ಕಾಂಗ್ರೆಸ್ ಪರ ಪ್ರಚಾರಕ್ಕೆ ಶಿವಣ್ಣ ಹಣ ಪಡೆದಿದ್ದಾರೆ ಎಂದಿದ್ದ ಸಂಬರಗಿ
ವಿರೋಧ ವ್ಯಕ್ತವಾಗುತ್ತಲೇ ಕ್ಷಮೆ ಯಾಚಿಸಿದ ಬಿಜೆಪಿ ಬೆಂಬಲಿಗ
ನಟ ಶಿವರಾಜ್ ಕುಮಾರ್ ಹಣ ಪಡೆದು ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿ ಬೆಂಬಲಿಗ ಪ್ರಶಾಂತ್ ಸಂಬರಗಿ ರಾಜ್ ಕುಟುಂಬದ ಅಭಿಮಾನಿಗಳಿಂದ ಭಾರೀ ಪ್ರತಿರೋಧ ವ್ಯಕ್ತವಾಗುತ್ತಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಯಾಚಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿ ತಮ್ಮ ಫೆಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಶಾಂತ್ ಸಂಬರಗಿ, “ಶಿವಣ್ಣ ಮತ್ತು ಇನೊಬ್ಬ ನಮ್ಮ ಆಪ್ತ ಮಿತ್ರನೊಂದಿಗೆ ಇದೀಗ ತಾನೇ ಮಾತನಾಡಿದೆ. ಶಿವಣ್ಣ ಅವರು ಎಲ್ಲ ರಾಜಕೀಯ ಪಕ್ಷಗಳಲ್ಲಿ ಸ್ನೇಹಿತರನ್ನು ಹೊಂದಿದ್ದಾರೆ. ಶಿವಣ್ಣ ಅವರ ತಂದೆಯ ಬಯಕೆಯಂತೆ ಅವರು ರಾಜಕೀಯದಿಂದ ದೂರವಾಗಿದ್ದಾರೆ. ನಾನು ಅವರ ಬಗ್ಗೆ ಬರೆದಿರುವ ನನ್ನ ಪೋಸ್ಟ್ ಅನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಮತ್ತು ಶಿವಣ್ಣ ಮತ್ತು ಅವರ ಅಭಿಮಾನಿಗಳಿಗೆ ಕರ್ನಾಟಕದಾದ್ಯಂತ ನೋಯಿಸಬಾರದು ಎಂದು ನಾನು ಬಯಸುತ್ತೇನೆ” ಎಂದಿದ್ದಾರೆ.
ಶಿವಣ್ಣ ಕಾಂಗ್ರೆಸ್ ಪಕ್ಷದಲ್ಲಿರುವ ತಮ್ಮ ಆಪ್ತರ ಪರ ಪ್ರಚಾರ ಮಾಡುತ್ತಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಶಾಂತ್ ಸಂಬರಗಿ, “ಶಿವಣ್ಣ ಯಾವತ್ತೂ ʼಸ್ಕ್ರಿಪ್ಟ್ʼ ಕೇಳುವುದೇ ಇಲ್ಲ. ಆದರೆ, ಪೇಮೆಂಟ್ ತುಂಬಾನೇ ಮುಖ್ಯ, ಒಪ್ಪಿಕೊಂಡಿದ್ದ ಸಿನಿಮಾ ಮಾಡುತ್ತಾರೆ. ತುಂಬಾ ಎಮೋಶನಲ್ ಜೀವಿ ನಮ್ಮ ಶಿವಣ್ಣ. ಸಿನಿಮಾ ಫ್ಲಾಪ್ ಆದರೂ ಅವರು ಕೇರ್ ಮಾಡಲ್ಲ. ಮತ್ತೆ ಪೇಮೆಂಟ್ ತೆಗೆದುಕೊಂಡು ಇನ್ನೊಂದು ಫಿಲಂ ಸೈನ್ ಮಾಡಿಬಿಡ್ತಾರೆ. ಅದೇ ಫಾರ್ಮುಲಾ ರಾಜಕೀಯದಲ್ಲೂ ಅನುಸರಿಸಿದ್ದಾರೆ. ಕ್ಯಾಂಡಿಡೇಟ್ ಗೆದ್ದರೇನು, ಸೋತರೇನು ಎಲ್ಲ ಒಂದೇ. ಬಂತಾ ಪ್ಯಾಕೇಟ್ ಸರಿ. ಆಲ್ ರೈಟ್ ಮುಂದೆ ಹೋಗೋಣ” ಎಂದು ಗಂಭೀರ ಆರೋಪ ಮಾಡಿದ್ದರು. ಶಿವಣ್ಣನ ವಿರುದ್ಧ ಅಶ್ಲೀಲ ಪದಗಳನ್ನು ಕೂಡ ಪ್ರಯೋಗಿಸಿದ್ದರು. ಈ ಫೇಸ್ಬುಕ್ ಪೋಸ್ಟ್ಗೆ ಶಿವಣ್ಣನ ಅಭಿಮಾನಿಗಳಿಂದ ವಿರೋಧ ವ್ಯಕ್ತವಾಗುತ್ತಲೇ ಎಚ್ಚೆತ್ತ ಪ್ರಶಾಂತ್ ಸಂಬರಗಿ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ಅಪ್ಪು ಹೆಸರು ಎಳೆದು ತಂದ ಬಿಜೆಪಿಗರಿಗೆ ತಿರುಗೇಟು ನೀಡಿದ ಶಿವಣ್ಣ
ಪ್ರಶಾಂತ್ ಸಂಬರಗಿ ಫೇಸ್ಬುಕ್ ಪೋಸ್ಟ್ ಬಗ್ಗೆ ಮಾಧ್ಯಮದವರಿಂದ ಮಾಹಿತಿ ಪಡೆದು ಪ್ರತಿಕ್ರಿಯಿಸಿದ್ದ ಶಿವಣ್ಣ, “ನಮಗೆ ಹಣ ಮುಖ್ಯವಂತಾ? ಹಾಗಿದ್ದರೆ ನಮ್ಮ ಬಳಿ ದುಡ್ಡಿಲ್ಲವಾ? ದಯವಿಟ್ಟು ಈ ಹೇಳಿಕೆಯನ್ನು ವಾಪಾಸ್ ಪಡೆಯಿರಿ. ನಾನು ಹಣ ಪಡೆದುಕೊಂಡು ಯಾರ ಪರವೂ ಪ್ರಚಾರ ಮಾಡಲು ಬಂದಿಲ್ಲ. ಮನಸ್ಸಿನಿಂದ ಬಂದಿದ್ದೇನೆ. ಒಬ್ಬ ಮನುಷ್ಯನಾಗಿ ಬಂದಿದ್ದೇನೆಯೇ ಹೊರತು, ವ್ಯಾಪಾರಕ್ಕಾಗಿ ಅಲ್ಲ. ಬೇರೆ ಯಾರನ್ನೂ ಟೀಕಿಸುವುದಕ್ಕಾಗಿ ಕೂಡ ನಾನು ಬಂದಿಲ್ಲ. ನಾನು ಬೆಂಬಲಿಸುತ್ತಿರುವ ವ್ಯಕ್ತಿಗಳ ಬಗ್ಗೆ ಮಾತನಾಡಿದ್ದೇನೆಯೇ ಹೊರತು ಬೇರೆ ಯಾರ ಬಗ್ಗೆಯೂ ಮಾತನಾಡಿಲ್ಲ” ಎಂದಿದ್ದರು. ಇದಾದ ಬೆನ್ನಲ್ಲೇ ಸಂಬರಗಿ, ಶಿವಣ್ಣ ಮತ್ತು ಅವರ ಅಭಿಮಾನಿಗಳ ಕ್ಷಮೆ ಯಾಚಿಸಿ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.





