ಕೆಜಿಎಫ್ : ಕ್ಷೇತ್ರದ ನಗರ ಹಾಗೂ ಗ್ರಾಮಾಂತರ ಭಾಗದ ಬಹುತೇಕ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸುವುದಾಗಿ ಕೆಜಿಎಫ್ ಶಾಸಕಿ ಎಂ.ರೂಪಕಲಾ ಭರವಸೆ ನೀಡಿದರು.
ಕೆಜಿಎಫ್ ತಾಲೂಕಿನ ಗ್ರಾಮಾಂತರ ಭಾಗದ ಕಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಪಲ್ಲಿ, ಯರನಾಗನಹಳ್ಳಿ, ಕ್ಯಾಸಂಬಳ್ಳಿ ವ್ಯಾಪ್ತಿಯ ತೂಕಲ್ಲು, ಪಾರಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾರಂಡಹಳ್ಳಿ, ಬಟುವಾರ ಹಳ್ಳಿ, ವಿವಿಧ ಹಳ್ಳಿಗಳ ಸಂಪರ್ಕ ಕಲ್ಪಿಸುವ ರಸ್ತೆಗಳ ಸಿಸಿ ರಸ್ತೆ ಮತ್ತು ಡಾಂಬರು ರಸ್ತೆ ಕಾಮಗಾರಿಗೆ ಶನಿವಾರ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ ತಾಲೂಕಿನಲ್ಲಿ ಅಗತ್ಯ ಗ್ರಾಮಗಳ ರಸ್ತೆಗಳನ್ನು ಡಾಂಬರೀಕರಣ ಹಾಗೂ ಸಿಸಿ ರಸ್ತೆಯ ಮೂಲಕ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಲಾಗಿದೆ, ಪ್ರಸ್ತುತ ಪಿಆರ್ ಇಡಿ ಯೋಜನೆಯ 10 ಕೋಟಿ ಅನುದಾನದಲ್ಲಿ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ತಾಲೂಕಿನ ಜನತೆಗೆ ಕುಡಿಯುವ ನೀರು, ಓಡಾಡಲು ರಸ್ತೆ ಹಾಗೂ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಆ ದೃಷ್ಟಿಯಿಂದ ಸರ್ಕಾರದಿಂದ ಅಗತ್ಯ ಅನುದಾನವನ್ನು ತಂದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.
ಮುದ್ದೆಗೌಡಹಳ್ಳಿಗೆ ಸರ್ಕಾರಿ ಬಸ್:ಮುದ್ದೆಗಾನಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪೂಜೆ ಸಲ್ಲಿಸುವ ಗ್ರಾಮಸ್ಥರು ಗ್ರಾಮಕ್ಕೆ ಸರ್ಕಾರಿ ಬಸ್ ಬರುತ್ತಿಲ್ಲ ಎಂದು ಗಮನಕ್ಕೆ ತಂದ ತಕ್ಷಣ ಶಾಸಕಿ ರೂಪಕಲಾ ಶಶಿಧರ್ ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ನೇತ್ರಾವತಿ ಅವರನ್ನು ಸಂಪರ್ಕಕ್ಕೆ ಪಡೆದು ತಕ್ಷಣ ಭಾನುವಾರದಿಂದಲೇ ಬಸ್ ಸಂಚಾರ ಮಾಡಬೇಕೆಂದು ಸೂಚನೆ ನೀಡಿದರು.
ಉನ್ನತ ವಿದ್ಯಾಭ್ಯಾಸಕ್ಕೆ ಹಾಸ್ಟೆಲ್ ವ್ಯವಸ್ಥೆ:
ವಿದ್ಯಾರ್ಥಿ ಒಬ್ಬರು ಉನ್ನತ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಶಾಸಕರ ಬಳಿ ಮನವಿ ಮಾಡಿದರು ಶಾಸಕರು ಸ್ಥಳದಲ್ಲೇ ಬೆಂಗಳೂರಿನ ಹಾಸ್ಟೆಲ್ ಒಂದರ ವಾರ್ಡನ್ ಅವರನ್ನು ಸಂಪರ್ಕ ಪಡೆದು ಸೋಮವಾರದಿಂದ ವಿದ್ಯಾರ್ಥಿನಿಗೆ ಆಶ್ರಯ ನೀಡುವಂತೆ ಸೂಚನೆ ನೀಡಿದರು.
ಇದನ್ನು ಓದಿದ್ದೀರಾ…?ಬಿಜೆಪಿಯಿಂದ ಆದಿವಾಸಿಗಳ ಕಡೆಗಣನೆ: ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ: ಶೋಭನ್ ಬಾಬು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅ.ಮು ಲಕ್ಷ್ಮೀ ನಾರಾಯಣ್, ತಾಪಂ ಇಓ ವೆಂಕಟೇಶಪ್ಪ, ಪಿಡಿಒ ಏಜಾಜ್, ವಸಂತ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಧಾಕೃಷ್ಣಾರೆಡ್ಡಿ, ವಕೀಲ ಪದ್ಮನಾಭ ರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾ ಆನಂದರೆಡ್ಡಿ, ಉಪಾಧ್ಯಕ್ಷೆ ಅಂಜಲಮ್ಮ ಪ್ರತಾಪ್, ಕಮಸಂದ್ರ ನಾಗರಾಜ್, ಸುರೇಶ್, ರವೀಂದ್ರ, ಗಂಗಾಧರಪ್ಪ, ಪಾರಂಡಹಳ್ಳಿ ಪ್ರಕಾಶ್, ಕಳಾವಾಣಿ, ರಘು, ರಾಜಪ್ಪ, ಗುತ್ತಿಗೆದಾರ ಅರವಿಂದ್ ಹಾಗೂ ಅನೇಕ ಮುಖಂಡರು ಜನಪ್ರತಿನಿಧಿಗಳು ಸದಸ್ಯರು ಗ್ರಾಮಸ್ಥರು ಮಹಿಳೆಯರು ಉಪಸ್ಥಿತರಿದ್ದರು.





