಬಂತಾಗಿದೆ. ಹಾಗಾಗಿ ಇಲ್ಲಿ ಸ್ಪರ್ಧೆ ಅಂತ ಏನಾದರೂ ಇದ್ದರೆ ಪ್ರೀತಂ ಮತ್ತು ಸ್ವರೂಪ್ ನಡುವೆ ಮಾತ್ರ. ದಿವಂಗತ ಪ್ರಕಾಶರ ಒಳ್ಳೆಯತನವೇನಾದರೂ ಉಪಯೋಗಕ್ಕೆ ಬಂದರೆ, ಮುಸ್ಲಿಮರು ಸಾರಾಸಗಟು ಜೆಡಿಎಸ್ ಕಡೆ ವಾಲಿದರೆ- ಸ್ವರೂಪ್ ಗೆಲುವು ಗ್ಯಾರಂಟಿ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

UAPA ದುರ್ಬಳಕೆ; ವಿಕಸಿತ ಭಾರತಕ್ಕೆ ಶೋಭೆ ತರಲ್ಲ: ಮೋಶಾ ಆಡಳಿತಕ್ಕೆ ಸುಪ್ರೀಂ ನ್ಯಾಯಮೂರ್ತಿ ತಪರಾಕಿ

"2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಮಾಡುವ ರಾಜಕೀಯ ಮುಖಂಡರ ಗುರಿಯಲ್ಲಿ...

ಕೇರಳ ಚುನಾವಣೆ | ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಮೇಲಿದೆ 242 ಕ್ರಿಮಿನಲ್ ಪ್ರಕರಣಗಳು

ಏಪ್ರಿಲ್ 9ರಂದು ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಅಭ್ಯರ್ಥಿಗಳು...

ಸರ್ಕಾರಿ ಅಧಿಕಾರಿಯ ಆತ್ಮಹತ್ಯೆ ಪ್ರಕರಣ: ಪಂಜಾಬ್ ಮಾಜಿ ಸಚಿವ ಲಾಲ್ಜಿತ್ ವಿರುದ್ಧ ಎಫ್‌ಐಆರ್

ಪಂಜಾಬ್ ರಾಜ್ಯ ಗೋದಾಮು ನಿಗಮದ (ಪಿಎಸ್‌ಡಬ್ಲ್ಯೂಸಿ) ಜಿಲ್ಲಾ ವ್ಯವಸ್ಥಾಪಕ ಗಗನ್‌ದೀಪ್ ಸಿಂಗ್...

ಕೇರಳ | ಭಿನ್ನಮತೀಯರಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಆಗಲ್ಲ: ಸಿಪಿಐಎಂ

ಕೇರಳದಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್‌ಡಿಎಫ್, ಯುಡಿಎಫ್‌,...